ರಾಜ್ಯ ಸರ್ಕಾರದ ಅಂಗಳದಲ್ಲಿ ಬುಧವಾರ ಮಧ್ಯಾಹ್ನ ಶುರುವಾದ ವಿವಾರ ಸಂಜೆ ವೇಳೆಗೆ ಮುಂಕಾಗಿ ಹೋಗಿತ್ತು. ಸಂಜೆ ಬಿಡುಗಡೆಯಾದ ಆಮಂತ್ರಣ ಪತ್ರಿಕೆಯಲ್ಲಿ ವಿವಾದಿತ ನಾಮವನ್ನು ತೆಗೆದು ಸಾಮಾನ್ಯ ಕಾರ್ಯಕ್ರಮದ ರೀತಿ ಆಹ್ವಾನ ಪತ್ರಿಕೆ ಬಿಡುಗಡೆ ಆಗಿತ್ತು. ಗುರುವಾರ ಬೆಳಗ್ಗೆ 9.30 ಗಂಟೆಗೆ ಯಲಹಂಕ ನ್ಯೂ ಟೌನ್ ಬಳಿಯ ಮದರ್ ಡೈರಿ ಬಳಿ ನಿರ್ಮಾಣ ಆಗಿರುವ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 34 ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾಗಿರುವ 388.35 ಮೀಟರ್ ಉದ್ದದ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಲೋಕಾರ್ಪಣೆ ಮಾಡಬೇಕಿತ್ತು. ಆದರೆ ಉದ್ಘಾಟನಾ ಕಾರ್ಯಕ್ರಮ ನಿಗದಿಯಾಗ್ತಿದ್ದಂತೆ ವಿವಾದವೊಂದು ದಿಢೀರ್ ಎಂದು ಕಾಣಿಸಿಕೊಂಡಿತ್ತು. ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರಿಡಲು ಸಿದ್ಧತೆ ನಡೆದಿದೆ ಎನ್ನುವ ಅಂಶ ಕಾಡ್ಗಿಚ್ಚಿನಂತೆ ಹರಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗಳು ಗಮನಸೆಳೆದವು.
ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಟ್ವೀಟರ್ ಮೂಲಕ ವಿರೋಧ ವ್ಯಕ್ತಪಡಿಸಿದ್ದರು. ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು ನಾಮಕರಣ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ನಾಡಿನ ಅಭ್ಯುದಯಕ್ಕೆ ಹೋರಾಟ ಮಾಡಿದವರಿಗೆ ಮಾಡುತ್ತಿರುವ ಅಪಮಾನ. ಇದು ರಾಜ್ಯ ಸರ್ಕಾರಕ್ಕೆ ಶೋಭೆ ತರದು.ಸ್ವಾತಂತ್ರ್ಯಪೂರ್ವ ಮತ್ತು ನಂತರ ನಾಡಿನ ಅಭಿವೃದ್ಧಿಗೆ ಮತ್ತು ಹಿತಕ್ಕಾಗಿ ದುಡಿದ ಹಲವು ಮಹನೀಯರಿದ್ದಾರೆ. ಅವರ ಹೆಸರನ್ನು ಈ ಮೇಲ್ಸೇತುವೆಗೆ ಇಡಬಹುದಿತ್ತು. ರಾಜ್ಯದ ಹೋರಾಟಗಾರರ ಹೆಸರನ್ನು ಬೇರೆ ರಾಜ್ಯಗಳಲ್ಲಿ ನಾಮಕರಣ ಮಾಡುವುದುಂಟೆ..? ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ನಾಡಿನ ಜನತೆಯ ಪರವಾಗಿ ಆಗ್ರಹ ಪಡಿಸುತ್ತೇನೆ ಎಂದು ಒತ್ತಾಯ ಮಾಡಿದ್ದರು.
ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಉದ್ದೇಶಿಸಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ತೆರೆ ಹಿಂದಿನ ಸೂತ್ರಧಾರರೇ ಹೊರತು ಚುನಾಯಿತ ಸರ್ಕಾರ ಅಲ್ಲ ಎನ್ನುವುದಕ್ಕೆ ಯಲಹಂಕ ಮೇಲ್ಸೆತುವೆಗೆ ಸಾವರ್ಕರ್ ಹೆಸರಿಡುವ ಅವಸರದ ನಿರ್ಧಾರವೇ ಪುರಾವೆ ಆಗಿದೆ. ಯಲಹಂಕ ಮೇಲ್ಸೆತುವೆಗೆ ವಿ.ಡಿ.ಸಾವರ್ಕರ್ ಹೆಸರಿಡುವ ರಾಜ್ಯ ಸರ್ಕಾರದ ನಿರ್ಧಾರ ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ ಅವಮಾನ. ತಕ್ಷಣ ಈ ನಿರ್ಧಾರವನ್ನು ಕೈಬಿಟ್ಟು ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಹೆಸರಿಡಬೇಕೆಂದು ಆಗ್ರಹ ಮಾಡಿದ್ದರು.
ಮಾಜಿ ಸಿಎಂಗಳಿಗೆ ಕೌಂಟರ್ ಕೊಟ್ಟ ಕೇಸರಿ ಪಡೆ..!
ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು ಇಡುವುದಕ್ಕೆ ವಿರೋಧ ವ್ಯಕ್ತವಾದ ಬಗ್ಗೆ ಮಾತನಾಡಿದ ಸಚಿವ ಸಿ.ಟಿ.ರವಿ ಸಾವರ್ಕರ್ ಹೋರಾಟ ಮಾಡಿದ್ದು ದೇಶಕ್ಕಾಗಿ. ಕುಮಾರಸ್ವಾಮಿ ಯಾಕಿಷ್ಟು ಸಣ್ಣ ಮನಸ್ಸಿನವರಾದ್ರು ಎನ್ನುವುದ ಗೊತ್ತಿಲ್ಲ. ದೇವೇಗೌಡರು ಹೊಳೆನರಸೀಪುರದಲ್ಲಿ ಹುಟ್ಟಿದ್ದಾರೆ.ಅವರನ್ನು ನಾವ್ಯಾಕೆ ರಾಷ್ಟ್ರ ನಾಯಕರು ಎನ್ನಬೇಕು..? ಕುಮಾರಸ್ವಾಮಿ 2 ಬಾರಿ ಸಿಎಂ ಆದಂತವರು, ಅವರ ಸಣ್ಣ ಮನಸ್ಥಿತಿ ಏನೆಂದು ತೋರಿಸುತ್ತದೆ ಎಂದಿದ್ದರು. ಗುರುವಾರ ಸ್ವಾತಂತ್ರ್ಯ ವೀರ ಸಾವರ್ಕರ್ ಜನ್ಮದಿನಾಚರಣೆ ಪ್ರಯುಕ್ತ ಮೇಲ್ಸೇತುವೆಗೆ ಅವರ ಹೆಸರನ್ನು ನಾಮಕರಣ ಮಾಡುತ್ತಿದ್ದೇವೆ. ಹಿಂದಿನ ವರ್ಷ ಸಾವರ್ಕರ್ ಬಗ್ಗೆ ಟೀಕೆ ಟಿಪ್ಪಣಿ ವ್ಯಕ್ತವಾಗುತ್ತಿದ್ದವು. ಅವರ ಇತಿಹಾಸ ಓದಿದವರಿಗೆ ಗೊತ್ತು ಅವರೇನು ಎನ್ನುವುದು. ನಾವು ಈಗಾಗಲೇ ಬಿಬಿಎಂಪಿಯಿಂದ ಸೇತುವೆ ನಾಮಕರಣಕ್ಕೆ ಅನುಮೋದನೆ ಪಡೆದುಕೊಂಡಿದ್ದೇವೆ ಎಂದಿದ್ದರು.
ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್. ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಾತನಾಡಿ, ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರು ನಾಮಕರಣ ಮಾಡುವುದರಲ್ಲಿ ತಪ್ಪಿಲ್ಲ. ಸ್ವಾತಂತ್ರ ಸಂಗ್ರಾಮದಲ್ಲಿ ತೊಡಗಿಸಿಕೊಂಡು, ಬಲಿದಾನ ಆದವರಿಗೆ ಗೌರವ ಕೊಡುವುದು ನಮ್ಮ ಸಂಸ್ಕೃತಿ. ವೀರ ಸಾವರ್ಕರ್ ಕೂಡ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಹೆಸರಿಡುವುದರಲ್ಲಿ ತಪ್ಪೇನಿಲ್ಲ ಎಂದರು.
ಬಿಬಿಎಂಪಿ ಅಂಗಳದಿಂದಲ್ಲೇ ಸೃಷ್ಠಿ ಈ ವಿವಾದ?
ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರು ಇಡಲು ಮುಂದಾಗಿರುವುದು ಬಿಬಿಎಂಪಿ ಮೇಯರ್ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ಆರೋಪ ಮಾಡಿದ್ದರು. ಆರ್ಎಸ್ಎಸ್ ನಾಯಕರ ಮನವೊಲಿಸುವ ಉದ್ದೇಶದಿಂದ ಮೇಯರ್ ಗೌತಮ್ ಮುಂದಾಗಿದ್ದಾರೆ. ನಮ್ಮ ರಾಜ್ಯಕ್ಕೆ ಹಾಗೂ ದೇಶಕ್ಕೆ ಸಾವರ್ಕರ್ ಕೊಡುಗೆ ಏನು ಇಲ್ಲ. ಗಣ್ಯ ವಕ್ತಿಗಳ ಬಗ್ಗೆ ಬಿಜೆಪಿಗೆ ಅಭಿಮಾನ ಇದ್ರೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಥವಾ ಮಾಜಿ ರಾಷ್ಟ್ರ ಪತಿ ಅಬ್ದುಲ್ ಕಲಾಂ ರವರ ಹೆಸರಿಡಲಿ. ಅದನ್ನ ಬಿಟ್ಟು RSS ನಾಯಕರ ಓಲೈಕೆ ಮಾಡಲು ಯಾಕೆ ಮುಂದಾಗಿದ್ದಾರೆ. ಇದನ್ನು ನಾವು ವಿರೋಧಿಸ್ತೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾರದ್ದೇ ಹೆಸರಿಡಬೇಕಾದರೂ ಕೌನ್ಸಿಲ್ನಲ್ಲಿ ಚರ್ಚೆಯಾಗಬೇಕು. ಆದರೆ ಚರ್ಚೆಯನ್ನೇ ಮಾಡದೇ ಸು-ಮೋಟೋ ಮೂಲಕ ಸಾವರ್ಕರ್ ಹೆಸರಿಡಲು ಮುಂದಾಗಿರೋದು ಸರಿಯಲ್ಲ ಎಂದು ಖಂಡಿಸಿದ್ದರು.
ವಿವಾದ ಮುಕ್ತವಾದ ಆಹ್ವಾನ ಪತ್ರಿಕೆ..!
ಮಧ್ಯಾಹ್ನವಷ್ಟೇ ವೀರ ಸಾವರ್ಕರ್ ಹೆಸರು ನಾಮಕರಣದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದ ಬಳಿಕ ಸಂಜೆ ಅಂತಿಮವಾಗಿ ಸಂಜೆ 7 ಗಂಟೆಗೆ ಆಹ್ವಾನ ಪತ್ರಿಕೆ ಪ್ರಕಟಿಸಿತ್ತು. ಅದರಲ್ಲಿ ವಿವಾದಕ್ಕೆ ಕಾರಣವಾಗಿದ್ದ ವೀರ ಸಾವರ್ಕರ್ ಹೆಸರು ನಾಮಕರಣದ ಯಾವುದೇ ಪ್ರಸ್ತಾವನೆ ಇರಲಿಲ್ಲ. ಭಾರೀ ವಿರೋಧದಿಂದ ವೀರ ಸಾವರ್ಕರ್ ಹೆಸರು ನಾಮಕರಣದಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ ಎನ್ನುವ ವರದಿಗಳು ಬಂದವು. ಆದರೆ ಕೇವಲ ಒಂದು ಗಂಟೆ ಅವಧಿಯಲ್ಲಿ ರಾಜ್ಯ ಸರ್ಕಾರಕ್ಕೆ ಬಂದ ಸಂದೇಶ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮ ಕೈ ಬಿಡಬೇಕು ಎನ್ನುವುದು. ಆ ಸಂದೇಶದ ಸೂಚನೆಯಂತೆ ಮುಖ್ಯಮಂತ್ರಿಗಳ ಕಚೇರಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಿ ಲಾಕ್ಡೌನ್ ಇರುವ ಕಾರಣ ಜನಸಂದಣಿ ಆಗುವ ಸಾಧ್ಯತೆ ಇದೆ. ಹಾಗಾಗಿ ಕಾರ್ಯಕ್ರಮ ಮುಂದೂಡುತ್ತಿದ್ದೇವೆ ಎನ್ನುವ ಸಬೂಬು ಗೋಚರಿಸಿತು.
ಸಿಎಂ ನಿರ್ಧಾರಕ್ಕೆ ಬ್ರೇಕ್ ಹಾಕಿದ್ದು ಸಂಘ ಪರಿವಾರವೇ..?
ಸಿದ್ದರಾಮಯ್ಯ ಮಧ್ಯಾಹ್ನವೇ ಆರೋಪ ಮಾಡಿದ್ದರು. ವೀರ ಸಾವರ್ಕರ್ ಹೆಸರಿನ ನಾಮಕರಣದ ಹಿಂದಿನ ಸೂತ್ರಧಾರರು ಬೇರೆ ಎಂದಿದ್ದರು. ಬಿಬಿಎಂಪಿ ಮೇಯರ್ ಗೌತಮ್ ಜೈನ್ ಅವರು RSS ನಾಯಕರನ್ನು ಓಲೈಸಲು ಇಷ್ಟೆಲ್ಲಾ ಮಾಡಿದ್ದಾರೆ ಎಂದು ಬಿಬಿಎಂಪಿ ವಿಪಕ್ಷ ನಾಯಕ ಅಬ್ದುಲ್ ವಾಜೀದ್ ಆರೋಪ ಮಾಡಿದ್ದರು. ಇಷ್ಟೆಲ್ಲಾ ವಿವಾದ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಸಿಎಂ ಬಿ.ಎಸ್ ಯಡಿಯೂರಪ್ಪ, ವಿವಾದ ಮುಕ್ತವಾಗಿ ಮೇಲ್ಸೇತುವೆ ಉದ್ಘಾಟನೆಗೆ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದ್ದರು. ಆದರೆ, ಆ ಹೊತ್ತಿಗೆ ಸಂಘ ಪರಿವಾರದ ಕೆಂಗಣ್ಣು ರಾಜ್ಯ ಸರ್ಕಾರದ ಕಡೆಗೆ ತಿರುಗಿತ್ತು ಎನ್ನಲಾಗಿದೆ. ದಿಲ್ಲಿ ದೊರೆಗಳಿಂದ ಬಂದ ಸಣ್ಣದೊಂದು ಸಂದೇಶ ಇಡೀ ಕಾರ್ಯಕ್ರಮವನ್ನೇ ನುಂಗಿ ನೀರು ಕುಡಿದು ಬಿಟ್ಟಿತ್ತು. ಗುರುವಾರ ಬೆಳಗ್ಗೆ ಉದ್ಘಾಟನೆ ಆಗಬೇಕಿದ್ದ ಮೇಲ್ಸೇತುವೆ ಕಾರ್ಯಕ್ರಮವೇ ರದ್ದಾಯ್ತು.
ಸಿದ್ದರಾಮಯ್ಯ ಹೇಳಿದಂತೆ ತೆರೆ ಹಿಂದೆ ಕಾಣದ ಕೈಗಳು ಸರ್ಕಾರವನ್ನು ನಿಯಂತ್ರಣ ಮಾಡುತ್ತಿದೆ ಎನ್ನುವುದು ಸ್ಪಷ್ಟವಾಯ್ತು. ಇದೇ ರೀತಿ ಮೇಯರ್ ಈ ಆಯ್ಕೆಯಲ್ಲಿಯೂ ಒಂದು ಘಟನೆ ನಡೆದಿತ್ತು. ಮೇಯರ್ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದ ಸದಸ್ಯರನ್ನು ಏಕಾಏಕಿ ರದ್ದು ಮಾಡಿ ಮೇಯರ್ ಆಗಿ ಗೌತಮ್ ಕುಮಾರ್ ಜೈನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಅಲ್ಲೂ ಕೂಡ ಸಂಘ ಪರಿವಾರ ಸಿಎಂಗೆ ಶಾಕ್ ಕೊಟ್ಟಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಈಗಲೂ ಅದೇ ರೀತಿಯ ಅಚ್ಚರಿ ಸಿಎಂಗೆ ಎದುರಾಗಿದೆ ಎನ್ನಲಾಗ್ತಿದೆ. ಇಲ್ಲದಿದ್ದರೆ ಬಿ ಎಸ್ ಯಡಿಯೂರಪ್ಪ ಆಹ್ವಾನ ಪತ್ರಿಕೆ ಯಾಕೆ ಬಿಡುಗಡೆ ಮಾಡುತ್ತಿದ್ದರು? ಕೇವಲ ಒಂದು ಗಂಟೆ ಅವಧಿಯಲ್ಲಿ ತನ್ನ ನಿರ್ಧಾರವನ್ನು ತಾವೇ ರದ್ದು ಮಾಡುತ್ತಿದ್ದರು ಅಲ್ಲವೇ? ಎನ್ನುವುದು ಉತ್ತರ ಹುಡುಕಬೇಕಾದ ಪ್ರಶ್ನೆ.