ಚಿತ್ರದುರ್ಗದ ಮುರುಘಾಶ್ರೀಗಳ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಿ.ಟಿ.ರವಿ, ನಮ್ಮಲ್ಲಿ ಒಂದು ಗಾದೆ ಮಾತಿದೆ ನದಿ ಮೂಲ ಋಷಿ ಮೂಲವನ್ನು ಹುಡುಕಬಾರದು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಯಾವುದೇ ಆರೋಪ ಕೇಳಿಬಂದಾಗಲೂ ತನಿಖೆ ಮೊದಲೇ ಅಪರಾಧಿ ಅಥವಾ ನಿರಪರಾಧಿ ಪಟ್ಟಕಟ್ಟಲು ಆಗಲ್ಲ. ಪ್ರಕರಣದ ಬಗ್ಗೆ ಮೊದಲು ತನಿಖೆ ನಡೆಯಲಿ. ತನಿಖೆಯ ವೇಳೆ ಮಾತನಾಡಿದರೆ ತಪ್ಪಾಗುತ್ತದೆ ಎಂದರು.
ಮುರುಘಾಶ್ರೀಗಳು ಕಳೆದ ಹಲವು ದಶಕಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಅಂತವರ ಬಗ್ಗೆ ಆರೋಪ ಸರಿಯಲ್ಲ. ಆರೋಪಗಳು ಬಂದಾಗ ನಾಡಿನ ಎಲ್ಲಾ ಜನರಿಗೂ ಕಾನೂನು ಒಂದೆ. ಆರೋಪದ ಬಗ್ಗೆ ನಿಸ್ಪಕ್ಷಪಾತದ ತನಿಖೆ ನಡೆಯುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಮುಂದುವರೆದು, ನಮ್ಮಲ್ಲಿ ಒಂದು ಗಾದೆ ಮಾತಿದೆ ನದಿ ಮೂಲ ಋಷಿ ಮೂಲವನ್ನು ಹುಡುಕಬಾರದು ಎಂದು ಹಾಗೇ ತನಿಖೆ ಹಂತದಲ್ಲಿರುವಾಗ ಈ ಬಗ್ಗೆ ಹೆಚ್ಚಿನ ಮಾತನಾಡಲು ಹೋಗಲ್ಲ ಎಂದು ಹೇಳಿದರು.