ಮಾಜಿ ಸಿಎಂ ಕುಮಾರಸ್ವಾಮಿ ಕಳೆದೊಂದು ವಾರದಿಂದ ಕಾಂಗ್ರೆಸ್ ವಿರುದ್ಧ ಗುಡುಗುತ್ತಲೇ ಇದ್ದರು. ರಾಜಸ್ಥಾನದಲ್ಲಿ ಆಪರೇಷನ್ ಕಮಲ ಮಾಡುತ್ತಿರುವ ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡಿದಾಗ ಕಾಂಗ್ರೆಸ್ಗೆ ಯಾವ ನೈತಿಕತೆ ಇದೆ ಎಂದು ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಟ್ಟಿದ್ದ ಬಿಎಸ್ಪಿ ಶಾಶಕರನ್ನೇ ಕಾಂಗ್ರೆಸ್ ಪಕ್ಷದಲ್ಲಿ ವಿಲೀನ ಮಾಡಿಕೊಂಡಿದೆ. ಇದು ಪ್ರಾದೇಶಿಕ ಪಕ್ಷಗಳ ಬಗ್ಗೆ ಕಾಂಗ್ರೆಸ್ಗೆ ಇರುವ ಗೌರವ. ಬೆಂಬಲಿಸಿದವರನ್ನೇ ಮುಗಿಸುವುದು ಕಾಂಗ್ರೆಸ್ ಗುಣ. 2004ರಲ್ಲೂ ಕಾಂಗ್ರೆಸ್ ಇದನ್ನೇ ಕರ್ನಾಟಕದಲ್ಲೂ ಮಾಡಿತ್ತು. ಅದೇ ಕಾರಣಕ್ಕಾಗಿ ನಾನು ಕ್ಷಿಪ್ರ ರಾಜಕೀಯ ಕ್ರಾಂತಿ ಮಾಡಬೇಕಾಯ್ತು ಎಂದು ಕಾಂಗ್ರೆಸ್ ವಿರುದ್ಧ ಟೀಕಾಸ್ತ್ರ ಬಳಸಿದ್ದರು.
ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಬೆಂಬಲ ಕೊಡುತ್ತಿರುವ ಕಾರಣ ರಾಮನಗರದಲ್ಲಿ ಕುಮಾರಸ್ವಾಮಿ ಹೇಳಿದಂತೆಯೇ ವರ್ಗಾವಣೆಗಳು ನಡೆಯುತ್ತಿವೆ ಎಂದು ಬಿಜೆಪಿ ನಾಯಕ ಹಾಗೂ ಇತ್ತೀಚಿಗೆ ಪರಿಷತ್ಗೆ ನಾಮನಿರ್ದೇಶನಗೊಂಡಿರುವ ಸಿ ಪಿ ಯೋಗೇಶ್ವರ್ ಹೇಳಿಕೆ ಕೊಟ್ಟಿದ್ದಾರೆ. ಡಿ.ಕೆ ಶಿವಕುಮಾರ್ ಕೂಡ ಸರ್ಕಾರದ ಪರವಾಗಿ ಇದ್ದಾರೆ. ಎಂದೂ ಸರ್ಕಾರ ಹಾಗೂ ಸಿಎಂ ಬಿ.ಎಸ್ ಯಡಿಯೂರಪ್ಪ ಬಗ್ಗೆ ಟೀಕೆ ಮಾಡಿಲ್ಲ, ಮಾಡೋದು ಇಲ್ಲ ಎನ್ನುವ ಮೂಲಕ ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ ಎಂದಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ನನ್ನ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಹೊಸದಾಗಿ ನಮಗೆ ಏನನ್ನೂ ಕೊಟ್ಟಿಲ್ಲ, ಆದರೆ ನನ್ನ ಅಧಿಕಾರ ಅವಧಿಯಲ್ಲಿ ಮಂಜೂರಾದ ಅನುದಾನವನ್ನೇ ಈಗ ಬಳಕೆ ಮಾಡುತ್ತಿದ್ದೇನೆ ಎಂದಿದ್ದಾರೆ. ಇನ್ನೂ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನಾನು ರಾಜ್ಯ ಸರ್ಕಾರಕ್ಕೆ ಎಲ್ಲಾ ರೀತಿಯ ಬೆಂಬಲ ಕೊಡುತ್ತೇನೆ. ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ವಿಧಾನಪರಿಷತ್ಗೆ ನಾಮ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಹೀಗೆ ಮತಾನಾಡುತ್ತಾ ಇದ್ದಾರೆ ಎಂದು ಯೋಗೇಶ್ವರ್ ವಿರುದ್ಧ ಕಿಡಿಕಾರಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಾಜಕಾರಣದಲ್ಲಿ ಒಂದು ಪ್ರಾದೇಶಿಕ ಪಕ್ಷ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ನಾವು ಹೇಳಿದ ಕೆಲಸ ಸರ್ಕಾರದಲ್ಲಿ ಆಗ್ತಿದೆ ಎಂದು ಯೋಗೇಶ್ವರ್ ಹೇಳಿದ್ದಾರೆ. ಅಂದರೆ ನಮಗೆ ಶಕ್ತಿ
ಇದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ರಾಜಸ್ಥಾನದಲ್ಲಿ ನಡೆಯುತ್ತಿರುವ ಆಪರೇಷನ್ ಕಮಲ ವಿರುದ್ಧ ಕಾಂಗ್ರೆಸ್ ಇಲ್ಲಿ ಪ್ರತಿಭಟನೆ ಮಾಡುತ್ತದೆ. ಆದರೆ ಅದು ನನಗೆ ಮುಖ್ಯವಲ್ಲ. ನನಗೆ ನನ್ನ ರಾಜ್ಯ ಅಷ್ಟೇ ಮುಖ್ಯ ಎನ್ನುವ ಮೂಲಕ ಕಾಂಗ್ರೆಸ್ ಪ್ರತಿಭಟನಾ ರಾಜಕೀಯಕ್ಕೆ HD ಕುಮಾರಸ್ವಾಮಿ ಕೌಂಟರ್ ಕೊಟ್ಟಿದ್ದಾರೆ.
ಇನ್ನೂ ರಾಜಕೀಯದಲ್ಲಿ ಯಾರನ್ನ ಯಾರೂ ಮುಗಿಸಲು ಸಾಧ್ಯವಿಲ್ಲ. ನನ್ನ ಹೋರಾಟ ಕಾಂಗ್ರೆಸ್ ವಿರುದ್ಧವೇ ನಡೆಯುತ್ತಿದೆ ಎನ್ನುವ ಮೂಲಕ ಪರೋಕ್ಷವಾಗಿ ಮತ್ತೆ ಬಿಜೆಪಿಯನ್ನು ಬೆಂಬಲಿಸುವ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಪ್ರಚಾರಕ್ಕಾಗಿ ಹೋರಾಟ ನಡೆಸುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲು ಇನ್ನೂ ಸಾಕಷ್ಟು ಸಮಯವಿದೆ. ಮೊದಲು ಜನರ ಆರೋಗ್ಯ ಮುಖ್ಯ. ಈ ಸರ್ಕಾರವೇ ಸಂಕಷ್ಟದಲ್ಲಿದೆ. ಅಭಿವೃದ್ಧಿ ಇನ್ನೆಲ್ಲಿಂದ..? ಎಂದು ಪ್ರಶ್ನೆ ಮಾಡಿದ್ದಾರೆ.
ಮತ್ತೆ ಟ್ವೀಟ್ನಲ್ಲಿ ಕುಮಾರಸ್ವಾಮಿ ವಾಗ್ದಾಳಿ
ನಾನು ಅಡ್ಜೆಸ್ಟ್ಮೆಂಟ್ ರಾಜಕಾರಣವನ್ನು ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲ್ಲ. ಡಿ.ಕೆ ಶಿವಕುಮಾರ್ ಮತ್ತು ನನ್ನ ನಡುವಣ ರಾಜಕಾರಣವೇ ಬೇರೆ. ವೈಯಕ್ತಿಕ ವಿಶ್ವಾಸವೇ ಬೇರೆ. ಹಿಂಬಾಗಿಲ ರಾಜಕಾರಣದ ಮೂಲಕ ನೆಲೆ ಕಂಡು ಕೊಂಡವರಿಂದ ಯಾವುದೇ ಡ್ಯಾಮೇಜ್ ಮಾಡಲು ಸಾಧ್ಯವಿಲ್ಲ. ಶಿವಕುಮಾರ್ ಮತ್ತು ನಮ್ಮ ನಡುವಣ ಹಿಂದಿನ ಹಾಗೂ ಇಂದಿನ ರಾಜಕಾರಣ ಬೇರೆ. ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಎಲ್ಲರೂ ಒಂದು ಗುರಿ ಇಟ್ಟುಕೊಂಡೆ ದುಡಿಮೆ ಮಾಡುತ್ತಾರೆ. ಈ ಮಧ್ಯೆ ಹುಳಿ ಹಿಂಡುವವರ ನಾಟಕ ಫಲಿಸಲ್ಲ ಎಂದಿದ್ದಾರೆ. ತನ್ನ ಬೇಳೆ ಬೇಯಿಸಿಕೊಳ್ಳಲು ಮಸಾಲೆ ಅರೆಯುತ್ತಿರುವ ವ್ಯಕ್ತಿಯ ಕುತಂತ್ರ ರಾಜಕಾರಣಕ್ಕೆ ರಾಮನಗರ ಜಿಲ್ಲೆಯ ಜನತೆ ಸೊಪ್ಪು ಹಾಕುವುದಿಲ್ಲ. ನೆರೆಹಾವಳಿ, ಕರೋನಾ ಸಂಕಷ್ಟ ಸಮಯದಲ್ಲಿ ರಾಜಕಾರಣ ಬಿಟ್ಟು ರಾಜ್ಯದ ಜನತೆಯ ಹಿತಕಾಯುವ ದೃಷ್ಟಿಯಿಂದ ಸರ್ಕಾರಕ್ಕೆ ಬೆಂಬಲ ಇದೆ ಎಂದಾಕ್ಷಣ, ಅದನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುವ ಕೀಳು ಅಭಿರುಚಿಯ ಹೇಳಿಕೆ ನೀಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಯೋಗೇಶ್ವರ್ಗೆ ಟಾಂಗ್ ಕೊಟ್ಟಿದ್ದಾರೆ. ಜೊತೆಗೆ ವಚನದ ಮೂಲಕವೂ ತಿರುಗೇಟು ನೀಡಿದ್ದಾರೆ.
ಶಿವಕುಮಾರ್ ಮತ್ತು ನಮ್ಮ ನಡುವಣ ಹಿಂದಿನ ಹಾಗೂ ಇಂದಿನ ರಾಜಕಾರಣ ಬೇರೆ. ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಎಲ್ಲರೂ ಒಂದು ಗುರಿ ಇಟ್ಟು ಕೊಂಡೆ ದುಡಿಮೆ ಮಾಡುತ್ತಾರೆ. ಈ ಮಧ್ಯೆ ಹುಳಿ ಹಿಂಡುವವರ ನಾಟಕ ಫಲಿಸದು.
2/5— H D Kumaraswamy (@hd_kumaraswamy) July 30, 2020
ಕುಮಾರಸ್ವಾಮಿ ಹೇಳಿರುವ ಎಲ್ಲಾ ಮಾತುಗಳನ್ನು ಒಪ್ಪಬಹುದು. ಒಂದು ಪ್ರಾದೇಶಿಕ ಪಕ್ಷವಾಗಿ ಅಧಿಕಾರ ಇಲ್ಲದೆ ಇರುವ ಸಮಯದಲ್ಲಿ ಪಕ್ಷವನ್ನೂ ಉಳಿಸಿಕೊಳ್ಳುವುದು ಒಂದು ತಂತ್ರಗಾರಿಕೆಯೇ ಸರಿ. ಇನ್ನು ಆಡಳಿತ ಪಕ್ಷವನ್ನು ಸುಖಾಸುಮ್ಮನೆ ವಿರೋಧಿಸಲೂ ಬಾರದು ಎನ್ನುವುದೂ ಸರಿಯಾದ ಕ್ರಮ. ರಾಜಸ್ಥಾನದ ವಿಚಾರಕ್ಕೆ ಕರ್ನಾಟಕದಲ್ಲಿ ಪ್ರತಿಭಟನೆ ಮಾಡುವ ಅವಶ್ಯಕತೆ ಇಲ್ಲ ಎನ್ನುವುದು ಪ್ರಾದೇಶಿಕ ಪಕ್ಷದ ನಿಲುವು. ಆದರೇ ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿ ದೇಶಾದ್ಯಂತ ತನ್ನ ವಿರೋಧ ವ್ಯಕ್ತಪಡಿಸುವುದು ಅದರ ಕರ್ತವ್ಯ. ಆದರೆ ಒಂದೇ ಒಂದು ಪ್ರಶ್ನೆ ಎಂದರೆ ಬಿಜೆಪಿ ಬೆಂಬಲಿಸುವುದಾದರೆ ನೇರವಾಗಿ ಹೇಳಬಹುದಲ್ಲವೇ..? ಜಾತ್ಯಾತೀತಿ ನಿಲುವುಗಳಿಗೆ ನಾವು ಬದ್ಧ, ಕೋಮುವಾದಿಗಳನ್ನು ನಾವು ಬೆಂಬಲಿಸುವುದಿಲ್ಲ ಎನ್ನುವ ಹೇಳಿಕೆಗಳನ್ನು ಹೇಳುವುದಕ್ಕೆ ಅರ್ಥವಿದೆಯಾ ಎನ್ನುವುದನ್ನು ಸ್ವತಃ ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಸ್ಪಷ್ಟಪಡಿಸಬೇಕಿದೆ.

ಬಿಜೆಪಿ ಬೆಂಬಲಿಸುವ ಹಿಂದಿದೆಯೇ ರಾಜಕಾರಣ..?
ಜೆಡಿಎಸ್ ಪಕ್ಷ ಹಳೇ ಮೈಸೂರು ಭಾಗವೇ ಗಟ್ಟಿನೆಲೆಯಾಗಿತ್ತು. ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಪಕ್ಷ ಮಾತ್ರ ಎದುರಾಳಿ ಆಗಿತ್ತು. ಕಟ್ಟಾ ವಿರೋಧಿಗಳಾದ ಕಾಂಗ್ರೆಸ್, ಜೆಡಿಎಸ್ ಹಳೇ ಮೈಸೂರು ಭಾಗದಲ್ಲಿ ರಣಾಂಗಣದಲ್ಲಿನ ಸೇನಾನಿಗಳಂತೆ ರಾಜಕೀಯದಲ್ಲಿ ಸೆಣೆಸಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಬಿಜೆಪಿ ಜಾಗ ಮಾಡಿಕೊಳ್ಳುತ್ತಿದೆ. ಇದಕ್ಕೆ ಕಾರಣ ಜೆಡಿಎಸ್ನ ನಿಲುವುಗಳು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೀಗ ಕುಮಾರಸ್ವಾಮಿ ಬಿಜೆಪಿಯನ್ನೇ ಬೆಂಬಲಿಸುವ ಕೆಲಸ ಮಾಡಿದರೆ ಮತ್ತೆ ಜೆಡಿಎಸ್ ಪ್ರಾಬಲ್ಯ ಮಾಡುವುದರಲ್ಲಿ ಸಂಶಯವಿಲ್ಲ. ಮತ್ತೆ ಹಳೇ ಮೈಸೂರು ಭಾಗ ಕಾಂಗ್ರೆಸ್, ಜೆಡಿಎಸ್ ಪೈಪೋಟಿಯ ಕಾರ್ಯಸ್ಥಾನ ಆಗಲಿದೆ. ಬಿಜೆಪಿಯತ್ತ ಒಲವು ಹೊಂದಿರುವ ಕಾರ್ಯಕರ್ತರು, ಮತ್ತೆ ಜೆಡಿಎಸ್ಗೆ ಜೈ ಎನ್ನಲಿದ್ದಾರೆ ಎನ್ನುವ ಲೆಕ್ಕಾಚಾರವಿದೆ.. ಇದೇ ಅರ್ಥದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದು ಮುಖ್ಯ ಎಂದಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ. ಒಟ್ಟಾರೆ, ಅಧಿಕಾರದಲ್ಲಿ ಇದ್ದಾಗ ಕಾರ್ಯಕರ್ತರಿಂದ ದೂರ ಉಳಿದು, ಅಧಿಕಾರ ಕಳೆದುಕೊಂಡ ಮೇಲೆ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಜೆಡಿಎಸ್ ಸರ್ಕಸ್ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಗತಿ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.