ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈಎಸ್ ರಾಜಶೇಖರ ರೆಡ್ಡಿಯ ಪುತ್ರಿ, ಈಗಿನ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಸಹೋದರಿ ವೈ.ಎಸ್ ಶರ್ಮಿಳಾ ರೆಡ್ಡಿ ರಾಜಕೀಯ ಪ್ರವೇಶದ ಕುರಿತು ತಂದೆಯ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದಾರೆ.
ಹೈದರಾಬಾದ್ ಲೋಟಸ್ ಪಾಂಡ್ ನಿವಾಸದಲ್ಲಿ ‘ಆತ್ಮಿಯಾ ಸಮ್ಮೆಳನಂ’ ಸಭೆ ನಡೆಸಿ ರಾಜಕೀಯ ಪ್ರವೇಶದ ಬಗ್ಗೆ ಚರ್ಚಿಸಿದ್ದಾರೆ. ನಾನು ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಜನತೆಯ ಸಲಹೆ, ಮಾಹಿತಿಯನ್ನು ಪಡೆಯಲು ಇಚ್ಚಿಸುತ್ತೇನೆ ಎಂದಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಹಿನ್ನೆಲೆಯಲ್ಲಿ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಜನರೊಂದಿಗೆ ಈ ಕುರಿತಾಗಿ ಚರ್ಚಿಸುವ ಸಾಧ್ಯತೆಗಳಿವೆ. ನಂತರ ಪ್ರತಿ ಜಿಲ್ಲೆಯಲ್ಲಿಯೂ ಈ ಚರ್ಚಾ ಸಭೆಯನ್ನು ಮುಂದುವರೆಸಲಾಗುತ್ತದೆ ಎಂದು ಹೈದರಬಾದ್ ಲೋಟಸ್ ಪಾಂಡ್ ನಿವಾಸದ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
2014 ರಲ್ಲಿ ಆಂಧ್ರಪ್ರದೇಶ, ತೆಲಂಗಾಣ ವಿಭಜನೆಯಾಗುವವರೆಗೂ ತೆಲಂಗಾಣ ಆಂಧ್ರಪ್ರದೇಶಕ್ಕೆ ಸೇರಿತ್ತು. 2004 ರಿಂದ 2009 ರವರೆಗೆ ಕಾಂಗ್ರೆಸ್ ಪಕ್ಷದಿಂದ ವೈ ಎಸ್ ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದರು. ಮತ್ತೆ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸ್ವಲ್ಪ ದಿನಗಳಲ್ಲಿಯೇ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದರು.
2010 ರಲ್ಲಿ ರಾಜಶೇಖರ ರೆಡ್ಡಿಯ ಪುತ್ರ ವೈ.ಎಸ್ ಜಗನ್ ಮೋಹನ್ ರೆಡ್ಡಿ ಕಾಂಗ್ರೆಸ್ ಪಕ್ಷದಿಂದ ಹೊರಬಂದು ವೈಎಸ್ಆರ್ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ್ದರು. ಹೊಸ ರಾಜ್ಯವಾಗಿ ಹೊರಹೊಮ್ಮಿದ ಆಂಧ್ರಪ್ರದೇಶದ 2019 ರ ವಿಧಾನಸಭಾ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಭರ್ಜರಿ ಗೆಲವು ಸಾಧಿಸಿತ್ತು. ಈ ವೇಳೆ ರೆಡ್ಡಿ ಸಹೋದರಿ ಮತ್ತು ತಾಯಿ ವಿಜಯಮ್ಮ ಸಾಕಷ್ಟು ಬೆಂಬಲ ನೀಡಿದ್ದರು.
ಸಹೋದರ ಜಗನ್ ಮೋಹನ್ ರೆಡ್ಡಿ ಹಸ್ತಕ್ಷೇಪವಿಲ್ಲದೆ, ರಾಜಕೀಯ ಯೋಜನೆಯ ಬಗ್ಗೆ ಹಾಗು ತೆಲಂಗಾಣದಲ್ಲಿ ರಾಜಕೀಯ ಪ್ರಾಬಲ್ಯ ಸ್ಥಾಪಿಸುವ ಕುರಿತು ಶರ್ಮಿಳಾ ರೆಡ್ಡಿ ಕಣ್ಣಿಟ್ಟಿದ್ದಾರೆಂಬ ವದಂತಿಗಳೂ ಹರಡುತ್ತಿವೆ. ಎಂದು ಪಿಟಿಐ ವರದಿ ಮಾಡಿತ್ತು. ಹೊಸ ರಾಜಕೀಯ ಪಕ್ಷದ ಸ್ಥಾಪನೆ ಕುರಿತು ಶರ್ಮಿಳಾ ರೆಡ್ಡಿಯನ್ನು ಪ್ರಶ್ನಿಸಿದಾಗ ಪಕ್ಷ ಸ್ಥಾಪನೆಯ ಕುರಿತು ಯಾವುದೇ ರೀತಿಯ ಮಾಹಿತಿ ಬಹಿರಂಗಪಡಿಸಿಲ್ಲ. ಬದಲಾಗಿ ತಂದೆಯ ರಾಜಕೀಯವನ್ನು ನೆನೆದಿದ್ದಾರೆ. “ಈಗ ರಾಜಣ್ಣ ರಾಜ್ಯ (ವೈಎಸ್ಆರ್ ರಾಜ್ಯ) ಇಲ್ಲ, ಅದು ಏಕೆ ಮತ್ತೆ ಬರಬಾದರು? ನಾವು ರಾಜಣ್ಣ ರಾಜ್ಯವನ್ನು ಮತ್ತೆ ತೆಲಂಗಾಣದಲ್ಲಿ ತರುತ್ತೇವೆ ಎಂದು ಹೇಳಿದ್ದಾರೆ.
ಶರ್ಮಿಳಾ ಮತ್ತು ಜಗನ್ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಯಾವುದೇ ವೈಯಕ್ತಿಕ ದ್ವೇಷವಿಲ್ಲ, ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಸಜ್ಜಲಾ ರಾಮಕೃಷ್ಣ ರೆಡ್ಡಿ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಶರ್ಮಿಳಾ ರೆಡ್ಡಿ ನಡೆಸಿದ ಸಭೆಯಲ್ಲಿ ಅವರ ತಂದೆ ರಾಜಶೇಖರ ರೆಡ್ಡಿಯ ಬೆಂಬಲಿಗರು ಭಾಗಿಯಾಗಿದ್ದರು. ದಿವಂಗತ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಫೋಟೋ ಒಳಗೊಂಡ ಫ್ಲೆಕ್ಸ್, ಬ್ಯಾನರ್ ಪೋಸ್ಟರ್ಗಳನ್ನು ಹೈದರಾಬಾದ್ ನಿವಾಸದಲ್ಲಿ ಅಳವಡಿಸಲಾಗಿತ್ತು. ಸಹೋದರ ಜಗನ್ ಮೋಹನ್ ರೆಡ್ಡಿ ಅನುಪಸ್ಥಿತಿ ಮಾತ್ರ ಸಭೆಯಲ್ಲಿ ಎದ್ದು ಕಾಣುತ್ತಿತ್ತು.