ಗದಗ : ನಿವೇಶನ ಹಕ್ಕು ಪತ್ರ ಬೇಕೆಂದು ಆಗ್ರಹಿಸಿ ಬಡ ಕುಟುಂಬಗಳು ಅಹೋರಾತ್ರಿ ಧರಣಿ ನಡೆಸಿದ ಘಟನೆಯು ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ. 7 ಎಕರೆ ಪ್ರದೇಶದಲ್ಲಿ ನಿವೇಶನಗಳು ರೆಡಿಯಿದ್ದು ಇದಕ್ಕೆ ಫಲಾನುಭವಿಗಳ ಆಯ್ಕೆಯಾಗಿದ್ದರೂ ಸಹ ಇನ್ನೂ ಹಕ್ಕು ಪತ್ರ ಹಂಚಿಕೆ ಮಾಡದ ಕ್ಷೇತ್ರದ ಶಾಸಕರು , ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಬಡ ಕುಟುಂಬಗಳು ಸಿಡಿದೆದ್ದಿವೆ.
ನಾವು ಇಷ್ಟು ದಿನಗಳಿಂದ ಹಕ್ಕು ಪತ್ರಕ್ಕಾಗಿ ಮನವಿ ಮಾಡುತ್ತಿದ್ದರು ಸಹ ಎಮ್ಮೆ ಚರ್ಮದ ಅಧಿಕಾರಿಗಳ ಮನಸ್ಸು ಕರಗುತ್ತಿಲ್ಲ ಅಂತಾ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಲಕ್ಕುಂಡಿ ಗ್ರಾಮ ಪಂಚಾಯ್ತಿ ಆವರಣದಲ್ಲಿಯೇ ರಾತ್ರಿಯಿಡೀ ಮಲಗುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಹಕ್ಕು ಪತ್ರ ಹಂಚಿಕೆ ಮಾಡುವಂತೆ ಈಗಾಗಲೇ ಕ್ಷೇತ್ರದ ಶಾಸಕರಾದ ಸಿಸಿ ಪಾಟೀಲ್ಗೆ ಬಡ ಕುಟುಂಬಗಳು ಮನವಿ ಮಾಡಿದೆ. ಆದರೆ ಸಿ.ಸಿ ಪಾಟೀಲ್ ಯಾಕೋ ಈ ಮಾತನ್ನು ಕಿವಿಗೆ ಹಾಕಿಕೊಂಡಂತೆ ಕಾಣಿಸುತ್ತಿಲ್ಲ. ಹೀಗಾಗಿ ಇಲ್ಲಿನ ಗ್ರಾಮಸ್ಥರಿಗೆ ನಿವೇಶನದ ಹಕ್ಕು ಪತ್ರ ಸಿಗದೇ ಪರದಾಡುವ ಪರಿಸ್ಥಿತಿ ಎದುರಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಗಳ ನಿರ್ಲಕ್ಷ್ಯ ಧೋರಣೆಯಿಂದ ರೋಸಿ ಹೋಗಿರುವ 172 ಬಡ ಕುಟುಂಬಗಳು ಈ ಬಾರಿಯ ಚುನಾವಣೆಯನ್ನು ಬಹಿಷ್ಕಾರ ಮಾಡುವ ನಿರ್ಧಾರಕ್ಕೆ ಬಂದಿವೆ.
ನಮಗೆ ಹಕ್ಕು ಪತ್ರ ಹಂಚಿಕೆಯಾಗುವವರೆಗೆ ನಾವು ಈ ಜಾಗದಿಂದ ಕದಲೋದಿಲ್ಲ. ನಮ್ಮ ಹೆಣ ಬಿದ್ದರೂ ಅಷ್ಟೇ ಇಲ್ಲಿಂದ ತೆರಳುವ ಮಾತೇ ಇಲ್ಲ. ಅಲ್ಲದೇ ಈ ಬಾರಿಯ ಚುನಾವಣೆಯಲ್ಲಿಯೂ ನಾವು ಮತ ಚಲಾವಣೆ ಮಾಡೋದಿಲ್ಲ ಅಂತಾ ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಲಕ್ಕುಂಡಿ ಗ್ರಾಮದ ಮಹಿಳೆಯರು ಖಡಕ್ ಎಚ್ಚರಿಕೆ ನೀಡಿದ್ದಾರೆ.