ಅತ್ಯಾಚಾರ ಪ್ರಕರಣದಲ್ಲಿ 2019ರಿಂದಲೂ ಜೈಲಿನಲ್ಲಿರುವ ಉತ್ತರ ಪ್ರದೇಶದ ಸಂಸದ ಅತುಲ್ ರೈ ಅವರನ್ನು ವಾರಾಣಸಿಯ ನ್ಯಾಯಾಲಯ, ಆರೋಪದಿಂದ ಖುಲಾಸೆಗೊಳಿಸಿದೆ. ಆದರೆ ಅವರ ವಿರುದ್ಧದ ಇತರೆ ಪ್ರಕರಣಗಳು ಬಾಕಿ ಇರುವ ಕಾರಣ, ಅವರಿಗೆ ಜೈಲಿನಿಂದ ಬಿಡುಗಡೆ ಸಿಕ್ಕಿಲ್ಲ.
ವಾರಾಣಸಿಯಲ್ಲಿರುವ ತನ್ನ ಮನೆಯಲ್ಲಿ 2018ರಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಉತ್ತರ ಪ್ರದೇಶದ ಪೂರ್ವ ಭಾಗದ 24 ವರ್ಷದ ಮಹಿಳೆಯೊಬ್ಬರು ಅತುಲ್ ರೈ ವಿರುದ್ಧ 2019ರಲ್ಲಿ ಆರೋಪಿಸಿದ್ದರು. ಕಳೆದ ವರ್ಷದ ಆಗಸ್ಟ್ನಲ್ಲಿ ಮಹಿಳೆ ಮತ್ತು ಆಕೆಯ ಸ್ನೇಹಿತ ಸುಪ್ರೀಂಕೋರ್ಟ್ ಮುಂಭಾಗ ಬೆಂಕಿ ಹಚ್ಚಿಕೊಂಡಿದ್ದರು. ಈ ಭೀಕರ ಘಟನೆ ನಡೆದು ಒಂದು ವಾರದ ಬಳಿಕ ಆಕೆ ದಿಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮಹಿಳೆಯ ಸ್ನೇಹಿತ ಕೂಡ ಸುಟ್ಟು ಗಾಯಗಳಿಂದ ಅಸುನೀಗಿದ್ದರು.
ಮಹಿಳೆ ಅತ್ಯಾಚಾರ ಪ್ರಕರಣದ ದೂರು ನೀಡಿದ ಒಂದು ತಿಂಗಳ ನಂತರ, 2019ರ ಜೂನ್ನಲ್ಲಿ ಸಂಸದ ಅತುಲ್ ರೈ ಪೊಲೀಸರಿಗೆ ಶರಣಾಗಿದ್ದರು. ಅಂದಿನಿಂದಲೂ ಅವರು ಜೈಲಿನಲ್ಲಿದ್ದಾರೆ.

ರಾಜ್ಯದ ಪೂರ್ವ ಭಾಗದ ಘೋಸಿ ಲೋಕಸಭೆ ಕ್ಷೇತ್ರದಲ್ಲಿ ಬಹುಜನ ಸಮಾಜ ಪಕ್ಷದ ಟಿಕೆಟ್ನಿಂದ ಸ್ಪರ್ಧಿಸಿದ್ದ ಅತುಲ್ ರೈ, 2019ರ ರಾಷ್ಟ್ರೀಯ ಚುನಾವಣೆಯಲ್ಲಿ ಗೆದ್ದ ಬಳಿಕ ಶರಣಾಗಿದ್ದರು.
2020ರ ನವೆಂಬರ್ನಲ್ಲಿ ಅತುಲ್ ರೈ ಸಹೋದರ, ಆ ಮಹಿಳೆ ವಿರುದ್ಧ ವಾರಾಣಸಿಯಲ್ಲಿ ಫೋರ್ಜರಿ ಪ್ರಕರಣ ದಾಖಲಿಸಿದ್ದರು. ಅದೇ ವರ್ಷ ಅತುಲ್ ರೈ ಅವರು ಸಂಸದರಾಗಿ ಪ್ರಮಾಣವಚನ ಸ್ವೀಕರಿಸಲು ಸುಪ್ರೀಂಕೋರ್ಟ್ ಅವಕಾಶ ಕೊಟ್ಟಿತ್ತು.












