ಕೋಲಾರ: ಸಿದ್ದರಾಮಯ್ಯನವರೇ ನನ್ನನ್ನು ಚಿಲ್ಲರೆ ಎನ್ನುವ ಮೂಲಕ ಇಡೀ ಕೋಲಾರದ ಜನರನ್ನು ಅವಹೇಳನ ಮಾಡಿದ್ದೀರಿ. 24 ಗಂಟೆ ಒಳಗಾಗಿ ನಿಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ಆಗ್ರಹಿಸಿದರು.
ಭಾನುವಾರ ರಾತ್ರಿ ಕೋಲಾರ ನಗರ ಹೊರವಲಯದ ಕೋಗಿಲಹಳ್ಳಿಯ ತಮ್ಮ ನಿವಾಸದಲ್ಲಿ ಕರೆದಿದ್ದ ತುರ್ತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸಿದ್ದರಾಮಯ್ಯನವರೇ ನೀವು ಈ ರಾಜ್ಯದ ಹಿರಿಯ ರಾಜಕಾರಣಿ ಇದ್ದೀರಿ. ನಿಮಗೆ ಮಾತಿನ ಮೇಲೆ ಹಿಡಿತ ಇರಲಿ. ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ನಿಮ್ಮನ್ನು ಗೆಲ್ಲಿಸಿದ್ದು ಇದೇ ಚಿಲ್ಲರೆ ಎಂದು ಮರೆಯಬೇಡಿ ಎಂದು ಟಾಂಗ್ ನೀಡಿದರು.
2006ರಲ್ಲಿ ಜೆಡಿಎಸ್’ನಿಂದ ಬರಿಗೈನಲ್ಲಿ ಬಂದಾಗ ಚಾಮುಂಡೇಶ್ವರಿಯಲ್ಲಿ ರಾಜಕೀಯ ಪುನರ್ಜನ್ಮ ಪಡೆಯುವುದಕ್ಕೆ ಇದೇ ವರ್ತೂರ್ ಪ್ರಕಾಶ್ ಬೇಕಾಗಿತ್ತು. ಅಂದು ನಾನು ಇಲ್ಲದಿದ್ದರೆ ನೀವು ಇಂದು ಚಿಲ್ಲರೆ ಆಗಿರಬೇಕಿತ್ತು ಎಂದು ತಿರುಗೇಟು ನೀಡಿದ್ದಾರೆ.
ಚಾಮುಂಡೇಶ್ವರಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಪರವಾಗಿ ನಾನು ಕೆಲಸ ಮಾಡುತ್ತಿದ್ದ ವೇಗಕ್ಕೆ ಹತಾಶರಾದ ಮೇಲುಕೋಟೆ ಶಾಸಕ ಪುಟ್ಟರಾಜು ಅವರು ಗುಂಪಿನೊಂದಿಗೆ ನನ್ನ ಮೇಲೆ ದಾಳಿ ನಡೆಸಿದ್ದರು. ಆಗ ಮಹಡಿಯಿಂದ ಜಿಗಿದು ಹಳೇ ಕಾರ್ ಕೆಳಗೆ ಇಡೀ ರಾತ್ರಿ ಕಳೆಯುವ ಮೂಲಕ ಜೀವ ಉಳಿಸಿಕೊಂಡು ಸಿದ್ದರಾಮಯ್ಯ ಪರವಾಗಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದೇನೆ. ಈ ಬಾರಿ ಶೇ.80 ರಷ್ಟು ಜನತೆ ನನಗೆ ಮತ ಹಾಕಲು ನಿರ್ಧರಿಸಿದ್ದು, ಇಂತಹ ಮತದಾರರನ್ನು ಚಿಲ್ಲರೆ ಎಂದು ಕರೆದಿರುವ ಸಿದ್ದರಾಮಯ್ಯ ಅವರಿಗೆ ಮುಂದಿನ ಚುನಾವಣೆಯಲ್ಲಿ ಜನತೆ ಪಾಠ ಕಲಿಸಲಿದ್ದಾರೆಂದು ವರ್ತೂರ್ ಪ್ರಕಾಶ್ ಹೇಳಿದರು.