ಹಳೆ ಹುಬ್ಬಳ್ಳಿ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 12 ಕೇಸ್ ದಾಖಲು ಮಾಡಲಾಗಿದ್ದು, 134 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ ಪೊಲೀಸ್ ಇಲಾಖೆಯಿಂದ ತನಿಖೆಯನ್ನು ಕೈಗೊಂಡಿದ್ದು, ಸೂಕ್ತ ಬಂದೋಬಸ್ತ್ ಜೊತೆಗೆ ನಾಳೆಯವರೆಗೂ 144 ಜಾರಿಯಲ್ಲಿ ಇರಲಿದೆ ಎಂದು ಪೊಲೀಸ್ ಆಯುಕ್ತ ಲಾಭುರಾಮ್ ಹೇಳಿದರು.
ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಶನಿವಾರ ರಾತ್ರಿ ಘಟನೆ ನಡೆದ ಮೂರು ನಾಲ್ಕು ಗಂಟೆಗಳ ಬಳಿಕ ಪರಿಸ್ಥಿತಿ ಶಾಂತಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ ಎಂದರು.

ಕಸಬಾ ಪೊಲೀಸ್ ಠಾಣೆ, ಕೇಶ್ವಾಪೂರ, ಬೆಂಡಿಗೇರಿ ಹಾಗೂ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮತ್ತಷ್ಟು ಪೊಲೀಸ್ ಬಿಗಿ ಬಂದೋಬಸ್ತ್ ಕೂಡ ಮಾಡಲಾಗಿದೆ. ಪ್ರಕರಣದ ಆರೋಪಿಗಳ ಬಂಧನ ಹಾಗೂ ವಿಚಾರಣೆ ತೀವ್ರವಾಗಿ ನಡೆದಿದ್ದು, ತನಿಖೆ ಮತ್ತಷ್ಟು ಚುರುಕುಗೊಳ್ಳಲಿದೆ ಎಂದು ಅವರು ಹೇಳಿದರು.
ವಾಸೀಂ ಪಠಾಣ್ ಬಂಧನದ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಬೆಳಗಾವಿಯಿಂದ ವಾಸೀಂ ಪಠಾಣ್ ಎಂಬುವ ಆರೋಪಿಯನ್ನು ಕರೆದುಕೊಂಡು ಬರಲಾಗಿದ್ದು, ತನಿಖೆಯ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಅವರು ಹೇಳಿದರು.
ಅಭಿಷೇಕ ಹಿರೇಮಠ ಪರೀಕ್ಷೆ ಕುರಿತು ಮಾತನಾಡಿದ ಅವರು, ಈಗಾಗಲೇ ಕೋರ್ಟ್ ನಮಗೆ ನಿರ್ದೇಶನ ನೀಡಿದೆ. ಆ ಪ್ರಕಾರ ಬಂಧಿತ ಅಭಿಷೇಕ ಹಿರೇಮಠನನ್ನು ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ಪರೀಕ್ಷೆಗೆ ಹಾಜರು ಪಡಿಸಲಾಗುತ್ತದೆ.






