ಭಾರತದಲ್ಲಿ ಕಳೆದ ಎರಡು ದಶಕಗಳಿಂದ ಬಿಜೆಪಿಯು ಧರ್ಮದ ಹೆಸರಿನಲ್ಲಿ ಪುರಾತನ ವಿಚಾರಗಳ ಮೌಲ್ಯವರ್ಧನೆ ಮತ್ತು ಭ್ರಷ್ಟಾಚಾರದ ಭೂಗತ ಆಚರಣೆ ಏಕಕಾಲದಲ್ಲಿ ಮಾಡುತ್ತಿದೆ ಎನ್ನುತ್ತಾರೆ ಲೇಖಕ ಸೂರ್ಯಕಾಂತ ವಾಘ್ಮೋರೆಯವರು. ವಾಘ್ಮೋರೆಯವರು ಮುಂಬೈ ಐಐಟಿಯಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿದ್ದು ಡಿಸೆಂಬರ್ ೨೧, ೨೦೨೨ ರ ಸ್ಕೋಲ್.ಇನ್ ವೆಬ್ ಜರ್ನಲ್ನಲ್ಲಿ ಬರೆದ ತಮ್ಮ ಅಂಕಣದಲ್ಲಿ ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಧರ್ಮˌ ದೇವರುˌ ಸಾಂಪ್ರದಾಯˌ ಹಾಗು ಮೈಲ್ಯಗಳ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸಿ ಅದು ಮಾಡುತ್ತಿರುವ ರಾಜಕೀಯ ವ್ಯಭಿಚಾರವನ್ನು ಕೂಲಂಕುಷವಾಗಿ ವಿವರಿಸಿದ್ದಾರೆ. ಅವರು ಪ್ರಸ್ತಾಪಿಸಿರುವ ಸಂಗತಿಗಳನ್ನು ನಾನು ಇಲ್ಲಿ ವಿಮರ್ಶಿಸಿದ್ದೇನೆ.
ವಾಘ್ಮೋರೆಯವರು ೨೦೧೧ರ ಆಗಸ್ಟ್ ತಿಂಗಳಲ್ಲಿ ಮುಂಬೈನಲ್ಲಿ ಅಣ್ಣಾ ಹಜಾರೆ ಮತ್ತು ಸಂಗಡಿಗರಿಂದ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನದ ಸಂದರ್ಭದಲ್ಲಿ ಜನರ ಮನಸ್ಸಿನಲ್ಲಿ ಉದ್ಭವಿಸಿದ ಪ್ರಶ್ನೆಗಳನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ. ಒಂದು ವೇಳೆ ಡಾ. ಮನಮೋಹನಸಿಂಗ್ ಸರಕಾರ ಪತನವಾದರೆ ಭಾರತದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ಬರುತ್ತದೆಯೆ ಎನ್ನುವ ಪ್ರಶ್ನೆ ಆಗ ಬಹುತೇಕರ ಮನಸ್ಸಿನಲ್ಲಿ ಮೂಡಿತ್ತಂತೆ. ಈ ಪ್ರಶ್ನೆಯು ಭಾರತದಲ್ಲಿನ ಇತರ ಹಲವು ನಿರ್ಣಾಯಕ ಸಮಸ್ಯೆಗಳನ್ನು ಕೂಡ ಪ್ರತಿನಿಧಿಸುತ್ತದೆ. ಭಾರತದಲ್ಲಿ ಇನ್ನು ಮುಂದೆ ಜಾತಿ ರಹಿತ ಹಿಂದೂ ಸಮಾಜ ಅಸ್ತಿತ್ವಕ್ಕೆ ಬರಬಹುದೇ? ವರದಕ್ಷಿಣೆ ರಹಿತ ವಿವಾಹಗಳು ನಡೆಯಬಹುದೇ? ಗೋಮಾಂಸ ಸೇವಿಸಿಯೂ ಕಳಂಕಿತರಾಗದೆ ಉಳಿಯಬಹುದೆ?ಮುಸ್ಲಿಮರು ಇಲ್ಲದಿದ್ದರೆ ಹಿಂದುತ್ವ ರಾಜಕಾರಣ ತನ್ನ ಅಸ್ತಿತ್ವ ಉಳಿಸಿಕೊಳ್ಳುತ್ತದೆಯೆ? ಹೀಗೆ ಅನೇಕ ಪ್ರಶ್ನೆಗಳನ್ನು ವಾಘ್ಮೋರೆಯವರು ಹಾಕುತ್ತಾರೆ.
ಮೇಲಿನ ಪ್ರಶ್ನೆಗಳಿಗೆ ಹೆಚ್ಚಾಗಿ ಋಣಾತ್ಮಕವಾಗಿ ಉತ್ತರಿಸಬಹುದಾದರೂ, ನಾವು ಭ್ರಷ್ಟಾಚಾರ, ವರದಕ್ಷಿಣೆ ಸಮಸ್ಯೆ, ಗೋಮಾಂಸ ಸೇವನೆ ಮತ್ತು ಜನಾಂಗೀಯ ದ್ವೇಷ ಈ ಜ್ವಲಂತ ಪಿಡುಗುಗಳನ್ನು ಅರ್ಥೈಸಿಕೊಳ್ಳುವುದರ ಮೇಲೆ ನಮ್ಮ ಅರಿವು ಅವಲಂಬಿತವಾಗಿದೆ. ಸರಕಾರಿ ಆಡಳಿತಕ್ಕೆ ಸಂಬಂಧಿಸಿದ ಭ್ರಷ್ಟಾಚಾರದ ಬಗ್ಗೆ ಮಾತ್ರ ನಾವು ಸಾಮಾನ್ಯವಾಗಿ ಚರ್ಚಿಸುತ್ತೇವೆˌ ಆದರೆ ಸಮಾಜದಲ್ಲಿ ಬೇರೂರಿರುವ ಇತರ ಬಗೆಯ ಸಾಮಾಜಿಕ ಭ್ರಷ್ಟಾಚಾರಗಳ ಬಗ್ಗೆ ಕಡಿಮೆ ಚರ್ಚೆ ನಡೆಯುತ್ತದೆ. ಭಾರತೀಯ ಸಮಾಜವನ್ನು ಭ್ರಷ್ಟಾಚಾರವು ನೈತಿಕ ಅಧಃಪಥನಕ್ಕೆ ದೂಡುತ್ತದೆ ಎನ್ನುವ ಪರಿಜ್ಞಾನವಿಲ್ಲದೆ ಅದು ಜನರ ಹೆಚ್ಚಿನ ಅಗತ್ಯವಾಗಿ ಮಾರ್ಪಟ್ಟಿದ್ದೇಕೆ ಎಂದು ವಾಘ್ಮೋರೆ ಪ್ರಶ್ನಿಸುತ್ತಾರೆ. ಸರಕಾರಿ ಆಡಳಿತದಲ್ಲಿನ ಭ್ರಷ್ಟಾಚಾರ ಸದಾ ಸುದ್ದಿಯಲ್ಲಿರುತ್ತದೆ ಎನ್ನುವುದು ಲೇಖಕರ ಆತಂಕವಾಗಿದೆ.
೨೦೨೨ರ ಆಗಸ್ಟ್ ತಿಂಗಳಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಚಿವ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ಕೇಂದ್ರ ತನಿಖಾ ದಳವು ದಾಳಿ ನಡೆಸಿತ್ತು. ಅದರಂತೆ ಇನ್ನೊಬ್ಬ ಸಚಿವ ಸತ್ಯೇಂದರ್ ಜೈನ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಜೂನ್ನಲ್ಲಿ ಬಂಧಿಸಿತ್ತು. ಕರ್ನಾಟಕದಲ್ಲಿಯೂ ಸಹ, ಗುತ್ತಿಗೆದಾರರ ಸಂಘವು ಕಳೆದ ವರ್ಷ ಜುಲೈನಲ್ಲಿ ಭಾರತೀಯ ಜನತಾ ಪಕ್ಷದ ಆಡಳಿತದ ಅಡಿಯಲ್ಲಿ ಅಧಿಕಾರಿಗಳಿಗೆ ೪೦% ಕಮಿಷನ್ ಆರೋಪ ಮಾಡಿತ್ತು. ಆಶ್ಟರ್ಯವೆಂದರೆˌ ಸರಕಾರದ ಭ್ರಷ್ಟಾಚಾರದ ವಿರುದ್ದ ಮಾತನಾಡದೆˌ ಪ್ರಸ್ತುತ ಪಡೆಯಲಾಗುವ ಕಮಿಷನ್ ತುಂಬಾ ಹೆಚ್ಚು ಎನ್ನುವ ಕೋಪ ಆ ಗುತ್ತಿಗೆದಾರರ ಮನಸ್ಸಿನಲ್ಲಿದೆ ಎನ್ನುತ್ತಾರೆ ವಾಘ್ಮೋರೆಯವರು.
ವಿರೋಧ ಪಕ್ಷಗಳ ಭ್ರಷ್ಟಾಚಾರದ ಬಗ್ಗೆ ವೀರಾವೇಶದಿಂದ ಮಾತನಾಡುವ ಬಿಜೆಪಿ ತಾನು ಎಸಗುತ್ತಿರುವ ಭ್ರಷ್ಟಾಚಾರವು ಸಾರ್ವತ್ರಿಕವಾಗಿ ಸ್ವೀಕಾರಾರ್ಹವಾಗಬೇಕೆಂದು ಬಯಸುತ್ತದೆಯೆ ಎನ್ನುವ ಮತ್ತೊಂದು ಪ್ರಮುಖ ಪ್ರಶ್ನೆಯನ್ನು ಪ್ರಸ್ತುತ ಬೆಳವಣಿಗೆ ಹುಟ್ಟುಹಾಕಿದೆ. ಹಿಂದೂ ಸಮಾಜಕ್ಕೆ ಸ್ವೀಕಾರಾರ್ಹವಾದ ಒಂದು ನಿರ್ದಿಷ್ಟ ಮಟ್ಟದ ಭ್ರಷ್ಟಾಚಾರ ಇರಬೇಕೇ? ಹಾಗಾದರೆ, ಸ್ವೀಕಾರಾರ್ಹವಾದ ರಾಜಕೀಯ ಹಿಂಸಾಚಾರದ ಮಟ್ಟ ಯಾವುದು? ಯಾವ ರೀತಿಯ ಅಸ್ಪೃಶ್ಯತೆ ಸ್ವೀಕಾರಾರ್ಹ? ಈ ಎಲ್ಲಾ ಪ್ರಶ್ನೆಗಳ ನಂತರ ಬಿಜೆಪಿಯ ಭ್ರಷ್ಟಾಚಾರದ ಪ್ರತಿಯೊಂದು ಕಾರ್ಯಕ್ಕೂ ಒಂದು ವಸಾಹತು ಮೌಲ್ಯವು ಕಂಡುಬರುತ್ತದೆ ಎಂದು ವಾಘ್ಮೋರೆ ಅಭಿಪ್ರಾಯಪಡುತ್ತಾರೆ.

ವಾಘ್ಮೋರೆಯವರು ಬಿಜೆಪಿಯ ಸಾಂಸ್ಕೃತಿಕ ಮತ್ತು ಆರ್ಥಿಕ ಭ್ರಷ್ಟಾಚಾರಗಳನ್ನು ಒಬ್ಬ ಯುವ ವೃತ್ತಿಪರನಾಗಿ ತಮ್ಮ ಅನುಭವದ ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ. ಅವರು ಸರಕಾರದ ಗ್ರಾಮೀಣಾಭಿವೃದ್ಧಿ ಏಜೆನ್ಸಿಯೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಾಗಿನ ಒಂದು ಅನುಭವವನ್ನು ವಿವರಿಸಿದ್ದಾರೆ. ಇಲಾಖೆಯಲ್ಲಿ ಭಾರತೀಯ ಜನತಾ ಪಕ್ಷದ ಸಮಿತಿಯು ಅಧಿಕಾರ ವಹಿಸಿಕೊಂಡಾಗˌ ತ್ರೈಮಾಸಿಕ ಸಭೆಗಳನ್ನು ಪ್ರಾರಂಭಿಸುವ ಮತ್ತು ಮುಕ್ತಾಯಗೊಳಿಸುವ ಮೊದಲು ಅಲ್ಲಿ ಸಂಸ್ಕೃತದಲ್ಲಿ ಪ್ರಾರ್ಥನೆಗಳನ್ನು ಹೇಳಿಸಲಾಗುತ್ತಿತ್ತಂತೆ. ಅದೇ ಸಮಯದಲ್ಲಿ, ತಾವು ಪಡೆದ ಅಭಿವೃದ್ಧಿಗೆ ನೀಡಲಾಗಿದ್ದ ಅನುದಾನದಲ್ಲಿ ಕಮಿಷನ್ ಬೇಡಿಕೆಯನ್ನಿಡಲಾಗುತ್ತಿತ್ತಂತೆ. ಆಂದರೆ, ಬಿಜೆಪಿ ಆಡಳಿತದಲ್ಲಿ ನಾನು ಸಂಸ್ಕೃತ ಪ್ರಾರ್ಥನೆ ಮತ್ತು ಭ್ರಷ್ಟಾಚಾರವನ್ನು ಒಟ್ಟಿಗೆ ನೋಡುತ್ತಿದ್ದೆ. ಖಂಡಿತವಾಗಿಯೂ ಅದೊಂದು ವಿರೋಧಾಭಾಸದ ಸಂಗತಿಯಲ್ಲ ವಾಘ್ಮೋರೆಯವರು.
ಬಿಜೆಪಿಯ ಸಿದ್ಧಾಂತದಲ್ಲಿ ಆಧ್ಯಾತ್ಮಿಕ ಶುದ್ಧೀಕರಣ ಮತ್ತು ಆರ್ಥಿಕ ಭ್ರಷ್ಟಾಚಾರ ಇವೆರಡೂ ಎಂದಿಗೂ ಪರಸ್ಪರ ಘರ್ಷಣೆಯಲ್ಲಿ ತೊಡಗುವುದಿಲ್ಲ ಎಂದು ವಾಘ್ಮೋರೆಯವರು ಅಪಹಾಸ್ಯ ಮಾಡುತ್ತಾರೆ. ಇದು ಬಿಜೆಪಿಯ ಭ್ರಷ್ಟಾಚಾರದ ಹೊಸ ಮಾದರಿ ಎನ್ನುವುದು ವಾಘ್ನೋರೆಯವರ ಅಭಿಪ್ರಾಯ. ಭ್ರಷ್ಟಾಚಾರ ಭಾರತದ ರಾಜಕೀಯ ಕ್ಷೇತ್ರದ ಹೃದಯಭಾಗದಲ್ಲಿ ಬೇರೂರಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದಾಗ್ಯೂ, ಬಿಜೆಪಿಯು ಹಿಂದುತ್ವದ ಅಡಿಯಲ್ಲಿ ದೇಶ ಮುನ್ನಡೆಯಬೇಕು ಮತ್ತು ಧರ್ಮದ ಸುತ್ತಲಿನ ಪುರಾತನ ವಿಚಾರಗಳ ಮೌಲ್ಯವರ್ಧನೆಯಾಗಬೇಕೆಂದು ಸಾರ್ವಜನಿಕವಾಗಿ ಪ್ರತಿಪಾದಿಸುತ್ತಾ ಭ್ರಷ್ಟಾಚಾರವನ್ನು ಏಕಕಾಲದಲ್ಲಿ ಒಪ್ಪಿಕೊಂಡು ಮುನ್ನೆಡುಸುತ್ತಿದೆ ಎನ್ನುವುದು ವಾಘ್ನೋರೆಯವರ ಖಚಿತ ಅಭಿಪ್ರಾಯವಾಗಿದೆ.
ದಿಲ್ಲಿ ಮತ್ತು ಬೆಂಗಳೂರಿನಲ್ಲಿ ಬಿಜೆಪಿಯ ಕೆಲವು ನಾಯಕರು ತಾವು ಪ್ರಗತಿಪರರಂತೆ ಮತ್ತು ನಿಸ್ವಾರ್ಥಿ ಹಾಗು ಫಕೀರ್ರಂತೆ ನಟಿಸುತ್ತಾರೆˌ ಆದರೆ ಬಿಜೆಪಿಯ ತಳಮಟ್ಟದ ರಾಜಕಾರಣಿಗಳ ಮೂಲಕ ಭ್ರಷ್ಟಾಚಾರವನ್ನು ಬೆಳೆಸಿ ಬೇರೂರಿಸುವ ಕಾರ್ಯ ಮಾಡುತ್ತಾರೆ. ಇದು ಬಿಜೆಪಿಯ ದ್ವಿಮುಖ ನೀತಿಯ ಪರಿಚಯ ಮಾಡಿಸುತ್ತದೆ. ನೈತಿಕ ಮತ್ತು ಆರ್ಥಿಕ ಭ್ರಷ್ಟಾಚಾರವನ್ನು ಸಾಮಾನ್ಯೀಕರಿಸುವ ವಿಶೇಷತೆ ಮತ್ತು “ಶುದ್ಧ” ಹಿಂದುತ್ವದ ಸೈದ್ಧಾಂತಿಕ ದುರಹಂಕಾರವು ಬಿಜೆಪಿಯ ಹೊಚ್ಚ ಹೊಸ ಮಾದರಿಯಾಗಿದೆ ಎನ್ನುತ್ತಾರೆ ವಾಘ್ಮೋರೆಯವರು. ಬಿಜೆಪಿಯ ಮಾದರಿಯನ್ನೆ ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಕನಿಷ್ಠ ಭಾಗಶಃ ಅನುಕರಿಸುತ್ತಿದೆ. ಡಾ. ಬಿ ಆರ್ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಸಂದರ್ಭದ ಆಚರಣೆಯಲ್ಲಿ ಭಾಗವಹಿಸಿದ ಅಪರಾಧಕ್ಕಾಗಿ ಎಎಪಿ ಸಚಿವ ರಾಜೇಂದ್ರ ಗೌತಮ್ ಅವರ ರಾಜಿನಾಮೆಯನ್ನು ಅಕ್ಟೋಬರ್ ೯ ರಂದು ಎಎಪಿ ಪಡೆದಿತ್ತು.
ಎಎಪಿ ಮತ್ತು ಬಿಜೆಪಿಯ ಅಸಹಿಷ್ಣುತೆ ಈ ಘಟನೆಯ ಮೂಲಕ ಹಿಂದೂ ಧಾರ್ಮಿಕ ಗೊಡ್ಡು ಆದರ್ಶಗಳು ಮತ್ತು ನೈತಿಕ ಭ್ರಷ್ಟಾಚಾರದ ಉತ್ತುಂಗವನ್ನು ಸೂಚಿಸುತ್ತದೆ. ಇವೆರಡೂ ಪಕ್ಷಗಳು ಅನುಸರಿಸುತ್ತಿರುವ ಮಾದರಿಯು ಹಿಂದೂ ಸಮಾಜಕ್ಕೆ ಬಹಳ ದೊಡ್ಡ ಬೆದರಿಕೆಯಾಗಿದೆ ಎನ್ನುತ್ತಾರೆ ವಾಘ್ಮೋರೆಯವರು. ಬಿಜೆಪಿಯ ಈ ಹೊಸ ಮಾದರಿ ಯಾವ ರೀತಿಯ ಸಮಾಜವನ್ನು ನಿರ್ಮಿಸುತ್ತಿದೆ? ಸಾರ್ವಜನಿಕ ಜೀವನದ ನೈತಿಕತೆ ಯಾವ ಮಟ್ಟಕ್ಕೆ ಕುಸಿಯುತ್ತಿದೆ? ಭಾರತದ ಶ್ರೇಷ್ಟ ದಾರ್ಶನಿಕ ಬಸವಣ್ಣನವರ ಪ್ರಗತಿಪರ ವಿಚಾರಗಳಿಂದ ದೇಶ ಹಿಂದಕ್ಕೆ ಸರಿಯುತ್ತಿದೆ. ಹಿಂದುತ್ವವಾದಿ ವಿ ಡಿ ಸಾವರ್ಕರ್ ಜೈಲಿನಿಂದ ಹೊರಬಂದು ಬುಲ್ಬುಲ್ ಮೇಲೆ ಹಾರುವ ಹಂತಕ್ಕೆ ಇತಿಹಾಸದ ಪಠ್ಯಪುಸ್ತಕಗಳಲ್ಲಿ ಪ್ರಸ್ತಾಪಿಸುವ ಮಟ್ಟಕ್ಕೆ ನಾವು ನೈತಿಕವಾಗಿ ಕುಸಿದಿದ್ದೇವೆ. ನಾವು ಬಿಜೆಪಿಯ ಈ ಹೊಸ ಸನಾತನ ಸಾರ್ವಜನಿಕ ತಾರ್ಕಿಕ ಯುಗದಲ್ಲಿದ್ದೇವೆ. ಇಲ್ಲಿ ಕಾರಣ ಅಥವಾ ಕರುಣೆ ಮುಖ್ಯವಲ್ಲ ಎನ್ನುತ್ತಾರೆ ವಾಘ್ಮೋರೆಯವರು.
ಒಂದು ಸಮಾಜವಾಗಿ ಭಾರತೀಯರಾದ ನಾವು ೫% ಅಥವಾ ೪೦% ನಷ್ಟು ಭ್ರಷ್ಟಾಚಾರದ ಮಟ್ಟವನ್ನು ಸಾಮಾನ್ಯೀಕರಿಸಬಾರದು ಮತ್ತು ಪ್ರಜಾಪ್ರಭುತ್ವವು ಕೇವಲ ಸೀಮಿತ ಮತ್ತು ನಿರ್ದಿಷ್ಟವಾದ ಹಿಂದೂ ನೈತಿಕತೆಯ ಆಶಯಗಳ ಮೇಲೆ ನಡೆಯಲು ಸಾಧ್ಯವಿಲ್ಲ ಎಂದು ತುರ್ತಾಗಿ ಅರಿತುಕೊಳ್ಳಬೇಕಾಗಿದೆ. ಇಲ್ಲದಿದ್ದರೆ, ಬಿಜೆಪಿ ಹುಟ್ಟುಹಾಕಿರುವ ಭ್ರಷ್ಟ ನೈತಿಕತೆಯನ್ನು ಆಚರಿಸುವ ಮತ್ತು ಭದ್ರಪಡಿಸುವ ರೋಮಾಂಚಕ ಕಾರ್ಯವಿಧಾನದ ಪ್ರಜಾಪ್ರಭುತ್ವವನ್ನು ನಾವು ಮುಂದುವರಿಸಲಿದ್ದೇವೆ ಎಂದು ಸೂರ್ಯಕಾಂತ್ ವಾಘ್ಮೋರೆ ಅವರು ಆತಂಕವನ್ನು ವ್ಯಕ್ತಪಡಿಸಿದ್ದಾರೆ.






