ಹೌದು.. ಇಂತಹದೊಂದು ಪ್ರಶ್ನೆ ಉದ್ಭವವಾಗೋದಕ್ಕೆ ನೇರವಾದ ಕಾರಣ ಅಂದ್ರೆ ಅದು ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್.. ಈಗಾಗ್ಲೆ ಆರೋಪ ಮಾಡಿರುವ ಘನ ಸಚಿವರು ತನಿಖೆಗೆ ಕೂಡ ಆದೇಶಿಸಿದ್ದಾರೆ. ಸದ್ಯದ ಮಟ್ಟಿಗೆ ಈ ಆರೋಪ ರಾಜ್ಯ ರಾಜಕೀಯದಲ್ಲಿ ಮಹಾ ಅಕ್ರಮವೊಂದರ ಕರಾಳ ಮುಖವನ್ನ ಹೊರತೆಗೆಯಲಿದ್ಯಾ ಎಂಬ ಅನುಮಾನ ಮೂಡೋದಕ್ಕೆ ಪ್ರಾರಂಭವಾಗಿದೆ.
ಅಷ್ಟಕ್ಕೂ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಲ್ಪ್ಲೈನ್ ಹೆಸರಿನಲ್ಲಿ ಒಬ್ಬರಿಗೆ ತಿಂಗಳಿಗೆ ಬರೋಬ್ಬರಿ 4 ಲಕ್ಷ ರೂ. ಪಾವತಿ ಮಾಡಲಾಗಿದೆ, ಯಾವ ಹೆಲ್ಪ್ಲೈನ್ ಸಿಬ್ಬಂದಿಯೊಬ್ಬರಿಗೆ 4 ಲಕ್ಷ ರೂ. ವೇತನ ಪಾವತಿ ಮಾಡಲಾಗುತ್ತದೆ ಎಂಬ ಪ್ರಶ್ನೆ ಈಗ ಸಾರ್ವಜನಿಕರ ಮನಸ್ಸಿನಲ್ಲಿ ಮೂಡೋದಕ್ಕೆ ಶುರುವಾಗಿದೆ. ಅಲ್ಪಸಂಖ್ಯಾತರ ಇಲಾಖೆ ಯೋಜನೆ ಬಗ್ಗೆ ಮಾಹಿತಿ ನೀಡಲು ಈ ಹೆಲ್ಪ್ಲೈನ್ ಸ್ಥಾಪನೆ ಮಾಡಲಾಗಿತ್ತು. ಹೆಲ್ಪ್ಲೈನ್ ನಿರ್ವಹಣೆ ಮಾಡಿದ ಒಬ್ಬರಿಗೆ ತಿಂಗಳಿಗೆ ನಾಲ್ಕು ಲಕ್ಷ ರೂಪಾಯಿ ವೇತನ ನೀಡಿರುವ ಆರೋಪ ಕೇಳಿಬಂದಿದೆ. ಈ ಹೆಲ್ಪ್ಲೈನ್ನಿಂದ ಯಾವುದೇ ಪ್ರಯೋಜನ ಆಗದಿದ್ದರೂ ಅದನ್ನು ಮುಂದುವರಿಸಿದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಒಂದು ವೇಳೆ ಇದು ನಿಜವೇ ಆಗಿದ್ದರೆ ಇದು ಬಿಜೆಪಿ ಸರ್ಕಾರದ ಮತ್ತೊಂದು ದೊಡ್ಡ ಹಗರಣವಾಗೋದ್ರಲ್ಲಿ ಯಾವುದೇ ರೀತಿಯಾದ ಅನುಮಾನವಿಲ್ಲ

ಈಗ ಸದ್ಯಕ್ಕೆ ಕೇಳಿ ಬಂದಿರುವ ಆರೋಪಗಳ ಪ್ರಕಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತ ಮೂರು ಪಟ್ಟು ವೇತನ ಒಬ್ಬರಿಗೇ ಮಾಸಿಕ ನೀಡಿದ್ದು ಹೇಗೆ? ಸಹಾಯವಾಣಿ ಕೇಂದ್ರಕ್ಕೆ ವಾರ್ಷಿಕ 2.5 ಕೋಟಿ ರೂ. ವೆಚ್ಚ ಆಗುತ್ತಿದೆ. ಆದರೆ ಪ್ರತ್ಯೇಕವಾಗಿ ಹೆಲ್ಪ್ಲೈನ್ ವ್ಯವಸ್ಥೆಯ ಅಗತ್ಯತೆ ಏನಿತ್ತು ಎಂದು ಜಮೀರ್ ಅಹ್ಮದ್ ಖಾನ್ ಪ್ರಶ್ನೆ ಮಾಡಿದ್ದಾರೆ. ಆದ್ರೆ ಈ ಪ್ರಶ್ನೆಗೆ ಯಾವುದೇ ರೀತಿಯಾದ ಸರಿಯಾದ ಉತ್ತರವನ್ನ ಬಿಜೆಪಿಯ ನಾಯಕರು ನೀಡಿಲ್ಲ. ಇದು ಕೂಡ ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ.