ಕರೋನಾ ಕಾಲದ ಸಂಕಷ್ಟವೆಂದರೆ; ಒಂದು ಕಡೆ ಜೀವ ರಕ್ಷಣೆ, ಮತ್ತೊಂದು ಕಡೆ ದುಡಿಮೆಯ ರಕ್ಷಣೆ. ಹೀಗಾಗಿ ಇದೊಂದು ರೀತಿಯ ಎರಡಲಗಿನ ಕತ್ತಿಯ ಜೊತೆಗಿನ ಹೋರಾಟ. ಇಂತಹ ಹೊತ್ತಲ್ಲಿ ಸೋಂಕಿನಿಂದ ಜನರನ್ನು ರಕ್ಷಿಸಲು ಏನೆಲ್ಲಾ ಮಾಡಬೇಕೋ ಅಷ್ಟೇ ಹಸಿವು, ಹಣಕಾಸು ನಷ್ಟದಿಂದ ಜನ ಜೀವಬಿಡದಂತೆ ಕಾಳಜಿ ವಹಿಸಲೂ ಶ್ರಮಿಸಬೇಕು. ಆ ಕಾರಣಕ್ಕೇ ಇದು ಜಗತ್ತು ಈವರೆಗೆ ಕಾಣದೇ ಇರುವ ಒಂದು ವಿಚಿತ್ರ ಸವಾಲು ಮತ್ತು ಸಂದಿಗ್ಧ ಪರಿಸ್ಥಿತಿಯನ್ನು ಮನುಕುಲದ ಮುಂದಿಟ್ಟಿದೆ.
ಲಾಕ್ ಡೌನ್ ಹೊತ್ತಿನ ಹಸಿವಿನ ಕಥೆಗಳು, ಕೃಷಿ, ಉದ್ಯಮದ ನಷ್ಟದ ಗೋಳುಗಳು ಒಂದು ಕಡೆಯಾದರೆ; ಸೋಂಕಿನಿಂದ ಪಾರಾಗಲು ಮತ್ತು ಸೋಂಕು ತಡೆಯಲು ಸರ್ಕಾರ ಮತ್ತು ಜನ ನಡೆಸುತ್ತಿರುವ ಹೋರಾಟ, ತ್ಯಾಗಗಳ ಕಥೆ ಮತ್ತೊಂದು ಕಡೆ.
ಸೋಂಕು ತಡೆ ಮತ್ತು ರೋಗ ನಿವಾರಣೆಯ ನಿಟ್ಟಿನಲ್ಲಿ ದೇಶದ ಹಲವು ರಾಜ್ಯಗಳ ಪೈಕಿ ಕರ್ನಾಟಕ, ನೆರೆಯ ಕೇರಳವನ್ನು ಹೊರತುಪಡಿಸಿ ಉತ್ತಮ ಪ್ರಯತ್ನ ಮಾಡಿದೆ ಎಂಬ ಮೆಚ್ಚುಗೆಯ ಮಾತುಗಳ ನಡುವೆ, ಕಳೆದ ಮೂರ್ನಾಲ್ಕು ದಿನಗಳಿಂದ ದಿಢೀರ್ ಏರುತ್ತಿರುವ ಸೋಂಕಿತರ ಸಂಖ್ಯೆ ಆತಂಕ ಹುಟ್ಟಿಸಿದೆ. ಸೋಂಕಿತರ ಪ್ರಮಾಣ ಏರಿಕೆಗೆ, ಸರ್ಕಾರ ವ್ಯಾಪಕ ಪ್ರಮಾಣದಲ್ಲಿ ಪರೀಕ್ಷೆಗಳನ್ನು ನಡೆಸಿ ಸೋಂಕಿತರನ್ನು ಗುರುತಿಸಿ, ಅವರ ಸಂಪರ್ಕಿತರನ್ನು ಪತ್ತೆ ಮಾಡಿ ಪ್ರತ್ಯೇಕಿಸುವ ಕೆಲಸವನ್ನು ಮಾಡದೇ ಇರುವುದು ಸದೇ ಇರುವುದು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಜೊತೆಗೆ, ಕಟ್ಟುನಿಟ್ಟಿನ ಲಾಕ್ ಡೌನ್ ನಿಯಮ ಪಾಲನೆ ಮಾಡದೆ ಜನತೆ ಮನಸೋಇಚ್ಛೆ ಸುತ್ತಾಡುತ್ತಿರುವುದು, ಮಾಸ್ಕ್ ಮತ್ತು ಕೈ ತೊಳೆಯುವ ನಿಯಮಗಳನ್ನು ಪಾಲಿಸದೇ ನಿರ್ಲಕ್ಷಿಸುತ್ತಿರುವುದು ಕೂಡ ಮಹಾಮಾರಿಯ ವೈರಾಣು ಮಿತಿ ಮೀರುತ್ತಿರುವುದಕ್ಕೆ ಕಾರಣ.
ಆ ಹಿನ್ನೆಲೆಯಲ್ಲಿ ಮನೆಯಿಂದ ಹೊರಬರುವಾಗ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಸರ್ಕಾರದ ನಿಯಮ ಪಾಲನೆಗೆ ಹಲವು ಮಂದಿಗೆ ಸಾಕಷ್ಟು ಪ್ರಮಾಣದಲ್ಲಿ ಮಾಸ್ಕ್ ದೊರೆಯದಿರುವುದು ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಿದೆ. ಅಂಗಡಿ ಮುಂಗಟ್ಟುಗಳಲ್ಲಿ ಮಾಸ್ಕ್ ಲಭ್ಯತೆ ಇಲ್ಲದೆ ಜನ ಕರವಸ್ತ್ರ, ಮನೆಯಲ್ಲಿ ತಯಾರಿಸಿಕೊಂಡು ಬಟ್ಟೆ ಮಾಸ್ಕುಗಳಿಗೆ ಮೊರೆ ಹೋಗತೊಡಗಿದ್ದಾರೆ. ಲಾಕ್ ಡೌನ್ ನಿಂದಾಗಿ ಅಗತ್ಯ ಪ್ರಮಾಣದ ಮಾಸ್ಕ ಉತ್ಪಾದನೆ ಮತ್ತು ಸರಬರಾಜು ವ್ಯವಸ್ಥೆ ಕೂಡ ಅಸ್ತವ್ಯಸ್ತಗೊಂಡಿದೆ. ಆದರೆ, ಸೋಂಕು ತಡೆಯುವ ನಿಟ್ಟಿನಲ್ಲಿ ಬಹಳ ನಿರ್ಣಾಯಕವಾದ ಮಾಸ್ಕ್ ಧರಿಸುವುದು ಸರ್ಕಾರದ ಕಡ್ಡಾಯ ನಿಯಮ ಪಾಲನೆಯ ಮಟ್ಟಿಗಷ್ಟೇ ಅಲ್ಲದೆ, ಜೀವ ರಕ್ಷಣೆಯ ನಿಟ್ಟಿನಲ್ಲೂ ಅನಿವಾರ್ಯ.
ಹಾಗಾಗಿ ಜೀವರಕ್ಷಕ ಮಾಸ್ಕುಗಳ ತಯಾರಿಕೆ ಮತ್ತು ಸರಬರಾಜು ಈ ಹೊತ್ತಿನ ಬಹಳ ಸವಾಲಿನ ಕೆಲಸ. ಮತ್ತು ಸರ್ಕಾರದ ಜೊತೆ ಕೈಜೋಡಿಸಿ ಜನರ ಜೀವ ಕಾಪಾಡುವ ಕಾರ್ಯ. ಅದರಲ್ಲೂ ಯಾರಾದರೂ ಉಚಿತವಾಗಿ ಮಾಸ್ಕುಗಳನ್ನು ತಯಾರಿಸಿ, ಇಂತಹ ಅಪಾಯಕಾರಿ ಹೊತ್ತಿನಲ್ಲಿ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು, ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿ ಮುಂತಾದ ಕರೋನಾ ವಿರುದ್ಧದ ಹೋರಾಟದ ಮುಂಚೂಣಿ ಸೇನಾನಿಗಳಿಗೆ ನೀಡುವುದು ನಿಜಕ್ಕೂ ದೊಡ್ಡ ಸಮಾಜಮುಖಿ ಕಾರ್ಯ.
ಸಂಕಷ್ಟದ ಹೊತ್ತಲ್ಲಿ ಅಂತಹ ಸಮಾಜಮುಖಿ ಕೆಲಸವನ್ನು ಒಂದು ಹಳ್ಳಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಮತ್ತು ಅವರೊಂದಿಗೆ ಕೈಜೋಡಿಸಿರುವ ಒಂದಿಷ್ಟು ಮಂದಿ ದಾನಿಗಳು ಮತ್ತು ಟೈಲರುಗಳು ಮಾಡುತ್ತಿದ್ದಾರೆ ಎಂದರೆ, ಅಚ್ಚರಿಯ ಸಂಗತಿಯೇ. ಆದರೆ, ನೀವು ನಂಬಲೇಬೇಕು. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಕೆಂದಾಳಬೈಲು ಸರ್ಕಾರಿ ಶಾಲೆಯ ಶಾಲಾಭಿವೃದ್ಧಿ ಸಮಿತಿ, ಇಂತಹ ಕಷ್ಟಕಾಲದಲ್ಲಿ ತಾನೂ ಸಮಾಜಮುಖಿಯಾಗಿ ಏನಾದರೂ ಮಾಡಲೇಬೇಕು ಎಂದು ತೀರ್ಮಾನಿಸಿ, ಸುಮಾರು ಹತ್ತು ಸಾವಿರದಷ್ಟು ದೊಡ್ಡ ಪ್ರಮಾಣದಲ್ಲಿ ಮಾಸ್ಕುಗಳನ್ನು ತಯಾರಿಸಿ ಉಚಿತವಾಗಿ ಹಂಚಲು ಮುಂದಾಗಿದೆ!
ಸ್ವತಃ ಶಾಲೆ ಮುರಿದ ಮಾಡು, ಕಿತ್ತು ಹೋದ ನೆಲ, ಹಾಳಾದ ಪೀಠೋಪಕರಣಗಳನ್ನು ಸರಿಪಡಿಸಲು ಅನುದಾನವಿಲ್ಲದೆ, ಕಳೆದ ದೀಪಾವಳಿಯಲ್ಲಿ ಮಲೆನಾಡಿನ ವಿಶಿಷ್ಟ ಅಂಟಿಗೆ ಪಿಂಟಿಗೆ ಜನಪದ ಹಾಡಿನ ಮೂಲಕ ತೀರ್ಥಹಳ್ಳಿ ನಗರದಲ್ಲಿ ಮನೆಮನೆಗೆ ಹೋಗಿ ದೇಣಿಗೆ ಎತ್ತಿ ಶಾಲೆಯನ್ನು ನವೀಕರಿಸಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಿತ್ಯಾನಂದ ಕೆಂದಾಳಬೈಲು ಮತ್ತು ಅವರ ಸಮಾನಮನಸ್ಕ ಗೆಳೆಯರ ತಂಡ, ತಮ್ಮದೇ ಸಂಕಷ್ಟದ ನಡುವೆಯೂ ಈಗ ಜನರ ನೋವಿಗೆ ಮಿಡಿಯುವ ಮನಸ್ಸಿನಿಂದ ಈ ಕಾರ್ಯಕ್ಕೆ ಕೈಹಾಕಿದ್ದಾರೆ.
ಆದರೆ, ಗೆಳೆಯರ ಬಳಗ ಇಂತಹ ತೀರ್ಮಾನ ಕೈಗೊಳ್ಳುವ ಹೊತ್ತಿಗಾಗಲೇ ಲಾಕ್ ಡೌನ್ ಜಾರಿಯಾಗಿತ್ತು. ಹಾಗಾಗಿ ಮಾಸ್ಕ್ ತಯಾರಿಕೆಗೆ ಬೇಕಾದ ಬಟ್ಟೆ, ನೂಲು ಮುತ್ತಿತರ ಸರಕು ಹೊಂದಿಸುವುದು ಸಾಧ್ಯವಾಗಲೇ ಇಲ್ಲ. ಆಗ ಅವರಿಗೆ ಬಾಳೆಬೈಲಿನ ರಾಘವೇಂದ್ರ ನಾಯಕ್, ಒಂದು ಉಪಾಯ ನೀಡಿದರು. ಅದೆಂದರೆ; ಪುರೋಹಿತ್ಯ ಮಾಡುವವರ ಮನೆಗಳಲ್ಲಿ ಹೋಮ-ಹವನದ ವೇಳೆ ದಾನವಾಗಿ ಸಿಕ್ಕ ಬಟ್ಟೆಗಳ ರಾಶಿಯೇ ಬಿದ್ದಿರುತ್ತದೆ. ಬಹುತೇಕ ಅದು ಬಳಕೆಯಾಗದೇ ಹಾಗೆ ಉಳಿದಿರುತ್ತದೆ. ಅಂತಹವರನ್ನು ಸಂಪರ್ಕಿಸಿದರೆ ಅವರು ನೆರವಾಗಬಹುದು ಎಂಬುದು ಆ ಉಪಾಯ. ಕೂಡಲೇ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾದ ತಂಡಕ್ಕೆ, ಸಕಾರಾತ್ಮಕ ಪ್ರತಿಕ್ರಿಯೆಯೇ ಸಿಕ್ಕಿತು. ಕೇವಲ ತೀರ್ಥಹಳ್ಳಿ ಭಾಗದಲ್ಲಿ ಮಾತ್ರವಲ್ಲದೆ, ಸಮೀಪದ ಕಮ್ಮರಡಿ, ಶೃಂಗೇರಿ, ಕೊಪ್ಪ ಭಾಗದಲ್ಲಿಯೂ ತಂಡ ಪುರೂಹಿತರ ಮನೆಗಳನ್ನು ಗುರುತಿಸಿ, ಉದಾರವಾಗಿ ದಾನ ನೀಡಿದ ಬಟ್ಟೆಯನ್ನು ಸಂಗ್ರಹಿಸಿತು.
ಬಟ್ಟೆಯ ಸಮಸ್ಯೆ ಬಗೆಹರಿಯತ್ತಲೇ ಲಾಕ್ ಡೌನ್ ನಡುವೆ ಹೊಲಿಗೆ ಮಾಡುವವರಾರು ಎಂಬ ಪ್ರಶ್ನೆ ಎದ್ದಿತು. ಆಗ ಮನೆಯಲ್ಲಿ ಹೊಲಿಗೆ ಯಂತ್ರ ಹೊಂದಿರುವ ಗೃಹಿಣಿಯರು ಮತ್ತು ಕೆಲವು ಹಳ್ಳಿಯ ಪುರುಷ ಟೈಲರುಗಳನ್ನು ಸಂಪರ್ಕಿಸಿ, ನಿಮ್ಮ ಬಿಡುವಿನ ವೇಳೆಯಲ್ಲಿ ದಿನಕ್ಕೆ ಹತ್ತಾರಾದರೂ ಮಾಸ್ಕ್ ಹೊಲಿದು ಕೊಡುವಿರಾ ಎಂದು ಕೇಳಿದಾಗ, ಜನಹಿತದ ಕೆಲಸಕ್ಕೆ ಅವರೂ ಸೈ ಎಂದರು. ಆರಂಭದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಅವರು ಮಾಸ್ಕ್ ಹೊಲಿದು ಕೊಡಲು ಒಪ್ಪಿದ್ದು ಸಮಿತಿಯ ಗೆಳೆಯರಿಗೆ ಇನ್ನಷ್ಟು ವಿಶ್ವಾಸ ಮೂಡಿಸಿತು. ಕೂಡಲೇ ಮಾಸ್ಕ್ ತಯಾರಿ ಆರಂಭವಾಗಿಯೇ ಬಿಟ್ಟಿತು!
“ಸದ್ಯ ದಿನವೊಂದಕ್ಕೆ 800-1000 ಮಾಸ್ಕುಗಳನ್ನು ತಯಾರಿಸಲಾಗುತ್ತಿದ್ದು, ಇನ್ನೊಂದು ವಾರದ ಹೊತ್ತಿಗೆ ಕನಿಷ್ಠ ಹತ್ತು ಸಾವಿರ ಮಾಸ್ಕ ಸಿದ್ಧಪಡಿಸುವ ಗುರಿ ಹೊಂದಿದ್ದೇವೆ. ನಮ್ಮ ಶಾಲೆ ಸಂಕಷ್ಟದಲ್ಲಿದ್ದಾಗ ಸಮಾಜ ನಮಗೆ ನೆರವಾಗಿದೆ. ಈಗ ಸಮಾಜ ಸಂಕಷ್ಟದಲ್ಲಿದೆ. ಇಂತಹ ಹೊತ್ತಲ್ಲಿ ನಾವು ಸಮಿತಿಯವರಾಗಿ ಸಮಾಜಕ್ಕೆ ಏನಾದರೂ ನೆರವಾಗಬೇಕು ಎಂಬ ಯೋಚನೆಯಿಂದ ಈ ಕೆಲಸ ಕೈಗೆತ್ತಿಕೊಂಡಿದ್ದೇವೆ. ಈ ಕೆಲಸಕ್ಕೆ ನಮ್ಮೊಂದಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರತಿನಿಧಿಗಳು ಹಾಗೂ ಬೆಂಗಳೂರಿನ ಕೇರ್ ವರ್ಕ್ಸ್ ನಂತಹ ಸಂಸ್ಥೆಗಳೂ ಕೈಜೋಡಿಸಿವೆ. ಎಲ್ಲರ ಒಮ್ಮನಸ್ಸಿನಿಂದ ಒಂದು ಅಳಿಲುಸೇವೆ ನಡೆಯುತ್ತಿದೆ” ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಿತ್ಯಾನಂದ ಕೆಂದಾಳಬೈಲ್ ವಿವರಿಸುತ್ತಾರೆ.
![](https://pratidhvani.in/wp-content/uploads/2021/02/IMG_20200418_WA0006-1.jpg)
ವಾಸ್ತವವಾಗಿ ಪ್ರಮುಖವಾಗಿ ಮಹಿಳೆಯರು ಸೇರಿದಂತೆ ಈಗಾಗಲೇ ಸುಮಾರು 30 ಮಂದಿ ಮಾಸ್ಕ್ ತಯಾರಿಸಿ ಕೊಡುತ್ತಿದ್ದಾರೆ. ಅವರ ಬಿಡುವಿನ ವೇಳೆಯಲ್ಲಿ ಈ ಕೆಲಸ ಮಾಡುತ್ತಿದ್ದಾರೆ. ಆದರೆ, ಲಾಕ್ ಡೌನ್ ಕಾಲದಲ್ಲಿ ಟೈಲರಿಂಗ್ ನಂಬಿಕೊಂಡು ಜೀವನ ನಡೆಸುವ ಅವರಿಗೂ ವ್ಯಾಪಾರ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಕೇರ್ ವರ್ಕ್ಸ್ ಮತ್ತು ಧರ್ಮಸ್ಥಳ ಯೋಜನೆಯ ಕಡೆಯಿಂದ ಅವರಿಗೆ ಮಾಸ್ಕ್ ಕೆಲಸಕ್ಕಾಗಿ ಸಣ್ಣ ಪ್ರಮಾಣದ ಗೌರವ ಧನದ ವ್ಯವಸ್ಥೆಯನ್ನೂ ಮಾಡಿದ್ದೇವೆ. ಹಾಗಾಗಿ ಒಂದು ಕಡೆ ಮಾಸ್ಕ ತಯಾರಿಸಿ ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಮುಂತಾದ ಕರೋನಾ ಸೇನಾನಿಗಳಿಗೆ ವಿತರಿಸುತ್ತಿದ್ದೇವೆ ಎಂಬ ಸಮಾಧಾನದೊಂದಿಗೆ, ಟೈಲರುಗಳಿಗೂ ಸಣ್ಣ ಪ್ರಮಾಣದ ಆದಾಯ ಮಾಡಿಕೊಡುತ್ತಿದ್ದೇವೆ ಎಂಬ ತೃಪ್ತಿಯೂ ಇದೆ ಎನ್ನುತ್ತಾರೆ ನಿತ್ಯಾನಂದ.
ಸಮಿತಿ ಈಗಾಗಲೇ ಆಗುಂಬೆ ಹೋಬಳಿ ವ್ಯಾಪ್ತಿಯ ಐದಾರು ಗ್ರಾಮ ಪಂಚಾಯ್ತಿಗಳಲ್ಲಿ ಆಶಾ ಕಾರ್ಯಕರ್ತೆಯರು, ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗೆ ಸುಮಾರು 500ಕ್ಕೂ ಹೆಚ್ಚು ಮಾಸ್ಕುಗಳನ್ನು ವಿತರಿಸಿದೆ. ಜೊತೆಗೆ ಆಗುಂಬೆ ಪಟ್ಟಣ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕ ಸಿಬ್ಬಂದಿಗೂ ವಿತರಿಸಲು ಸಿದ್ಧತೆ ನಡೆದಿದೆ. ಮುಂದಿನ ದಿನಗಳಲ್ಲಿ ಅನುಕೂಲವಾದಲ್ಲಿ ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯ ಕಾರ್ಮಿಕರಿಗೂ ಮಾಸ್ಕ್ ವಿತರಿಸುವ ಯೋಚನೆ ಸಮಿತಿಯದ್ದು.
ಅದೆಲ್ಲಕ್ಕಿಂತ ಮುಖ್ಯವಾಗಿ, ಎಸ್ ಎಸ್ ಎಲ್ ಸಿ ಪರೀಕ್ಷೆಯ ವೇಳೆ ಇಡೀ ತಾಲೂಕಿನ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗೆ ಉಚಿತವಾಗಿ ಮಾಸ್ಕ್ ವಿತರಿಸುವುದು ಸಮಿತಿಯ ಗುರಿ. ಆ ಕಾರಣದಿಂದಲೇ ಸಾಕಷ್ಟು ಪ್ರಮಾಣದಲ್ಲಿ ಮಾಸ್ಕ್ ದಾಸ್ತಾನು ಮಾಡಲಾಗುತ್ತಿದೆ. ಒಂದು ವೇಳೆ ಪರೀಕ್ಷೆ ಸದ್ಯಕ್ಕೆ ನಡೆಯದೆ, ಲಾಕ್ ಡೌನ್ ಬಳಿಕ ನಡೆಯುವಂತಾಗಿ, ಮಾಸ್ಕ್ ಅಗತ್ಯ ಬೀಳಲಾರದು ಎನಿಸಿದರೆ, ಲಾಕ್ ಡೌನ್ ಮುಂದುವರಿಯುವ ಇತರೆ ಜಿಲ್ಲೆ ಅಥವಾ ಪ್ರದೇಶಗಳಿಗೆ ಕಳಿಸಲು ಕೂಡ ಸಮಿತಿ ಯೋಚಿಸಿದೆ.
![](https://pratidhvani.in/wp-content/uploads/2021/02/pratidhvani_student_corner-50.jpeg)
ಆದರೆ, ಸದ್ಯಕ್ಕಂತೂ ಅಗತ್ಯವಾಗಿ ರಸ್ತೆಗಳಿಯಲೇಬೇಕಾದ, ಜನರೊಂದಿಗೆ ಸಂಪರ್ಕದಲ್ಲಿರುವ ಕರೋನಾ ವಿರುದ್ಧದ ಮುಂಚೂಣಿ ಸೇನಾನಿಗಳಿಗೆ ಸಮಿತಿ ಜೀವರಕ್ಷಕ ಮಾಸ್ಕ್ ವಿತರಿಸುವಲ್ಲಿ ಯಶಸ್ವಿಯಾಗಿದೆ. ಸಂಕಷ್ಟದ ಹೊತ್ತಲ್ಲಿ ಜನರ ಪ್ರಾಣ ರಕ್ಷಣೆಯ ನಿಟ್ಟಿನಲ್ಲಿ ಸಂಘಸಂಸ್ಥೆಗಳು ಸ್ಥಳೀಯ ಮಟ್ಟದಲ್ಲಿ, ತಮ್ಮದೇ ಗ್ರಾಮಗಳಲ್ಲಿ ತಮ್ಮ ಜನಗಳ ಮತ್ತು ಜನರಿಗಾಗಿ ಕೆಲಸ ಮಾಡುವ ಸಿಬ್ಬಂದಿಯ ರಕ್ಷಣೆಗಾಗಿ ಹೇಗೆ ಕೆಲಸ ಮಾಡಬಹುದು ಎಂಬುದಕ್ಕೆ ಒಂದು ಉದಾಹರಣೆಯಾಗಿ ನಿಂತಿದೆ. ಸಂಘ-ಸಂಸ್ಥೆಗಳು, ಯುವಕ-ಯುವತಿ ಮಂಡಳಗಳು, ಸ್ವಯಂಸೇವಾ ಸಂಸ್ಥೆಗಳು ಸ್ಥಳೀಯ ಸಂಪನ್ಮೂಲ ಮತ್ತು ಸೀಮಿತ ಅವಕಾಶಗಳನ್ನು ಬಳಸಿಕೊಂಡು ಹೇಗೆ ಭರವಸೆದಾಯಕ ಕೆಲಸ ಮಾಡಬಹುದು, ಬದಲಾವಣೆ ತರಬಹುದು ಎಂಬುದಕ್ಕೆ ಇದೊಂದು ಜ್ವಲಂತ ನಿದರ್ಶನ.