ಅಯೋಧ್ಯೆಗೂ ವಿವಾದಗಳಿಗೂ ಬಿಡಿಸಲಾಗದ ನಂಟು. 1528ರಲ್ಲಿ ಮೊಘಲ್ ಸಾಮ್ರಾಟ ಬಾಬರ್ ಕಮಾಂಡರ್ ಮಿರ್ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಾಣ ಮಾಡಿದಾಗಿನಿಂದ 2019ರ ನವೆಂಬರ್ 19ರಂದು ದೇಶದ ಸರ್ವೋಚ್ಚ ನ್ಯಾಯಾಲಯ ಬಾಬರಿ ಮಸೀದಿಯ ವಿವಾದಿತ ಜಾಗದ ಅಕ್ಕಪಕ್ಕ ಇರುವ 67 ಎಕರೆ ಭೂಮಿ ರಾಮ ಜನ್ಮಭೂಮಿ ವ್ಯಾಸ್ ಸಮಿತಿಗೆ ಸೇರಿದ್ದು ಎಂದು ತೀರ್ಪು ನೀಡುವವರೆಗೆ ಈ ವಿವಾದದ ಆಳ-ಅಗಲ ವಿಸ್ತರಿಸಿಕೊಂಡಿದೆ. ಇಷ್ಟೆಲ್ಲಾ ಆಗಿ ಆಗಸ್ಟ್ 5ರಂದು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಬೇಕು ಎನ್ನುವಷ್ಟರಲ್ಲಿ ‘ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ’ ಹೊಸ ಹೊಸ ವಿಷಯ, ವಿವಾದಗಳು ಹುಟ್ಟಿಕೊಂಡಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ವಿವಾದ -1: ಶ್ರೀರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಹಿರಿಯರೂ ಮತ್ತು ರಾಮಜನ್ಮಭೂಮಿ ಹೋರಾಟದ ಕಿಚ್ಚು ಹಚ್ಚಿದವರೂ ಆದ ಲಾಲಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರಿಗೆ ಆಮಂತ್ರಣ ನೀಡಲಾಗಿತ್ತು. ಆನಂತರ ಅಡ್ವಾಣಿ ಅವರಿಗೆ 92 ಹಾಗೂ ಜೋಷಿ ಅವರಿಗೆ 83 ವರ್ಷ ಆಗಿದೆ ಎಂದು ಆಮಂತ್ರಣ ಹಿಂಪಡೆಯಲಾಗಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಅನ್ಲಾಕ್ -3 ಮಾರ್ಗಸೂಚಿ ಪ್ರಕಾರ 65 ವರ್ಷಕ್ಕಿಂತ ಮೇಲ್ಪಟ್ಟವರು ಮನೆಯಿಂದ ಹೊರಗಡೆ ಬರುವಂತಿಲ್ಲ. ಆ ಕಾರಣಕ್ಕೆ ಇವರಿಗೆ ಅವಕಾಶ ನೀಡುತ್ತಿಲ್ಲ ಎಂದು ಸಮರ್ಥಿಸಿಕೊಳ್ಳುವವರು ಹೇಳಬಹುದು. ಆದರೆ ರಾಮಜನ್ಮಭೂಮಿ ಹೋರಾಟಕ್ಕೆ ಸುದೀರ್ಘ ಕಾಲ ತೊಡಗಿಸಿಕೊಂಡು ಇವತ್ತಿಗೂ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವ ಈ ಹಿರಿಯರಿಗೆ ಅನ್ಲಾಕ್ -3 ಮಾರ್ಗಸೂಚಿಗಳ ವಿನಾಯಿತಿ ನೀಡಬೇಕಿತ್ತು. ವಿಶೇಷ ಪ್ರಕರಣ ಎಂದು ಪರಿಗಣಿಸಬೇಕಿತ್ತು ಎಂಬ ವಾದ ಕೂಡ ಕೇಳಿಬರುತ್ತಿದೆ.
ವಿವಾದ – 2: ಕೇಂದ್ರದ ಮತ್ತು ಉತ್ತರ ಪ್ರದೇಶದ ಬಿಜೆಪಿ ಸರ್ಕಾರಗಳು ‘ವಿಐಪಿ ಕಲ್ಚರ್’ಗೆ ಮಣೆ ಹಾಕುವುದಿಲ್ಲ. ಸಾಮಾನ್ಯರಿಗೊಂದು ಗಣ್ಯರಿಗೊಂದು ನಿಯಮ ಎಂದು ಪ್ರತಿಪಾದಿಸುವುದಿಲ್ಲ ಎನ್ನುವುದೇ ಆಗಿದ್ದರೆ 88 ವರ್ಷದ ಕಲ್ಯಾಣ್ ಸಿಂಗ್ (1992ರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದಾಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿದ್ದವರು. ಸದ್ಯ ರಾಜಸ್ಥಾನದ ರಾಜ್ಯಪಾಲ), 73 ವರ್ಷದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ನಾಯಕ ಸುರೇಶ್ ಜೋಷಿ, 69 ವರ್ಷದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಆಮಂತ್ರಿಸಿದ್ದು ಏಕೆ? ಇವರು ಪಾಲ್ಗೊಳ್ಳುವುದರಿಂದ ಅನ್ಲಾಕ್- 3ರ ಮಾರ್ಗಸೂಚಿ ಉಲ್ಲಂಘನೆ ಆಗುವುದಿಲ್ಲವೆ?
ವಿವಾದ -3: ರಾಮಜನ್ಮಭೂಮಿ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅಡ್ವಾಣಿ ಹಾಗೂ ಜೋಷಿ ಅವರಂತೆ ಈಗಲೂ ವಿಚಾರಣೆ ಎದುರಿಸುತ್ತಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರನ್ನು ಆಮಂತ್ರಿಸಲಾಗಿದೆ. 61 ವರ್ಷ ವಯಸ್ಸಿನ ಉಮಾಭಾರತಿ ಅವರು ಹೋಗಲು ಯಾವುದೇ ಅಡ್ಡಿ ಇಲ್ಲ. ಆದರೆ ಅವರು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. ಅಡ್ವಾಣಿ ಮತ್ತು ಜೋಷಿಯವರನ್ನು ಆಮಂತ್ರಿಸದ ಹಿನ್ನಲೆಯಲ್ಲಿ ಮೌನ ಪ್ರತಿಭಟನೆ ದಾಖಲಿಸುವ ಉದ್ದೇಶದಿಂದಲೇ ಉಮಾಭಾರತಿ ಭಾಗವಹಿಸುತ್ತಿಲ್ಲ ಎಂಬ ಮಾಹಿತಿ ಕೇಳಿಬರುತ್ತಿವೆ.

ವಿವಾದ -5: ಅನ್ಲಾಕ್ -3ರ ಮಾರ್ಗಸೂಚಿ ಪ್ರಕಾರ ಯಾವುದೇ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನಾ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಭೆ, ಸಮಾರಂಭಗಳಿಗೆ ಅವಕಾಶ ನೀಡುವಂತಿಲ್ಲ. ಆದರೂ ಶ್ರೀರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಹೇಗೆ ಅನುಮತಿ ನೀಡಲಾಗಿದೆ ಎಂಬ ಚರ್ಚೆಯೂ ಕೇಳಿಬರುತ್ತಿದೆ.
ವಿವಾದ -6: ಇಂದು ಕಾಂಗ್ರೆಸ್ ಮುಖಂಡರಾದ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮದ ಮುಹೂರ್ತವೇ ಸರಿ ಇಲ್ಲ ಎಂದಿದ್ದಾರೆ. ರಾಮ ನಮ್ಮ ನಂಬಿಕೆಯ ಆಧಾರ. ಆತನ ದೇವಾಲಯವನ್ನು ಧಾರ್ಮಿಕ ಶ್ರದ್ಧೆಯಿಂದ ನಿರ್ಮಿಸಬೇಕು. ಆದರೆ ಬಿಜೆಪಿ ನಾಯಕರು ಯಾವುದೇ ಶುಭ ಕಾರ್ಯಕ್ಕೆ ಯೋಗ್ಯವಲ್ಲದ ದೇವ್ ಶಾಲ್ಯಾ ಮುಹೂರ್ತದಲ್ಲಿ ಶಿಲಾನ್ಯಾಸ ನೆರವೇರಿಸುತ್ತಿದ್ದಾರೆ. ಈ ಮೂಲಕ ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ ಒಟ್ಟಿಗೆ ರಾಮ್ಲಾಲಾನನ್ನು ತಮ್ಮ ಬಂಧಿಯನ್ನಾಗಿ ಮಾಡಿಕೊಳ್ಳಲು ಹೊರಟಿವೆ. ಮೊದಲು ರಾಮಮಂದಿರವನ್ನು ಬಿಜೆಪಿ ನಿರ್ಮಿಸುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಲಿ ಎಂದಿದ್ದಾರೆ.
ವಿವಾದ -7: ದುರುದ್ದೇಶಪೂರಿತ ಮುಹೂರ್ತದಲ್ಲಿ ಭಗವಾನ್ ರಾಮ್ ದೇವಾಲಯದ ಅಡಿಪಾಯ ಹಾಕುವ ಮೂಲಕ ಎಷ್ಟು ಜನರಿಗೆ ಆಸ್ಪತ್ರೆಯನ್ನು ಕಳುಹಿಸಲು ಬಯಸುತ್ತೀರಿ? ಸನಾತನ ಹಿಂದೂ ಧರ್ಮದ ನಂಬಿಕೆಗಳನ್ನು ನಿರ್ಲಕ್ಷಿಸಿದ ಪರಿಣಾಮ ರಾಮ ದೇವಾಲಯದ ಪುರೋಹಿತರಿಗೆ ಕರೋನಾ ಪಾಸಿಟಿವ್ ಬಂದಿದೆ. ಉತ್ತರ ಪ್ರದೇಶ ಸಚಿವ ಕಮಲಾ ರಾಣಿ ವರುಣ್ ಕರೋನಾದಿಂದ ನಿಧನ ಹೊಂದಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷರಿಗೆ ಕರೋನಾ ಪಾಸಿಟಿವ್ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಶುಭ ಮುಹೂರ್ತವನ್ನು ಮೋದಿ ತಮ್ಮ ಅನುಕೂಲಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಮೋದಿ ಸಾವಿರಾರು ವರ್ಷಗಳಿಂದ ಹಿಂದೂ ಧರ್ಮದ ಸ್ಥಾಪಿತ ನಂಬಿಕೆಗಳಿಗಿಂತ ಹಳೆಯವರಾ? ಇದು ಅವರ ಹಿಂದುತ್ವವಾ? ಎಂದು ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ದಯವಿಟ್ಟು ಮೋದಿ ಜಿ ಅವರಿಗೆ ವಿವರಿಸಿ. ನೀವು ಇರುವಾಗ ಸನಾತನ ಧರ್ಮದ ಎಲ್ಲಾ ಮಿತಿಗಳನ್ನು ಏಕೆ ಮುರಿಯಲಾಗುತ್ತಿದೆ? ಮತ್ತು ನಿಮ್ಮ ಅಸಹಾಯಕತೆ ಏನು? ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೇಳಿದ್ದಾರೆ.
ವಿವಾದ -8 ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೊರೊನಾ ಪಾಸಿಟಿವ್ ಬಂದಿದೆ. ಆದರೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಇದು ನಿಜವೇ ಆಗಿದ್ದರೆ ಲಾಲಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರಿಗೆ ಇಂಥ ಭಾಗ್ಯ ಏಕಿಲ್ಲ. ಈಗಾಗಲೇ ರಾಜಕೀಯವಾಗಿ ನೇಪಥ್ಯಕ್ಕೆ ಸರಿದಿರುವ ಅಡ್ವಾಣಿ ಮತ್ತು ಜೋಷಿಯವರ ನೆನಪೇ ಬಾರದಿರುವ ರೀತಿಯಲ್ಲಿ ಮಾಡುತ್ತಿರುವುದಾದರೂ ಏಕೆ ಎಂಬ ಚರ್ಚೆ ಕೂಡ ನಡೆಯುತ್ತಿದೆ.