ಮೈಸೂರು: ಪ್ರಧಾನಿಗೆ ಜನಸಾಮಾನ್ಯರ ಮೇಲೆ ನಿಜವಾಗಿಯೂ ಕಾಳಜಿ ಇದ್ದರೆ ಅದಾನಿ ಸಮೂಹದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ರಾಷ್ಟ್ರೀಕರಣಗೊಳಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದರು.
ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಜೀವವಿಮಾ ನಿಗಮ (ಎಲ್’ಐಸಿ) ಮತ್ತು ರಾಷ್ಟ್ರೀಕೃತ ಬ್ಯಾಂಕ್’ಗಳಲ್ಲಿನ ಸಾರ್ವಜನಿಕರ ಸಾವಿರಾರು ಕೋಟಿ ರೂಪಾಯಿ ಹಣವನ್ನು ಅದಾನಿ ಸಮೂಹದಲ್ಲಿ ಷೇರುಗಳ ಮೂಲಕ ಹೂಡಿಕೆ ಮಾಡಿಸಿದ ಕೇಂದ್ರ ಸರ್ಕಾರ ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ. ಇದನ್ನು ಖಂಡಿಸಿ ಕಾಂಗ್ರೆಸ್’ನಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಅದಾನಿ ಸಮೂಹದ ಅವ್ಯವಹಾರಗಳ ಬಗ್ಗೆ ಕಾಂಗ್ರೆಸ್ ನಾಯಕರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದ ಪ್ರಧಾನಿ ನರೇಂದ್ರ ಮೋದಿ ಅದಾನಿಯನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ. ಪಲಾಯನ ಮಾಡಿ ನೆಹರೂ ಉಪನಾಮದ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದರಲ್ಲಿ ತೊಡಗಿದ್ದಾರೆ. ವಿಚಾರಣೆ ನಡೆಸಲು ಸೂಚಿಸಿಲ್ಲವೇಕೆ? ಎಂದು ಕೇಳಿದರು.

ಎಲ್’ಐಸಿಯ 40ಸಾವಿರ ಕೋಟಿಯನ್ನು ಅದಾನಿ ಸಮೂಹದಲ್ಲಿ ಷೇರುಗಳ ಮೂಲಕ ಹೂಡಿಕೆ ಮಾಡುವಂತೆ ಮೋದಿ ಲಿಖಿತವಾಗಿ ಸೂಚಿಸಿದ್ದಾರೆ. ಅಂತೆಯೇ ಎಸ್’ಬಿಐನವರು 90ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ. ಇದಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೂಚಿಸಿದ್ದಾರೆ ಎನ್ನುತ್ತವೆ ದಾಖಲೆಗಳು. ಆದರೆ, ಈ ಬಗ್ಗೆ ಸ್ಪಷ್ಟನೆ ಕೊಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿಲ್ಲವೇಕೆ? ಎಂದು ಕೇಳಿದರು.
ಮೈಸೂರು–ಬೆಂಗಳೂರು ಎಕ್ಸ್’ಪ್ರೆಸ್ ವೇ ವಿಚಾರದಲ್ಲಿ ಸಂಸದ ಪ್ರತಾಪ ಸಿಂಹ ಪದೇ ಪದೇ ಸುಳ್ಳು ಹೇಳುತ್ತಿದ್ದಾರೆ. ಮನೆ ಕಟ್ಟಿದವರು ಕಾಂಗ್ರೆಸ್’ನವರು, ಸುಣ್ಣ ಬಳಿದವರು ನಮ್ಮದು ಎಂದರೆ ಹೇಗೆ? ಎಂದು ಪ್ರಶ್ನಿಸಿದ ಅವರು, ಈ ಹೆದ್ದಾರಿ ನಿರ್ಮಾಣದ ವಿಷಯದಲ್ಲಿ ಶೇ 70ರಷ್ಟು ಕ್ರೆಡಿಟ್ ಯೋಜನೆಯನ್ನು ತಂದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಗಿನ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಅವರಿಗೆ ಸಲ್ಲಬೇಕು ಎಂದು ಹೇಳಿದರು.
ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್ಕುಮಾರ್, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ ಇದ್ದರು.