ಕೊಡವ ಜನಾಂಗದವರಿಗೆ ಪರವಾನಿಗೆ ಇಲ್ಲದೆ ಬಂದೂಕುಗಳನ್ನು ಹೊಂದಲು ಮತ್ತು ಸಾಗಿಸಲು ನೀಡಲಾದ ವಿನಾಯಿತಿಯ ವಿರುದ್ಧ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಾಡಿರುವ ನ್ಯಾಯಪೀಠವು ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಕೊಡವರಿಗೆ ಸರ್ಕಾರ ನೀಡಿದ್ದ ವಿನಾಯಿತಿಯನ್ನು ಎತ್ತಿಹಿಡಿದ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಮಂಗಳವಾರ ಕರ್ನಾಟಕ ಸರ್ಕಾರದ ಪ್ರತಿಕ್ರಿಯೆ ಕೇಳಿದೆ ಎಂದು ಬಾರ್ ಎಂಡ್ ಬೆಂಚ್ ವರದಿ ಮಾಡಿದೆ.
ಕೊಡವರಿಗೆ ಬಂದೂಕುಗಳನ್ನು ಹೊಂದಲು ಸರ್ಕಾರ ನೀಡಿರುವ ವಿಶೇಷ ಅವಕಾಶವನ್ನು ಪ್ರಶ್ನಿಸಿ ನಿವೃತ್ತ ಸೇನಾ ಅಧಿಕಾರಿ ಕ್ಯಾಪ್ಟನ್ ಚೇತನ್ ವೈಕೆ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿದ್ದರು. ಸೇನಾ ಅಧಿಕಾರಿಯ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ನೇತೃತ್ವದ ಪೀಠ ವಿಚಾರಣೆ ನಡೆಸುತ್ತಿದೆ.
ಅಕ್ಟೋಬರ್ 29, 2019 ರಂದು, ಕೊಡವ ಸಮುದಾಯ ಮತ್ತು ಜುಮ್ಮಾ ಹಿಡುವಳಿದಾರರಿಗೆ ಶಸ್ತ್ರಾಸ್ತ್ರ ಕಾಯ್ದೆ, 1959 ರ ಕೆಲವು ನಿಬಂಧನೆಗಳಿಂದ ವಿನಾಯಿತಿ ನೀಡಿ ಕರ್ನಾಟಕ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿತ್ತು. ಇದರ ವಿರುದ್ಧ ಚೇತನ್, ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು, ಒಂದು ಸಮುದಾಯಕ್ಕೆ ಮಾತ್ರ ಏಕೆ ಈ ವಿನಾಯಿತಿ ನೀಡಲಾಗಿದೆ ಎಂದು ಅವರು ಅರ್ಜಿಯಲ್ಲಿ ಪ್ರಶ್ನಿಸಿದ್ದರು.
ಕೊಡವ ಸಮುದಾಯದ ಪರ ವಾದ ಮಂಡಿಸಿದ ವಕೀಲರು, ಬ್ರಿಟಿಷರು ಭಾರತವನ್ನು ಆಳುತ್ತಿದ್ದಾಗಿನಿಂದ ಈ ವಿನಾಯಿತಿ ನೀಡಲಾಗಿದೆ ಎಂದು ಹೈಕೋರ್ಟ್ ಗಮನಕ್ಕೆ ತಂದಿದ್ದರು.
ಬಂದೂಕು ಕೊಡವರ ಪರಂಪರೆಯ ಭಾಗವಾಗಿದೆ. ಬಂದೂಕು ಪರಂಪರೆಗೆ ಸುದೀರ್ಘ 200 ವರ್ಷದ ಇತಿಹಾಸವಿದೆ. ಕೊಡವ ಮಾಪಿಳ್ಳೆಗಳಿಗೂ ಈ ಸವಲತ್ತಿದೆ. ಜಮ್ಮಾ ಭೂಮಿ ಹೊಂದಿದವರಿಗೂ ವಿನಾಯಿತಿಯಿದೆ ಎಂದು ಹೈಕೋರ್ಟ್ ವಿಚಾರಣೆ ವೇಳೆ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ, ಸಜನ್ ಪೂವಯ್ಯ, ಧ್ಯಾನ್ ಚಿನ್ನಪ್ಪ, ಎಂ.ಟಿ.ನಾಣಯ್ಯ ಸಹ ವಾದ ಮಂಡಸಿದ್ದರು.

ಕೊಡವರಿಗೆ ಸ್ವಾತಂತ್ರ್ಯ ಪೂರ್ವದಿಂದಲೇ ಈ ರೀತಿ ರಿಯಾಯಿತಿ ಇದೆ. ಕೊಡವರು, ಜಮ್ಮಾ ಭೂಮಿ ಹೊಂದಿದವರಿಗೆ ಈ ರಿಯಾಯಿತಿ ಕಲ್ಪಿಸಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯಲ್ಲೇ ಬಂದೂಕು ಪರವಾನಗಿ ವಿನಾಯಿತಿ ಇದೆ. ಕೇಂದ್ರ ಸರ್ಕಾರದ ಅಧಿಸೂಚನೆಯಲ್ಲಿ ಮಧ್ಯ ಪ್ರವೇಶದ ಅಗತ್ಯವಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತ್ತು. ಅಲ್ಲದೆ, ಸರ್ಕಾರದ ಅಧಿಸೂಚನೆಯನ್ನು ಎತ್ತಿಹಿಡಿದು ವಿನಾಯಿತಿಯನ್ನು ಮಾನ್ಯ ಮಾಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ಚೇತನ್ ಸುಪ್ರೀಂ ಕೋರ್ಟ್ಗೆ ಹೋಗಿದ್ದರು.
ಸರ್ಕಾರದ ಅಧಿಸೂಚನೆಯು ʼಜಾತಿ / ಜನಾಂಗ ಮತ್ತು ಪೂರ್ವಜರ ಭೂ ಹಿಡುವಳಿʼ ಆಧಾರದ ಮೇಲೆ ತಾರತಮ್ಯವನ್ನು ಸೃಷ್ಟಿಸುತ್ತದೆ ಎಂದು ಅವರು ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ. ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 41 ರ ಪ್ರಕಾರ, ʼಸಾರ್ವಜನಿಕ ಹಿತಾಸಕ್ತಿʼ ಯಲ್ಲಿ ಮಾತ್ರ ಶಸ್ತ್ರಾಸ್ತ್ರ ಪರವಾನಿಗೆ ಪಡೆಯುವುದರಿಂದ ವಿನಾಯಿತಿಯನ್ನು ನೀಡಬಹುದು ಎಂದು ಚೇತನ್ ಅವರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ʼಆದಾಗ್ಯೂ, ಕೊಡವ ಸಮುದಾಯಕ್ಕೆ ಅಂತಹ ವಿನಾಯಿತಿ ನೀಡುವ ಕುರಿತು ಅಧಿಸೂಚನೆಯಲ್ಲಿ ಯಾವುದೇ ಕಾರಣವನ್ನು ನೀಡಲಾಗಿಲ್ಲʼ ಎಂದು ಅವರು ಆರೋಪಿಸಿದ್ದಾರೆ. ಈ ಅರ್ಜಿಯನ್ನು ಇದೀಗ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ನೊಟೀಸ್ ನೀಡಿದೆ.