ಬೆಂಗಳೂರು: ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ. ಸಿ ರೆಡ್ಡಿ(K.C Reddy) ಅವರ ಹುಟ್ಟೂರಲ್ಲಿ ಸ್ಮಾರಕ ನಿರ್ಮಿಸಲು ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ(Chief Minister) ಬಸವರಾಜ ಬೊಮ್ಮಾಯಿ(Basavaraja Bommai) ತಿಳಿಸಿದರು.
ಅವರು ಇಂದು ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಅನಾವರಣಗೊಳಿಸಿ ಮಾತನಾಡಿದರು.

ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳ ಬಗ್ಗೆ ಸಾಹಿತ್ಯ ರಚನೆ ಮಾಡಿ ಜನರಿಗೆ ಹಾಗೂ ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕಿದೆ. ಕರ್ನಾಟಕ ಏಕೀಕರಣದ ಹೋರಾಟ, ಆಗಿನ ಜನರ ಮನಸ್ಥಿತಿ ಬೇರೆ ಬೇರೆ ಹೋರಾಟಗಳು, ಎಲ್ಲ ಮುಖ್ಯ ಮಂತ್ರಿಗಳು ತೆಗೆದುಕೊಂಡ ತೀರ್ಮಾನಗಳ ಒಂದು ಮ್ಯೂಸಿಯಂ ಮಾಡುವ ಅವಶ್ಯಕತೆ ಇದೆ ಎಂದರು.

ನಾಡಿನ ಪ್ರಥಮ ಮುಖ್ಯಮಂತ್ರಿಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಆದರ್ಶಪ್ರಾಯರಾದ ಕೆ.ಸಿ.ರೆಡ್ಡಿ ಅವರು ಸ್ವಾತಂತ್ರ್ಯ ಬಂದ ಕೂಡಲೇ ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ರೈತ ಕುಟುಂಬದಿಂದ ಬಂದ ಅವರು ವಕೀಲರಾಗಿ, ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಪ್ರಜಾಪ್ರತಿನಿಧಿ ಎಂಬ ಪಕ್ಷ ಕಟ್ಟಿದ್ದರು. ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದ ಅವರು ಭವಿಷ್ಯದ ನಾಡು ಕಟ್ಟಲು ಅಗತ್ಯವಿರುವ , ಶಾಸನ ರಚನೆ, ಸರ್ಕಾರದ ಯಂತ್ರ ರಚನೆ ಎಲ್ಲವನ್ನು ತಾವಿದ್ದ ನಾಲ್ಕೂವರೆ ವರ್ಷದಲ್ಲಿ ನಮಗೆ ಬಳುವಳಿಯಾಗಿ ನೀಡಿದ್ದಾರೆ. ಅವರ ಆದರ್ಶ ನಮಗೆ ಬಿಟ್ಟು ಹೋಗಿದ್ದಾರೆ. ಆ ಮಹನೀಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ನಡೆಯಬೇಕು ಎನ್ನುವುದು ನಮ್ಮ ನಂಬಿಕೆ ಎಂದರು.

ಅವರ ಜನ್ಮ ದಿನಾಚರಣೆಗೆ ಬಂದಾಗ ಅವರ ಪ್ರತಿಮೆ ಮಾಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಅದರಂತೆ ಕರ್ನಾಟಕ ಅಡಿಪಾಯ ಹಾಕಿದ ನಾಯಕನನ್ನು ನೆನೆಯಲು ವಿಧಾನಸೌಧದಲ್ಲಿ ಪ್ರತಿಮೆ ಅನಾವರಣ ಮಾಡಲಾಗಿದೆ ಎಂದರು.