ಇಂದಿಗೆ ಒಂದು ವರ್ಷದ ಹಿಂದೆ ಒಂದು ವರ್ಷದ ಅವಧಿಗೆ ಸೋನಿಯಾ ಗಾಂಧಿ ಅವರನ್ನು ಎಐಸಿಸಿ(AICC) ಯ ಹಂಗಾಮಿ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆ ಆಯ್ಕೆ ಮಾಡಿತ್ತು. ಆ ಅವಧಿ ಇಂದಿಗೆ ಮುಗಿದಿದ್ದು ಕಾಂಗ್ರೆಸ್ ಪಕ್ಷದ ಮುಂದಿನ ಪೂರ್ಣಾವಧಿ ಅಧ್ಯಕ್ಷರು ಯಾರಾಗುತ್ತಾರೆ? ಯಾರಾಗಬೇಕು ಎಂಬ ಚರ್ಚೆಗಳು ನಡೆಯುತ್ತಿವೆ.
ಕಾಂಗ್ರೆಸ್ ನಾಯಕರು ಹೊಸಬರ ಬಗ್ಗೆ ಆಲೋಚಿಸುವ ಸಾಹಸ ಮಾಡುತ್ತಿಲ್ಲ. ಬಹುತೇಕ ಎಲ್ಲರ ಆಯ್ಕೆ ರಾಹುಲ್ ಗಾಂಧಿ ಅವರೇ ಆಗಿದ್ದಾರೆ. ಈ ನಡುವೆ ಅಲ್ಲಲ್ಲಿ ಬೇರೊಬ್ಬರನ್ನು ಅಧ್ಯಕ್ಷರನ್ನು ಮಾಡಿ ಎಂಬ ಮಾತುಗಳು ಪಿಸುದನಿಯಲ್ಲಿ ಕೇಳಿಬರುತ್ತಿವೆ. ಆ ಪೈಕಿ ಮುಂಚೂಣಿಯಲ್ಲಿರುವವರು ಹಿರಿಯ ನಾಯಕರಾದ ಎಂ. ಮಲ್ಲಿಕಾರ್ಜುನ ಖರ್ಗೆ. ಅಲ್ಲೊಬ್ಬರು ಇಲ್ಲೊಬ್ಬರು ಶಶಿ ತರೂರ್ ಅವರಂತಹ ವಿದ್ಯಾವಂತರು ಮತ್ತು ಬುದ್ದಿವಂತರಿಗೆ ಅವಕಾಶ ಕೊಡಿ ಎನ್ನುತ್ತಿದ್ದಾರೆ. ಆದರೆ ಈ ಯಾವುದೇ ವಿಷಯ ಮತ್ತು ವ್ಯಕ್ತಿಗಳ ಬಗ್ಗೆ ಪಕ್ಷದ ಅಧಿಕೃತ ವೇದಿಕೆಯಲ್ಲಿ ಚರ್ಚೆಯಾಗಿಲ್ಲ. ಕಾಂಗ್ರೆಸ್ ನಾಯಕರು ಹೀಗೆ ಆಲೋಚನೆ ಮಾಡುತ್ತಿರುವುದಕ್ಕೆ ಸುದೀರ್ಘವಾದ ಇತಿಹಾಸ ಇದೆ. ಕಾಂಗ್ರೆಸ್ ಸ್ವತಂತ್ರ್ಯ ಪೂರ್ವದಿಂದಲೂ ಗಾಂಧಿ ಕುಟುಂಬವನ್ನು ಅವಲಂಬಿಸಿಕೊಂಡೇ ಬಂದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಗಾಂಧಿ ಪರಿವಾರವೇ ಆಧಾರ
1885ರಲ್ಲಿ ಬ್ರಿಟಿಷರ ಹೋರಾಡಲು ಸ್ವತಂತ್ರ್ಯಕ್ಕಾಗಿ ಹೋರಾಡಲು ಹುಟ್ಟಿಕೊಂಡ ಕಾಂಗ್ರೆಸ್ ಪಕ್ಷಕ್ಕೆ 1928ರವರೆಗೆ ಬೇರೆಯವರೇ ಅಧ್ಯಕ್ಷರಾಗಿದ್ದರು. ಆ ಪೈಕಿ ಸ್ವತಂತ್ರ್ಯ ಹೋರಾಟಗಾರರು, ಆರ್ ಎಸ್ ಎಸ್ ಹಿನ್ನಲೆಯವರು, ಮುಸಲ್ಮಾನರು, ಮಹಾತ್ಮ ಗಾಂಧಿ ಮತ್ತಿತರರಿದ್ದರು. ಆದರೂ ಶತಮಾನಗಳ ಇತಿಹಾಸ ಇರುವ ಪಕ್ಷ ಆಗಾಗ ಯಾರು ಅಧ್ಯಕ್ಷಗಾದಿಗೆ ಯಾರನ್ನು ಕೂರಿಸಬೇಕು ಎಂಬ ಬಿಕ್ಕಟ್ಟನ್ನು ಎದುರಿಸಿದೆ. ಆಗೆಲ್ಲಾ ನೆರವಿಗೆ ಬಂದಿರುವುದು ಗಾಂಧಿ ಕುಟುಂಬ. ಮೊದಲಿಗೆ 1928ರಲ್ಲಿ ಮೋತಿಲಾಲ್ ನೆಹರು ಕಾಂಗ್ರೆಸ್ ಅಧ್ಯಕ್ಷರಾದರು. ಅದು ತಾತ್ಕಾಲಿಕವಾಗಿತ್ತು(ಒಂದೇ ವರ್ಷ). ನಂತರ ಎಲ್ಲರೂ ಸೇರಿ ಜವಾಹರಲಾಲ್ ನೆಹರು ಹೆಸರೇಳಿದರು. ಜವಾಹರಲಾಲ್ ನೆಹರು 1929ರಲ್ಲಿ ಅಧ್ಯಕ್ಷರಾದರು. ಆದರೆ ಸ್ವತಂತ್ರ್ಯ ಹೋರಾಟಕ್ಕೆ ಕಾವುಕೊಡಲು, ಮಹಾತ್ಮಾಗಾಂಧಿ ಅವರೊಂದಿಗೆ ಹೆಗಲು ಕೊಡಬೇಕೆಂದು 1930ಕ್ಕೆ ಅಧ್ಯಕ್ಷಗಾದಿ ಬಿಟ್ಟುಕೊಟ್ಟರು.
ಇದಾದ ಮೇಲೆ ಬಂದ ವಲ್ಲಭಾಯ್ ಪಟೇಲ್, ಮದನ್ ಮೋಹನ್ ಮಾಳ್ವಿಯಾ, ನೆಲ್ಲಿಸೇನ್ ಗುಪ್ತಾ ಮತ್ತು ರಾಜೇಂದ್ರ ಪ್ರಸಾದ್ ಅವರು ಪಕ್ಷವನ್ನು ಮುನ್ನಡೆಸಲು ವಿಫಲವಾದುದರಿಂದ ಮತ್ತೊಮ್ಮೆ ನಾಯಕತ್ವ ವಹಿಸುವಂತೆ ಜವಾಹರಲಾಲ್ ನೆಹರು ಅವರ ಮೇಲೆ ಒತ್ತಡ ಹೇರಲಾಯಿತು. ನೆಹರು 1936ರಲ್ಲಿ ಅಧ್ಯಕ್ಷಗಾದಿ ವಹಿಸಿಕೊಂಡು ಪಕ್ಷ ಮುನ್ನಡೆಸಿದರು. ಬಳಿಕ 1938ರಲ್ಲಿ ಸುಭಾಷ್ ಚಂದ್ರ ಬೋಸ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿ ಮತ್ತೆ ಸ್ವತಂತ್ರ್ಯ ಹೋರಾಟದಲ್ಲಿ ಸಕ್ರೀಯರಾದರು. ಇದು ಕೆಲವೇ ವರ್ಷ ಅಷ್ಟೇ. ಪಕ್ಷ ಮತ್ತೆ ನಾಯಕತ್ವದ ಬಿಕ್ಕಟ್ಟು ಎದುರಿಸಿದಾಗ ಎಲ್ಲರೂ ಹೇಳಿದ ಒಂದೇ ಹೆಸರೆಂದರೆ ಅದು ಜವಾಹರಲಾಲ್ ನೆಹರು. ನೆಹರು 1946ರಲ್ಲಿ ಮತ್ತೆ ಕಾಂಗ್ರೆಸ್ ಅಧ್ಯಕ್ಷರಾದರು. ಆದರೆ ಸ್ವತಂತ್ರ್ಯ ಹೋರಾಟ ತಾರ್ಕಿಕ ಅಂತ್ಯ ತಲುಪುತ್ತಿದ್ದ ಕಾರಣ ಅವರು ಕೆಲವೇ ದಿನಗಳಲ್ಲಿ ಜೆ.ಬಿ. ಕೃಪಲಾನಿ ಅವರಿಗೆ ಅಧಿಕಾರ ನೀಡಿ ಸ್ವತಂತ್ರ್ಯ ಹಸ್ತಾಂತರ ಪ್ರಕ್ರಿಯೆಯಲ್ಲಿ ಬ್ರಿಟಿಷರ ಜೊತೆ ಮಾತುಕತೆಗೆ ತೊಡಗಿಸಿಕೊಂಡರು.
ಬಳಿಕ ಸ್ವತಂತ್ರ್ಯ ಬಂದರೂ ಕಾಂಗ್ರೆಸ್ ಪಕ್ಷದ ನಾಯಕತ್ವ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಲಿಲ್ಲ. 1951ರಿಂದ 1954ರವರೆಗೆ ಜವಾಹರಲಾಲ್ ನೆಹರು ಪ್ರಧಾನ ಮಂತ್ರಿ ಸ್ಥಾನ ಮತ್ತು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಎರಡನ್ನೂ ನಿಭಾಯಿಸಬೇಕಾಯಿತು. ಈ ಕಷ್ಟ ನೆಹರು ಕಾಲಕ್ಕೆ ಮಾತ್ರವಲ್ಲ ಅವರ ಪುತ್ರಿ ಇಂದಿರಾ ಗಾಂಧಿ ಅವರಿಗೂ ವರ್ಗಾವಣೆಯಾಯಿತು. ಇಂದಿರಾ ಗಾಂಧಿ ಅವರು ಕೂಡ ತಂದೆಯಂತೆ ಮೊದಲಿಗೆ ಒಂದು ವರ್ಷ (1959ರಲ್ಲಿ) ಅಧ್ಯಕ್ಷರಾಗಿದ್ದರು. ಬಳಿಕ 1978ರಿಂದ 1984ರವರೆಗೆ ಕೆಲಕಾಲ ಇಂದಿರಾ ಗಾಂಧಿ ಅವರು ಪ್ರಧಾನ ಮಂತ್ರಿ ಸ್ಥಾನ ಮತ್ತು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಎರಡನ್ನೂ ನಿರ್ವಹಿಸಬೇಕಾಯಿತು. ಇಂದಿರಾ ಗಾಂಧಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೂ ಮತ್ತೆ ಗಾಂಧಿ ಪರಿವಾರದವರೇ ಬೇಕಾಯಿತು. ಅವರ ಪುತ್ರ ರಾಜೀವ್ ಗಾಂಧಿ 1985ರಿಂದ 1991ರವರೆಗೆ ಪಕ್ಷವನ್ನು ಮುನ್ನಡೆಸಿದರು.
ಇದಾದ ಬಳಿಕ ಬಹಳ ವರ್ಷಗಳ ನಂತರ ಗಾಂಧಿ ಕುಟುಂಬಕ್ಕೆ ಹೊರತಾದ ವ್ಯಕ್ತಿ ಪೂರ್ಣ ಅವಧಿವರೆಗೆ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದರು ಅವರೇ ಪಿ.ವಿ. ನರಸಿಂಹರಾವ್. 1991ರಿಂದ 1996ರವರೆಗೆ ಪಿ.ವಿ. ನರಸಿಂಹ ರಾವ್ ಯಶಸ್ವಿಯಾಗಿ ಪಕ್ಷ ಮುನ್ನಡೆಸಿದರೂ ಇದೇ ಮಾದರಿ ಮುಂದುವರೆಸಲು ಆ ಬಳಿಕ ಬಂದ ಸೀತಾರಾಂ ಕೇಸರಿ ಅವರಿಂದ ಸಾಧ್ಯವಾಗಲಿಲ್ಲ. ಅವರು 1996ರಿಂದ 1998ರವರೆಗೆ ಮಾತ್ರ ಇದ್ದರು. ಅಷ್ಟರೊಳಗೆ ಕಾಂಗ್ರೆಸ್ ಪಕ್ಷದಲ್ಲಿ ಅರಾಜಕತೆ ಸೃಷ್ಟಿಯಾಗಿತ್ತು. ಆಗಲೇ ಕಾಂಗ್ರೆಸ್ ನಾಯಕರು, ‘ಪತಿ ರಾಜೀವ್ ಗಾಂಧಿ ಅವರನ್ನು ಕಳೆದುಕೊಂಡು, ತನ್ನೆರಡು ತಬ್ಬಲಿ ಮಕ್ಕಳ (ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ) ಹೊರತು ಕಷ್ಟ ಹೇಳಿಕೊಳ್ಳಲು ಮೂರನೆಯವರು ಮತ್ತೊಬ್ಬರಿಲ್ಲದೆ ಒಂದು ರೀತಿಯ ಅನಾಥ’ ಸ್ಥಿತಿ ಎದುರಿಸುತ್ತಿದ್ದ’ ಸೋನಿಯಾ ಗಾಂಧಿ ಅವರ ಬಳಿ ಓಡೋಡಿ ಬಂದಿದ್ದು. ನೀವೇ ಬಂದು ಅಧ್ಯಕ್ಷರಾಗಬೇಕೆಂದು ಕಾಲು ಹಿಡಿದಿದ್ದು. ಸೋನಿಯಾ ಗಾಂಧಿ ಕಡೆಗೂ ಒಲ್ಲದ ಮನಸ್ಸಿನಿಂದ 1998ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಗಲುಕೊಟ್ಟರು. ಸುದೀರ್ಘ 19ವರ್ಷಗಳ ಕಾಲ ಪಕ್ಷವನ್ನು ಮುನ್ನಡೆಸಿದರು. ಪಕ್ಷವನ್ನು (ಯುಪಿಎ ಮುಖಾಂತರ) ಅಧಿಕಾರಕ್ಕೆ ತಂದರು. ಪ್ರಧಾನ ಮಂತ್ರಿ ಸ್ಥಾನವನ್ನೂ ತ್ಯಾಗ ಮಾಡಿದರು. ಕಾಂಗ್ರೆಸ್ ಇತಿಹಾಸದಲ್ಲೇ ಇಷ್ಟು ದೀರ್ಘಾವಧಿಗೆ ಯಾರೂ ಅಧ್ಯಕ್ಷರಾಗಿರಲಿಲ್ಲ. ಆ ಹೆಗ್ಗಳಿಕೆ ಸೋನಿಯಾ ಗಾಂಧಿ ಅವರದು.
Also Read: ಕಾಂಗ್ರೆಸ್ಸಿನ ದಿಕ್ಕೆಟ್ಟ ಸ್ಥಿತಿ ಬಯಲು ಮಾಡಿದ ಭೂಮಿ ಪೂಜೆ!
ಆದ್ದರಿಂದಲೇ 2017 ಕಾಂಗ್ರೆಸ್ ಅಧ್ಯಕ್ಷಗಾದಿಗೆ ಯಾರನ್ನು ತರಬೇಕೆಂದಾಗ ರಾಹುಲ್ ಗಾಂಧಿ ಸಹಜ ಆಯ್ಕೆಯಾಗಿದ್ದರು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಆದ ಸೋಲಿನ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗಲೇ ಅವರ ಪಕ್ಷದ ಬಹುತೇಕ ನಾಯಕರು ರಾಜೀನಾಮೆ ಹಿಂಪಡೆಯುವಂತೆ ರಾಹುಲ್ ಗಾಂಧಿ ಅವರ ಮೇಲೆ ಒತ್ತಡ ಹೇರಿದರು. ರಾಹುಲ್ ಗಾಂಧಿ ಒತ್ತಡಕ್ಕೆ ಮಣಿಯದ ಹಿನ್ನಲೆಯಲ್ಲಿ ಮತ್ತೆ ಸೋನಿಯಾ ಗಾಂಧಿ ಅವರಿಗೆ ಮಣೆ ಹಾಕಲಾಗಿತ್ತು. ಈಗ ಸೋನಿಯಾ ಗಾಂಧಿ ಅವಧಿ ಮುಗಿದಿರುವುದರಿಂದ ಮುಂದೆಯಾರು? ಎಂಬ ಪ್ರಶ್ನೆ ಕಾಡುತ್ತಿದೆ.
ರಾಹುಲ್ ಗಾಂಧಿ ಅನಿವಾರ್ಯ ಆಯ್ಕೆ
ಒಂದು ಕಾಲದಲ್ಲಿ ಸೋನಿಯಾ ಗಾಂಧಿ ಅವರನ್ನು ಕಾಡಿ ಬೇಡಿ ಒಪ್ಪಿಸಿದಂತೆ ಈಗ ರಾಹುಲ್ ಗಾಂಧಿ ಅವರನ್ನು ಒಪ್ಪಿಸಲಾಗುತ್ತದೆ. ಕರೊನಾ ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಆ ಕೆಲಸ ಆಗಿರುತ್ತಿತ್ತು. ಬಹುತೇಕ ಬಿಹಾರ ಚುನಾವಣೆ ಬಳಿಕ ರಾಹುಲ್ ಗಾಂಧಿ ಅವರನ್ನು ಮತ್ತೆ ಪಕ್ಷದ ಅಧ್ಯಕ್ಷಗಾದಿ ಮೇಲೆ ಕೂರಿಸುವುದು ನಿಶ್ಚಿತವಾಗಿದೆ. ಈಗಾಗಲೇ ಅದಕ್ಕೆ ಬೇಕಾದ ತಯಾರಿಗಳು ನಡೆದಿವೆ.
ಮಲ್ಲಿಕಾರ್ಜುನ ಖರ್ಗೆ ಏಕೆ?
ಈ ನಡುವೆ ಅನುಭವಿ, ದಲಿತ ಸಮುದಾಯದವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸರಿಯಾಗಿ ತರಾಟೆಗೆ ತೆಗೆದುಕೊಳ್ಳಬಲ್ಲ ಮಲ್ಲಿಕಾರ್ಜುನ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಮಾತುಗಳು ಕೇಳಲ್ಪಡುತ್ತಿದ್ದಾವೆ. ಒಂದೊಮ್ಮೆ ರಾಹುಲ್ ಗಾಂಧಿಯವರು ಮಣಿಯದಿದ್ದರೆ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಲೂ ಬಹುದು. ಆ ಸಾಧ್ಯತೆ ಬಹಳ ಕಮ್ಮಿ.
