74ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಬೆಂಗಳೂರಿನಲ್ಲಿ ವಿನಾಯಕ ದಾಮೋದರ ಸಾವರ್ಕರ್ ಅವರ ಕಂಚಿನ ಪ್ರತಿಮೆಯನ್ನು ಯಡಿಯೂರು ಕೆರೆ ಬಳಿ ಅನಾವರಣ ಮಾಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಗೌತಮ್ ಕುಮಾರ್ ಜೈನ್ ಉದ್ಘಾಟನೆ ಮಾಡಿದ್ದಾರೆ. ಬಿಬಿಎಂಪಿ 198 ವಾರ್ಡ್ಗಳಲ್ಲಿ ಇದೇ ಮೊದಲ ಬಾರಿಗೆ ವೀರ ಸಾವರ್ಕರ್ ಪ್ರತಿಮೆ ಅನಾವರಣ ಮಾಡಲಾಗಿದೆ. ದೇಶದ ಇತಿಹಾಸದಲ್ಲಿ 14 ವರ್ಷ ಶಿಕ್ಷೆ ಪಡೆದ ಏಕೈಕ ವ್ಯಕ್ತಿ ಸಾವರ್ಕರ್ ಎಂದಿದ್ದಾರೆ. ಕಠಿಣ ಶಿಕ್ಷೆಯ ನಡುವೆಯೂ ದೇಶಕ್ಕಾಗಿ ಹೋರಾಡಿದ್ದು ವೀರ ಸಾವರ್ಕರ್ ಹೆಗ್ಗಳಿಕೆ. ಇವರ ಪುತ್ಥಳಿ ಅನಾವರಣ ಮಾಡಿದ್ದು ಖುಷಿಯ ವಿಚಾರ ಎಂದಿದ್ದಾರೆ.
ಸಾವರ್ಕರ್ ಬಗ್ಗೆ ಮಹಾರಾಷ್ಟ್ರ ಚುನಾವಣೆ ಸಮಯದಲ್ಲಿ ಶುರುವಾದ ವಿವಾದ ಇಲ್ಲೀವರೆಗೂ ಮುಕ್ತಾಯವಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಯಲಹಂಕದ ಡೈರಿ ಸರ್ಕಲ್ ಬಳಿ ನಿರ್ಮಿಸಿರುವ ಮೇಲ್ಸೇತುವೆಗೆ ವಿನಾಯಕ ದಾಮೋದರ ಸಾವರ್ಕರ್ ಎಂದು ನಾಮಕರಣ ಮಾಡಬೇಕು ಎಂದು ಭಾರೀ ಹೈಡ್ರಾಮವೇ ನಡೆದಿತ್ತು. ಇದೀಗ ಯಾರಿಗೂ ಗೊತ್ತಿಲ್ಲದ ಹಾಗೆ ಯಡಿಯೂರು ವಾರ್ಡ್ನಲ್ಲಿ ಕಂಚಿನ ಪ್ರತಿಮೆ ಅನಾವರಣ ಮಾಡಲಾಗಿದೆ. ಹಿಂದೂ ಸಂಘಟನೆಗಳ ಹೆಸರಿನಲ್ಲಿ ಮರಾ ಜನಾಂಗದ ನಾಯಕರು ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದೀಗ ಬೆಂಗಳೂರಿನ ಯಡಿಯೂರು ವಾರ್ಡ್ನಲ್ಲಿ ಸಾಬೀತಾಗಿದೆ ಎನಿಸುತ್ತದೆ.

ವಿವಾದ ಕಿಚ್ಚು ಆರದಂತೆ ಮಾಡುವ ತಂತ್ರವೇ..?
ಬಿಜೆಪಿ ನಾಯಕರು ಸದಾ ಕಾಲ ವಿನಾಯಕ ದಾಮೋದರ್ ಸಾವರ್ಕರ್ ವಿವಾದ ಆರದಂತೆ ಇಡುವ ಪ್ರಯತ್ನ ಮಾಡುತ್ತಿದ್ದಾರೆ ಎನಿಸುತ್ತದೆ. ಇದೀಗ ಯಡಿಯೂರಿನಲ್ಲಿ ಪುತ್ಥಳಿ ನಿರ್ಮಾಣವಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ಯಲಹಂಕ ಮೇಲ್ಸೇತುವೆಗೆ ನಾಮಕರಣ ಮಾಡುವುದು ಬಿಬಿಎಂಪಿ ಉದ್ದೇಶವಾಗಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಮರಾಠಿ ಮತದಾರರ ಓಲೈಕೆ ಮಾಡುವುದು ಅಷ್ಟೆ. ಮರಾಠಿ ಭಾಷೆಯನ್ನಾಡುವ ಬಹುತೇಕ ಜನರು ಕಟ್ಟರ್ ಹಿಂದುತ್ವವಾದಿಗಳಾಗಿದ್ದು, ಅವರ ಮತಗಳನ್ನು ಸೆಳೆಯುವ ಉದ್ದೇಶದಿಂದ ವೀರ ಸಾವರ್ಕರ್ ಪ್ರತಿಮೆ ಹಾಗೂ ಮೇಲ್ಸೇತುವೆಗೆ ನಾಮಕರಣದ ನಾಟಕ ನಡೆಯುತ್ತಿದೆ ಎನ್ನಲಾಗ್ತಿದೆ.
ಕನ್ನಡಿಗನ್ನಲ್ಲದ ಮೇಯರ್, ಮಹಾರಾಷ್ಟ್ರ ಪ್ರೇಮ..!
ಮೇಯರ್ ಕನ್ನಡಿಗನಾಗಿದ್ದರೆ ಕನ್ನಡಾಭಿಮಾನ ಇರುತ್ತಿತ್ತು. ಆದರೆ ಮೇಯರ್ ಗೌತಮ್ ಕುಮಾರ್ ಜೈನ್ ಅವರು ಮೂಲತಃ ಕರ್ನಾಟಕದ ವ್ಯಕ್ತಿಯಲ್ಲ. ಅವರು ಮಾರ್ವಾಡಿ ಸಮುದಾಯಕ್ಕೆ ಸೇರಿದವರಾಗಿದ್ದು, ಅವರ ತಂದೆ ವ್ಯಾಪಾರಕ್ಕಾಗಿ ಕರ್ನಾಟಕಕ್ಕೆ ವಲಸೆ ಬಂದವರಾಗಿದ್ದಾರೆ. ಅಂದರೆ, ಮೇಯರ್ ಅವರಿಗೆ ಕನ್ನಡದ ಮೇಲಿನ ಅಭಿಮಾನ ಇರಲು ಸಾಧ್ಯವೇ ಇಲ್ಲ. ಅಧಿಕಾರ ವಹಿಸಿಕೊಂಡ ದಿನದಂದು ಕನ್ನಡದ ಬಗ್ಗೆ ಮಾತನಾಡಿದ್ದ ಮೇಯರ್ ಸಾಹೇಬರು, ಆ ಬಳಿಕ ಮಾಧ್ಯಮಗಳ ಕೈಗೂ ಸಿಗುವುದಿಲ್ಲ, ಏನು ಮಾಡುತ್ತಿದ್ದಾರೆ ಎನ್ನುವುದು ಜನರ ಕಣ್ಣಿಗೂ ಕಾಣುತ್ತಿಲ್ಲ.
ಅಭಿವೃದ್ಧಿ ಕಾರ್ಯ ಬೇಡ, ಹಣವಿಲ್ಲ ಎಂದಿದ್ದ ಸರ್ಕಾರ..!?
ರಾಜ್ಯ ಸರ್ಕಾರ ಕೋವಿಡ್ 19 ಸಂಕಷ್ಟದಲ್ಲಿದ್ದೇವೆ, ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುವುದು ಬೇಡ ಎನ್ನುವ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಪ್ರತಿಮೆಗಳ ಹಿಂದೆ ಬಿದ್ದಿರುವ ರಾಜಕಾರಣಿಗಳು ಪ್ರತಿಮೆ ಸ್ಥಾಪಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಪ್ರತಿಮೆ ಸ್ಥಾಪಿಸುವ ಹಿಂದೆ ಇರುವುದು ಕೇವಲ ಎರಡು ಉದ್ದೇಶಗಳು ಮಾತ್ರ. ಒಂದು ಪ್ರತಿಮೆ ಸ್ಥಾಪನೆ ಟೆಂಡರ್ನಲ್ಲಿ ಹಣ ಸಂಪಾದನೆ ಆಗುತ್ತದೆ ಹಾಗೂ ಇನ್ನೊಂದು ಯಾವುದಾದರೂ ಒಂದು ಪ್ರತಿಮೆ ಅನಾವರಣ ಆಗಿದೆ ಎಂದರೆ ಆ ಏರಿಯಾದಲ್ಲಿ ಇರುವ ಬಹುಸಂಖ್ಯಾತ ಮತದಾರರನ್ನು ಓಲೈಕೆ ಮಾಡುವ ಉದ್ದೇಶ ಅಡಗಿರುತ್ತದೆ ಎನ್ನುವುದು.

ವೀರ ಸಾವರ್ಕರ್ಗೆ ಸರಿಸಾಟಿಯಾದ ಕನ್ನಡಿಗ ಇರಲಿಲ್ಲವೇ..?
ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸ್ವಾತಂತ್ರ ಹೋರಾಟಗಾರರು ಸಿಗುತ್ತಾರೆ. ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹಚ್ಚಿದ್ದೇ ಕರ್ನಾಟಕ ಎಂದರೆ ತಪ್ಪಾಗಲಾರದು. ಮಂಡ್ಯ ಜಿಲ್ಲೆ ಮದ್ದೂರಿನ ಶಿವಪುರ ಅಧಿವೇಶನ ಬಳಿಕ ಚಿಕ್ಕಬಳ್ಳಾಪುರದ ವಿದುರಾಶ್ವತ್ಥದಲ್ಲಿ ಧ್ವಜ ಸತ್ಯಾಗ್ರಹಕ್ಕೆ ಕರೆ ಕೊಡಲಾಯ್ತು. ಆಗ ಬ್ರಿಟಿಷರ ಗೋಲಿಬಾರ್ನಿಂದ ಪ್ರಾಣತ್ಯಾಗ ಮಾಡಿದ ಹತ್ತಾರು ಸ್ವಾತಂತ್ರ್ಯ ಸೇನಾನಿಗಳ ಸಮಾಧಿ ವಿದುರಾಶ್ವತ್ಥದಲ್ಲಿ ಇದೆ. ಇನ್ನೂ ಭಾರತದ ಸ್ವಾತಂತ್ರ್ಯಕ್ಕೂ ಮೊದಲೇ ಶಿವಮೊಗ್ಗದ ಈಸೂರು ಸ್ವತಂತ್ರ ಗ್ರಾಮವೆಂದು ಘೋಷಣೆ ಮಾಡಿಕೊಂಡಿತ್ತು. ಮಹಾತ್ಮ ಗಾಂಧಿ ಅವರ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಆಂದೋಲನಕ್ಕೆ ಸಾಕ್ಷಿಯಾಗಿ, ಸೆಪ್ಟೆಂಬರ್ 25, 1942ರಂದು ಗ್ರಾಮದಲ್ಲಿ ಪಥಸಂಚಲನ ನಡೆಸಿ, ನಮ್ಮದು ಸ್ವತಂತ್ರ ಗ್ರಾಮವೆಂದು ಘೋಷಣೆ ಮಾಡಿಕೊಂಡರು.
ಈ ವಿಚಾರ ತಿಳಿದ ಬ್ರಿಟೀಷ್ ಸರ್ಕಾರ 51 ಜನರ ಮೇಲೆ ದೂರು ದಾಖಲು ಮಾಡಿತ್ತು. ಆ ಬಳಿಕ ಮೈಸೂರು ಕೋರ್ಟ್ನಲ್ಲಿ ವಿಚಾರಣೆ ನಡೆಸಿ, ಐವರು ಸ್ವಾತಂತ್ರ್ಯ ಹೋರಾಟಗಾರರಿಗೆ ಮರಣ ದಂಡನೆ, ಇಬ್ಬರು ಮಹಿಳೆಯರಿಗೆ ಜೀವಮಾನ ಗಡಿಪಾರು ಶಿಕ್ಷೆ, ಉಳಿದವರಿಗೆ ಹಲವು ವರ್ಷಗಳ ಕಾಲ ಜೈಲು ಶಿಕ್ಷೆ ಕೊಡಲಾಗಿತ್ತು. ಇನ್ನೂ ಸ್ವಾತಂತ್ರ್ಯ ಹೋರಾಟಕ್ಕೂ ಮೊದಲೇ ಬ್ರಿಟೀಷರನ್ನು ಹೆದರಿಸಿದ ಕಿತ್ತೂರು ರಾಣಿ ಚೆನ್ನಮ್ಮ, ಆಕೆಯ ಸೇನಾಧಿಪತಿ ಸಂಗೊಳ್ಳಿ ರಾಯಣ್ಣ, ಕರಾವಳಿಯ ರಾಣಿ ಅಬ್ಬಕ್ಕ, ಮೈಸೂರು ಹುಲಿ ಟಿಪ್ಪು ಸುಲ್ತಾನ್, ಇವರಲ್ಲಿ ಯಾರದ್ದೇ ಪ್ರತಿಮೆ ಮಾಡಿದ್ದರೂ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಕೆಲವು ಧರ್ಮಾಂಧರು ಟಿಪ್ಪು ಬಗ್ಗೆ ಅಪಸ್ವರ ಎತ್ತಿದ್ದರೂ ಉಳಿದವರ ಬಗ್ಗೆ ಚಕಾರ ಎತ್ತುತ್ತಿರಲಿಲ್ಲ. ಆದರೆ ಮರಾಠಿಗರ ಓಲೈಕೆ ಮಾಡುವ ಉದ್ದೇಶದಿಂದ ವೀರ ಸಾವರ್ಕ ಹಿಡಿದು ಜಗ್ಗಾಡುತ್ತಿರುವುದು ನಾಚಿಕೆಗೇಡಿನ ವಿಚಾರ.

ಸಾಮಾಜಿಕ ಜಾಲ ತಾಣದಲ್ಲೂ ಹಿಗ್ಗಾಮುಗ್ಗಾ ಚಾಟಿ..!
ಸಾರ್ವಜನಿಕರ ತೆರಿಗೆ ಹಣದಿಂದ ಹೀಗೆಲ್ಲಾ ಪ್ರತಿಮೆ ನಿರ್ಮಾಣ ಸರಿಯಲ್ಲ ಎಂದು ಬಿಬಿಎಂಪಿಗೆ ಜನರೇ ಚಾಟಿ ಬೀಸಿದ್ದಾರೆ. ಸಮಾಜ ಸ್ವಾಸ್ಥ್ಯ ಹಾಳು ಮಾಡಲು ಈ ಪ್ರತಿಮೆ ಸ್ಥಾಪಿಸಿದ್ದೀರಾ..? ಎಂದು ಟೀಕಿಸಿದ್ದಾರೆ. ಏಕೆ ಸರ್..? ಕನ್ನಡದಲ್ಲಿ ಯಾರು ಮಹಾನುಭಾವರು ಇಲ್ಲವೆ..? ಪಕ್ಕದ ರಾಜ್ಯದವರ ಪ್ರತಿಮೆಗೆ ನಮ್ಮ ಹಣ ಯಾಕೆ..? ಏನಾಗಿದೆ ಸರ್ ನಮ್ಮ ಸರ್ಕಾರಕ್ಕೆ..? ದೇವರು, ಆ ಶ್ರೀರಾಮಚಂದ್ರನೂ ಒಪ್ಪೋದಿಲ್ಲ ಎಂದು ಬ್ರಮೇಶ್ ಎಂಬುವರು ಟ್ವೀಟ್ದಾಳಿ ಮಾಡಿದ್ದಾರೆ. ನಮ್ಮ ವಿಶಾಲ ಕರ್ನಾಟಕದಲ್ಲಿ ಪುತ್ಥಳಿ ನಿಲ್ಲಿಸಿ ಗೌರವಿಸಬೇಕಾದ ಮಹನೀಯರಿಲ್ಲವೆ..? ಅಥವಾ ನೋಡುವ ಕಣ್ಣುಗಳಿಲ್ಲವೇ..? ಶ್ರದ್ಧೆಯಿಲ್ಲ ಅಷ್ಟೇ..! ಅದೂ ಬಿಬಿಎಂಪಿಯಿಂದ ರಾಜ್ಯದ ಹೊರಗಿನವರ ಪುತ್ಥಳಿ ನಿಲ್ಲಿಸಬೇಕಾಗಿರಲಿಲ್ಲ. ಅದೇ ರೀತಿಯ ಸಮಾನಾಂತರದ ವ್ಯಕ್ತಿಗಳಿಗೆ ಕರ್ನಾಟಕದಲ್ಲಿ ಕೊರತೆಯಿಲ್ಲ ಎಂದು ಮಂಜುನಾಥ್ ಎಂಬುವವರು ವ್ಯಂಗ್ಯ ಮಾಡಿದ್ದಾರೆ. ಇದಕ್ಕೆಲ್ಲಾ ಸ್ವತಃ ಕನ್ನಡಿಗರಲ್ಲದ ಮೇಯರ್ ಸಾಹೇಬರು ಉತ್ತರ ಕೊಡಬೇಕಿದೆ. ಅದಕ್ಕೂ ಮೊದಲು ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಿದೆ.