ಇತ್ತೀಚೆಗೆ ಮಹಾರಾಷ್ಟ್ರದ ಔರಂಗಾಬಾದ್ ಬಳಿ 16 ಮಂದಿ ರೈಲ್ವೆ ಹಳಿ ಮೇಲೆ ಮಲಗಿದ್ದಾಗ ಗೂಡ್ಸ್ ರೈಲು ಹರಿದು ಮೃತಪಟ್ಟರು. ಘಟಿಸಿದ ಮೇ 8ರಂದು ಅದು ಭಾರೀ ಸುದ್ದಿ. ಮರುದಿನಕ್ಕಾಗಲೇ ಮರಿಚಿಕೆ. ರೈಲ್ವೆ ಇಲಾಖೆ ಘಟನೆ ಬಗ್ಗೆ ತನಿಖೆ ನಡೆಸಿ ಏನು ಕ್ರಮ ಕೈಗೊಂಡಿದೆ? ಅವರು ವಲಸೆ ಕಾರ್ಮಿಕರಾಗಿರುವ ಕಾರಣಕ್ಕೆ ಕಾರ್ಮಿಕ ಇಲಾಖೆಗಳು ಏನು ಕ್ರಮ ಕೈಗೊಂಡಿವೆ? ಏನಾದರೂ ಮಾಹಿತಿ ಬಂದಿದೆಯಾ?
ಅಷ್ಟೆಲ್ಲಾ ಏಕೆ? ಆ ವಲಸಿಗರ ಹೆಸರುಗಳನ್ನು ಯಾವುದಾದರೂ ಮಾಧ್ಯಮಗಳಲ್ಲಿ ಕಂಡಿದ್ದೀರಾ? ರೈಲ್ವೆ ಇಲಾಖೆಯಾಗಲಿ, ಕಾರ್ಮಿಕ ಇಲಾಖೆಯಾಗಲಿ, ಮಹಾರಾಷ್ಟ್ರ ಸರ್ಕಾರವಾಗಲಿ, ಅವರೆಲ್ಲಾ ಮಧ್ಯಪ್ರದೇಶದವರಾದ ಕಾರಣ ಮಧ್ಯಪ್ರದೇಶ ಸರ್ಕಾರವಾಗಲಿ ಬಲಿಯಾದ ಅಮಾಯಕರ ಹೆಸರುಗಳನ್ನು ಪ್ರಕಟಿಸಿವೆಯಾ? ಒಂದೊಮ್ಮೆ ಅದು ರೈಲ್ವೆ ಅಪಘಾತ ಆಗುವ ಬದಲು ವಿಮಾನ ಅಪಘಾತ ಆಗಿತ್ತು ಅಂತಾ ಊಹಿಸಿಕೊಳ್ಳಿ. ಆಗಲೂ ಈ ಸರ್ಕಾರಗಳು ಮತ್ತು ಮಾಧ್ಯಮಗಳು ಹೀಗೆ ಮೌನವಹಿಸುತ್ತಿದ್ದವೆ?
ಖಂಡಿತಾ ಇಲ್ಲ, ಎಲ್ಲರ ವೈಯಕ್ತಿಕ ವಿವರಗಳ ಮೇಲೂ ಬೆಳಕು ಚೆಲ್ಲಲಾಗುತ್ತಿತ್ತು. ಇದರಿಂದ ರೈಲಿನಲ್ಲಿ ಬಡವರಿಗೊಂದು ನ್ಯಾಯ, ಉಳ್ಳವರಿಗೊಂದು ನ್ಯಾಯ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಜೊತೆಗೆ ವಲಸೆ ಕಾರ್ಮಿಕರನ್ನು, ನಿರ್ಗತಿಕ ಕಾರ್ಮಿಕರನ್ನು, ಅಮಾಯಕ ಕಾರ್ಮಿಕರನ್ನು ನಮ್ಮ ಸರ್ಕಾರಗಳು, ಮಾಧ್ಯಮಗಳು ಎಷ್ಟು ನಿಕೃಷ್ಟವಾಗಿ, ಅಮಾನುಷವಾಗಿ ಕಾಣುತ್ತವೆ ಎಂಬುದಕ್ಕೆ ಈ ಘಟನೆ ಅತ್ಯುತ್ತಮ ಉದಾಹರಣೆ.
ಇನ್ನೊಂದೆಡೆ ಅಮೆರಿಕದ ‘ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಮೇ 24ರ ಮುಖಪುಟವನ್ನು ಗಮನಿಸಿ

ಇದು ಬಹಳ ಸಣ್ಣ ಅಕ್ಷರಗಳನ್ನು ಒಳಗೊಂಡಿರುವ ಜಾಹೀರಾತು. ಈ ಜಾಹೀರಾತಿನಲ್ಲಿ ಕೊರೋನಾದಿಂದ ಅಮೇರಿಕಾದಲ್ಲಿ ಸಾವನ್ನಪ್ಪಿದವರ ಉದ್ದನೇಯ ಪಟ್ಟಿ ಇದೆ. ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಈ ಜಾಹೀರಾತು ಅತಾರ್ಥ್ ಸತ್ತವರ ಹೆಸರುಗಳ ವಿವರ 12ನೇ ಪುಟದಲ್ಲೂ ಮುಂದುವರಿದಿದೆ. ಹತ್ತಿರ ಹತ್ತಿರ ಒಂದು ಲಕ್ಷ ಹೆಸರುಗಳನ್ನು ಮುದ್ರಿಸಲಾಗಿದೆ. ಇದರಿಂದ ಅಮೇರಿಕಾ ದೇಶ ಏನನ್ನು ಹೇಳ ಹೊರಟಿದೆ? ದೇಶದ ಪ್ರತಿಪ್ರಜೆಯೂ, ಪ್ರತಿ ಜೀವಿಯೂ ಅಮೂಲ್ಯ ಎಂದಲ್ಲವೇ?
ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹುಂಭ, ಉಡಾಫೆ ವ್ಯಕ್ತಿತ್ವದವ, ಬದ್ಧತೆ ಇಲ್ಲದವ ಎಂಬಿತ್ಯಾದಿಯಾಗಿ ಬಣ್ಣಿಸಲಾಗುತ್ತದೆ. ಅಂಥ ಟ್ರಂಪ್ ಸರ್ಕಾರವೇ ಸಂವೇದನೆಯಿಂದ ವರ್ತಿಸಿದೆ. ಆದರೆ ಭಾರತ ಸರ್ಕಾರ ‘ಏನೂ ನಡೆದೇ ಇಲ್ಲವೇನೋ…’ ಎನ್ನುವಂತೆ ನಡೆದುಕೊಂಡಿದೆ. ಇದು ಕೂಡ ಈ ದೇಶದಲ್ಲಿ ಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ಬಡವರನ್ನು ಯಾವ ರೀತಿ ನೋಡಲಾಗುತ್ತದೆ? ಅವರ ಜೀವಗಳಿಗೆ ಎಷ್ಟು ಪ್ರಾಮುಖ್ಯತೆ ನೀಡಲಾಗುತ್ತದೆ ಎಂಬುದಕ್ಕೆ ಇನ್ನೊಂದು ನಿದರ್ಶನ.
ಔರಂಗಾಬಾದ್ ಬಳಿ ಅನ್ಯಾಯವಾಗಿ ಬಲಿಯಾದ 16 ಮಂದಿ ವಲಸೆ ಕಾರ್ಮಿಕರು ಮಹಾರಾಷ್ಟ್ರದ ಜಾಲ್ನಾದ ಸ್ಟೀಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮಾರ್ಚ್ 24ರ ಮಧ್ಯರಾತ್ರಿಯಿಂದ ಲಾಕ್ಡೌನ್ ಘೋಷಣೆ ಆದಮೇಲೆ ಮಾರ್ಚ್ 25ರಿಂದಲೇ ನಿರುದ್ಯೋಗಿಗಳಾದರು. ‘ನೌಕರರ ಸಂಬಳ ಕಡಿತಗೊಳಿಸುವಂತಿಲ್ಲ’ ಎಂದು ಕೇಂದ್ರ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದ್ದರೂ ಕಂಪನಿಯು ಈ ನೌಕರರಿಗೆ ವೇತನ ಕೊಡಲಿಲ್ಲ. ಮತ್ತೆ ಕಾರ್ಖಾನೆ ಆರಂಭವಾಗಬಹುದು, ಕೆಲಸ ಆರಂಭವಾದ ಮೇಲೆ ವೇತನ ಸಿಗಬಹುದು ಎಂದು ಕಾರ್ಮಿಕರು ಕಾದರು. ಆದರೆ ಲಾಕ್ಡೌನ್ ತೆರವುಗೊಳ್ಳುವ ಮತ್ತು ಕಾರ್ಖಾನೆ ಆರಂಭವಾಗುವ ಮುನ್ಸೂಚನೆ ಸಿಗದೆ ಮೇ 7ಕ್ಕೆ ತವರೂರಿನತ್ತ ಹೊರಟರು. ಅಷ್ಟೊತ್ತಿಗಾಗಲೇ ಕೈಯಲ್ಲಿದ್ದ ಹಣವೂ ಖಾಲಿಯಾಗಿತ್ತು, ಹಾಗಾಗಿ ಕಾಲ್ನಡಿಗೆಯೇ ಅವರಿಗುಳಿದಿದ್ದ ಆಯ್ಕೆಯಾಗಿತ್ತು. ಕಡೆಗೆ ಮೇ 8ರ ಮುಂಜಾನೆ ಇಲ್ಲವಾಗಿಯೇ ಬಿಟ್ಟರು.
ಇದು ಉಳಿದೆಲ್ಲಾ ಕತೆಗಳ ಪ್ರಧಾನ ಪರ್ವ. ಲಾಕ್ಡೌನ್ ಆರಂಭವಾದ ಮೇಲೆ ನಾನಾ ರೀತಿಯಲ್ಲಿ ಸತ್ತವರ ಸಂಖ್ಯೆ 378 ಜನ ಎಂದು ‘ದಿ ವೈರ್’ ವರದಿ ಮಾಡಿದೆ. ಈ ಪೈಕಿ ರೈಲು ಮತ್ತು ರಸ್ತೆ ಅಪಘಾತದಿಂದಲೇ 69 ಅಮೂಲ್ಯ ಜೀವಗಳು ಕಳೆದುಹೋಗಿವೆ. ತೇಜೇಶ್ ಜಿ.ಎನ್, ಕನ್ನಿಕಾ ಶರ್ಮಾ ಮತ್ತು ಅಮನ್ ಎಂಬುವರು ಈ ಸಮೀಕ್ಷೆ ಮಾಡಿದ್ದಾರೆ. ಸಾಮಾಜಿಕ ಅಧ್ಯಯನಕ್ಕಾಗಿ ನಡೆಸಿರುವ ಸಮೀಕ್ಷೆಯಲ್ಲಿ ಎಷ್ಟೆಷ್ಟು ಮಂದಿ ಯಾವ್ಯಾವ ಕಾರಣಕ್ಕಾಗಿ ಬಲಿಯಾಗಿದ್ದಾರೆ ಎಂಬ ಮಾಹಿತಿಯನ್ನು ಸವಿವರವಾಗಿ ತಿಳಿಸಿದ್ದಾರೆ. ಈ ಕೆಳಗಿನ ಅಟ್ಯಾಚ್ ಮೆಂಟ್ ನೋಡಿ.

ಇದು ಈ ಹೊತ್ತಿನಲ್ಲಿ ನಡೆದ ದುರ್ಘಟನೆಗಳು, ದುರ್ನಡತೆಗಳು. ಲಗಾಯತ್ತಿನಿಂದಲೂ ಕಾರ್ಮಿಕರ ಮತ್ತು ವಲಸೆ ಕಾರ್ಮಿಕರ ಬಗ್ಗೆ ಹೀಗೆ ಮಾಡಲಾಗಿತ್ತು. ಅನ್ನ ಅರಸಿ ಊರು ಬಿಟ್ಟು ಬಂದವರೆಲ್ಲಾ ಜಗಮಗಿಸುವ ನಗರಗಳಲ್ಲಿ ನೆಮ್ಮದಿಯಾಗೇನೂ ಇರಲಿಲ್ಲ. ಜೀವನದ ಅನಿವಾರ್ಯತೆಗಾಗಿ ನರಕವಾದರೂ ನಗರಗಳಲ್ಲೇ ಇರಲು ನಿರ್ಧರಿಸಿದ್ದರು. ಸ್ವಲ್ಪವೂ ಮುಂದಾಲೋಚನೆ ಇಲ್ಲದೆ ಜಾರಿಗೊಳಿಸಲಾದ ಲಾಕ್ಡೌನ್ ವಲಸೆ ಕಾರ್ಮಿಕರಿಗೆ ‘ನಗರಗಳ ಸಹವಾಸ ಸಾಕು’ ಎನಿಸಿದೆ. ಇಷ್ಟು ದಿನ ವಲಸೆ ಕಾರ್ಮಿಕರನ್ನು ನಿರ್ಲಕ್ಷ್ಯದಿಂದ ಕಂಡಿದ್ದ ಮತ್ತು ನಿರ್ದಯವಾಗಿ ನಡೆಸಿಕೊಂಡಿದ್ದ ಘನ ನಾಗರಿಕ ಸಮಾಜ ಮುಂದೆ ಇದರ ಪ್ರತಿಫಲವನ್ನು ಉಣ್ಣಲಿದೆ.
Also Read: ವಲಸೆ ವರಸೆ-1: ಕರೋನಾ ಸೃಷ್ಟಿಸಿರುವ ದುರ್ದಿನಗಳಲ್ಲಾದರೂ ಎಚ್ಚೆತ್ತುಕೊಳ್ಳಬೇಕಿದೆ