ಬಸವರಾಜ ಅಮರಗೋಳ ಎಂಬ ವ್ಯಕ್ತಿ ಚಿಕ್ಕಮಗಳೂರು ಜಿಲ್ಲಾ ಪಂಚಾಯತಿ, ಮೂಡಿಗೆರೆ ಹಾಗೂ ಕಡೂರು ಮುಂತಾದ ಕಡೆಗಳಿಗೆ ಕೊರೊನಾ ಅಲೆಯಲ್ಲಿ ಉಪಕರಣಗಳನ್ನು ಸರಬರಾಜು ಮಾಡಿದ್ದರು. ಅದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶದ ಮೇಲೆ ಸರಬರಾಜು ಮಾಡಿದ್ದು. ಈಗ ಎರಡು ವರ್ಷ ಆಗಿದೆ, ಅದರಲ್ಲಿ ಕೇವಲ 20% ಬಿಲ್ ಹಣವನ್ನು ಮಾತ್ರ ನೀಡಿದ್ದಾರೆ. ಬಾಕಿ ಹಣಕ್ಕಾಗಿ ಆತ ಮುಖ್ಯಮಂತ್ರಿಗಳನ್ನು ಎರಡು ಬಾರಿ ಭೇಟಿ ಮಾಡಿದ್ದಾರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದಾರೆ. ಇದರಿಂದ ಯಾವ ಉಪಯೋಗ ಆಗದಿದ್ದಕ್ಕೆ ಸಾಕಾಗಿ ಕೊನೆಗೆ ರಾಷ್ಟ್ರಪತಿಗಳಿಗೆ 20-10-2022ರಲ್ಲಿ ಪತ್ರ ಬರೆದು ತನ್ನ ಬಳಿ 35-40% ಕಮಿಷನ್ ಕೇಳುತ್ತಿದ್ದಾರೆ, ಇಷ್ಟು ಹಣ ನನ್ನಿಂದ ಕೊಡೋಕಾಗುತ್ತಿಲ್ಲ, ನನ್ನ ಬಾಕಿ ಬಿಲ್ ಹಣವನ್ನು ನೀವೇ ಕೊಡಿಸಿ ಇಲ್ಲದಿದ್ದರೆ ನನಗೆ ದಯಾಮರಣಕ್ಕೆ ಅನುಮತಿ ಕೊಡಿ ಎಂದು ಕೇಳಿದ್ದಾರೆ. ಇದರರ್ಥ ಈ ಸರ್ಕಾರ 40% ಕಮಿಷನ್ ಸರ್ಕಾರ ಎಂಬುದಕ್ಕೆ ಪ್ರಬಲ ಸಾಕ್ಷಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಹೃದಯಾಘಾತದಿಂದ ನಿಧನರಾದ ಪೊಲೀಸ್ ಇನ್ಸ್ಪೆಕ್ಟರ್ ನಂದೀಶ್ ಅವರ ಅಂತಿಮ ದರ್ಶನ ಪಡೆಯಲು ಹೋಗಿದ್ದ ಎಂಟಿಬಿ ನಾಗರಾಜ್ ಅವರು ಪೊಲೀಸ್ ಸಿಬ್ಬಂದಿ ಜೊತೆ ಮಾತನಾಡುವಾಗ “70-80 ಲಕ್ಷ ಕೊಟ್ಟು ವರ್ಗಾವಣೆ ಮಾಡಿಸಿಕೊಂಡರೆ ಹೃದಯಾಘಾತ ಆಗದೆ ಇರುತ್ತದಾ?” ಎಂದು ಹೇಳಿದ್ದಾರೆ. ಇದನ್ನು ಯಾರೋ ದಾರಿಯಲ್ಲಿ ಹೋಗುವವರು ಹೇಳಿದ್ದಲ್ಲ, ಸರ್ಕಾರದಲ್ಲಿ ಸಚಿವ ಸ್ಥಾನದಲ್ಲಿ ಇರುವವರು ಹೇಳಿದ್ದು. ನಂದೀಶ್ ಅವರು ಸಾಲ ಮಾಡಿ 70-80 ಲಕ್ಷ ಲಂಚ ನೀಡಿದ್ದಾರೆ, ಆಮೇಲೆ ಯಾವುದೋ ಕಾರಣಕ್ಕೆ ಅವರನ್ನು ಅಮಾನತು ಮಾಡಿದ್ದಾರೆ, ಇದರಿಂದ ಒತ್ತಡಕ್ಕೆ ಒಳಗಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದಕ್ಕೆ ಯಾರು ಹೊಣೆ? ರಾಜ್ಯ ಸರ್ಕಾರ ಹೊಣೆ ಅಲ್ವಾ? ಈ ಲಂಚದ ಹಣವನ್ನು ಗೃಹ ಸಚಿವರು ಅಥವಾ ಮುಖ್ಯಮಂತ್ರಿಗಳು ಪಡೆದಿರಬೇಕು? ಅವರಿಗೆ ತಮ್ಮ ಹುದ್ದೆಯಲ್ಲಿ ಮುಂದುವರೆಯುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಗೆ ನನ್ನ ಕಂಡರೆ ಭಯ, ಹಾಗಾಗಿ ಅವರು ಎಲ್ಲಾ ಕಡೆ ನನ್ನನ್ನು ಟಾರ್ಗೇಟ್ ಮಾಡಿ ನನ್ನ ಇಮೇಜ್ ಅನ್ನು ಕಡಿಮೆ ಮಾಡಲು ನೋಡುತ್ತಿದ್ದಾರೆ. ಇವುಗಳಿಗೆ ನಾನು ಬೆದರುವವನಲ್ಲ ಎಂದು ತಿರುಗೇಟು ನೀಡಿದ್ದಾರೆ.

ಬಿಜೆಪಿ ಸರ್ಕಾರ ಎರಡು ವರ್ಷ ಮೂರು ತಿಂಗಳು ಸುಮ್ಮನಿದ್ದಿದ್ದು ಏಕೆ? ವಾಲ್ಮೀಕಿ ಶ್ರೀಗಳು 257 ದಿನಗಳ ಕಾಲ ಧರಣಿ ಕೂರುವಂತೆ ಮಾಡಿದ್ದು ಯಾಕೆ? ನಮ್ಮ ಪಕ್ಷದ ಎಸ್,ಸಿ ಹಾಗೂ ಎಸ್,ಟಿ ಶಾಸಕರು ಪ್ರತೀ ಬಾರಿ ಸದನ ಕರೆದಾಗ ಮೀಸಲಾತಿ ಹೆಚ್ಚಳದ ಪ್ರಸ್ತಾಪ ಮಾಡಿದ್ದಾರೆ, ಧರಣಿ ಕೂತಿದ್ದಾರೆ. ಇದಕ್ಕೆ ಬಿಜೆಪಿಯ ಒಬ್ಬ ಶಾಸಕ ಬೆಂಬಲ ನೀಡಿದ್ರಾ? ಈ ಶ್ರೀರಾಮುಲು ಅವರು ಚುನಾವಣೆಗೆ ಮೊದಲು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ನಾಗಮೋಹನ್ ದಾಸ್ ಅವರ ವರದಿ ಜಾರಿಗೆ ಕೊಡುತ್ತೇವೆ, ಇದನ್ನು ರಕ್ತದಲ್ಲಿ ಬರೆದುಕೊಡ್ತೀನಿ ಎಂದಿದ್ದರು.
ಪತ್ರಕರ್ತರಿಗೆ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಲಕ್ಷ ಲಕ್ಷ ಹಣದ ಉಡುಗೊರೆ ನೀಡಿದ್ದಾರೆ. ತಮ್ಮ ಕಚೇರಿಯ ಯಾರೋ ಒಬ್ಬರು ಇದನ್ನು ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಬೊಮ್ಮಾಯಿ ಅವರ ಗಮನಕ್ಕೆ ಬರದೆ ಈ ರೀತಿ ಯಾರೋ ಒಬ್ಬರು ಹಣ ಕೊಡೋಕೆ ಆಗುತ್ತಾ? ಇದನ್ನು ಪತ್ರಕರ್ತರು ವಾಪಾಸು ಕೊಟ್ಟಿದ್ದಾರೆ. ಈ ರೀತಿ ಹಣ ಕೊಡುವ ಹಿಂದಿನ ಉದ್ದೇಶ ಏನು? ಸರ್ಕಾರದ ಮೇಲೆ ಯಾವುದೇ ಆರೋಪ ಮಾಡಬಾರದು, ಸರ್ಕಾರದ ವಿರುದ್ಧ ಏನು ಬರೆಯಬಾರದು, ಅವರ ಬಾಯಿ ಮುಚ್ಚಿಸಬೇಕು ಎಂದು ಕೊಟ್ಟಿರುವುದು. ಈ ಹಣ ಯಾವುದು? ಎಲ್ಲಿಂದ ಬಂತು ಗೊತ್ತಾ? ಇದು 40% ಕಮಿಷನ್ ಲಂಚ ಹೊಡೆದ ದುಡ್ಡು.
ಈ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಕೆಲವರೆಲ್ಲ ಉಡುಗೊರೆ ಹಣವನ್ನು ವಾಪಾಸು ಕೊಟ್ಟಿದ್ದಾರೆ, ಆದರೆ ಅವು ಬಾಯಿ ಬಿಟ್ಟು ಹೇಳುವ ಹಾಗೆ ಇಲ್ಲ. ಈ ಬಗ್ಗೆ ಪತ್ರ ಬರೆದಿದ್ದಾರೆ ಎಂಬ ಸುದ್ದಿ ಇದೆ. ಈ ಬಿಜೆಪಿಯವರು ಎಂಥಾ ಲಜ್ಜೆಗೆಟ್ಟವರು ಇರಬಹುದು? ಒಂದು ಲಕ್ಷ ಹಣ ಕೊಟ್ಟು ಅದನ್ನು ಸಮರ್ಥನೆ ಮಾಡುತ್ತಾರಲ್ಲ ಎಂಥಾ ಭಂಡರು. ಬಿಜೆಪಿಯವರದ್ದು ಸುಳ್ಳಿನ ಕಾರ್ಖಾನೆಯೇ ಇದೆ. ಆರ್,ಎಸ್,ಎಸ್ ಒಂದು ಸುಳ್ಳಿನ ಕಾರ್ಖಾನೆ. ಸುಳ್ಳು ಸೃಷ್ಟಿಯೇ ಅವರ ಕೆಲಸ.
ನಳಿನ್ ಕುಮಾರ್ ಕಟೀಲ್ ಯಾವ ಹಿನ್ನೆಲೆಯಿಂದ ಬಂದವರು? ಯಾವ ಹೋರಾಟ ಮಾಡಿಕೊಂಡು ಬಂದಿದ್ದಾರೆ? ಆರ್,ಎಸ್,ಎಸ್ ಹಿನ್ನೆಲೆ ಮಾತ್ರ ಇರುವುದು. ಅವರೊಬ್ಬ ಜೋಕರ್, ಅಂಥವರಿಗೆಲ್ಲ ನಾನು ಉತ್ತರ ಕೊಡುತ್ತಾ ಕೂರಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.






