ರಷ್ಯಾ ಯುಕ್ರೇನ್ ಯುದ್ಧ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು ಹೊಸ ಬೆಳವಣಿಗೆಯಲ್ಲಿ, ಕೈವ್ನಲ್ಲಿನ ಸರ್ಕಾರವನ್ನು ಉರುಳಿಸಲು ನಗರ ಯುದ್ಧದಲ್ಲಿ ಅನುಭವಿಗಳಾಗಿರುವ ಸಿರಿಯನ್ ಸೈನಿಕರನ್ನುಪುಟಿನ್ ಬಳಸುತ್ತಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಟಿಸಿದೆ. ಯುಎಸ್ ಅಧಿಕಾರಿಗಳನ್ನು ಉಲ್ಲೇಖಿಸಿರುವ ವರದಿಯು ಕೆಲವು ಸಿರಿಯನ್ನರು ಈಗಾಗಲೇ ರಷ್ಯಾದಲ್ಲಿ ಉಕ್ರೇನ್ ರಾಜಧಾನಿಯ ಮೇಲೆ ದಾಳಿಗೆ ತಯಾರಿ ನಡೆಸುತ್ತಿದ್ದಾರೆ ಎಂದೂ ಹೇಳಿದೆ.
“ಉಕ್ರೇನ್ನಲ್ಲಿ ಸಿರಿಯನ್ ಹೋರಾಟಗಾರರ ನಿಯೋಜನೆ, ಸ್ಥಿತಿ ಅಥವಾ ನಿಖರ ಪ್ರಮಾಣದ ಬಗ್ಗೆ ಬೇರೆ ಏನು ತಿಳಿದಿದೆ ಎಂಬುದನ್ನು ವಿವರಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ” ಎಂದು WSJ ವರದಿಯು ಹೇಳಿದೆ.
WSJ ವರದಿಗೆ ಬಿಡೆನ್ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಪೆಂಟಗನ್ ವಕ್ತಾರ ಜಾನ್ ಕಿರ್ಬಿ, ಮಾರ್ಚ್ 7 ರ ಸೋಮವಾರ ಪತ್ರಕರ್ತರಿಗೆ ವದಂತಿಗಳನ್ನು ದೃಢಪಡಿಸಿದ್ದು”ರಷ್ಯನ್ನರು ಉಕ್ರೇನ್ನಲ್ಲಿ ತಮ್ಮ ಪಡೆಗಳನ್ನು ಹೆಚ್ಚಿಸಲು ಸಿರಿಯನ್ ಹೋರಾಟಗಾರರನ್ನು ಹುಡುಕುತ್ತಿದ್ದಾರೆ ಎಂದು ನಾವು ಭಾವಿಸುತ್ತೇವೆ ಮತ್ತು ಅದರಲ್ಲಿ ಸತ್ಯವಿದೆ ಎಂದು ನಾವು ನಂಬುತ್ತೇವೆ” ಎಂದು ಕಿರ್ಬಿ ಹೇಳಿರುವುದಾಗಿ ಸಿಬಿಎಸ್ ಉಲ್ಲೇಖಿಸಿದೆ
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಈಗ ಹದಿಮೂರನೇ ದಿನಕ್ಕೆ ಕಾಲಿಟ್ಟಿದೆ ಆದರೆ ಉಕ್ರೇನಿಯನ್ನರು ಉಗ್ರ ಪ್ರತಿರೋಧವನ್ನು ಪ್ರದರ್ಶಿಸಿದ್ದು ರಷ್ಯಾದ ಮುನ್ನಡೆಯನ್ನು ವಿಳಂಬಗೊಳಿಸಿದೆ ಎಂದು ತಜ್ಞರು ಹೇಳುತ್ತಾರೆ. ಯುನೈಟೆಡ್ ಕಿಂಗ್ಡಮ್ನ ರಕ್ಷಣಾ ಸಚಿವಾಲಯ ಸಹ ತನ್ನ ಇತ್ತೀಚಿನ ಗುಪ್ತಚರ ವರದಿಯಲ್ಲಿ, “ರಷ್ಯಾದ ಪಡೆಗಳು ವಾರಾಂತ್ಯದಲ್ಲಿ ಕೆಲವೇ ಕೆಲವು ಪ್ರದೇಶಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ” ಎಂದು ಹೇಳಿದ್ದವು.

ಸಿರಿಯನ್ನರು, ಚೆಚೆನ್ನರು ಮತ್ತು ವ್ಯಾಗ್ನರ್ ಗುಂಪು
2011 ರಿಂದ ಶುರುವಾದ ಸಿರಿಯನ್ ಅಂತರ್ಯುದ್ಧದಲ್ಲಿ ಫ್ರೀ ಸಿರಿಯನ್ ಆರ್ಮಿ ಮತ್ತು ಇತರ ಬಂಡುಕೋರ ಗುಂಪುಗಳ ವಿರುದ್ಧ ಹೋರಾಡಲು ಬಶರ್ ಅಲ್-ಅಸ್ಸಾದ್ ನೇತೃತ್ವದ ಸಿರಿಯನ್ ಸರ್ಕಾರಕ್ಕೆ ಮಿಲಿಟರಿ ಸಹಾಯ ಮಾಡುತ್ತಿರುವ ರಷ್ಯಾ 2015 ರಿಂದಲೂ ಸಿರಿಯಾದಲ್ಲಿ ಪ್ರಭಾವಶಾಲಿಯಾಗಿದೆ.
‘ಡೀರ್ ಎಝೋರ್ 24’ ಎಂಬ ಸಿರಿಯಾ ಮೂಲದ ಸ್ವತಂತ್ರ ಸುದ್ದಿ ವೇದಿಕೆಯು, ರಷ್ಯಾ, ತಲಾ $200 ರಿಂದ $ 300 ರಷ್ಟು ಪಾವತಿಸಿ ಆರು ತಿಂಗಳ ಕಾಲ ಉಕ್ರೇನ್ನಲ್ಲಿ “ಗಾರ್ಡ್” ಆಗಿ ಹೋರಾಡಲು ಸಿರಿಯನ್ನರನ್ನು ಕೂಲಿ ಸೈನಿಕರನ್ನಾಗಿ ನೇಮಿಸಿಕೊಳ್ಳುತ್ತಿದೆ ಎಂದು ವರದಿ ಮಾಡಿದೆ. ಜೊತೆಗೆ ರಾಯಿಟರ್ಸ್ ಸಹ ಈ ಬಗ್ಗೆ ವರದಿ ಮಾಡಿದ್ದು 2020ರಿಂದಲೇ ರಷ್ಯಾ ನೂರಾರು ಸಿರಿಯನ್ ಕೂಲಿ ಸೈನಿಕರನ್ನು ಲಿಬಿಯಾದಲ್ಲಿ ಹೋರಾಡಲು ಬಳಸಿಕೊಳ್ಳುತ್ತಿದರ ಎಂದು ಹೇಳಿದೆ. ಈ ನಡುವೆ ಬ್ರಿಟೀಷ್ ಪತ್ರಿಕೆಯಾದ ಟೈಮ್ಸ್, ವ್ಯಾಗ್ನರ್ ಗ್ರೂಪ್ನ ಕೂಲಿ ಸೈನಿಕರು ಉಕ್ರೇನಿಯನ್ ರಾಜಧಾನಿಯಲ್ಲಿದ್ದಾರೆ ಎಂದು ವರದಿ ಮಾಡಿದೆ.
ಒಟ್ಟಿನಲ್ಲಿ ಇಡೀ ವಿಶ್ವದ ಗಮನವನ್ನು ತನ್ನತ್ತ ಸೆಳೆದಿರುವ ರಷ್ಯಾ ಇತರ ದೇಶದ ಸೈನಿಕರನ್ನೂ ‘ಯುದ್ಧ ಕೂಲಿ’ಗಳಾಗಿ ಬಳಸುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತಾ ಎನ್ನುವ ಆತಂಕ ತಲೆದೋರಿದೆ. ಏಕೆಂದರೆ ಇದೇ ಸಂಪ್ರದಾಯವನ್ನು ಇತರ ದೇಶಗಳು ಸಹ ಮುಂದುವರಿಸಿದರೆ ಏಷ್ಯಾದ ಮತ್ತು ಆಫ್ರಿಕಾದ ಬಡ ದೇಶಗಳ ಮಾನವ ಸಂಪನ್ಮೂಲವನ್ನು ತಮ್ಮ ದೇಶದ ಪರವಾಗಿ ಕೂಲಿಗಳಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಹಾಗಾದರೆ ವಸಾತುಶಾಹಿ ಮತ್ತು ವರ್ಣ ಭೇದ ನೀತಿ ಉಚ್ಛ್ರಾಯ ಸ್ಥಿತಿಯಲ್ಲಿ ಸಮಾಜದಲ್ಲಿ ಬೇರೂರಿದ್ದ ಗುಲಾಮಿ ಪದ್ಧತಿ ಮತ್ತೊಂದು ರೀತಿಯಲ್ಲಿ ಮರುಕಳಿಸಿದಂತಾಗುವುದರಲ್ಲಿ ಸಂಶಯವಿಲ್ಲ.






