ಮಾರ್ಚ್ 14 ರಂದು, ಕೇಂದ್ರ ಪರಿಸರ ಸಚಿವಾಲಯವು “ಅರಣ್ಯ ಮಧ್ಯಸ್ಥಿಕೆಗಳನ್ನು” ಬಳಸಿಕೊಂಡು ಭಾರತದ 13 ಪ್ರಮುಖ ನದಿಗಳನ್ನು ಪುನರುಜ್ಜೀವನಗೊಳಿಸುವ ಯೋಜನೆಯನ್ನು ಅನಾವರಣಗೊಳಿಸಿದೆ. ನದಿ ದಡಗಳನ್ನು ಅರಣ್ಯೀಕರಣ ಮಾಡುವುದು ಯೋಜನೆಯ ಪ್ರಮುಖ ಅಂಶವಾಗಿದ್ದು “ನದಿಯ ಮುಂಭಾಗದ ಅಭಿವೃದ್ಧಿ” ಮತ್ತು “ಪರಿಸರ ಉದ್ಯಾನವನಗಳನ್ನು” ಸ್ಥಾಪಿಸುವುದನ್ನು ಸಹ ಒಳಗೊಂಡಿವೆ.
ಈ ಕಾರ್ಯಕ್ರಮಕ್ಕಾಗಿ ಸರ್ಕಾರವು 24 ರಾಜ್ಯಗಳಲ್ಲಿ ಹಿಮಾಲಯ, ಪರ್ಯಾಯ ದ್ವೀಪ ಮತ್ತು ಒಳನಾಡಿನ ನದಿಗಳನ್ನು ಆಯ್ಕೆ ಮಾಡಿದೆ ಮತ್ತು ಝೇಲಂ, ಯಮುನಾ, ಕಾವೇರಿ, ಕೃಷ್ಣ ಮತ್ತು ಲುನಿಗಳಂತಹ ನದಿಗಳೂ ಸೇರಿದಂತೆ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡಿದ್ದು ಈ ಕಾರ್ಯಕ್ರಮಕ್ಕಾಗಿ ಒಟ್ಟು 19,300 ಕೋಟಿ ರೂ ಮೀಸಲಿರಿಸಿದೆ.
ಪರಿಸರ ಸಚಿವ ಭೂಪೇಂದರ್ ಯಾದವ್ ಮತ್ತು ರಾಜ್ಯ ಸಚಿವರು 13 ಪ್ರಮುಖ ನದಿಗಳನ್ನು ಪುನರುಜ್ಜೀವನಗೊಳಿಸುವ ವಿವರವಾದ ಯೋಜನಾ ವರದಿಗಳನ್ನು (ಡಿಪಿಆರ್) ಬಿಡುಗಡೆ ಮಾಡಿದ್ದು ಝೇಲಂ, ಚೆನಾಬ್, ರವಿ, ಬಿಯಾಸ್, ಸಟ್ಲೆಜ್, ಯಮುನಾ, ಬ್ರಹ್ಮಪುತ್ರ, ಲುನಿ, ನರ್ಮದಾ, ಗೋದಾವರಿ, ಮಹಾನದಿ, ಕೃಷ್ಣಾ ಮತ್ತು ಕಾವೇರಿಗಳು ಈ ಯೋಜನೆಯಲ್ಲಿ ಸೇರಿವೆ. ಈ ನದಿಗಳು ಒಟ್ಟಾಗಿ 42,830 ಕಿ.ಮೀ ವರೆಗೆ ಹರಿಯುತ್ತವೆ ಮತ್ತು ಭಾರತದ ಭೌಗೋಳಿಕ ಪ್ರದೇಶದ ಅರ್ಧಕ್ಕಿಂತ ಹೆಚ್ಚಿನ ಭಾಗಗಳಿಗೆ ನೀರುಣಿಸುತ್ತವೆ. ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಅಂಡ್ ಎಜುಕೇಶನ್ (ICFRE) ಪರಿಸರ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ಅರಣ್ಯೀಕರಣ ಮತ್ತು ಪರಿಸರ-ಅಭಿವೃದ್ಧಿ ಮಂಡಳಿಯ ನಿಧಿಯಿಂದ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಿದ್ದು , ಸಚಿವಾಲಯದ ಪ್ರಕಾರ ಈ ಯೋಜನೆಯು 2015 ರ ಗಂಗಾ ನದಿಯನ್ನು ಶುದ್ಧೀಕರಿಸುವ ರಾಷ್ಟ್ರೀಯ ಮಿಷನ್ (NMCG) ಭಾಗವಾದ ಗಂಗಾ ನದಿಯನ್ನು ಪುನರುಜ್ಜೀವನಗೊಳಿಸುವ ಪ್ರಾಯೋಗಿಕ ಅರಣ್ಯೀಕರಣ ಕಾರ್ಯಕ್ರಮದ “ಯಶಸ್ವಿ ಅನುಷ್ಠಾನ” ವನ್ನು ಆಧರಿಸಿದೆ.
ಆದರೆ ಈ ಬಗ್ಗೆ ಅನುಮಾನ ವ್ಯಕ್ತಪಡಿಸುವ ಪರಿಸರ ತಜ್ಞರು ಎನ್ಎಂಸಿಜಿ ಯೋಜನೆ ಯಶಸ್ವಿಯಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಮತ್ತು ಹೊಸ ಭರವಸೆಗಳು ನದಿಗಳನ್ನು ಇನ್ನಷ್ಟು ಹದಗೆಡಿಸಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ನದಿಗಳನ್ನು ಪುನರುಜ್ಜೀವನಗೊಳಿಸಲು ‘ಅರಣ್ಯ ಮಧ್ಯಸ್ಥಿಕೆಗಳನ್ನು’ ಬಳಸುವ ತಾರ್ಕಿಕತೆಯೆಂದರೆ, ನದಿ ದಂಡೆಯ ಅರಣ್ಯೀಕರಣವು ಅಂತರ್ಜಲವನ್ನು ಪುನರ್ಭರ್ತಿ ಮಾಡುತ್ತದೆ ಮತ್ತು ದೀರ್ಘಕಾಲಿಕ ಹರಿವನ್ನು ಖಚಿತಪಡಿಸುತ್ತದೆ ಎನ್ನುವುದಾಗಿದೆ. ನದಿಗಳು ಹಾದು ಹೋಗುವ ವಿಭಿನ್ನ ಭೂ ಪರಿಸರಗಳಿಗಾಗಿ ವಿವಿಧ ‘ಮಾದರಿಗಳನ್ನು’ ಬಳಸುವುದನ್ನು ಯೋಜನೆಯು ಪ್ರಸ್ತಾಪಿಸುತ್ತದೆ. ಈ ಮಾದರಿಗಳು ರೈತರಿಗೆ ಸಸಿಗಳನ್ನು ವಿತರಿಸುವುದು, ಹಣ್ಣು ಉತ್ಪಾದಿಸುವ ಮರಗಳನ್ನು ನೆಡುವುದು, ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಯೋಜನೆ ರೂಪಿಸುವುದು, ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಇತ್ಯಾದಿಗಳ ಸಂಯೋಜನೆಯನ್ನು ಹೊಂದಿದೆ.
ಮಂತ್ರಿಗಳು ಬಿಡುಗಡೆ ಮಾಡಿದ ನೀಲಿ ನಕ್ಷೆಯ ಪ್ರಕಾರ ಹೀಗೆ ಮಾಡುವುದರಿಂದ, ಅರಣ್ಯ ಪ್ರದೇಶ ಹೆಚ್ಚಾಗುತ್ತದೆ ಮತ್ತು ಇದು ಇಂಗಾಲದ ಸೀಕ್ವೆಸ್ಟ್ರೇಶನ್ ಮತ್ತು ಅಂತರ್ಜಲ ಮರುಪೂರಣವನ್ನು ಹೆಚ್ಚಿಸುತ್ತದೆ. ಇದು ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡುವ ಪ್ಯಾರಿಸ್ ಒಪ್ಪಂದದ ನಿಯಮಗಳನ್ನೂ ಪೂರೈಸಲು ಸಹಾಯ ಮಾಡುತ್ತದೆ.

ಆದ್ಯತೆಗಳು ಬದಲಾಗಬೇಕಾಗಿದೆ
ಅರಣ್ಯಗಳು ಮತ್ತು ನದಿಗಳು ಸಂಕೀರ್ಣ ವ್ಯವಸ್ಥೆಗಳ ಬಗ್ಗೆ ಮಾಹಿತಿ ಇರುವ ನೀಲಿ ನಕ್ಷೆ ಸ್ವಾಗತಾರ್ಹವಾಗಿದೆ. ಮತ್ತು ಜನರಿಗೆ ಆರ್ಥಿಕ ಮೌಲ್ಯವನ್ನು ಹೊಂದಿರುವ ಔಷಧೀಯ ಸಸ್ಯಗಳು ಮತ್ತು ಇತರ ಸಸ್ಯಗಳನ್ನು ವಿತರಿಸುವುದು ರಾಜಕೀಯ ಇಚ್ಛಾಶಕ್ತಿ ಮತ್ತು ಸ್ಥಳೀಯ ಹಕ್ಕನ್ನು ಖಚಿತಪಡಿಸಿಕೊಳ್ಳಲು ಉತ್ತಮ ಮಾರ್ಗವಾಗಿದೆ. ಆದರೆ ‘ಕೆಲವು ಸಮಸ್ಯೆಗಳು’ ಮತ್ತು ‘ಕೆಲವು ಆದ್ಯತೆಗಳು’ ಬದಲಾಗಬೇಕಾಗಿದೆ ಎನ್ನುತ್ತಾರೆ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟ್ಲ್ಮೆಂಟ್ನ ಪರಿಸರ ಮತ್ತು ಸುಸ್ಥಿರತಾ ಸಂಸ್ಥೆಯ ಡೀನ್ ಇಕೋಹೈಡ್ರಾಲಜಿಸ್ಟ್ ಜಗದೀಶ್ ಕೃಷ್ಣಸ್ವಾಮಿ. ಅವರ ಪ್ರಕಾರ ನದಿ ತೀರದಲ್ಲಿ ಗಿಡಗಳು ಮತ್ತು ಮರಗಳನ್ನು ನೆಡುವುದರಿಂದ ಮಾತ್ರ ನದಿಗಳನ್ನು ಪುನರುಜ್ಜೀವನ ಗೊಳಿಸಲು ಸಾಧ್ಯವಿಲ್ಲ.
ಜಗ್ಗಿ ವಾಸುದೇವ್ ಮತ್ತು ಅವರ ಇಶಾ ಫೌಂಡೇಶನ್ 2017 ರಲ್ಲಿ “ರ್ಯಾಲಿ ಫಾರ್ ರಿವರ್ಸ್” ಎಂಬ ಯೋಜನೆಯನ್ನು ಪ್ರಾರಂಭಿಸಿದಾಗಲೂ ಈ ಚರ್ಚೆಯು ಹೊರಹೊಮ್ಮಿತ್ತು. ನದಿ ದಡದಲ್ಲಿ ಅರಣ್ಯೀಕರಣ ಮಾಡುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ ಮತ್ತು ನದಿಗಳನ್ನು ಹರಿವನ್ನು ಖಾತ್ರಿಪಡಿಸುತ್ತದೆ ಎಂಬ ಕಲ್ಪನೆಯ ಆಧಾರದ ಮೇಲೆ 20,000 ಕಿ.ಮೀ ವರೆಗೆ ನದಿಗಳ ದಡದಲ್ಲಿ ಮರಗಳನ್ನು ನೆಡಲು ಹಣವನ್ನು ಸಂಗ್ರಹಿಸುವುದು ಇದರ ಪ್ರಮುಖ ಉದ್ದೇಶವಾಗಿತ್ತು. ಆದರೆ ಆಗಲೂ ಮರಗಳು ನದಿಗಳನ್ನು ಹರಿಯುವಂತೆ ಮಾಡುವುದಿಲ್ಲ ಎಂದು ಪರಿಸರಶಾಸ್ತ್ರಜ್ಞರು ಹೇಳಿದ್ದರು. ಬದಲಾಗಿ, ನದಿಯ ಹರಿವನ್ನು ಮರುಸ್ಥಾಪಿಸುವುದು ನದಿಗಳನ್ನು ಪುನರುಜ್ಜೀವನಗೊಳಿಸುವ ಮೊದಲ ಹೆಜ್ಜೆಯಾಗಿದೆ ಎಂದು ಕೃಷ್ಣಸ್ವಾಮಿ ಹೇಳುತ್ತಾರೆ.
“ನಾವು ಕೃಷಿ, ಕೈಗಾರಿಕೆಗಳು ಮತ್ತು ನಗರಗಳಿಗೆ ಬಳಸುವ ನೀರಿನ ಪ್ರಮಾಣದಲ್ಲಿ ಬದಲಾವಣೆಗಳನ್ನು ಮಾಡದ ಹೊರತು, ನಮ್ಮ ನದಿಗಳಲ್ಲಿ ಹರಿವನ್ನು ಉಳಿಸಿಕೊಳ್ಳಲು ಅಥವಾ ಹೆಚ್ಚಿಸಲು ನಮಗೆ ಸಾಧ್ಯವಾಗುವುದಿಲ್ಲ, ”ಎಂದು ಅವರು ಹೇಳುತ್ತಾರೆ. “ನಮ್ಮ ಅಂತರ್ಜಲದ ಹೊರತೆಗೆಯುವಿಕೆ ತುಂಬಾ ಹೆಚ್ಚಾಗಿದೆ, ಇದು ಅನೇಕ ನದಿಗಳಲ್ಲಿ, ವಿಶೇಷವಾಗಿ ಪರ್ಯಾಯ ದ್ವೀಪಗಳಲ್ಲಿ ಶುಷ್ಕ ಋತುಗಳಲ್ಲಿ ನದಿಗಳ ಹರಿವನ್ನು ಕಡಿಮೆ ಮಾಡಿದೆ” ಎಂದಿದ್ದಾರೆ. ನಾವು ಇಂತಹ ಯೋಜನೆಗಳನ್ನು ಯೋಜಿಸುವಾಗ ಹವಾಮಾನ ಬದಲಾವಣೆಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎನ್ನುವ ಅವರು ಅನೇಕ ನದಿಗಳು ತಮ್ಮ ದಡದಲ್ಲಿ ಮತ್ತು ನದಿಯ ವಲಯದಲ್ಲಿ ಮಾವು, ಜಾಮೂನ್ ಮತ್ತು ಫಿಕಸ್ನಂತಹ ಅಗಾಧವಾದ ಹಳೆಯ ಮರಗಳಿರುತ್ತವೆ. ಯಾವುದೇ ಹೊಸ ಮರಗಳನ್ನು ನೆಡುವುದರಿಂದ ಅಂತಹ ಹಳೆಯ ಮರಗಳು ಒದಗಿಸುವ ಪರಿಸರ ಕಾರ್ಯಗಳನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವನ್ನು ಮೊದಲು ಉಳಿಸಿಕೊಳ್ಳಬೇಕು ಎನ್ನುತ್ತಾರೆ.
ಗಂಗಾ ನದಿ ಅರಣ್ಯೀಕರಣದ ಯಶಸ್ಸು
ICFRE ದಾಖಲೆಯ ಪ್ರಕಾರ ಗಂಗಾನದಿಯ ಉದ್ದಕ್ಕೂ ಗಂಗಾ ಅರಣ್ಯೀಕರಣ ಯಶಸ್ವಿಯಾಗಿದೆ. ಮತ್ತು ಇದರ ಆಧಾರದ ಮೇಲೆ ಇತರ ಭಾರತೀಯ ನದಿಗಳನ್ನು ಪುನರುಜ್ಜೀವನಗೊಳಿಸುವ ಹೊಸ ಅರಣ್ಯೀಕರಣ ಯೋಜನೆ ಸಿದ್ಧಪಡಿಸಲಾಗಿದೆ.
2015 ರಲ್ಲಿ, ಭಾರತ ಸರ್ಕಾರವು ಗಂಗಾನದಿಯ ದಡದಲ್ಲಿ ಪ್ರಾಯೋಗಿಕ ಅರಣ್ಯೀಕರಣ ಯೋಜನೆಯನ್ನು ಪ್ರಾರಂಭಿಸಿತು. ಮಿಷನ್ನ ವೆಬ್ಸೈಟ್ ಪ್ರಕಾರ, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ರಾಜ್ಯ ಅರಣ್ಯ ಇಲಾಖೆಗಳು 2016 ರಿಂದ ಅನುಷ್ಠಾನಗೊಳಿಸುತ್ತಿರುವ ಈ ಯೋಜನೆಗೆ ಎನ್ಎಂಸಿಜಿಯಿಂದ ಪಡೆದ ಒಟ್ಟು ಹಣ ಒಟ್ಟು 2,293 ಕೋಟಿ ರೂ. ಆದರೆ ‘ಯಮುನಾ ಜಿಯೆ ಅಭಿಯಾನ್’ ಸಂಘಟನೆಯ ಮುಖ್ಯಸ್ಥ, ಪರಿಸರ ಕಾರ್ಯಕರ್ತ ಮನೋಜ್ ಮಿಶ್ರಾ ಅವರು ಈ ಯೋಜನೆ ಶುರುವಾಗಿ ಐದು ವರಗಷಗಳ ನಂತರವೂ ಅದು ಯಶಸ್ವಿಯಾಗುವ ಯಾವುದೇ ಲಕ್ಷಣವಿಲ್ಲ ಎಂದು ಹೇಳಿದ್ದು ಅದನ್ನು ದಿ ವೈರ್ ಸೈನ್ಸ್ ವರದಿ ಮಾಡಿತ್ತು.
ಗಂಗಾನದಿಯ ಉಪನದಿಗಳು ಹರಿಯುವ ರಾಜ್ಯ ಸೇರಿದಂತೆ ಹಲವು ಇತರ ವಿಚಾರಗಳಿಂದಲೂ ಇದು ಸ್ಪಷ್ಟವಾಗುತ್ತವೆ. ಇಂದು ಗಂಗಾ ನದಿಯು ಅತ್ಯಂತ ಕಲುಷಿತ ನದಿಗಳಲ್ಲಿ ಒಂದಾಗಿದೆ. ಸಂಶೋಧಕರ ತಂಡವೊಂದು 2018 ರಲ್ಲಿ ಅಂದಾಜಿಸಿರುವ ಪ್ರಕಾರ, ಅತ್ಯಂತ ಕಲುಷಿತಗೊಂಡಿರುವ ವಿಶ್ವದ ಹತ್ತು ನದಿಗಳಲ್ಲಿ ಒಂದಾಗಿದೆ ಗಂಗಾನದಿ.
ಈ ನದಿಯ ದೊಡ್ಡ ಸಮಸ್ಯೆಯೆಂದರೆ ಸಂಸ್ಕರಿಸದ ಒಳಚರಂಡಿ. ಅದರ ಹದಗೆಡುತ್ತಿರುವ ನೀರಿನ ಗುಣಮಟ್ಟಕ್ಕೆ ಪ್ರಮುಖ ಕಾರಣವೆಂದರೆ ನಗರ ಪ್ರದೇಶಗಳ ಸಂಸ್ಕರಿಸದ ಒಳಚರಂಡಿ ಎಂದು ಒಂದು ಅಧ್ಯಯನ ವರದಿ ಮಾಡಿದೆ. ಅದರ ಕೊಳೆಯಲ್ಲಿ 75% ಸಂಸ್ಕರಿಸದ ಕೊಳಚೆನೀರಿನಿಂದ ಆಗುತ್ತದೆ ಎಂದು ಮತ್ತೊಂದು ವರದಿ ಹೇಳುತ್ತದೆ. ಬ್ಯಾರೇಜ್ಗಳು ಮತ್ತು ಜಲವಿದ್ಯುತ್ ಯೋಜನೆಗಳು ಸಹ ಅರ್ಧಕ್ಕಿಂತ ಹೆಚ್ಚು ನೀರನ್ನು ಬೇರೆಡೆಗೆ ತಿರುಗಿಸುತ್ತವೆ, ಮತ್ತು ನದಿಯ ಮುಖ್ಯ ಕಾಂಡದಲ್ಲಿನ ಹರಿವನ್ನು ಕಡಿಮೆ ಮಾಡುತ್ತವೆ ಮತ್ತು ಮಾಲಿನ್ಯಕಾರಕಗಳನ್ನು ಹೆಚ್ಚಿಸುತ್ತವೆ.
ದ್ವಿಮುಖ ನೀತಿಗಳು ಮತ್ತು ವಿನಾಶ
NMCG ವಿಫಲವಾಗಿದ್ದರೂ ಸಹ ಹೊಸ ಯೋಜನೆಯು ಯಶಸ್ವಿಯಾಗಬಹುದೆಂದು ವಾದಗಳೂ ಇವೆ. ಆದರೆ ಭಾರತದ ‘ನದಿಪಾತ್ರ ಅಭಿವೃದ್ಧಿ’ ಪ್ರಯತ್ನಗಳು ಇಲ್ಲಿಯವರೆಗೆ ಯಶಸ್ವಿಯಾಗಿಲ್ಲ. ನದಿಗಳನ್ನು ಪುನರುಜ್ಜೀವನ ಗೊಳಿಸುವಾಗ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ನದಿಯ ಮುಂಭಾಗವು ಅದರ ಪರಿಸರ ಗುಣಲಕ್ಷಣಗಳನ್ನು ಉಳಿಸಿಕೊಳ್ಳಬೇಕು ಮತ್ತು ಇದುವರೆಗಿನ ನದಿ ಅಭಿವೃದ್ಧಿಯ ಯೋಜನೆಗಳು ಯಾವುದೂ ಪರಿಸರ ಗುಣಲಕ್ಷಣಗಳನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿಲ್ಲ.
ಸರ್ಕಾರವು ಒಂದೆಡೆ ನದಿಗಳನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಮಾತನಾಡುತ್ತಿದೆ, ಮತ್ತೊಂದೆಡೆ ನದಿಗಳನ್ನು ನಾಶಪಡಿಸುವ ಯೋಜನೆಗಳನ್ನು ಉತ್ತೇಜಿಸುವುದನ್ನು ಮುಂದುವರೆಸಿದೆ ಎನ್ನುತ್ತಾರೆ. ‘ಅಣೆಕಟ್ಟುಗಳು, ನದಿಗಳು ಮತ್ತು ಜನರ’ ದಕ್ಷಿಣ ಏಷ್ಯಾ ನೆಟ್ವರ್ಕ್ನ ಸಂಯೋಜಕರಾದ ಹಿಮಾಂಶು ಠಕ್ಕರ್. ಅಂತಹ ವಿರೋಧಾಭಾಸಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಕೆನ್-ಬೆಟ್ವಾ ನದಿ ಅಂತರ್ಸಂಪರ್ಕ ಯೋಜನೆ. ಈ ಯೋಜನೆಗಾಗಿ ಭಾರತ ಸರ್ಕಾರವು 2.3 ಮಿಲಿಯನ್ ಮರಗಳನ್ನು ಕಡಿಯುವುದು ಮತ್ತು ಪನ್ನಾ ಟೈಗರ್ ರಿಸರ್ವ್ನ ಒಂದು ಭಾಗ ಸೇರಿದಂತೆ ಸುಮಾರು 9,000 ಹೆಕ್ಟೇರ್ ಭೂಮಿಯನ್ನು ಮುಳುಗಿಸಲು ಹೊರಟಿದೆ. ಕೆನ್ ನದಿಯು ಜಲಾನಯನ ಪ್ರದೇಶವಾಗಿರುವುದರಿಂದ ಈ ಕಾಡುಗಳು ಒಟ್ಟಾಗಿ ಒಂದು ಪ್ರಮುಖ ‘ಜಲವಿಜ್ಞಾನದ ಆಸ್ತಿ’ಯಾಗಿದ್ದು ಸರ್ಕಾರ ಅದನ್ನೇ ನಾಶಮಾಡಲು ಹೊರಟಿದೆ.

ಕೇವಲ ಮರಗಳನ್ನು ನೆಡಬೇಡಿ
ಮರಗಳನ್ನು ನದಿ ದಡದಲ್ಲಿ ಮಾತ್ರ ನೆಡುವುದರಿಂದ ನೀರು ಕೂಡ ಕಡಿಮೆಯಾಗುತ್ತದೆ ಎಂದು ಕೃಷ್ಣಸ್ವಾಮಿ ಹೇಳುತ್ತಾರೆ. 2017 ರಲ್ಲಿ “ನದಿಗಳಿಗಾಗಿ ರ್ಯಾಲಿ” ಯೋಜನೆಯು ಈ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದಾಗ, ಕೃಷ್ಣಸ್ವಾಮಿ ಅವರು ನದಿಯ ದಡದಲ್ಲಿ ಮರಗಳ ಹೊದಿಕೆಯನ್ನು ಹೆಚ್ಚಿಸುವುದರಿಂದ ಸ್ಟ್ರೀಮ್ ಫ್ಲೋ ಕಡಿಮೆಯಾಗಬಹುದು ಎಂದಿದ್ದರು
ಮರಗಳು, ಹುಲ್ಲುಗಳು ಮತ್ತು ಪೊದೆಗಳ ಮಿಶ್ರಣವನ್ನು ‘ಸೂಕ್ತ ಸಾಂದ್ರತೆ’ ಮತ್ತು ಜಾತಿಗಳ ಸಂಯೋಜನೆಯನ್ನು ಖಚಿತಪಡಿಸಿಕೊಳ್ಳುವುದು, ನೆಡುವ ಮರಗಳು ನದಿಯ ಹರಿವಿನ ಮತ್ತು ಪ್ರದೇಶದ ಹವಾಮಾನಕ್ಕೆ ಹೊಂದಿಕೊಳ್ಳುತ್ತದೆ ಮತ್ತು ಮರಗಳನ್ನು ನೆಡುವುದರಿಂದ ನೀರು ಕಡಿಮೆಯಾಗುವುದಿಲ್ಲ ಎಂಬುವುದನ್ನು ಖಚಿತಪಡಿಸಿಕೊಳ್ಳುವುದು ನಿರ್ಣಾಯಕವಾಗಿದೆ ಎನ್ನುತ್ತಾರೆ ಕೃಷ್ಣಸ್ವಾಮಿ. .
ಅಲ್ಲದೆ, ನದಿ ದಡಗಳಲ್ಲಿ ಮರಗಳನ್ನು ನೆಡುವುದು ಅಸ್ತಿತ್ವದಲ್ಲಿರುವ ಸ್ಥಳೀಯ ಜಾತಿಗಳ ಸಸ್ಯವರ್ಗವನ್ನು ಸ್ಥಳಾಂತರಿಸಬಹುದು. ಉದಾಹರಣೆಗೆ ವಿರಳವಾದ ಕುರುಚಲು ಕಾಡುಗಳು, ಹುಲ್ಲುಗಾವಲುಗಳು, ರೀಡ್ಸ್ ಮತ್ತು ಪೊದೆಗಳು ಹೊಸದಾಗಿ ನೆಡುವ ಗಿಡಗಳಿಂದಾಗಿ ನಾಶವಾಗಬಹುದು.
ಆದರೆ ದುರದೃಷ್ಟವಶಾತ್ ಹೊಸ ಯೋಜನೆಯ ನೀಲಿನಕ್ಷೆಯು ‘ನದಿಗಳಿಗಾಗಿ ರ್ಯಾಲಿಯನ್ನು ‘ಆದ್ಯತಾ ಸಂರಕ್ಷಣಾ ಕಾರ್ಯಕ್ರಮ’ ಎಂದು ವಿವರಿಸುತ್ತದೆ. 13 ನದಿಗಳಿಗೆ ಯೋಜನಾ ವರದಿಯನ್ನು ಸಿದ್ಧಪಡಿಸಿದ ಐಸಿಎಫ್ಆರ್ಇ ಈ ಪ್ರಕ್ರಿಯೆಯಲ್ಲಿ ಇಶಾ ಫೌಂಡೇಶನ್ ಅನ್ನು ಸಂಪರ್ಕಿಸಿದೆ ಎಂದು ಅದು ಹೇಳುತ್ತದೆ. “ಅಂತಹ ಯೋಜನೆಯ ಸಂಪೂರ್ಣ ಪ್ರಕ್ರಿಯೆಯಲ್ಲೇ ನಮಗೆ ಸಮಸ್ಯೆ ಇದೆ. ಮುಚ್ಚಿದ ಬಾಗಿಲುಗಳ ಹಿಂದೆ ಅಥವಾ ಹೆಚ್ಚು ನಿರ್ಬಂಧಿತ ಪ್ರದೇಶದಲ್ಲಿ ಸಮಾಲೋಚನೆ ನಡೆಸಲಾಗುತ್ತದೆ ಮತ್ತು ನಂತರ ಇದ್ದಕ್ಕಿದ್ದಂತೆ ದೊಡ್ಡ ಗುರಿಗಳು ಮತ್ತು ಉದ್ದೇಶಗಳೊಂದಿಗೆ ದಾಖಲೆಯನ್ನು ಬಿಡುಗಡೆ ಮಾಡಲಾಗುತ್ತದೆ” ಎಂದು ಮಿಶ್ರಾ ಇಡೀ ಯೋಜನಾಕ್ರಮದ ಬಗ್ಗೆಯೇ ನಿರಾಸೆ ವ್ಯಕ್ತಪಡಿಸುತ್ತಾರೆ.
“ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲದ ವಿಧಾನವಾಗಿದೆ ಮತ್ತು ದೊಡ್ಡ ಪ್ರಮಾಣದ ಸಾರ್ವಜನಿಕ ನಿಧಿಗಳನ್ನು ಅಂತಹ ಕ್ಯಾವಲಿಯರ್ ಶೈಲಿಯಲ್ಲಿ ಎಂದಿಗೂ ಹೂಡಿಕೆ ಮಾಡಬಾರದು ಯಾಕೆಂದರೆ ಫಲಿತಾಂಶಗಳು ಯಾರಿಗೂ ತಿಳಿದಿರುವುದಿಲ್ಲ” ಎನ್ನುತ್ತಾರೆ ಅವರು.
ಭಾರತದ ನದಿಗಳ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಒಂದು ನಿಯಂತ್ರಣಾ ಸಂಸ್ಥೆ ಮತ್ತು ಅದರ ನಿರ್ವಹಣೆಯನ್ನು ಸಂಘಟಿಸಲು ಇನ್ನೊಂದು ನಿಯಂತ್ರಣಾ ಸಂಸ್ಥೆಯ ಅಗತ್ಯವಿದೆ ಎಂದು ಅವರು ಸಲಹೆ ನೀಡಿದ್ದು “ನಮ್ಮ ನದಿಗಳನ್ನು ನಿಜವಾಗಿಯೂ ಪುನರುಜ್ಜೀವನಗೊಳಿಸಲು ತೆಗೆದುಕೊಳ್ಳಬೇಕಾದ ಕನಿಷ್ಠ ಆರಂಭಿಕ ಕೆಲವು ಹಂತಗಳು ಇವು” ಎಂದಿದ್ದಾರೆ.