ಬಣ್ಣ ಎರಚಿ ಓಕುಳಿ ಆಡಿರ್ತಿರಾ.. ರಾಜ ಮಹಾರಾಜರ ಕಾಲದಲ್ಲಿ ಹಾಲೋಕುಳಿ ನಡೀತಿತ್ತು ಅಂತಾ ಕೇಳಿರ್ತಿರಾ.. ಆದ್ರೆ, ಗದಗ ನಗರದಲ್ಲಿ ಸೆಗಣಿ ಓಕುಳಿ ಅನ್ನೋ ವಿಶಿಷ್ಟ ಆಚರಣೆ ಜಾರಿಯಲ್ಲಿದೆ..
ಗದಗ ನಗರದ ಗಂಗಾಪುರ ಪೇಟೆಯಲ್ಲಿ ಪರಸ್ಪರ ಸಗಣೆ ಎರಚಾಡುವ ಮೂಲಕ, ನೂರಾರು ವರ್ಷದಿಂದ ಆಚರಿಸಿಕೊಂಡು ಬಂದಿರೋ ವಿಶಿಷ್ಟ ಹಬ್ಬವನ್ನ ಜೀವಂತವಾಗಿಡಲಾಗಿದೆ..
ನಾಗರ ಪಂಚಮಿ ಹೆಣ್ಣು ಮಕ್ಕಳ ಹಬ್ಬ.. ಹೊಸ ಬಟ್ಟೆ ಹಾಕ್ಕೊಂಡು ನಾಗರ ಕಟ್ಟೆಗೆ ತೆರಳಿ ಹೆಣ್ಣುಮಕ್ಕಳು ಹಾಲು ಸಪರ್ಪಿಸಿ ಹಬ್ಬ ಆಚರಸ್ತಾರೆ.. ಪಂಚಮಿಯ ಮರುದಿನ ಷಷ್ಠಿ, ಕರಿಕಟ್ಟಂಬಲಿ ದಿನ ಗಂಡ್ ಹೈಕ್ಳು ಸೇರಿಕೊಂಡು ಈ ವಿಶೇಷ ಹಬ್ಬ ಆಚರಸ್ತಾರೆ..
ಸೆಗಣಿ ಆಟಕ್ಕೆ ತಿಂಗಳಿಂದ ನಡೆಯುತ್ತೆ ಪ್ರಿಪರೇಷನ್..!
ಪಂಚಮಿ ಮರುದಿನ ನಡೆಯೋ ಈ ವಿಶಿಷ್ಟ ಆಟಕ್ಕೆ ತಿಂಗಳಿಂದ ತಯಾರಿ ನಡೆಯುತ್ತೆ.. ಕರಿಕಟ್ಟಂಬಲಿ ದಿನ ಆಟ ಆಡೋದಕ್ಕೆ ಅಂತಾ ತಿಂಗಳು ಹಿಂದೆಯೇ ಸೆಗಣಿ ಸಂಗ್ರಹ ಕಾರ್ಯ ನಡೆಯುತ್ತೆ.. ಬಡಾವಣೆಯ ಯುವಕರ ಗುಂಪು ಕಟ್ಕೊಂಡು, ದನ ಕರುಗಳಿರುವ ಮನೆಗಳಿಗೆ ತೆರಳಿ ಅವರಿಂದ ಸೆಗಣೆ ಬೇಡಿ ಪಡೀತಾರೆ..
ಪಂಚಮಿ ಮರುದಿನ ಸಂಜೆ ಹೊತ್ತಲ್ಲಿ ನಡೆಯುತ್ತೆ ಸೆಗಣಿ ಕಾಳಗ..!
ಸೆಗಣಿ ಕಾಳಗ ನೋಡೋದಕ್ಕೆ ಥೇಟ್ ಹೋಳಿ ಹುಣ್ಣಿಮೆಯ ರಂಗಿನಾಟ ಅನ್ಸುತ್ತೆ.. ಆದ್ರೆ ಬಣ್ಣದ ಬದ್ಲು ಇಲ್ಲಿ ಸೆಗಣಿ ಎರಚಲಾಗುತ್ತೆ.. ಬಡಾವಣೆಯ ಮುಖ್ಯರಸ್ತೆಯಲ್ಲಿ ಸೆಗಣಿಯ ಗುಂಪು ಹಾಕಿ ಅವುಗಳ ಮೇಲೆ ವಿವಿಧ ಬಣ್ಣಗಳನ್ನು ಹಾಕುತ್ತಾರೆ. ಯುವಕರು ಎರಡು ತಂಡ ಕಟ್ಕೊಂಡು ಹತ್ತಿರದ ತೋಟದಲ್ಲಿ ತೆರಳಿ ಸಗಣೆ ಆಟಕ್ಕೆ ರೆಡಿ ಆಗ್ತಾರೆ.. ಡಿಫರೆಂಟ್ ಓಕುಳಿಗೆ ಡಿಫರೆಂಟಾಗೇ ರೆಡಿಯಾಗುವ ಯುವಕರು, ಕೊರಳಲ್ಲಿ ಬದನೆಕಾಯಿ, ಸೌತೆಕಾಯಿ, ಈರುಳ್ಳಿ, ಹಿರೇಕಾಯಿ, ಟೊಮೆಟೊ, ಸೇರಿದಂತೆ ವಿವಿಧ ತರಕಾರಿಗಳ ಹಾರ ಮಾಡಿಕೊಂಡು ಹಾಕ್ಕೊತಾರೆ… ಅಲ್ಲದೆ, ವಿಚಿತ್ರ ವೇಶಭೂಷಣ ಧರಿಸಿ ಗಮನ ಸೆಳೀತಾರೆ.. ಹುಡುಗ್ರು, ಹಿಡುಗೀರ ಉಡುಪು ಧರಸಿ ಖುಷಿ ಪಡ್ತಾರೆ.. ರೆಡಿಯಾದ ಯುವಕ್ರು, ತೋಟದಿಂದ ದುರ್ಗಾದೇವಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತೆರಳಿ ಪೂಜೆ ಸಲ್ಲಿಸುತ್ತಾರೆ.. ಅಲ್ಲಿಂದ ಆಟಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಂತಾಗುತ್ತೆ.. ಸುಮಾರು ಎರಡು ಗಂಟೆಗಳ ಕಾಲ ಸೆಗಣಿ ಆಟ ಆಡಿ ಯುವಕರು ಫುಲ್ ಎಂಜಾಯ್ ಮಾಡ್ತಾರೆ.

ಚರ್ಮ ರೋಗ ದೂರು ಮಾಡಲು ಸೆಗಣಿ ಆಟ..!
ಆಯುರ್ವೇದದಲ್ಲಿ ಸೆಗಣಿಗೆ ವಿಶೇಷ ಸ್ಥಾನ ಇದೆ.. ಸೆಗಣಿ ಇಲ್ಲದೇ ರೈತ್ರ ಜೀವನ ಊಹಿಸೋದಕ್ಕೆ ಸಾಧ್ಯವಿಲ್ಲ.. ರೈತ ಸಮುದಾಯ ಸಗಣೆಗೆ ದೈವ ಸ್ಥಾನ ನೀಡಿದೆ.. ಸೆಗಣಿಯ ಪಾವಿತ್ರತೆ ಸಾರುವ ನಿಟ್ಟಿನಲ್ಲಿ ಸಗಣೆ ಓಕುಳಿಯನ್ನ ನೂರಾರು ವರ್ಷದಿಂದ ನಡೆಸಿಕೊಂಡು ಬರಲಾಗ್ತಿದೆ.. ಅಲ್ದೆ, ಔಷಧಿಗುಣ ಹೊಂದಿರೋ ಸೆಗಣಿಯನ್ನ ಮೈಮೇಲೆ ಹಾಕಿಕೊಳ್ಳುವುದರಿಂದ ಚರ್ಮರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ..
ಸೆಗಣಿಯ ಮಹತ್ವ ವನ್ನ ಸಾರುವ ಅತ್ಯಂತ ವಿಶಿಷ್ಟ ಆಚರಣೆ ನಡೆಯೋದು ಗದಗದಲ್ಲೆ.. ಸೆಗಣಿ ಇಲ್ಲದೇ ರೈತರ ಜೀವನ ಇಲ್ಲ ಅನ್ನೋ ಸಂದೇಶವನ್ನ ಈ ಆಚರಣೆ ಮೂಲಕ ಜನ ಮತ್ತೊಮ್ಮೆ ಸಾರಿದ್ದಾರೆ.. ಮನರಂಜನೆಯ ಆಟದ ಜೊತೆಗೆ ಯುವಕರಲ್ಲಿ ಸೆಗಣಿ ಮಹತ್ವ ಸಾರೋದು ಹಿರಿಯರ ಉದ್ದೇಶ ಆಗುತ್ತು.. ಹೀಗಾಗಿ ಇಂಥ ಆಚರಣೆ ಈಗ್ಲೂ ನಡ್ಕೊಂಡು ಬಂದಿವೆ…