ಬೆಂಗಳೂರಿನ ಕಸದಲ್ಲಿ ಆಳುವ ಪಕ್ಷ ಹಾಗು ಗುತ್ತಿಗೆದಾರರು ಭಾರೀ ಲಾಭ ಮಾಡಿಕೊಳ್ತಾರೆ ಅನ್ನೋದು ಮುಚ್ಚಿಟ್ಟಿರುವ ಸತ್ಯ. ಆದರೆ ವರ್ಷದಿಂದ ವರ್ಷಕ್ಕೆ ಕಸ ಸೇರಿದಂತೆ ಎಲ್ಲವೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಸಾಗುತ್ತದೆ. ಆದರೆ ಕಾಂಗ್ರೆಸ್ ಸರ್ಕಾರ ಮುಂದಿನ 30 ವರ್ಷಕ್ಕೆ ಗುತ್ತಿಗೆ ನೀಡಲು ನಿರ್ಧಾರ ಮಾಡಿರುವುದು ಜನಾಕ್ರೋಶಕ್ಕೆ ಕಾರಣ ಆಗ್ತಿದೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಗುರುತರ ಆರೋಪ ಮಾಡಿದ ಬಳಿಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರ ದೃಷ್ಟಿಕೋನ ಬದಲಾಗ್ತಿದೆ. ಕಸ ವಿಲೇವಾರಿ ಗುತ್ತಿಗೆಯನ್ನು 30 ವರ್ಷಕ್ಕೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರೈಟ್ ಸಂಸ್ಥೆ ಸರ್ಕಾರಕ್ಕೆ ಕಾರ್ಯ ಕ್ಷಮತೆಯ ವರದಿ ಸಲ್ಲಿಸಿದ್ದು, ಇದರಲ್ಲಿ ಯೋಜನೆ ರೂಪುರೇಷಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಬೆಂಗಳೂರಿನ ಕಸ ವಿಲೇವಾರಿಗೆ ಖರ್ಚಾಗುವ ಹಣ ಎಷ್ಟು ಅನ್ನೋ ಬಗ್ಗೆಯೂ ವರದಿಯಲ್ಲಿ ಉಲ್ಲೇಖ ಆಗಿದೆ.
ನಾಲ್ಕು ಪ್ಯಾಕೇಜ್ಗಳಾಗಿ ನಗರದ ಕಸವನ್ನು ವಿಲೇವಾರಿ ಮಾಡುವಂತೆ ವರದಿಯಲ್ಲಿ ಸಲಹೆ ನೀಡಲಾಗಿದೆ. ಎರಡೂ ವಲಯಕ್ಕೊಂದು ಪ್ಯಾಕೇಜ್ ಮಾಡಿ, ಗುತ್ತಿಗೆ ನೀಡಿದರೆ ಸಮರ್ಪಕವಾಗಿ ಕಸ ವಿಲೇವಾರಿ ಸಾಧ್ಯ ಎಂದಿದೆ. ಜೊತೆಗೆ ಬೆಂಗಳೂರಲ್ಲಿ ಪ್ರತಿ ದಿನ 3,500 ಟನ್ ಕಸ ವಿಲೇವಾರಿ ಆಗುತ್ತಿದೆ. ಪಾಲಿಕೆ ವಾರ್ಷಿಕವಾಗಿ 510 ಕೋಟಿ ವೆಚ್ಚ ಮಾಡುತ್ತಿದೆ. ಆದರೆ ಮುಂದಿನ 30 ವರ್ಷಕ್ಕೆ ಸದ್ಯದ ಕಸ ವಿಲೇವಾರಿ ದರದ ಪ್ರಕಾರ 15,500 ಕೋಟಿ ವೆಚ್ಚ ಆಗುತ್ತದೆ. ಆದರೆ ರೈಟ್ ಸಂಸ್ಥೆ ನೀಡಿರುವ ವರದಿಯಲ್ಲಿ ಪ್ರತಿದಿನ ದುಪ್ಪಟ್ಟು ದರ ಉಲ್ಲೇಖ ಮಾಡಲಾಗಿದೆ.
ಪ್ರತಿ ದಿನ 6,500 ಟನ್ ಕಸ ವಿಲೇವಾರಿಗೆ ಯೋಜನೆ ವರದಿ ನೀಡಲಾಗಿದೆ. ಈ ವರದಿ ಪ್ರಕಾರ ವಾರ್ಷಿಕವಾಗಿ ಸುಮಾರು 1,400 ಕೋಟಿ ವೆಚ್ಚ ನಿಗದಿಯಾಗಿದ್ದು, ಮೂವತ್ತು ವರ್ಷಕ್ಕೆ ಸುಮಾರು 40 ಸಾವಿರಕ್ಕೂ ಹೆಚ್ಚು ಹಣವನ್ನು ವೆಚ್ಚ ಮಾಡುವ ಅನಿವಾರ್ಯತೆ ಎದುರಾಗಿದೆ. ಈ ಯೋಜನೆ ಜಾರಿಗೆ ಭೂ ಭರ್ತಿ ಜಾಗ ಹುಡುಕಾಟದಲ್ಲಿ ರಾಜ್ಯ ಸರ್ಕಾರವಿದೆ. ಈಗಾಗಲೇ ನಗರದ ನಾಲ್ಕು ದಿಕ್ಕಿನಲ್ಲೂ ಭೂ ಭರ್ತಿಗಾಗಿ ಜಮೀನು ಖರೀದಿಗೆ ಮುಂದಾಗಿದೆ ಎಂದಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್.
ಕಾಂಗ್ರೆಸ್ ಸರ್ಕಾರದ ಹೊಸ ಗುತ್ತಿಗೆ ನೀತಿಯನ್ನು ಬಿಜೆಪಿ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸಾವಿರಾರು ಕೋಟಿ ಕಿಕ್ ಬ್ಯಾಕ್ ಪಡೆಯಲು ಮುಂದಾಗಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಹೈದರಾಬಾದ್ ಮೂಲದ ರಾಮ್ ಕಿ ಸಂಸ್ಥೆಗೆ ಕಸ ಗುತ್ತಿಗೆ ಕೊಡಲು ಚರ್ಚೆಗಳು ನಡೆಯುತ್ತಿವೆ. ರಾಮ್ ಕಿ ಸಂಸ್ಥೆ ಬಿಬಿಎಂಪಿಯ ಕಪ್ಪು ಪಟ್ಟಿಯಲ್ಲಿರುವ ಗುತ್ತಿಗೆ ಸಂಸ್ಥೆ. 30 ವರ್ಷದ ಗುತ್ತಿಗೆ ನೀಡಲು ಇಷ್ಟೊಂದು ಉತ್ಸಾಹ ಯಾಕೆ ಎಂದು ಪ್ರಶ್ನಿಸಿದ್ದಾರೆ. ಇಂಟಿಗ್ರೇಟೆಡ್ ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ 30 ವರ್ಷದ ಗುತ್ತಿಗೆ ವಿರುದ್ಧ ಆರೋಪ ಕೇಳಿ ಬಂದಿದೆ. ಕಸ ವಿಲೇವಾರಿ ಗುತ್ತಿಗೆ ಗೋಲ್ಮಾಲ್ ಯೋಜನೆನಾ..? ಅನ್ನೋ ಬಗ್ಗೆ ಸರ್ಕಾರವೇ ಉತ್ತರ ಕೊಡಬೇಕಿದೆ.
ಕೃಷ್ಣಮಣಿ