ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಆ 5 ಗ್ಯಾರಂಟಿಗಳಲ್ಲಿ ಈಗಾಗಲೇ 2 ಗ್ಯಾರಂಟಿಗಳನ್ನು ಜಾರಿ ಮಾಡಲಾಗಿದೆ. ಶಕ್ತಿ ಯೋಜನೆಯಲ್ಲಿ ಮಹಿಳೆಯರು ಉಚಿತ ಸಂಚಾರ ಮಾಡುತ್ತಿದ್ದಾರೆ. ಇನ್ನು ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ಘೋಷಣೆ ಮಾಡಿದ್ದು, ಈಗಾಗಲೇ ಇಂಧನ ಇಲಾಖೆ ಅರ್ಜಿ ಸ್ವೀಕಾರ ಮಾಡ್ತಿದೆ. ಇಂದು ಮೂರನೇ ಗ್ಯಾರಂಟಿಯ ಅನ್ನಭಾಗ್ಯ ಯೋಜನೆ ಜಾರಿಯಾಗಲಿದೆ. 10 ಕೆಜಿ ಅಕ್ಕಿ ಕೊಡ್ತೇವೆ ಎಂದು ಘೋಷಣೆ ಮಾಡಿದ್ದ ಕಾಂಗ್ರೆಸ್ ಪಕ್ಷ, ಇದೀಗ ಹೇಳಿದಂತೆ 10 ಕೆಜಿ ಕೊಡುವುದಕ್ಕೆ ಸಾಧ್ಯವಾಗ್ತಿಲ್ಲ. ಈಗಾಗಲೇ ಕೇಂದ್ರದಿಂದ ಪೂರೈಕೆ ಆಗುವ 5 ಕೆಜಿ ಅಕ್ಕಿ ಹಾಗು ಉಳಿದ ಭರವಸೆಯ 5 ಕೆಜಿ ಅಕ್ಕಿಗೆ ಪಾವತಿ ಮಾಡಲಾಗ್ತಿದ್ದ 170 ರುಪಾಯಿ ಹಣವನ್ನು DBT (Direct Benefit Transfer) ಮೂಲಕ ಹಣ ವರ್ಗಾವಣೆ ಆಗಲಿದೆ.
ವಿಧಾನಸೌಧದಲ್ಲಿ ಕಾರ್ಯಕ್ರಮ, ಹಣ ವರ್ಗಾಯಿಸಲಿರೋ ಸಿಎಂ..!
![](https://pratidhvani.com/wp-content/uploads/2023/07/images-19.jpeg)
ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಐದು ಕೆಜಿ ಅಕ್ಕಿ ಬದಲಿಗೆ ಸರ್ಕಾರ ಕೊಳ್ಳುವ ದರ ಪ್ರತಿ ಕೆಜಿಗೆ 34 ರೂಪಾಯಿಯಂತೆ ಒಟ್ಟು 5 ಕೆಜಿ ಅಕ್ಕಿಗೆ 170 ರೂಪಾಯಿ ಹಣ ವರ್ಗಾವಣೆ ಮಾಡಲಾಗುತ್ತದೆ. ಇಂದು ಯೋಜನೆಗೆ ಸಿಎಂ ಸಿದ್ದರಾಮಯ್ಯ ಅಧಿಕೃತ ಚಾಲನೆ ನೀಡಲಿದ್ದಾರೆ. ಕಾರ್ಡ್ನಲ್ಲಿ ಕುಟುಂಬದ ಮುಖ್ಯಸ್ಥರು ಎಂದು ನಿಗದಿಯಾಗಿರುವ ಹೆಸರಿನ ಅಕೌಂಟ್ಗೆ ಹಣ ವರ್ಗಾವಣೆ ಮಾಡಲಿದ್ದಾರೆ. ಒಟ್ಟು 1 ಕೋಟಿ 28 ಲಕ್ಷದ 16 ಸಾವಿರದ 253 ಮಂದಿ ಫಲಾನುಭವಿಗಳಲ್ಲಿ ಶೇಕಡ 82ರಷ್ಟು ಮಂದಿ ತಕ್ಷಣ ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದಾರೆ. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ಮಾತ್ರ ಹಣ ವರ್ಗಾವಣೆ ಸುಲಭ ಆಗಲಿದೆ.
ಯಾರಿಗೆಲ್ಲಾ ಸಿಗಲಿದೆ ಅನ್ನಭಾಗ್ಯ ಯೋಜನೆಯ ಹಣ ..!?
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬ ಸದಸ್ಯರಿಗೆ ಹಣ ವರ್ಗಾವಣೆ ಆಗಲಿದೆ. ನಾಲ್ಕಕ್ಕಿಂತ ಹೆಚ್ಚು ಜನರಿರೋ ಅಂತ್ಯೋದಯ ಕಾರ್ಡ್ದಾರ ಕುಟುಂಬಗಳಿಗೂ ಅನ್ನಭಾಗ್ಯ ಯೋಜನೆ ಧನಸಹಾಯ ಸಿಗಲಿದೆ. ಆದರೆ ಪಡಿತರ ಕಾರ್ಡ್ ಹೊಂದಿರುವ 22 ಲಕ್ಷ ಕಾರ್ಡ್ದಾರರು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ, ಸದ್ಯಕ್ಕೆ ಅವರ ಖಾತೆಗೆ ಹಣ ಬರಲ್ಲ. ಮುಂದಿನ ದಿನಗಳಲ್ಲಿ ಬ್ಯಾಂಕ್ಗೆ ತೆರಳಿ ಆಧಾರ್ ಲಿಂಕ್ ಮಾಡಿಸಿದ ಬಳಿಕ ಹಣ ವರ್ಗಾವಣೆ ಮಾಡಲಿದ್ದಾರೆ. ಇನ್ನು ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಅನ್ನಭಾಗ್ಯದ ಹಣ ಸಿಗೋದಿಲ್ಲ. ಕುಟುಂಬದಲ್ಲಿ 3 ಜನಕ್ಕಿಂತ ಕಡಿಮೆ ಜನರಿರುವ ಅಂತ್ಯೋದಯ ಕಾರ್ಡ್ದಾರರಿಗೆ ಸರ್ಕಾರದ ಧನಸಹಾಯ ಹಣ ಬರೋದಿಲ್ಲ.
![](https://pratidhvani.com/wp-content/uploads/2023/07/anna-bhagya-yojana-money-credit-1024x576.jpg)
3 ತಿಂಗಳು ಅಕ್ಕಿ ಖರೀದಿ ಮಾಡದಿದ್ರೆ ಸಿಗಲ್ಲ ಹಣ..! ಯಾಕೆ..?
ಬಿಪಿಎಲ್, ಎಪಿಎಲ್, ಅಂತ್ಯೋದಯ ಪಡಿತರದಾರರು ಇಡೀ ಭಾರತದಾದ್ಯಂತ ಎಲ್ಲಿ ಬೇಕಿದ್ದರೂ ಅಕ್ಕಿ ಖರೀದಿ ಮಾಡಲು ಅವಕಾಶವಿದೆ. ಆದರೆ ಕಳೆದ 3 ತಿಂಗಳಿನಿಂದ ಉಚಿತ ಪಡಿತರ ಅಕ್ಕಿಯನ್ನು ತೆಗೆದುಕೊಳ್ಳದಿದ್ರೆ ಅಂತಹ ಕುಟುಂಬಗಳಿಗೆ ಸರ್ಕಾರ ಸದ್ಯಕ್ಕೆ ಅಕ್ಕಿಗೆ ನೀಡುತ್ತಿರುವ ಹಣವನ್ನು ವರ್ಗಾವಣೆ ಮಾಡಲು ನಿರ್ಧಾರ ಮಾಡಿದೆ. ಕಳೆದ ಮೂರು ತಿಂಗಳಿನಿಂದ ಅಕ್ಕಿಯನ್ನು ಪಡೆಯದ ಕುಟುಂಬಗಳಿಗೆ ಅಕ್ಕಿಯ ಅವಶ್ಯಕತೆ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಿರುವ ಸರ್ಕಾರ ಹಣ ಪೋಲಾಗುವುದನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ. ಈ ರೀತಿಯ ನಿರ್ಧಾರದಿಂದ ಪ್ರತಿ ತಿಂಗಳು ಸುಮಾರು 85 ಕೋಟಿ ರೂಪಾಯಿ ಹಣ ಉಳಿತಾಯ ಆಗಲಿದ್ದು, ಮುಂದಿನ 3 ತಿಂಗಳು ಅಂದಾಜು 250 ಕೋಟಿ ರೂಪಾಯಿ ಹಣ ಸರ್ಕಾರದ ಖಜಾನೆಯಲ್ಲೇ ಉಳಿಯಲಿದೆ. ಒಂದು ವೇಳೆ ಕಳೆದ 3 ತಿಂಗಳಿನಿಂದ ಅನ್ಯ ಕಾರಣಗಳಿಗಾಗಿ ಅಕ್ಕಿ ಖರೀದಿ ಮಾಡದಿದ್ದವರು ಈ ತಿಂಗಳು ಅಕ್ಕಿ ಖರೀದಿ ಮಾಡಿದರೆ ಮುಂದಿನ ತಿಂಗಳು ಹಣ ಪಡೆಯಲು ಅರ್ಹರು. ಇದೊಂದು ಉತ್ತಮ ನಿರ್ಧಾರ ಆಗಿದ್ದು, ಸರ್ಕಾರದ ಹಣ ಬೇಕಾಬಿಟ್ಟಿಯಾಗಿ ಬಳಸುವುದು ತಪ್ಪಿದೆ ಎನ್ನಬಹುದು.
ಕೃಷ್ಣಮಣಿ