ಸ್ವತಂತ್ರ ಪತ್ರಿಕೋದ್ಯಮವನ್ನು ಕಟ್ಟಿಹಾಕುವಂತೆ ತೋರುವ ಇನ್ನೊಂದು ಪ್ರಯತ್ನವನ್ನು ಯುಪಿ ಪೊಲೀಸರು ಮಾಡಿದ್ದಾರೆ. ಈ ಹಿಂದೆಯೂ ಇಂತಹುದೇ ಪ್ರಯತ್ನಗಳನ್ನು ಮಾಡಿ ಯಪಿ ಪೊಲೀಸರು ಕೈ ಸುಟ್ಟುಕೊಂಡಿದ್ದರು. ಈಗ ಮತ್ತೆ ಸ್ಕ್ರಾಲ್.ಇನ್ ಎನ್ನುವ ಸ್ವತಂತ್ರ ಸುದ್ದಿ ಜಾಲತಾಣದ ಕಾರ್ಯನಿರ್ವಾಹಕ ಸಂಪಾದಕಿ ಸುಪ್ರಿಯ ಶರ್ಮಾ ಹಾಗೂ ಮುಖ್ಯ ಸಂಪಾದಕರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿನಿಧಿಸುವ ವಾರಣಾಸಿಯ ಡೊಮರಿ ಎಂಬಲ್ಲಿನ ಮಹಿಳೆಯೊಬ್ಬರ ಕುರಿತಾದ ಸುದ್ದಿಯನ್ನು ಸುಪ್ರಿಯ ಅವರು ಬರೆದಿದ್ದರು. ಮಾಲಾ ದೇವಿ ಎಂಬ ಮಹಿಳೆಯು ಅಗತ್ಯ ಸೇವೆಯು ಲಭಿಸದೇ ಯಾವ ರೀತಿ ಕಷ್ಟ ಪಡುತ್ತಿದ್ದರು ಎಂಬ ಕುರಿತು ಈ ವರದಿಯಲ್ಲಿ ಯಥಾವತ್ತಾಗಿ ದಾಖಲಿಸಲಾಗಿತ್ತು. ಆದರೆ, ಈಗ ಅದೇ ಮಹಿಳೆಯು ತನ್ನ ವರದಿಯನ್ನು ತಪ್ಪಾಗಿ ಪ್ರಕಟಿಸಲಾಗಿದೆ ಎಂದು ದೂರು ನೀಡಿದ್ದಾರೆ.
ದೂರಿನ ಅನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆ (1989)ಯ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 269 – ನಿರ್ಲ್ಯಕ್ಷತನದಿಂದ ಮಾರಣಾಂತಿಕ ಕಾಯಿಲೆಯನ್ನು ಹರಡುವಂತಹ ಕಾರ್ಯ ಮಾಡುವುದು ಮತ್ತು ಸೆಕ್ಷನ್ 501ರ ಅಡಿಯಲ್ಲಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ಸುಪ್ರಿಯಾ ಅವರು ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಬಹಳಷ್ಟು ವರದಿಗಳನ್ನು ನೀಡಿದ್ದರು. ಲಾಕ್ಡೌನ್ ಯಾವ ರೀತಿ ಬಡವರ ಮೇಲೆ ಪರಿಣಾಮ ಬೀರಿದೆ ಎನ್ನುವುದನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ವಿವರಿಸಿದ್ದರು. ಇಂತಹುದೇ ಒಂದು ವರದಿಯಲ್ಲಿ ಡೊಮರಿ ಗ್ರಾಮಸ್ಥರು ಯಾವ ರೀತಿ ಹಸಿವಿನಿಂದ ದಿನ ದೂಡುತ್ತಿದ್ದಾರೆ ಎನ್ನುವ ಕುರಿತು ಬರೆದಿದ್ದರು. ಆ ವರದಿಯಲ್ಲಿ ಬಹಳಷ್ಟು ಜನರ ಸ್ಥಿತಿಗತಿಗಳ ಕುರಿತ ವಾಸ್ತಾವಿಕ ಚಿತ್ರಣವೂ ದಾಖಲಾಗಿತ್ತು.
ಸಂಸದರ ಆದರ್ಶ ಗ್ರಾಂ ಯೋಜನೆಯ ಅಡಿಯಲ್ಲಿ ಖುದ್ದು ಪ್ರಧಾನ ಮಂತ್ರಿಗಳೇ ದತ್ತು ಪಡೆದಂತಹ ಗ್ರಾಮ ಅದ್ದರಿಂದ, ಆ ವರದಿಯು ಬಹಳಷ್ಟು ಜನರ ಕಣ್ಣು ಕೆಂಪಾಗಿಸಿತ್ತು.
ಈ ವರದಿಯನ್ನು ಮಾಡುವ ಸಂದರ್ಭದಲ್ಲಿ ಡೊಮರಿ ಗ್ರಾಮದ ದಲಿತ ಕೂಲಿ ಕಾರ್ಮಿಕೆಯಾದ ಮಾಲಾ ದೇವಿ ಅವರನ್ನು ಕೂಡಾ ಸುಪ್ರಿಯಾ ಮಾತನಾಡಿಸಿದ್ದರು. ಮಾಲಾ ಅವರಿಗೆ ಜಿಲ್ಲಾಡಳಿತದಿಂದ ಯಾವುದೇ ನೆರವು ಸಿಕ್ಕದೇ ಇರುವ ಕುರಿತು ಉಲ್ಲೇಖಿಸಿ ವಾರಣಾಸಿಯ ಬೀದಿಗಳಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ ಎಂದು ಬರೆದಿದ್ದರು.
ಆದರೆ, ಮಾಲಾ ನೀಡಿರುವ ದೂರಿನಲ್ಲಿ ನಾನು ಈ ತರಹದ ಯಾವುದೇ ಹೇಳಿಕೆ ನೀಡಿಲ್ಲ ಎಂದು ಹೆಳಿದ್ದರು. ಅಷ್ಟು ಮಾತ್ರವಲ್ಲದೇ, ನನಗೆ ಯಾವುದೇ ತೊದರೆಯಿಲ್ಲ ಎಂದು ಹೇಳಿದ್ದೆ ಆದರೂ ನನ್ನ ಕುರಿತು ತಪ್ಪಾಗಿ ಬರೆಯಲಾಗಿದೆ ಎಂದು ಹೇಳಿದ್ದಾರೆ.

“ನಾನು ಮತ್ತು ನ್ನ ಮಕ್ಕಳು ಹಸಿವಿನಿಂದ ನರಳಾಡುತ್ತಿದ್ದೇವೆಂದು ತಪ್ಪಾಗಿ ಬರೆದು ಸಮಾಜದಲ್ಲಿ ನನ್ನ ಕುರಿತು ಕೀಳರಿಮೆ ಮೂಡುವಂತೆ ಮಾಡಿದ್ದಾರೆ. ಇದರಿಂದಾಗಿ ನಾನು ಮಾನಸಿಕವಾಗಿ ಬಹಳಷ್ಟು ನೋವು ಅನುಭವಿಸಿದ್ದೇನೆ,” ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಎಫ್ಐಆರ್ ದಾಖಲಾಗಿರುವ ಕುರಿತು ಅಂತರ್ಜಾಲದಲ್ಲಿ ಮಾಹಿತಿ ಪ್ರಕಟವಾಗುತ್ತಿದ್ದಂತೆಯೇ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಸ್ಕ್ರಾಲ್.ಇನ್ ಈ ಪ್ರಕರಣವು ಲಾಕ್ಡೌನ್ ಸಂದರ್ಭದಲ್ಲಿ ಬಸವಳಿದ ಬಡವರ ಕುರಿತ ಸುದ್ದಿಗಳನ್ನು ಬರೆದ ಸ್ವತಂತ್ರ ಸುದ್ದಿ ಮಾಧ್ಯಮಗಳನ್ನು ತಟಸ್ಥವಾಗಿಸುವ ಪ್ರಯತ್ನ ಎಂದು ಅಭಿಪ್ರಾಯಪಟ್ಟಿದ್ದಾರೆ.
“ಸ್ಕ್ರಾಲ್.ಇನ್ ಮಾಲಾದೇವಿ ಅವರನ್ನು 5 ಜೂನ್ 2020ರಂದು ಮಾತನಾಡಿಸಿತ್ತು. ಅವರ ಹೇಳಿಕೆಯನ್ನು ವರದಿಯಲ್ಲಿ ಯಥಾವತ್ತಾಗಿ ದಾಖಲಾಗಿಸಿತ್ತು. ನಮ್ಮ ವರದಿಯನ್ನು ನಾವು ಬೆಂಬಲಿಸುತ್ತೇವೆ,” ಎಂದು ಸ್ಕ್ರಾಲ್.ಇನ್ ಹೇಳಿಕೆ ನೀಡಿದೆ.
ಲಾಕ್ಡೌನ್ ಕುರಿತ ವರದಿ: 55 ಎಫ್ಐಆರ್ ದಾಖಲು
ಲಾಕ್ಡೌನ್ ಆರಂಭವಾದಾಗಿನಿಂದ ಈವರೆಗೆ ಪತ್ರಕರ್ತರ ಮೇಲೆ ದೇಶಾದ್ಯಂತ 55 ಪ್ರಕರಣಗಳು ದಾಖಲಾಗಿವೆ. ಲಾಕ್ಡೌನ್ ಹೇರಿಕೆಯಾದ ಮೊದಲ ದಿನವೇ, ಲಾಕ್ಡೌನ್ನ ನಿಯಮಗಳನ್ನು ಉಲ್ಲಂಘಿಸಿದ ಯೋಗಿ ಆದಿತ್ಯನಾಥ್ ವಿರುದ್ದ ವರದಿ ಪ್ರಕಟ ಮಾಡಿದ್ದಕ್ಕಾಗಿ ದಿ ವೈರ್ ಸ್ಥಾಪಕ ಸಂಪಾದಕ ಸಿದ್ದಾರ್ಥ್ ವರದರಾಜನ್ ವಿರುದ್ದ ಪ್ರಕರಣ ದಾಖಲಾಗಿತ್ತು. ಅಲ್ಲಿಂದ ಶುರುವಾದ ಈ ವಿಲಕ್ಷಣ ಪ್ರಯತ್ನ ಇನ್ನೂ ಮುಂದುವರೆಯುತ್ತಲೇ ಇದೆ.
ಈ ರೀತಿಯ ಅಡ್ಡದಾರಿಯಿಂದ ಸ್ವತಂತ್ರ ಸುದ್ದಿ ಮಾಧ್ಯಮಗಳ ಬಾಯಿ ಮುಚ್ಚಿಸಲು ಪ್ರಯತ್ನ ಪಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಉಂಟಾದ ಧಕ್ಕೆ. ವರದಿಗಳನ್ನು ನಿರ್ಭೀತಿಯಿಂದ ಪ್ರಕಟಿಸುವ ಸಲುವಾಗಿಯೇ ಹುಟ್ಟಿಕೊಂಡಿರುವ ಸ್ವತಂತ್ರ ಸುದ್ದಿಜಾಲತಾಣಗಳನ್ನು ಹತ್ತಿಕ್ಕುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ಮುಖ್ಯವಾಹಿನಿಯ ಮಾಧ್ಯಮಗಳು ಪೂರ್ವಗ್ರಹಪೀಡಿರಾಗಿ ವರದಿಗಳನ್ನು ಪ್ರಸಾರ ಮಾಡುವ ಸಂದರ್ಭದಲ್ಲಿ ಸಮಾಜದಲ್ಲಿರುವ ಹುಳುಕುಗಳ ಅಸಲೀಯತ್ತನ್ನು ತೆರೆದಿಡುವ ಸ್ವತಂತ್ರ ಸುದ್ದಿ ಜಾಲತಾಣಗಳು ಬೆಳೆಯಬೇಕಾದ ಅನಿವಾರ್ಯತೆ ಎದುರಾಗಿದೆ.













