ಇಡೀ ದೇಶ ದೆಹಲಿ ಚಲೋದಲ್ಲಿ ಭಾಗಿಯಾದ ರೈತರ ಬೃಹತ್ ಪ್ರತಿಭಟನೆಗೆ ಸಾಕ್ಷಿಯಾಗುತ್ತಿರುವಾಗ, ಕರ್ನಾಟಕದ ನಾಗಮಂಗಲ ರೈತರು ಕಳೆದ 25 ದಿನಗಳಿಂದ ಸತತ ಪ್ರತಿಭಟನೆ ನಡೆಸುತ್ತಿದ್ದಾರೆ.
1,277 ಎಕರೆ ಕೃಷಿ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನಪಡಿಸಲು ಕೈಗೊಂಡ ಕ್ರಮವನ್ನು ವಿರೋಧಿಸಿ ನಾಗಮಂಗಲದ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ನೂರಾರು ರೈತರು “ನಮ್ಮ ಭೂಮಿಯನ್ನು ನಮಗೆ ಹಿಂತಿರುಗಿಸಿ” ಎಂದು ಬೇಡಿಕೆಯನ್ನಿಟ್ಟು ಧರಣಿ ನಡೆಸುತ್ತಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ವಿರೋಧೀಸುತ್ತಿರುವ ರೈತರು, ಕಳೆದ 25 ದಿನಗಳಿಂದ ಸತತ ಧರಣಿಯಲ್ಲಿ ತೊಡಗಿದ್ದರೂ, ರೈತರ ಅಹವಾಲು ಸರ್ಕಾರದ ಕಿವಿಗೆ ಬೀಳದಿರುವುದು ವಿಪರ್ಯಾಸ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಧರಣಿ ನಿರತ ಮಹಿಳೆಯೋರ್ವರು, “ಇದು ನೀರಾವರಿ ಭೂಮಿ, ಭತ್ತ, ರಾಗಿ, ತೆಂಗು, ಕಡಲೆಕಾಯಿ ಮತ್ತು ತರಕಾರಿಗಳು ಹೀಗೆ ನಾವು ಇಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತೇವೆ. ನಾವು ಕೆಐಎಡಿಬಿ ನೋಟಿಸ್ಗೆ ಸ್ಪಷ್ಟವಾಗಿ ಆಕ್ಷೇಪ ವ್ಯಕ್ತಪಡಿಸಿದ್ದೇವೆ ಮತ್ತು ನಮ್ಮ ಭೂಮಿಯನ್ನು ನೀಡಲು ನಿರಾಕರಿಸಿದ್ದೇವೆ. ಆದರೂ ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.
“ನಾವು ಸಣ್ಣ ಪ್ರಮಾಣದ ರೈತರು. ಈ ವರ್ಷ ನಾನು ನನ್ನ ಬೆಳೆ ಕಳೆದುಕೊಳ್ಳಬಹುದು, ಆದರೆ ಇದು ನನ್ನ ಭೂಮಿ ಮತ್ತು ಜೀವನದ ಪ್ರಶ್ನೆ. ಇದು ನಮಗೆ ಜೀವನೋಪಾಯದ ಏಕೈಕ ಮೂಲವಾಗಿದೆ ಮತ್ತು ಅದನ್ನು ಕಳೆದುಕೊಳ್ಳಲು ನನಗೆ ಸಾಧ್ಯವಿಲ್ಲ,” ಎಂದು ಅವರು ಹೇಳುತ್ತಾರೆ.
ಆಗಸ್ಟ್ 2020 ರಲ್ಲಿ ರಾಜ್ಯ ಸರ್ಕಾರವು ಚನ್ನಪುರ, ಹಟ್ನಾ, ಬಿಲಗುಂಡ ಮತ್ತು ಬೀಚನಹಳ್ಳಿ ಎಂಬ ನಾಲ್ಕು ಗ್ರಾಮಗಳಲ್ಲಿನ 1,277 ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶವೆಂದು ಸೂಚಿಸಿ ಗ್ರಾಮಸ್ಥರಿಗೆ ನೋಟಿಸ್ ನೀಡಿತು. ಆಘಾತಕ್ಕೊಳಗಾದ ಗ್ರಾಮಸ್ಥರು ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಆಕ್ಷೇಪವನ್ನು ಸಲ್ಲಿಸಿ, ಸಾಮೂಹಿಕ ಪ್ರತಿಭಟನೆ ನಡೆಸಿದರು, ರಾಷ್ಟ್ರೀಯ ಹೆದ್ದಾರಿ 75 ಅನ್ನು ಸಾಂಕೇತಿಕವಾಗಿ ನಿರ್ಬಂಧಿಸಿದರು. ಬಳಿಕ ಈ ವಿಷಯದಲ್ಲಿ ಯಾವುದೇ ಆತುರದ ಕ್ರಮಗಳಿಲ್ಲ ಎಂದು ಸರ್ಕಾರ ಶೀಘ್ರದಲ್ಲೇ ಘೋಷಿಸಿತ್ತು.
ಅದಾಗ್ಯೂ, KIADB ಅಧಿಕಾರಿಗಳು ಹಳ್ಳಿಗಳಲ್ಲಿ ಸರ್ವೇ ಶುರು ಮಾಡಿದ್ದಾರೆಂದು ಪ್ರತಿಭಟನಾ ನಿರತ ರೈತರೊಬ್ಬರು ದೂರಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲವೆಂದು ರೈತರು ಪಣತೊಟ್ಟಿದ್ದಾರೆ.






