9 ವರ್ಷಗಳ ಹಿಂದೆ ನಕ್ಸಲ್ ನಂಟಿನ ಆರೋಪದ ಮೇಲೆ ಯುಎಪಿಎ ಕಾಯ್ದೆ ಅಡಿ ಬಂಧಿತರಾಗಿ ನಂತರ ಜಾಮೀನು ಪಡೆದಿದ್ದ ವಿಠಲ ಮಲೆಕುಡಿಯ ಮತ್ತು ಅವರ ತಂದೆ ನಿರ್ದೋಷಿಗಳು ಎಂದು ಮಂಗಳೂರು ನ್ಯಾಯಾಲಯ ತೀರ್ಪು ನೀಡಿದೆ. ಇದರಿಂದ ಪ್ರಭುತ್ವದ ಮುಖವಾಡ ಮತ್ತೊಮ್ಮೆ ಬಯಲಾಗಿದೆ.
ಡಿವೈಎಫ್ಐ ನಾಯಕ ಮತ್ತು ಆದಿವಾಸಿ ಹಕ್ಕುಗಳ ಹೋರಾಟ ಸಮಿತಿಯ ಸಕ್ರಿಯ ಸದಸ್ಯರೂ ಆಗಿದ್ದ ವಿಠಲ್ ಮಲೆಕುಡಿಯ ಆಗ ಮಂಗಳೂರಿನಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದರು. ವಿದ್ಯಾರ್ಥಿಯೋರ್ವರನ್ನು ನಕ್ಸಲೈಟ್ ಎಂದು ಆರೋಪಿಸಿ ಬಂಧಿಸಿದ್ದು ದೇಶಾದ್ಯಂತ ಚರ್ಚೆಗೆ ಮತ್ತು ಟೀಕೆಗೆ ಕಾರಣವಾಗಿತ್ತು. ನಕ್ಸಲ್ ನಿಗ್ರಹ ದಳದ ಕಾರ್ಯಾಚರಣೆ ಹಾಸ್ಯಾಸ್ಪದವೂ ಆಗಿತ್ತು. ವಿಠಲ್ ಮನೆಯಲ್ಲಿ ಸಿಕ್ಕ ಭಗತ್ಸಿಂವಗ್ ಕುರಿತಾದ ಪುಸ್ತಕ, ಆಟಿಕೆ ಬೈನಾಕ್ಯುಲರ್, ಕಾಫಿಪುಡಿ ಮತ್ತು ಪಾತ್ರೆಗಳನ್ನು ಅದು ವಶಪಡಿಸಿಕೊಂಡಿತ್ತು!
ವಿಠಲ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಪ್ಪ ಅವರನ್ನು 2012ರ ಮಾರ್ಚ್ 3ರಂದು ಬಂಧಿಸಲಾಗಿತ್ತು.
ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದ ವಿಠಲ ಅವರು ಕುತ್ಲೂರಿಗೆ ಬಂದಿದ್ದ ವೇಳೆ ನಕ್ಸಲ್ ನಿಗ್ರಹ ದಳ ಅವರನ್ನು ಬಂಧಿಸಿತ್ತು. ಮೂರು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ವಿಠಲ ಅವರಿಗೆ 2012ರ ಜೂನ್ 6ರಂದು ಬೆಳ್ತಂಗಡಿ ನ್ಯಾಯಾಲಯ ಜಾಮೀನು ನೀಡಿತ್ತು. ಬಳಿಕ ಪತ್ರಿಕೋದ್ಯಮ ಪದವಿ ಪೂರೈಸಿದ ಅವರು ಕನ್ನಡದ ದಿನಪತ್ರಿಕೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರಕರಣದ ಮೊದಲ ಆರೋಪಿಯಾಗಿ ನಕ್ಸಲ್ ನಾಯಕ ವಿಕ್ರಂಗೌಡ ಅವರನ್ನು ಹೆಸರಿಸಲಾಗಿತ್ತು. ಅಲ್ಲದೆ ಉಳಿದ ಆರೋಪಿಗಳಾದ ಪ್ರದೀಪ್, ಜಾನ್ ಸುಂದರಿ ಹಾಗೂ ಪ್ರಭಾ ಅವರ ಜೊತೆಗೆ ವಿಠಲ ಮತ್ತು ಅವರ ತಂದೆಯನ್ನು ಕೂಡ ಶಂಕಿತ ನಕ್ಸಲೀಯರೆಂದು ಪಟ್ಟಿ ಮಾಡಿ ಹಲವು ಆರೋಪಗಳನ್ನು ಹೊರಿಸಲಾಗಿತ್ತು. ಉಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ವಿಠಲ ಮತ್ತು ಅವರ ತಂದೆ ಕ್ರಮವಾಗಿ ಆರು ಮತ್ತು ಏಳನೇ ಆರೋಪಿಗಳಾಗಿದ್ದರು.
ಡಿವೈಎಫ್ಐಡ ವಿಠಲ್ ಪರ ದೊಡ್ಡ ಹಫರಾಟ ಸಂಘಟಿಸಿತ್ತು. ಸಂಸತ್ತಿನಲ್ಲೂ ಈ ವಿಷಯ ಚರ್ಚೆಗೆ ಕಾರಣವಾಗಿತ್ತು. ಸಿಪಿಎಂ ನಾಯಕ ಪ್ರಕಾಶ್ ಕಾರಟ್ ಜೈಲಿಗೆ ಬಂದು ವಿಠಲ್ ಅವರ ಜೊತೆ ಮಾತನಾಡಿದ್ದರು. ಈಗ ಕೇರಳದ ವಿಧಾನಸಭೆಯ ಸ್ಪೋಕರ್ ಆಗಿರುವ ಎಂ.ಬಿ. ರಾಜೇಶ್ ಅಂದು ಎಂಪಿಯಾಗಿದ್ದರು. ಅವರು ಕೂಡ ವಿಠಲ್ ಬೆಂಬಲಕ್ಕೆ ನಿಂತಿದ್ದರು

ಸಿಪಿಎಂ ನಾಯಕಿ ಬೃಂದಾ ಕಾರಟ್ ಮುಖ್ಯಮಂತ್ರಿ ಸದಾನಂದ ಗೌಡ ಮನೆ ಮುಂದೆ ಧರಣಿ ಕೂತಿದ್ದರು. ವಕೀಲ ದಿನೇಶ್ ಹೆಗ್ಡೆ ನ್ಯಾಯಾಲಯದಲ್ಲಿ ಉಚಿತವಾಗಿ ವಾದ ಮಂಡಿಸಿದ್ದರು.
ಮಲೆಕುಡಿಯರ ಹೋರಾಟವೇನು?
ಪಶ್ಚಿಮಘಟ್ಟದ ಕಾಡುಪ್ರದೇಶದಲ್ಲಿ ಮಲೆಕುಡಿಯ ಆದಿವಾಸಿ ಸಮುದಾಯ ಶತಮಾನಗಳಿಂದ ಬದುಕುತ್ತ ಬಂದಿದೆ. ಅವರದು ಸ್ವಯಂಪೂರ್ಣ ಕೃಷಿ. ತಮ್ಮ ಮನೆಗೆ ಎಷ್ಟು ಬೇಕೋ ಅಷ್ಟನ್ನು ಬೆಳೆದುಕೊಳ್ಳುತ್ತಾರೆ. ಉಳಿದ ಖರ್ಚಿಗಾಗಿ ಸ್ವಲ್ಪ ಅಡಿಕೆ ಬೆಳೆಯುತ್ತಾರೆ. ಘಟ್ಟದ ಕೆಳಗಿನವರನ್ನು ಮಲೆಕುಡಿಯರು ಎಂದರೆ, ಘಟ್ಟದ ಮೇಲಿನವರನ್ನು ಗೌಡ್ಲು ಎನ್ನುತ್ತಾರೆ.
ಮಲೆಕುಡಿಯರ ಭೂಮಿಗೆ ಮತ್ತು ಮನೆಗಳಿಗೆ ಇಂದಿಗೂ ಹಕ್ಕುಪತ್ರ ನೀಡಿಲ್ಲ. ಈ ವಿಷಯವಾಗಿ ನಡೆದಿದ್ದ ಹೋರಾಟದಲ್ಲಿ ವಿಠಲ್ ಸಕ್ರಿಯರಾಗಿದ್ದೇ ನಕ್ಸಲ್ ನಿಗ್ರಹ ದಳದ ಕಾರ್ಯಾಚರಣೆಗೆ ಕಾರಣವಾಗಿತ್ತು.
ಮಲೆಕುಡಿಯರಲ್ಲಿ ಬಹುತೇಕರು ಪ್ರಾಥಮಿಕ ಶಾಲೆಯ ನಂತರ ಓದು ಮುಂದುವರೆಸುವುದು ತುಂಬ ವಿರಳ. ಆದರೆ ವಿಠಲ್ ಎಂ.ಎ. ವರೆಗೂ ತಲುಪಿದ ವಿದ್ಯಾರ್ಥಿಯಾಗಿದ್ದರು. ಇಂತಹ ವಿದ್ಯಾವಂತರನ್ನು ನಕ್ಸಲ್ ನಿಗ್ರಹ ದಳ ಸಹಿಸಿಜೊಳ್ಳುವುದಿಲ್ಲ! ವಿಠಲ್ ತರಹವೇ ಹಲವರನ್ನು ನಕ್ಸಲ್ ಬೆಂಬಲಿಗರು ಎಂದು ಹಿಂಸೆಗೆ ಒಳಪಡಿಸಲಾಗಿತ್ತು.
ಆದಿವಾಸಿಗಳ ಪರ ಹೋರಾಡುತ್ತಿದ್ದ ಫಾದರ್ ಸ್ಟಾನ್ಲಿ ಅವರ ಮೇಲೂ ನಕ್ಸಲ್ ನಂಟಿನ ಆರೋಪ ಹೊರಿಸಿ ಬಂಧಿಸಲಾಗಿತ್ತು. ಅವರಿಗೆ ಸೂಕ್ತ ಚಿಕಿತ್ಸೆ ನೀಡದ ಕಾರಣ ಅವರು ಇತ್ತೀಚೆಗೆ ನಿಧನರಾದರು.
ಪ್ರತಿರೋಧ ತೋರುವವರನ್ನು ನಗರ ನಕ್ಸಲರು, ದೇಶದ್ರೋಹಿಗಳು ಎಂದು ಬ್ರ್ಯಾಂಡ್ ಮಾಡುವ ಪ್ರವೃತ್ತಿ ಈಗ ಇನ್ನಷ್ಟು ಹೆಚ್ಚಾಗುತ್ತಿದೆ. ಎಲ್ಗಾರ್ ಪರಿಷತತ್ ಸಭೆಯಲ್ಲಿ ಭಾಗವಹಿಸಿದ್ದರು ಎಂಬ ಕಾರಣಕ್ಕೆ ಹಲವಾರು ಲೇಖಕರು, ಹೋರಾಟಗಾರರನ್ನು ಯುಎಪಿಎ ಕಾಯ್ದೆ ಅಡಿ ಬಂಧಿಸಿ ಇಡಲಾಗಿದೆ.

ಕೇಂದ್ರ ಸರ್ಕಾರ ಯುಎಪಿಎ ಕಾಯ್ದೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ಕರಾಳ ಕಾಯ್ದೆಯೇ ರದ್ದಾಗಬೇಕು ಎಂದು ಹಲವರು ಧ್ವನಿ ಎತ್ತುತ್ತ ಬಂದಿದ್ದಾರೆ. ಸದ್ಯ ವಿಠಲ್ ಮತ್ತು ಅವರ ತಂದೆ ಆರೋಪಮುಕ್ತರಾಗಿದ್ದಾರೆ. ಇದರಿಂದ ಸರ್ಕಾರದ ಮುಖವಾಠಡ ಮತ್ತೊಮ್ಮೆ ಬಯಲಾಗಿದೆ.
ಈಗಲಾದರೂ ಮಲೆಕುಡಿಯರಿಗೆ ಭೂಮಿ ಮತ್ತು ಮನೆಯ ಹಕ್ಕುಪತ್ರಗಳನ್ನು ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು. ಸಂಘ ಪರಿವಾರದ ನಿಲುವುಗಳನ್ನು ಬಹಿರಂಗವಾಗಿ ಬೆಂಬಲಿಸುತ್ತಿರುವ ಬೊಮ್ಮಾಯಿಯವರು ವಿಠಲ್ ಪ್ರಕರಣದಿಂದ ಸತ್ಯವನ್ನು ಅರಿಯುವಂತಾಗಲಿ.