ಬಸ್, ರೈಲು, ವಿಮಾನದಲ್ಲಿ ನೀವು ಪ್ರಯಾಣ ಮಾಡುವಾಗ ವಾಹನ ಯಾವುದು ಅಂತಾ ನೋಡ್ತೇವೆ. ಆದರೆ ಬಸ್ ಚಾಲನೆ ಮಾಡುವ ಚಾಲಕ ಚೆನ್ನಾಗಿ ಓಡಿಸ್ತಾನಾ..? ಅನ್ನೋದನ್ನು ಪ್ರಮುಖವಾಗಿ ನೋಡುತ್ತೇವೆ. ಒಮ್ಮೊಮ್ಮೆ ಚಾಲಕ ಸರಿಯಾಗಿ ಓಡಿಸುವುದಿಲ್ಲ ಎನ್ನುವುದು ಗೊತ್ತಾದರೆ ಬಸ್ ಬಿಟ್ಟು ಇಳಿದು ಹೋಗುವುದು ಸರಿ. ಕೆಲವೊಮ್ಮೆ ಡಕೋಟಾ ಬಸ್ ಆದರೂ ಚಾಲಕನ ಭರವಸೆ ಮೇಲೆ ಪ್ರಯಾಣವನ್ನೂ ಮಾಡುತ್ತೇವೆ. ಇದೀಗ ಕರ್ನಾಟಕ ರಾಜಕೀಯ ಪರಿಸ್ಥಿತಿ ಇದೇ ರೀತಿ ಆಗಿದೆ. ಕರ್ನಾಟಕದ ಜನರು ಪ್ರಯಾಣಿಕರಾಗಿದ್ದು, ಭಾರೀ ಪೈಪೋಟಿಯಲ್ಲಿರುವ ಮೂರು ಬಸ್ಗಳಿವೆ. ಅದರಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಭಾರೀ ಪೈಪೋಟಿ ನಡೆಸುತ್ತಿವೆ. ಆದರೆ ಇದರಲ್ಲಿ ಮೂರು ಬಸ್ಗಳಿಗೆ ಡ್ರೈವರ್ ಯಾರು ಎನ್ನುವುದನ್ನು ನೋಡಿ ಜನರು ಮತ ಚಲಾವಣೆ ಮಾಡಬೇಕಿದೆ. ಆದರೆ ಬಸ್ ಮಾಲೀಕನನ್ನು ನೋಡಿಕೊಂಡು ಮತ ಚಲಾಯಿಸುವ ಸಂಕಷ್ಟ ಕರ್ನಾಟಕದ ಜನರಿಗೆ ಎದುರಾಗಿದೆ.
ಬಿಜೆಪಿಯೆಂಬ ಬಸ್’ಗೆ ಚಾಲಕ ಯಾರು ಅನ್ನೋದೇ ಗೊಂದಲ..!

ರಾಜ್ಯ ಬಿಜೆಪಿಯಲ್ಲಿ ಮೊದಲಿಗೆ ಚಾಲಕನ ರೂಪದಲ್ಲಿ ಬಿ.ಎಸ್ ಯಡಿಯೂರಪ್ಪ ಅವರಿದ್ದರು. ಯಡಿಯೂರಪ್ಪ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಜನರು ಮತ ಚಲಾವಣೆ ಮಾಡಬಹುದಿತ್ತು. ಯಡಿಯೂರಪ್ಪ ಒಮ್ಮೆ ಮಾತು ಕೊಟ್ಟರೆ ತಪ್ಪುವುದಿಲ್ಲ ಎನ್ನುವ ಮಾತಿತ್ತು. ಆದರೆ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿ ಹುದ್ದೆಯಿಂದ ಬಿಜೆಪಿ ಇಳಿಸಿ ಚಾಲಕನ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ಕೂರಿಸಿದೆ. ಮುಂದೆ ಅಧಿಕಾರಕ್ಕೆ ಬಂದರೆ ಇದೇ ಬಸವರಾಜ ಬೊಮ್ಮಾಯಿ ಅವರೇ ರಾಜ್ಯವನ್ನು ಮುನ್ನಡೆಸುತ್ತಾರಾ..? ಎನ್ನುವ ಪ್ರಶ್ನೆಗೆ ಬಿಜೆಪಿ ಉತ್ತರ, ಇಲ್ಲ. ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಮಾಡಲಾಗುತ್ತದೆ. ಆದರೆ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋದನ್ನು ಚುನಾವಣೆ ಬಳಿಕ ನಿರ್ಧಾರ ಮಾಡ್ತೇವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಂದರೆ ಬಿಜೆಪಿ ಎಂಬ ಬಸ್ಗೆ ಚಾಲಕ ಯಾರು ಅನ್ನೋದು ನಿಖರವಾಗಿ ಗೊತ್ತಿಲ್ಲ. ಅದೇ ಕಾರಣಕ್ಕೆ ಬಸ್ ಮಾಲೀಕತ್ವ ಹೊಂದಿರುವ ನರೇಂದ್ರ ಮೋದಿ ಅವರನ್ನು ತೋರಿಸಿ ಮತ ಕೇಳುವ ಪ್ರಯತ್ನ ಮಾಡುತ್ತಿದ್ದಾರೆ.
ಕಾಂಗ್ರೆಸ್’ನಲ್ಲಿ ನಡೆದಿದೆ ಚಾಲಕ ಸ್ಥಾನಕ್ಕೇ ಪೈಪೋಟಿ..!

ಕಾಂಗ್ರೆಸ್ ಎಂಬ ಬಸ್ ಏರುವ ಜನರಿಗೂ ಸಣ್ಣಪುಟ್ಟ ಗೊಂದಲಗಳಿವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಚಾಲಕ ಸ್ಥಾನಕ್ಕೆ ಕಚ್ಚಾಟ ನಡೆಯುವುದು ಗ್ಯಾರಂಟಿ. ಈಗಾಗಲೇ ಡಿ.ಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯ ಬೆಂಬಲಿಗರ ನಡುವೆ ಮಾತಿನ ಸಮರವೂ ನಡೆದಿದೆ. ಚುನಾವಣೆ ಮುಗಿಯುವ ತನಕ ಚಾಲಕ ಯಾರು ಅನ್ನೋ ಬಗ್ಗೆ ಚರ್ಚೆ ಮಾಡಬಾರದು. ಚುನಾವಣೆಯಲ್ಲಿ ಮತದಾರರು ಗೊಂದಲಕ್ಕೆ ಒಳಗಾಗುತ್ತಾರೆ ಎನ್ನುವ ಹೈಕಮಾಂಡ್ ಸಲಹೆಯನ್ನು ಪಡೆದಿರುವ ನಾಯಕರು ಮೇಲ್ನೋಟಕ್ಕೆ ಎಲ್ಲವೂ ಸರಿಯಿದೆ ಎನ್ನುವ ಹಾಗೆ ತೋರಿಸಿಕೊಳ್ತಿದ್ದಾರೆ. ಆದರೆ ಚುನಾವಣೆ ಮುಗಿದು ಮತ ಎಣಿಕೆ ದಿನ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದರೆ..! ಕಾಂಗ್ರೆಸ್ ಒಳಗೇ ರೆಸಾರ್ಟ್ ರಾಜಕಾರಣ ನಡೆದರೂ ಅಚ್ಚರಿಯೇನಿಲ್ಲ. ಅಥವಾ ಪಿತ್ರಾರ್ಜಿತ ಆಸ್ತಿಯನ್ನು ಪಾಲು ಮಾಡಿಕೊಂಡಂತೆ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ನಡುವೆ ಹಂಚಿಕೆ ಆದರೂ ಆಗಬಹುದು. ಒಟ್ಟಿನಲ್ಲಿ ಇಬ್ಬರು ಚಾಲಕರು ಸಿದ್ಧರಿದ್ದಾರೆ. ಇವರಿಬ್ಬರಲ್ಲೇ ಒಬ್ಬರು ಕಾಂಗ್ರೆಸ್ ಬಸ್ ಓಡಿಸಲಿದ್ದಾರೆ ಎನ್ನುವುದು ಖಚಿತ.
ಜೆಡಿಎಸ್ ಬಸ್’ಗೆ ಒಬ್ಬನೇ ಚಾಲಕ, ಆದರೂ ಜನ ಹತ್ತುತ್ತಿಲ್ಲ..!

ಜೆಡಿಎಸ್ ಎಂಬ ಬಸ್’ಗೆ ಚಾಲಕ ಯಾರು ಅನ್ನೋದನ್ನು ಯಾರು ಹೇಳೋದು ಬೇಕಿಲ್ಲ. ಯಾಕಂದ್ರೆ ಮಾಜಿ ಸಿಎಂ ಕುಮಾರಸ್ವಾಮಿಯೇ ಮುಖ್ಯಮಂತ್ರಿ ಆಗುವುದು ಖಚಿತ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇನ್ನೂ ರಾಜ್ಯಾದ್ಯಂತ ಪಂಚರತ್ನ ಯೋಜನೆಗಳನ್ನು ಹೇಳುತ್ತಾ ಊರೂರು ಸುತ್ತುತ್ತಿರುವ ಕುಮಾರಸ್ವಾಮಿಗೆ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ. ಈ ಬಾರಿ ಅವಕಾಶ ಮಾಡಿಕೊಟ್ಟರೆ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ತೇನೆ. ಬಡವರ ಸಮಸ್ಯೆಗೆ ದನಿಯಾಗ್ತೇನೆ. ನನಗೆ ಹಣದ ಮೇಲೆ ವ್ಯಾಮೋಹ ಇಲ್ಲ, ಈ ಜೀವ ಹೋಗುವುದರ ಒಳಗಾಗಿ ಈ ನಾಡಿನ ರೈತರಿಗೆ ಒಂದಿಷ್ಟು ಒಳ್ಳೆ ಕೆಲಸಗಳನ್ನು ಮಾಡಬೇಕಿದೆ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ವ್ಯಕ್ತವಾಗುತ್ತಿರುವ ಜನಬೆಂಬಲ ನೋಡಿದಾಗ ಈ ಬಾರಿ ಜೆಡಿಎಸ್ ಬಸ್ ಚಾಲಕನ ಮೇಲೆ ಜನ ಭರವಸೆ ಇಟ್ಟು ಬಸ್ ಪ್ರಯಾಣ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೂ ಪ್ರಯಾಣಿಕರು ಬಸ್ ನಿಲ್ದಾಣದ ತನಕ ಬಂದು ಬೇರೆ ಬಸ್ ಹತ್ತಿದರೂ ಅಚ್ಚರಿಯೇನಿಲ್ಲ. ಕುಮಾರಸ್ವಾಮಿ ಅವರ ಬಸ್ಒಂದು ಭಾಗಕ್ಕೆ ಸೀಮಿತ ಅನ್ನೋ ಮಾತುಗಳು ಇವೆ. ಆದರೆ ಜನರು ಯಾವ ಬಸ್ ಹತ್ತಬೇಕು. ಬಸ್ನ ಚಾಲಕ ಯಾರು..? ಬಸ್ ನೋಡಿಕೊಂಡು ಬಸ್ ಹತ್ತಿದರೆ ಮುಂದೆ ಅಪಘಾತ ನಡೆದರೆ ಏನು ಮಾಡಬೇಕು ಅನ್ನೋ ಬಗ್ಗೆಯೂ ಚಿಂತಿಸಿದರೆ ಉತ್ತಮ