ರಾಜಸ್ಥಾನದ ಉದಯಪುರದಲ್ಲಿ ನಡುಹಗಲಿನಲ್ಲೇ ವ್ಯಕ್ತಿಯೋರ್ವರನ್ನು ಅಮಾನುಷವಾಗಿ ಕತ್ತು ಕಡಿದು ಹತ್ಯೆ ಮಾಡಿದ ಘಟನೆಗೆ ದೇಶವೇ ಬೆಚ್ಚಿ ಬಿದ್ದಿದೆ. ದೇಶದಲ್ಲಿ ಹೆಚ್ಚುತ್ತಿರುವ ಧರ್ಮ ಕಾರಣ ವೈಷಮ್ಯಗಳಿಗೆ ಈ ಹತ್ಯೆಯೂ ಸಾಕಷ್ಟು ಬಲ ನೀಡಿದೆ. ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾರನ್ನು ಬೆಂಬಲಿಸಿದ್ದಾರೆ ಎಂಬ ಕಾರಣಕ್ಕೆ ಈ ಹತ್ಯೆ ನಡೆದಿರುವುದು ಆತಂಕಕಾರಿಯಾಗಿದ್ದು, ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಿದೆ.
ಈ ದುಷ್ಕ್ರತ್ಯಕ್ಕೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದ್ದು, ಕರ್ನಾಟಕದ ರಾಜಕಾರಣಿಗಳು, ಚಿಂತಕರು, ಬುದ್ಧಿಜೀವಿಗಳು ಈ ಹತ್ಯೆಯನ್ನು ಕಟು ಶಬ್ದದಲ್ಲಿ ಖಂಡಿಸಿದ್ದಾರೆ. ಕೊಲೆಗಾರರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕನ್ನಡದ ಹಿರಿಯ ಚಿಂತಕ ರಹಮತ್ ತರೀಕೆರೆ ಅವರು ಉದಯಪುರದಲ್ಲಿ ಇಬ್ಬರು ಮತಾಂಧರು ಎಸಗಿದ ಕೃತ್ಯ ಹೀನ ಕ್ರೌರ್ಯ ಎಂದು ಹೇಳಿದ್ದಾರೆ.
“ಹಿಂಸೆ ಪ್ರತಿಹಿಂಸೆ, ದಾಳಿ ಪ್ರತಿದಾಳಿ, ಹತ್ಯೆ ಪ್ರತಿಹತ್ಯೆ – ಓಹ್ ನಮ್ಮ ಸಮಾಜ ಎತ್ತ ಸಾಗುತ್ತಿದೆ. ಉದಯಪುರದ ಆಘಾತಕಾರಿ ಘಟನೆ ಸಮಾಜದ ಕಣ್ತೆರೆಸಬೇಕಿದೆ. ಕಾರಣ ಏನೇ ಇರಲಿ, ಉದ್ದೇಶ ಯಾವುದೇ ಇರಲಿ, ಸಮುದಾಯ ದ್ವೇಷ ಮತ್ತು ಮತಾಂಧತೆ ಒಂದು ಸಮುದಾಯವನ್ನು, ಸಮಾಜವನ್ನು ಎಂತಹ ಕ್ರೂರಾವಸ್ಥೆಗೆ ಕೊಂಡೊಯ್ಯುತ್ತದೆ ಎನ್ನಲು ಉದಯಪುರ ಅಮಾನುಷ ಹತ್ಯೆ ಸಾಕ್ಷಿ. ಭಾರತದ ಸಾಮಾಜಿಕ-ಸಾಂಸ್ಕೃತಿಕ ನಿಘಂಟಿನಿಂದ ” ಧಾರ್ಮಿಕ ಭಾವನೆಗಳಿಗೆ ಧಕ್ಕೆ ” ಎಂಬ ಮೂರು ಪದಗಳನ್ನು ಅಳಿಸಿಹಾಕಬೇಕು. ಕೊಲೆಗಡುಕ ಮನಸ್ಥಿತಿಗೆ ಸಾಂಸ್ಥಿಕ-ಸಾಂಘಿಕ ಸ್ವರೂಪ ಮತ್ತು ಆಯಾಮವನ್ನು ಕೊಡುತ್ತಿರುವ ವಿಚ್ಚಿದ್ರಕಾರಿ ಮನಸುಗಳು ಇನ್ನಾದರೂ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು. ನಾವು ಎತ್ತ ಸಾಗುತ್ತಿದ್ದೇವೆ ದೇಶವನ್ನು ಎತ್ತ ಕೊಂಡೊಯ್ಯುತ್ತಿದ್ದೇವೆ ಸಮಾಜವನ್ನು ಎಲ್ಲಿಗೆ ತಂದು ನಿಲ್ಲಿಸುತ್ತಿದ್ದೇವೆ ? ಇದು ಪ್ರತಿಯೊಂದು ಪ್ರಜ್ಞಾವಂತ ಮನಸ್ಸನ್ನು ಕಾಡಬೇಕಾದ ಪ್ರಶ್ನೆ.” ಎಂದು ಹಿರಿಯ ಲೇಖಕ ದಿವಾಕರ ನಾರಾಯಣ ರಾವ್ ಪೋಸ್ಟ್ ಮಾಡಿದ್ದಾರೆ.
“ಉದಯಪುರದಲ್ಲಿ ಇಬ್ಬರು ಮತಾಂಧರು ಎಸಗಿರುವ ಕೃತ್ಯವು ಹೀನಕ್ರೌರ್ಯವಾಗಿದೆ. ಅದನ್ನು ಎಲ್ಲರೂ ಖಂಡಿಸಬೇಕಿದೆ. ಕೊಲೆಗಾರರಿಗೆ ತಕ್ಕ ಶಿಕ್ಷೆಯಾಗಲಿ. ಎಷ್ಟೇ ಸಮಸ್ಯೆಯಿದ್ದರೂ, ಎಷ್ಟೇ ಸೋಲಾದರೂ, ಡೆಮಾಕ್ರಟಿಕ್ಕಾದ ಮತ್ತು ಕಾನೂನುಬದ್ಧ ಹಾದಿಗಳಲ್ಲಿಯೇ ಭಿನ್ನಮತ ಮತ್ತು ಪ್ರತಿರೋಧ ಪ್ರಕಟವಾಗಬೇಕು. ಆವೇಶದ ಹಾದಿಗಳು ಆತ್ಮಹತ್ಯಾತ್ಮಕ. ಎಲ್ಲ ಧರ್ಮಗಳ ಮತಾಂಧತೆ ಮೂಲಭೂತವಾದ ಮತೀಯವಾದಗಳು ನಮ್ಮ ಶಾಪಗಳಾಗಿವೆ. ಇವು ದೇಶವನ್ನು ದಿನೇದಿನೇ ಅಮಾನುಷತೆಗೆ ಅಧಃಪತನಕ್ಕೆ ತಳ್ಳುತ್ತಿವೆ. ಸುರಂಗದ ಹಾದಿಯ ಕೊನೆಯಲ್ಲಿ ಬೆಳಕು ಕಾಣಬೇಕು. ಆದರೆ ಕರಾಳ ಕತ್ತಲೆಯೇ ಕಾಣುತ್ತಿದೆ.” ಎಂದು ರಹಮತ್ ತರೀಕೆರೆ ಅವರು ಬರೆದಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಕನ್ನಡದ ಕವಿ, ಗೀತೆಗಾರ ಕವಿರಾಜ್ ಅವರು, “ಕೊಲೆಗಡುಕರಿಗೆ ಬದುಕುವ ಹಕ್ಕಿಲ್ಲ. ಇಂತಹಾ ಪೈಶಾಚಿಕ ಕೃತ್ಯ ಎಸಗುವವರು ಯಾರೇ ಆಗಿರಲಿ , ಕಾರಣ ಏನೇ ಇರಲಿ ಇಂತಾ ಧರ್ಮಾಂಧ ರಕ್ಕಸರು ನಾಗರೀಕ ಸಮಾಜದಲ್ಲಿ ಬದುಕಲು ಅರ್ಹರಲ್ಲ.” ಎಂದು ಪೋಸ್ಟ್ ಮಾಡಿದ್ದಾರೆ.
“ಕೊಲ್ಲುವವರನ್ನು ‘ಕೊಲೆಗಡುಕರು’ ಎನ್ನಲು ಯಾವ ವಿನಾಯಿತಿಗಳೂ ಇಲ್ಲ. ಅವರು ‘ಕೊಲೆಗಡುಕರು’. ಆದ್ರೆ ಇವತ್ತು ಹೇಳುತ್ತಿರುವಷ್ಟು ನೈತಿಕತೆಯನ್ನೇ ಸದಾಕಾಲವೂ ಹೇಳುವಷ್ಟು ಉಳಿಸಿಕೊಳ್ಳಬೇಕಷ್ಟೇ! ಮನುಷ್ಯನನ್ನು ಮನುಷ್ಯ ಕೊಂದು ಉಳಿಸುಕೊಳ್ಳುವಂತಹದ್ದೇನೂ ಈ ನೆಲದಲ್ಲಿಲ್ಲ. “ ಎಂದು ಯುವ ಕವಿ ರಾಜೇಂದ್ರ ಪ್ರಸಾದ್ ಬರೆದಿದ್ದಾರೆ.
“ರಾಜಸ್ತಾನದ ಉದಯಪುರದಲ್ಲಿ ನೂಪುರ್ ಶರ್ಮಾರನ್ಬು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಟೈಲರ್ ಒಬ್ಬನನ್ನು ಇಬ್ಬರು ಕತ್ತು ಕತ್ತರಿಸಿ ಕೊಲೆಗೈದ ಪ್ರಕರಣ ವರದಿಯಾಗಿದೆ. ಇದೊಂದು ಹೇಯ ಕೃತ್ಯ ಅತ್ಯುಗ್ರ ಶಬ್ದಗಳಲ್ಲಿ ಖಂಡಿಸಬೇಕಾದ ಅಮಾನವೀಯ ಕೃತ್ಯ. ಈ ಆರೋಪಿಗಳು ಪ್ರಧಾನಿಯವರ ಬಗ್ಗೆಯೂ ಬೆದರಿಕೆ ಹಾಕಿದ್ದಾಗಿ ವರದಿಯಲ್ಲಿದೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ( ಈಗಾಗಲೆ ನಾವು ಭಯೋತ್ಪಾದಕರಿಂದಾಗಿ ಇಬ್ಬರು ಪ್ರಧಾನಿಗಳನ್ನು ಕಳೆದುಕೊಂಡಿದ್ದೇವೆ ಎನ್ನುವುದನ್ನು ಮರೆಯಬಾರದು.)
ಈ ಆರೋಪಿಗಳನ್ನು ತಕ್ಷಣ ಬಂಧಿಸಿ ಶೀಘ್ರ ಗತಿಯ ತನಿಖೆ ನಡೆಸಿ ಕಠಿಣ ಶಿಕ್ಷ ವಿಧಿಸಬೇಕಿದೆ. ನೂಪುರ್ ಶರ್ಮಾ ವಿರುದ್ಧ ದಾಖಲಾದ ಪ್ರವಾದಿ ನಿಂದನೆಯ ಎಫ್ ಐ ಆರ್ ಪ್ರಕರಣದ ಬಗ್ಗೆಯೂ ಪೊಲೀಸರು ಕ್ಷಿಪ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ.
ಧರ್ಮನಿಂದನೆಯ ಯಾವ ಆರೋಪವೇ ಇರಲಿ, ಪ್ರತೀಕಾರವಾಗಿ ಹಿಂಸೆ, ಕೊಲೆ ನಡೆಸುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ಯಾರಿಗೂ ಇನ್ನೊಬ್ಬ ಮನುಷ್ಯನ ಪ್ರಾಣ ತೆಗೆಯುವ ಅಧಿಕಾರ ಇಲ್ಲ. “ಒಬ್ಬ ಮನುಷ್ಯನನ್ನು ಕೊಲೆಗೈದರೆ ಇಡೀ ಮನುಕುಲವನ್ಬು ಕೊಲೆಗೈದಂತೆ” ಎಂದು ಸ್ವತಃ ಪೈಗಂಬರರ ವಚನವೇ ಇದೆ. ದೇಶದಲ್ಲಿ ಧರ್ಮಗಳ ಮಧ್ಯೆ ಕಲಹ ಉಂಟು ಮಾಡುವ ಸಂಚುಗಳ ಬಗ್ಗೆ ಪ್ರತಿ ರಾಜ್ಯ ಸರಕಾರಗಳೂ ಕಟ್ಟೆಚ್ಚರ ವಹಿಸಬೇಕಿದೆ. ಕೊರೊನಾದ ಆರ್ಥಿಕ ಹೊಡೆತದಿಂದ ದೇಶ ಇನ್ನೂ ಚೇತರಿಸಿಕೊಳ್ಳಬೇಕಿದೆ. ಈಗ ಬೇಕಾಗಿರುವುದು ಶಾಂತಿ ಮತ್ತು ಸೌಹಾರ್ದ ವಾತಾವರಣ. ಅದಿದ್ದರೆ ದೇಶದಲ್ಲಿ ಮತ್ತೆ ಆರ್ಥಿಕ ಚೇತರಿಕೆ ಉಂಟಾಗಿ ಪ್ರಗತಿ ಸಾಧಿಸಬಹುದು. ವಿವಿಧ ಧರ್ಮಗುರುಗಳು, ಧಾರ್ಮಿಕ ಮುಖಂಡರು, ಮಠಾಧೀಶರು, ಸ್ವಾಮೀಜಿಗಳು ಈ ನಿಟ್ಟಿನಲ್ಲಿ ಒಂದಾಗಿ ಚಿಂತಿಸಬೇಕಿದೆ.” ಎಂದು ಹಿರಿಯ ಪತ್ರಕರ್ತ ಬಿ ಎಂ ಹನೀಫ್ ಅವರು ಬರೆದಿದ್ದಾರೆ.
“ಉದಯಪುರದಲ್ಲಿ ಇಬ್ಬರು ಮುಸ್ಲಿಮರೆಂದು ಹೇಳಿಕೊಂಡವರು ನಡೆಸಿದ ಟೈಲರ್ ಒಬ್ಬರ ಬರ್ಬರ ಹತ್ಯೆ ಖಂಡಿತವಾಗಿ ಒಂದು ಟೆರ್ರರಿಸ್ಟ್ ಕೃತ್ಯ. ಯಾವುದೆ ನೆಪವನ್ನು ಮುಂದೆ ಮಾಡದೆ, ಎಲ್ಲಾ ಮುಸ್ಲಿಮರು ಈ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಲೇಬೇಕು. ಇಂಥವರಿಂದಲೆ ಇಸ್ಲಾಂ ಧರ್ಮಕ್ಕೆ ಕುಖ್ಯಾತಿ ಬಂದಿರುವುದು” ಎಂದು ವ್ಯಂಗ್ಯಚಿತ್ರಕಾರಾದ ಪಿ. ಮಹಮ್ಮದ್ ಬರೆದಿದ್ದಾರೆ.
ಹಿಂಸೆಗೆ ಹಿಂಸೆಯೇ ಉತ್ತರವಾದಾಗ ಹಿಂಸೆ ಇಮ್ಮಡಿಯಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ನಾಗರಿಕ ಸಮಾಜ ಹೇಸಿಕೊಳ್ಳುವ ಘಟನೆ ಉದಯಪುರದಲ್ಲಿ ಇವತ್ತು ನಡೆದಿದೆ. ಸರಕಾರ ಕೂಡಲೇ ಸೂಕ್ತ ಕ್ರಮ ಕೈಕೊಂಡು ಘಾತುಕರನ್ನು ಶಿಕ್ಷಿಸಿ ಇನ್ನೊಮ್ಮೆ ಈ ದೇಶದಲ್ಲಿ ಇಂಥ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಹಿಂಸೆಯನ್ನು ವಿಜೃಂಭಿಸುವ ಎಲ್ಲ ಕೃತ್ಯಗಳು ನಿಲ್ಲಬೇಕು ಎಂದು ಜೆಎನ್ಯು ನಿವೃತ್ತ ಪ್ರಾಧ್ಯಾಪಕ ಪ್ರೊ. ಪುರುಷೋತ್ತಮ ಬಿಳಿಮಲೆ ತಮ್ಮ ಖಂಡನೆ ವ್ಯಕ್ತಪಡಿಸಿದ್ದಾರೆ.






