ದೇಶಾದ್ಯಂತ ಗಮನ ಸೆಳೆದಿರುವ ಹಿಜಾಬ್ ಪ್ರಕರಣದಿಂದಾಗಿ ವಿದ್ಯಾರ್ಥಿನಿಯರು ತಮ್ಮ ಶಿಕ್ಷಣದ ಹಕ್ಕಿನಿಂದ ವಂಚಿತರಾಗುತ್ತಿರುವುದನ್ನು ನಾಗರಿಕ ಸಮಾಜ ಅಸಹಾಯಕತೆಯಿಂದ ವೀಕ್ಷಿಸುತ್ತಿದೆ. ಸರ್ಕಾರ ಮಾಡುತ್ತಿರುವ ಪಕ್ಷಪಾತದಿಂದ ಮುಸ್ಲಿಂ ವಿದ್ಯಾರ್ಥಿನಿಯರು ಸಂತ್ರಸ್ತರಾಗುತ್ತಿದ್ದಾರೆ. ತಮ್ಮ ನಂಬಿಕೆಯನ್ನು ಪಾಲಿಸುವ ಅವಕಾಶವನ್ನು ಕಿತ್ತುಕೊಂಡು ಆಡಳಿತ ಯಂತ್ರ ವಿದ್ಯಾರ್ಥಿನಿಯರ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿದೆ.
ದಿ ನ್ಯೂಸ್ ಮಿನಿಟ್ ವೆಬ್ ಸುದ್ದಿ ತಾಣ ಮಾಡಿರುವ ಗ್ರೌಂಡ್ ಲೆವೆಲ್ ವರದಿ ಪ್ರಕಾರ ಉಡುಪಿಯ ವಿವಿಧ ಕಾಲೇಜಿನ ಸುಮಾರು 400 ರಷ್ಟು ವಿದ್ಯಾರ್ಥಿನಿಯರು ಕರ್ನಾಟಕ ಹಿಜಾಬ್ ತೀರ್ಪು ಬಳಿಕ ತರಗತಿಗಳಿಂದ ವಂಚಿತರಾಗಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದೆ.
ದಿ ನ್ಯೂಸ್ ಮಿನಿಟ್ ವರದಿಯ ಅನುವಾದ ಇಲ್ಲಿದೆ
ಮಧ್ಯಾಹ್ನ 12 ಗಂಟೆ, ತನ್ನ ಕಾಲೇಜು ಗೇಟಿನ ಎದುರು ನಿಂತಿರುವ ಅಫ್ಸಾನಳ ನೆತ್ತಿ ಮೇಲೆ ಸೂರ್ಯ ಸುಡುತ್ತಿದ್ದಾನೆ. ಮೂರನೇ ಪಿರಿಯಡ್ ನಡೆಯುತ್ತಿದೆ. ತನ್ನ ಸಹಪಾಠಿಗಳನ್ನು ಅಫ್ಸಾನ ಕಿಟಕಿಯ ಮೂಲಕ ನೋಡುತ್ತಿದ್ದಾಳೆ. ಅವರು ತರಗತಿಯಲ್ಲಿ ಸೈಕಾಲಜಿ ಪಾಠಗಳನ್ನು ಪುನರಾವರ್ತಿಸುತ್ತಿದ್ದಾರೆ ಎಂಬುದನ್ನು ಆಕೆ ಗಮನಿಸಬಹುದು. ಆದರೆ, 20 ರ ಹರೆಯದ ಅಫ್ಸಾನ ಪಿಯಾಜಿ ಮತ್ತು ಅವಳ ನಾಲ್ವರು ಆಪ್ತ ಗೆಳತಿಯರಿಗೆ ಹೊರಗಡೆಯಿಂದ ನೋಡಲು ಮಾತ್ರ ಸಾಧ್ಯವಾಗುತ್ತದೆ.

“ಕಾಲೇಜಿನಲ್ಲಿ ಇತರರಿಗೆ ತೊಂದರೆ ಉಂಟು ಮಾಡದೆ, ಹಾಗೂ ಹೊರಗೆ ಹೋಗಲು ನಮ್ಮ ಪ್ರಿನ್ಸಿಪಾಲರು ಹೇಳಿದ್ದಾರೆ” ಎಂದು ಅಫ್ಸಾನ ಹೇಳುತ್ತಾಳೆ.
ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನಿರಾಕರಿಸಲ್ಪಟ್ಟ ಬಳಿಕ ಆಕೆ ಕಳೆದ ಒಂದು ತಿಂಗಳಿನಿಂದ ತರಗತಿಯನ್ನು ಕಳೆದುಕೊಳ್ಳುತ್ತಿದ್ದಾಳೆ.
ಕಳೆದ ವಾರ, ಕರ್ನಾಟಕ ಹೈಕೋರ್ಟ್ ಹಿಜಾಬ್ ಮೇಲಿನ ನಿಷೇಧಿಸುವ ಕರ್ನಾಟಕ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದು ತೀರ್ಪು ನೀಡಿದೆ. ಇದು ಅಫ್ಸಾನಳನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. “ಏನಾದರೂ ಒಂದು ಪರಿಹಾರ ಇದ್ದೇ ಇರಬಹುದೆಂಬ ನಂಬಿಕೆಯಿಂದ ಕಾಲೇಜಿಗೆ ಬರುತ್ತಿದ್ದೇನೆ.. ಏನಾದರೂ ಪರಿಹಾರ (ಇರಲೇಬೇಕು). ನಾವು ನಮ್ಮ ಸೆಮಿಸ್ಟರ್ ಫೀಸ್ ರೂ. 730 ಅನ್ನು ಕಟ್ಟಿದ್ದೇವೆ. ಈ ಬಾರಿಯ ಶೈಕ್ಷಣಿಕ ವರ್ಷವನ್ನು ಪೂರ್ತಿಗೊಳಿಸಲು ಪ್ರಿನ್ಸಿಪಾಲ್ ನಮಗೆ ಸಹಾಯ ಮಾಡುತ್ತಾರೆ ಎಂದು ನಾನು ಭಾವಿಸಿದ್ದೇನೆ” ಎಂದು ಅಫ್ಸಾನ ಹೇಳುತ್ತಾಳೆ.
ಅಫ್ಸಾನಾರ ಪೋಷಕರಿಗೆ ಮಣಿಪಾಲದ ಖಾಸಗಿ ಕಾಲೇಜಿನಲ್ಲಿ ಇದೇ ಕೋರ್ಸ್ಅನ್ನು ಕಲಿಸಲು ಸಾಧ್ಯವಿಲ್ಲದ್ದರಿಂದ, ಮೂರು ವರ್ಷಗಳ ಹಿಂದೆ, ಉಡುಪಿಯ ಸರ್ಕಾರಿ ಅನುದಾನಿತ ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೈಕಾಲಜಿ, ಪತ್ರಿಕೋದ್ಯಮ ಮತ್ತು ಗ್ರಾಮೀಣಾಭಿವೃದ್ಧಿ ಪದವಿ ಕೋರ್ಸ್ಗೆ ಅಫ್ಸಾನ ಸೇರಿದ್ದಳು. ಸದ್ಯ, ತನ್ನ ಅಂತಿಮ ಸೆಮಿಸ್ಟರ್ ಪರೀಕ್ಷೆಗಳಿಗೆ ಬೇಕಾದ ತಯಾರಿ ಹಾಗೂ ಮುಂದಿನ ತನ್ನ ವಿಧ್ಯಾಭ್ಯಾಸ ಮತ್ತು ವೃತ್ತಿಜೀವನದ ಬಗ್ಗೆ ಗಮನಹರಿಸಬೇಕಾಗಿತ್ತು. “ಪದವಿ ಮುಗಿದ ಬಳಿಕ ಮಾಸ್ಟರ್ ಡಿಗ್ರಿ ಮಾಡಬೇಕು ಎಂದು ನಾನು ಅಂದುಕೊಂಡಿದ್ದೆ, ಕಾಪು ಸರ್ಕಾರಿ ಕಾಲೇಜಿನಲ್ಲಿ ಸೋಶಿಯಲ್ ವರ್ಕ್ ಸ್ನಾತಕೋತ್ತರ ಪದವಿ ಮಾಡಬೇಕೆಂದು ಬಯಸಿದ್ದೆ. ಆದರೆ, ಇನ್ನು ಅದು ಸಾಧ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ. ನನ್ನ ನಂಬಿಕೆಯ ಭಾಗವಾಗಿ ಹಿಜಾಬ್ ಧರಿಸಬೇಕೆಂದು ಬಯಸುತ್ತೇನೆ, ನಾನು ಹಿಜಾಬ್ ಧರಿಸಿದರೆ ನನಗೆ ಎಕ್ಸಾಮ್ ಬರೆಯಲು ಸಾಧ್ಯವಿಲ್ಲ” ಎಂದು ಆಕೆ ಹೇಳುತ್ತಾಳೆ.

ಶಿಕ್ಷಣ ಇಲಾಖೆಯಿಂದ ಲಭಿಸಿರುವ ಮಾಹಿತಿ ಪ್ರಕಾರ, ಹೈಕೋರ್ಟ್ ತೀರ್ಪಿನ ಬಳಿಕ ಉಡುಪಿಯ 232 ಪದವಿ ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯ ತೂಗುಗತ್ತಿಯಲ್ಲಿ ಬಿದ್ದಿದೆ. ಅದರಲ್ಲಿ ಅಫ್ಸಾನಾ ಕೂಡ ಒಬ್ಬಳು. ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಪ್ರಕಾರ, ಹಿಜಾಬ್ ತೀರ್ಪಿನಿಂದಾಗಿ ಕನಿಷ್ಠ 183 ಪದವಿ ಪೂರ್ವ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳನ್ನು ತಪ್ಪಿಸಿಕೊಂಡಿದ್ದಾರೆ. ಉಡುಪಿಯ ಪಿಯು ಕಾಲೇಜುಗಳ ಒಟ್ಟು 1446 ಮುಸ್ಲಿಂ ಹುಡುಗಿಯರು ವ್ಯಾಸಂಗ ಮಾಡುತ್ತಿದ್ದು, ಅದರಲ್ಲಿ 12.5% ವಿದ್ಯಾರ್ಥಿನಿಯರ ಪರೀಕ್ಷೆ ಮೇಲೆ ಹಿಜಾಬ್ ತೀರ್ಪು ನೇರ ಪರಿಣಾಮ ಬೀರಿದೆ.
ಅದಾಗ್ಯೂ, ಕಾಲೇಜು ತೊರೆಯಬೇಕಾಗಿ ಬರುವ ಭಯದಲ್ಲಿ ಕೆಲವು ವಿದ್ಯಾರ್ಥಿನಿಯರು, ಹೈಕೋರ್ಟ್ ತೀರ್ಪು ಬಂದ ಬಳಿಕ, ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ಸಿದ್ದರಾಗಿದ್ದಾರೆ.
“ನಾನು ಈಗ ತೃತೀಯ ಪದವಿ ವರ್ಷದ ವಿದ್ಯಾರ್ಥಿನಿ, ನಾನು ಈಗ ಇದು ಮಾಡದಿದ್ದರೆ, ನನ್ನ ಮೂರು ವರ್ಷಗಳನ್ನು ಕಳೆದುಕೊಳ್ಳಬೇಕಾಗುತ್ತದೆ” ಎಂದು ಪರೀಕ್ಷೆ ಬರೆಯಲು ಸಿದ್ದವಾಗಿರುವ, ಹೆಸರು ಹೇಳಲಿಚ್ಛಿಸದ ಜಿ ಶಂಕರ್ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತಿಳಿಸಿದ್ದಾಳೆ. ಆದರೆ, ಆಕೆಯ ಪಕ್ಕ ಕುಳಿತಿದ್ದ ಆಕೆಯ ಗೆಳತಿ ಅಫ್ರಾ ಅಜ್ಮಲ್ ಅಸ್ಸಾದಿ, ಕಾಲೇಜನ್ನು ತೊರೆಯುವ ಬಗ್ಗೆ ಚಿಂತಿಸುತ್ತಿದ್ದಾಳೆ. “ನಾವು ತರಗತಿಯಲ್ಲಿ ಹಿಜಾಬ್ನೊಂದಿಗೆ ಒಂದೇ ಬೆಂಚ್ ಮೇಲೆ ಕುಳಿತು ನಮ್ಮ ಬಿಡುವಿನ ವೇಳೆಯನ್ನು ಒಟ್ಟಿಗೆ ಕಳೆಯುತ್ತಿದ್ದೆವು. ಆದರೆ ಹಿಜಾಬ್ ವಿಚಾರದಲ್ಲಿ ನಾನು ರಾಜಿಯಾಗಲಾರೆ. ನಾನು ಬದಲಿ ಕಾಲೇಜು ಅಥವಾ ಆನ್ಲೈನ್ ಕೋರ್ಸ್ಗಾಗಿ ಹುಡುಕಾಟ ನಡೆಸಿದ್ದೇನೆ” ಎಂದು ಅಫ್ರಾ ಹೇಳಿದ್ದಾಳೆ.
ಹಿಜಾಬ್ ಮೇಲಿನ ನಿಷೇಧದ ಜಾರಿಯುವ ವಿದ್ಯಾರ್ಥಿನಿಯರನ್ನು ಮತ್ತು ಪೋಷಕರನ್ನು ಬೇರೆ ಕಾಲೇಜುಗಳಿಗೆ ವರ್ಗಾವಣೆ ಮಾಡಲು ಯೋಚಿಸುವಂತೆ ಮಾಡಿದೆ. ಕೆಲವು ವಿದ್ಯಾರ್ಥಿನಿಯರ ಪೋಷಕರು ತಮ್ಮ ಹೆಣ್ಣುಮಕ್ಕಳ ಶಿಕ್ಷಣದ ಸಲುವಾಗಿ ಬೇರೆ ಊರಿಗೆ ವಲಸೆ ಹೋಗಲು ಯೋಜಿಸುತ್ತಿವೆ.
ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಓದುತ್ತಿರುವ ಬಿಎಸ್ಸಿ ವಿದ್ಯಾರ್ಥಿನಿಯ ಪೋಷಕರಾದ ಮೊಹಮ್ಮದ್ ಅಲಿ, “ಹಿಜಾಬ್ಗೆ ಅನುಮತಿ ಇರುವ ಕಾಲೇಜಿನಲ್ಲಿ ನಮ್ಮ ಮಗಳ ಕಲಿಕೆ ಮುಂದುವರಿಸಲು ನಾವು ಮಂಗಳೂರಿಗೆ ತೆರಳುವ ಬಗ್ಗೆ ಯೋಚಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ. ತೀರ್ಪು ಬರುವವರೆಗೂ, ಅವರು ಮತ್ತು ಅವರ ಮಗಳು ಹಿಜಾಬ್ ಅನ್ನು ಈ ಮೊದಲು ಅನುಮತಿಸಿದ್ದ ಕಾಲೇಜುಗಳಲ್ಲಿ ಧರಿಸಲು ಹೈಕೋರ್ಟ್ ಅನುಮತಿ ನೀಡುತ್ತದೆ ಎಂದು ನಿರೀಕ್ಷಿಸುತ್ತಿದ್ದರು.
“ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಕಟಿಸಿದ ದಿನದಂದು ನಾನು ಟಿವಿ ವೀಕ್ಷಿಸಲು ಹೆದರಿದ್ದೆ, ಆದರೆ ನಾನು ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಪರಿಶೀಲಿಸುತ್ತಿದ್ದೆ, ಹಿಜಾಬ್ ಧರಿಸಲು ಹಿಂದೆ ಯಾವುದೇ ಸಮಸ್ಯೆಯಿಲ್ಲದ ನಮ್ಮಂತಹ ಕಾಲೇಜುಗಳಲ್ಲಿ ಹಿಜಾಬ್ ಅನ್ನು ಅನುಮತಿಸಲಾಗುವುದು ಎಂದು ನಾವು ಭಾವಿಸಿದ್ದೆವು” ಎಂದು ಅಲಿ ಪುತ್ರಿ ತಿಳಿಸಿದ್ದಾಳೆ.
ಕಾಲೇಜಿನ 58 ವಿದ್ಯಾರ್ಥಿನಿಯರು ತಮ್ಮ ಪ್ರಾಂಶುಪಾಲರನ್ನು ಭೇಟಿಯಾಗಿ ಪರೀಕ್ಷೆ ಬರೆಯಲು ಅನುಮತಿ ಕೋರಿದ್ದಾರೆ. ಕನಿಷ್ಟ ಪ್ರತ್ಯೇಕ ಕೊಠಡಿಯಲ್ಲಾದರೂ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿನಿಯರು ಕೋರಿದ್ದಾರೆ. “ನಮ್ಮನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಮಹಿಳಾ ಶಿಕ್ಷಕಿಯನ್ನು ಇನ್ವಿಜಿಲೇಟರ್ ಆಗಿ ನೇಮಿಸಿದರೆ ನಾವು ಹಿಜಾಬ್ ಅನ್ನು ತೆಗೆದುಹಾಕಲು ಒಪ್ಪಿಕೊಂಡಿದ್ದೇವೆ. ಆದರೆ, ಈ ವಿನಂತಿಯನ್ನು ಕೂಡಾ ನಿರಾಕರಿಸಲಾಗಿದೆ. ಹಿಜಾಬ್ ಧರಿಸದೆ ತರಗತಿಗೆ ಹೋಗುವುದನ್ನು ಊಹಿಸಲು ಕೂಡಾ ನನ್ನಿಂದ ಸಾಧ್ಯವಿಲ್ಲ,” ಎಂದು ಹೇಳಿದ ಆಕೆ ಕುರಾನ್ನ ಎರಡು ಸೂಕ್ತಗಳನ್ನು ತೋರಿಸುತ್ತಾ, “ಹಿಜಾಬ್ ಅನ್ನು ಕುರಾನ್ನಲ್ಲಿ ಹೇಳಲಾಗಿದೆ. ಅದನ್ನು ನಮ್ಮ ನಂಬಿಕೆಯ ಅಗತ್ಯ ಭಾಗವೆಂದು ನಾನು ಪರಿಗಣಿಸಿದ್ದೇನೆ” ಎಂದು ಹೇಳಿದ್ದಾಳೆ.
ಆದರೆ, ಹಿಜಾಬ್ಗೆ ಅವಕಾಶ ಇರುವ ಖಾಸಗಿ ಕಾಲೇಜುಗಳಿಗೆ ವರ್ಗಾವಣೆಯಾಗಿ ಶಿಕ್ಷಣ ಮುಂದುವರಿಸುವುದು ಅಫ್ಸಾನಳಂತಹ ವಿದ್ಯಾರ್ಥಿನಿಯರಿಗೆ ಒಂದು ಆಯ್ಕೆಯಲ್ಲ. ಆಕೆಯಂತಹ ವಿದ್ಯಾರ್ಥಿಗಳಿಗೆ ಹಿಜಾಬ್ ನಿಷೇಧದ ಜಾರಿಯು ಅವರ ಶಿಕ್ಷಣದ ಅಂತ್ಯವನ್ನು ಸೂಚಿಸುತ್ತದೆ. ಅಫ್ಸಾನಾ ಓದುತ್ತಿರುವ ಸರ್ಕಾರಿ ಅನುದಾನಿತ ಕಾಲೇಜಿನ 3,000 ರೂ.ಗಳ ಸಾಧಾರಣ ಕಾಲೇಜು ಶುಲ್ಕವನ್ನು ಆಕೆಯ ಚಿಕ್ಕಪ್ಪ ಪಾವತಿಸಿದ್ದಾರೆ. ತನಗೆ ಎದುರಾಗಲಿರುವ ಅಪಾಯದ ಕುರಿತು ಸ್ಪಷ್ಟತೆಯಿಂದ ಮಾತನಾಡಿದ ಆಕೆ, “ನಾನು ಪ್ರಸ್ತುತ ಕೋರ್ಸ್ ಅನ್ನು ಬಿಟ್ಟರೆ, ಖಾಸಗಿ ಕಾಲೇಜುಗಳಲ್ಲಿ ಅದರ ಶುಲ್ಕವನ್ನು ಭರಿಸಿ ಕೋರ್ಸ್ ಮುಂದುವರಿಸಲು ಸಾಧ್ಯವಾಗುವುದಿಲ್ಲ” ಎಂದು ಅಫ್ಸಾನಾ ಹೇಳುತ್ತಾಳೆ.
ಕುಂದಾಪುರ, ಬೈಂದೂರು ಸೇರಿದಂತೆ ಉಡುಪಿ ಜಿಲ್ಲೆಯಾದ್ಯಂತ ಇರುವ ಕಾಲೇಜುಗಳಲ್ಲೂ ಇದೇ ಪರಿಸ್ಥಿತಿ ಇದೆ. ಈ ಎರಡೂ ಪಟ್ಟಣಗಳಲ್ಲಿ ಕಳೆದ ವಾರ ಹಲವಾರು ಮುಸ್ಲಿಂ ಹುಡುಗಿಯರು ತಮ್ಮ ತರಗತಿಗಳು ಅಥವಾ ಪರೀಕ್ಷೆಗಳನ್ನು ತಪ್ಪಿಸಿಕೊಂಡಿದ್ದಾರೆ ಎಂದು ಕಾಲೇಜು ಮೂಲಗಳು ಹೇಳಿದೆ.
ಕುಂದಾಪುರದ ಆರ್ಎನ್ ಶೆಟ್ಟಿ ಸಂಯುಕ್ತ ಪಿಯು ಕಾಲೇಜಿನಲ್ಲಿ ಕಳೆದ ವಾರ 56 ಮುಸ್ಲಿಂ ಬಾಲಕಿಯರ ಪೈಕಿ ಕೇವಲ ಒಬ್ಬಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದರೆ, ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 16 ಮುಸ್ಲಿಂ ಬಾಲಕಿಯರಲ್ಲಿ ಒಬ್ಬಳು ಮಾತ್ರ ತರಗತಿಗೆ ಹಾಜರಾಗಿದ್ದಾಳೆ.

ಉಡುಪಿ ಮಾತ್ರವಲ್ಲದೆ, ಕರ್ನಾಟಕದ ಇತರೆ ಜಿಲ್ಲೆಗಳಿಂದಲೂ ಇಂತಹ ಸಮಸ್ಯೆ ಎದುರಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಮುಸ್ಲಿಂ ವಿದ್ಯಾರ್ಥಿಗಳಿಂದ ಆನ್ಲೈನ್ ತರಗತಿಗಳಿಗೆ ಮನವಿಗಳು ಬಂದಿದೆ ಎಂದು ಹಿಜಾಬ್ ನಿಷೇಧ ಜಾರಿಯಿಂದ ಪರಿಣಾಮ ಬೀರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ದಾಖಲಿಸುತ್ತಿರುವ ಉಡುಪಿಯ ಮುಸ್ಲಿಂ ಒಕ್ಕೂಟ ಹೇಳಿದೆ.
“ಉಡುಪಿಯಲ್ಲಿ ಸಮಸ್ಯೆ ಪ್ರಾರಂಭವಾದ್ದರಿಂದ ಉಡುಪಿ ಇದರ ಕೇಂದ್ರಬಿಂದುವಾಗಿದೆ. ಆದರೆ ನೆರೆಯ ಜಿಲ್ಲೆಗಳು ಸೇರಿದಂತೆ ಇತರ ಹಲವು ಜಿಲ್ಲೆಗಳಿಂದ ಆನ್ಲೈನ್ ತರಗತಿಗಳಿಗಾಗಿ ನಾವು ಮನವಿಗಳನ್ನು ಸ್ವೀಕರಿಸಿದ್ದೇವೆ ”ಎಂದು ಒಕೂಟದ ಸದಸ್ಯ ಹಸನ್ ಮಾವೇದ್ ತಿಳಿಸಿದ್ದಾರೆ.
ಉಪ್ಪಿನಂಗಡಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ 231 ಮುಸ್ಲಿಂ ವಿದ್ಯಾರ್ಥಿಗಳು ಮಾರ್ಚ್ 18 ರಂದು ನಡೆದ ತಮ್ಮ ಪೂರ್ವಸಿದ್ಧತಾ ಪರೀಕ್ಷೆಯಿಂದ ಹೊರಗುಳಿದಿದ್ದಾರೆ. ಮುಸ್ಲಿಂ ಹುಡುಗಿಯರಿಗೆ ಒಗ್ಗಟ್ಟನ್ನು ಪ್ರದರ್ಶಿಸಲು ಅವರೊಂದಿಗೆ ಸೇರಿದ ಮುಸ್ಲಿಂ ಹುಡುಗರು ಕೂಡಾ ಇದರಲ್ಲಿ ಸೇರಿದ್ದಾರೆ. ಎಂದು ಅವರು ತಿಳಿಸಿದ್ದಾರೆ.
ತಮ್ಮ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿರುವ ನೂರಾರು ಕುಟುಂಬಗಳಿಗೆ ಇದು ಬಿಕ್ಕಟ್ಟು ತಂದಿಟ್ಟಿದೆ ಒಕೂಟ ಬಣ್ಣಿಸಿದೆ. “ತೀರ್ಪು ಪ್ರಕಟವಾದಾಗಿನಿಂದ, ನಾವು ಏರ್ಪಡಿಸಿರುವ ಆನ್ಲೈನ್ ತರಗತಿಗಳಿಗೆ ಇನ್ನೂ 35 ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ. ತಮ್ಮ ಭವಿಷ್ಯದ ಬಗ್ಗೆ ಸಂಕಟದಲ್ಲಿರುವ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ದಿನವೊಂದಕ್ಕೆ ಸುಮಾರು 5-10 ಕರೆಗಳನ್ನು ಸ್ವೀಕರಿಸುತ್ತಿದ್ದೇವೆ”ಎಂದು ಹಸನ್ ಹೇಳಿದ್ದಾರೆ.