ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಕಡಿವಾಣ ಹಾಕಲು ದೇಶಾದ್ಯಂತ 21 ಪ್ರಮುಖ ವಿಜ್ಞಾನಿಗಳನ್ನು ಒಳಗೊಂಡ ಕೋವಿಡ್-19ರ ರಾಷ್ಟ್ರೀಯ ಕಾರ್ಯಪಡೆಯನ್ನು ಸರ್ಕಾರ ರಚಿಸಿತ್ತು. ಆದರೆ ಸರ್ಕಾರ ರಾಷ್ಟ್ರವ್ಯಾಪಿ ಲಾಕ್ಡೌನ್ ವಿಸ್ತರಿಸುವ ಘೋಷಣೆಗೆ ಮುನ್ನ ವಾರದಲ್ಲಿ ಒಂದು ಬಾರಿ ಕೂಡಾ ಸಭೆ ಸೇರಿಲ್ಲ. ತಜ್ಞರ ಗುಂಪಿನ ನಾಲ್ಕು ಸದಸ್ಯರ ಪ್ರಕಾರ, ಏಪ್ರಿಲ್ 14ರಂದು ನಡೆದ ರಾಷ್ಟ್ರೀಯ ಪ್ರಸಾರವೊಂದರಲ್ಲಿ ಲಾಕ್ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸುವ ನಿರ್ಧಾರವನ್ನು ಮೋದಿ ಘೋಷಿಸಿದರು. ನಿರ್ಧಾರ ತೆಗೆದುಕೊಳ್ಳುವ ಮೊದಲು ಸರ್ಕಾರ ತಜ್ಞರ ತಂಡವನ್ನು ಸಂಪರ್ಕಿಸಿಲ್ಲ. ಏಪ್ರಿಲ್ 7ರಂದು ದೇಶದ ಕೋವಿಡ್ ಸೋಂಕಿತರ ಸಂಖ್ಯೆ 4,421 ಆಗಿದ್ದು 114 ಸಾವುಗಳೂ ಸಂಭವಿಸಿದ್ದವು. ಏಪ್ರಿಲ್ 14ರ ವೇಳೆಗೆ ಈ ಸಂಖ್ಯೆ 339 ಸಾವುಗಳು 10,363 ಸೋಂಕು ದೃಢಪಟ್ಟ ಪ್ರಕರಣಗಳಿಗೆ ಏರಿಕೆ ದಾಖಲಿಸಿತು.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಭಾರತದ ಕೋವಿಡ್-19 ನೀತಿಯನ್ನು ರೂಪಿಸುವ ನೋಡಲ್ ಏಜೆನ್ಸಿ ಆಗಿದ್ದು ಖಾಸಗಿ ಪ್ರಯೋಗಾಲಯಗಳಿಗೆ ಕೋವಿಡ್-19 ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡುವ ನಿರ್ಧಾರವನ್ನು ಕಾರ್ಯಪಡೆಯೊಂದಿಗೆ ವ್ಯಾಪಕವಾದ ಚರ್ಚೆಗಳ ನಂತರ ತೆಗೆದುಕೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್ಗೆ ಏಪ್ರಿಲ್ 4ರಂದು ನೀಡಿದ ಉತ್ತರದ ಮೂಲಕ ಸಲ್ಲಿಸಲಾಯಿತು. ಆದರೆ ಕಾರ್ಯಪಡೆಯ ಸದಸ್ಯರ ಪ್ರಕಾರ, ಅಂತಹ ಯಾವುದೇ ಚರ್ಚೆ ನಡೆದಿಲ್ಲ. ಈ ಕುರಿತು ಅನಾಮಧೇಯವಾಗಿ ವರದಿಗಾರರೊಬ್ಬರೊಂದಿಗೆ ಮಾತನಾಡಿದ ಕಾರ್ಯಪಡೆಯ ಸದಸ್ಯರೊಬ್ಬರು, ಸಭೆಗಳ ಕಾರ್ಯಸೂಚಿ ವಿವರಗಳನ್ನು ಕ್ಯಾಬಿನೆಟ್ ಕಾರ್ಯದರ್ಶಿಗೆ ಮಾತ್ರ ಕಳುಹಿಸಲಾಗುತ್ತಿದೆ ಎಂದು ಹೇಳಿದರು.ಕಾರ್ಯಪಡೆಯು ತೆಗೆದುಕೊಳ್ಳುವ ನಿರ್ಧಾರಗಳು ಪಾರದರ್ಶಕವಾಗಿಲ್ಲ, ಮತ್ತು ಕೋವಿಡ್-19 ಪರೀಕ್ಷೆಯ ಕುರಿತು ತೆಗೆದುಕೊಂಡಿರುವ ತೀರ್ಮಾನಗಳೇ ಇದನ್ನು ದೃಢಪಡಿಸುತ್ತವೆ. ಮಾರ್ಚ್ 21ರಂದು, ಕಾರ್ಯಪಡೆ ರಚನೆಯಾದ ಮೂರು ದಿನಗಳ ನಂತರ, ಆರೋಗ್ಯ ಸಚಿವಾಲಯವು ಐಸಿಎಂಆರ್ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಖಾಸಗಿ ಚಿಕಿತ್ಸಾಲಯಗಳಿಗೆ ಕರೋನಾ ವೈರಸ್ ಪರೀಕ್ಷಿಸಲು ಅವಕಾಶ ನೀಡುವಂತೆ ಸೂಚಿಸಿತ್ತು.
ಆದರೆ ಪರೀಕ್ಷೆಗಳಿಗೆ ಇದ್ದ ನಿಗದಿತ ರೂ. 4500 ಶುಲ್ಕವನ್ನು ತೆಗೆದು ಹಾಕಿ ಉಚಿತ ಪರೀಕ್ಷೆಯನ್ನು ನಡೆಸಲು ಖಾಸಗಿ ಚಿಕಿತ್ಸಾಲಯಗಳಿಗೆ ನಿರ್ದೇಶನ ನೀಡುವಂತೆ ನ್ಯಾಯಾಲಯದಿಂದ ನಿರ್ದೇಶನಗಳನ್ನು ಕೋರಿ ವಕೀಲ ಶಶಾಂಕ್ ದಿಯೋ ಸುಧಿ ಅವರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಈ ನಿರ್ಧಾರವನ್ನು ಪ್ರಶ್ನಿಸಿದ್ದರು. ಏಪ್ರಿಲ್ 8ರಂದು, ಸುಪ್ರೀಂ ಕೋರ್ಟ್ ಅರ್ಜಿಯನ್ನು ಸ್ವೀಕರಿಸಿ ಮತ್ತು ಸರ್ಕಾರಿ ಮತ್ತು ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆ ಸಂಪೂರ್ಣ ಉಚಿತವಾಗಿರಬೇಕು ಎಂದು ಆದೇಶಿಸಿತು.ಎರಡು ದಿನಗಳ ನಂತರ, ದೆಹಲಿಯ ಪ್ರಿಮಸ್ ಆಸ್ಪತ್ರೆಯಲ್ಲಿ ಮೂಳೆ ಶಸ್ತ್ರಚಿಕಿತ್ಸಕ ಡಾ. ಕೌಶಲ್ ಕಾಂತ್ ಮಿಶ್ರಾ ಅವರು ಈ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ಮತ್ತೊಂದು ಅರ್ಜಿಯನ್ನು ಸಲ್ಲಿಸಿದರು. ಖಾಸಗಿ ಲ್ಯಾಬ್ ಗಳಿಗೆ ಸರ್ಕಾರ ಹಣ ಪಾವತಿ ವಿಧಾನವನ್ನು ಇನ್ನೂ ಕೂಡಾ ಸ್ಪಷ್ಟಪಡಿಸಿಲ್ಲವಾದ್ದರಿಂದ ಇದು ಖಾಸಗಿ ಲ್ಯಾಬ್ಗಳುರೋಗಿಗಳನ್ನು ಪರೀಕ್ಷಿಸಲು ನಿರಾಕರಿಸುವುದಕ್ಕೆ ಕಾರಣವಾಗಬಹುದು ಎಂದು ಮಿಶ್ರಾ ವಾದಿಸಿದ್ದರು. ಖಾಸಗಿ ಲ್ಯಾಬ್ಗಳು ಸಾರ್ವಜನಿಕರಿಗೆ 4,500 ರೂ.ವರೆಗೆ ಶುಲ್ಕ ವಿಧಿಸಲು ಅನುಮತಿ ನೀಡಬೇಕು ಮತ್ತು ಆರ್ಥಿಕವಾಗಿ ದುರ್ಬಲ ವಿಭಾಗಗಳ ವಿಭಾಗಕ್ಕೆ ಸೇರುವ ವ್ಯಕ್ತಿಗಳಿಗೆ ಮಾತ್ರ ಉಚಿತ ಪರೀಕ್ಷೆಗಳನ್ನು ನಡೆಸಬೇಕು ಎಂದು ನ್ಯಾಯಾಲಯದ ನಿರ್ದೇಶನಗಳನ್ನು ನೀಡಬೇಕು ಎಂದೂ ಅವರು ಅರ್ಜಿಯಲ್ಲಿ ಕೋರಿದ್ದರು.
ಏಪ್ರಿಲ್ 12 ರಂದು, ಐಸಿಎಂಆರ್ ಈ ಹಿಂದಿನ ಕೋರ್ಟ್ ಆದೇಶದ ಮಾರ್ಪಾಡಿಗಾಗಿ ಸುಪ್ರೀಂ ಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿತು. ಐಸಿಎಂಆರ್ನ ಸಹಾಯಕ ಮಹಾನಿರ್ದೇಶಕ ಆರ್.ಲಕ್ಷ್ಮೀ ನಾರಾಯಣನ್ ಅವರು ಐಸಿಎಂಆರ್ ಪರವಾಗಿ ಅಫಿಡವಿಟ್ ಸಲ್ಲಿಸಿದರು ಮತ್ತು ಉಚಿತ ಪರೀಕ್ಷೆಯನ್ನು ನಡೆಸುವಂತೆ ತಿಳಿಸಿರುವ ನ್ಯಾಯಾಲಯದ ಆದೇಶವು “ಕೋವಿಡ್ ವಿರುದ್ದ ದೇಶ ಸಾರಿರುವ ಹೋರಾಟಕ್ಕೆ ಹಿನ್ನಡೆ ಆಗಲಿದೆ” ಎಂದೂ ತಿಳಿಸಿದ್ದಾರೆ.ಲಕ್ಷ್ಮೀನಾರಾಯಣನ್ ಅವರ ಅಫಿಡವಿಟ್ ಪ್ರಕಾರ, ಏಪ್ರಿಲ್ 9ರ ಹೊತ್ತಿಗೆ, ಸರ್ಕಾರಿ ಪ್ರಯೋಗಾಲಯಗಳು ಶೇಕಡಾ 87.28ರಷ್ಟು ಕೋವಿಡ್-19 ಪರೀಕ್ಷೆಗಳನ್ನು ನಡೆಸಿದವು. ಮತ್ತು ಕೇವಲ ಶೇಕಡಾ 12.72 ರಷ್ಟು ಮಾತ್ರ ಖಾಸಗಿ ಲ್ಯಾಬ್ ಗಳಿಂದ ನಡೆಸಲ್ಪಟ್ಟವು.
ಅಲ್ಲದೆ ಅಫಿಡವಿಟ್ ನಲ್ಲಿ ಐಸಿಎಂಆರ್ ಕಾರ್ಯಪಡೆಯೊಂದಿಗೆ ಸಭೆ ನಡೆಸಿ ಕೂಲಂಕುಷವಾಗಿ ಚರ್ಚೆ ನಡೆಸಿ ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಕಾರ್ಯಪಡೆಯ ಸದಸ್ಯರೊಬ್ಬರು ಸಭೆಯೇ ನಡೆದಿಲ್ಲ ಎಂದು ಹೇಳಿದ್ದಾರೆ. ಆದರೆ ಸರ್ಕಾರವು ತಜ್ಞರ ತಂಡದೊಂದಿಗೆ ಕೋವಿಡ್ ಕುರಿತ ಪರೀಕ್ಷಾ ತೀರ್ಮಾನಗಳನ್ನು ಚರ್ಚಿಸಲಿಲ್ಲ ಎಂದು ಕಾರ್ಯಪಡೆಯ ಕೆಲವು ಸದಸ್ಯರು ಬಹಿರಂಗಪಡಿಸುವಿಕೆಯು ಕೇಂದ್ರ ಸರ್ಕಾರವು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ನಂತರ ಸುಪ್ರೀಂ ಕೋರ್ಟು ಮಾರ್ಪಾಡಿಸಿದ ಆದೇಶದಲ್ಲಿ ಎಲ್ಲ ವರ್ಗದವರಿಗೂ ಉಚಿತವಾಗಿ ಪರೀಕ್ಷೆ ನಡೆಸುವ ವಿಷಯವನ್ನು ಸರ್ಕಾರದ ತೀರ್ಮಾನಕ್ಕೆ ಬಿಡುತ್ತಾರೆ. ಮತ್ತು ಪರೀಕ್ಷೆಗಳಿಗೆ ಖಾಸಗಿ ಲ್ಯಾಬ್ ಗಳು 4500ರೂಪಾಯಿ ಪಡೆಯಬಹುದೆಂದೂ ಆದೇಶಿಸುತ್ತದೆ.
ನ್ಯಾಯಾಲಯದ ಬೆಳವಣಿಗೆಗಳನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತರು ಖಾಸಗಿ ಪ್ರಯೋಗಾಲಯಗಳಿಗೆ ಶುಲ್ಕ ವಿಧಿಸಲು ಅವಕಾಶ ನೀಡುವ ನಿರ್ಧಾರವು ಆಸಕ್ತಿಯ ಘರ್ಷಣೆಗಳಿಂದ ಕೂಡಿದೆ ಎಂದು ಹೇಳುತ್ತಾರೆ. ಆರೋಗ್ಯ ಕ್ಷೇತ್ರದ ಹೋರಾಟ ಸಂಸ್ಥೆ ಅಖಿಲ ಭಾರತ ಡ್ರಗ್ ಆಕ್ಷನ್ ನೆಟ್ವರ್ಕ್ನ ಸಹ-ಸಂಚಾಲಕಿ ಮಾಲಿನಿ ಐಸೋಲಾ, ಅವರು ಖಾಸಗಿಚಿಕಿತ್ಸಾಲಯಗಳಿಗೆ ವೈರಸ್ ಪರೀಕ್ಷಿಸಲು ಅವಕಾಶ ನೀಡುವ ಸರ್ಕಾರದ ನಿರ್ಧಾರದಲ್ಲಿ ಆರೋಗ್ಯ ಉದ್ಯಮದ ಖಾಸಗಿ ವಲಯದ ಉದ್ಯಮಿಗಳು ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಹೇಳುತ್ತಾರೆ.
ಕಿರಣ್ ಮಜುಂದಾರ್-ಶಾ ಮತ್ತು ಇತರ ಖಾಸಗಿ ವಲಯದ ಉದ್ಯಮಿಗಳನ್ನೊಳಗೊಂಡ ಸಮಿತಿಯು ಖಾಸಗಿ ಲ್ಯಾಬ್ ಗಳ ಪರೀಕ್ಷೆಯ ವಿಧಾನಗಳನ್ನು ನಿರ್ಧರಿಸುವಲ್ಲಿ ಪ್ರಮುಖವಾದುದು. ಜೊತೆಗೆ 4,500 ರೂ.ಗಳ ಬೆಲೆಯನ್ನು ನಿಗದಿಪಡಿಸುತ್ತದೆ ಎಂದು ಐಸೋಲಾ ಹೇಳಿದರು.
ಆದರೆ ಆರೋಗ್ಯ ಕ್ಷೇತ್ರದ ಸಾಮಾಜಿಕ ಹೋರಾಟಗಾರ್ತಿ ಐಸೋಲ ಹೇಳುವ ಪ್ರಕಾರ, ಈಗ ನಿಗದಿಪಡಿಸಿರುವ ಬೆಲೆಯು ಅತ್ಯಂತ ದುಬಾರಿಯಾಗಿದೆ. ಖಾಸಗೀ ಲ್ಯಾಬ್ಗಳಿಗೆ ಕೋವಿಡ್-19 ಸೋಂಕು ಪರೀಕ್ಷಿಸಲು ಕೇವಲ 500 ರೂಪಾಯಿ ಒಳಗೆ ವೆಚ್ಚವಾಗಲಿದೆ.ಹೀಗಿದ್ದರೂ ಇಷ್ಟೊಂದು ದುಬಾರಿ ಪರೀಕ್ಷಾ ಶುಲ್ಕ ವಿಧಿಸಲು ಕಾರಣ ಏನು ಎಂದು ಪ್ರಶ್ನಿಸುತ್ತಾರೆ. ಸರ್ಕಾರವು ಕಾರ್ಯಪಡೆಯೊಂದಿಗೆ ಚರ್ಚಿಸದೆ, ಸಭೆ ನಡೆಸದೇ ತೆಗೆದುಕೊಳ್ಳುವ ತೀರ್ಮಾನದಿಂದಲೇ ಬಡ ಮತ್ತು ಮದ್ಯಮ ವರ್ಗದ ಜನತೆ ದುಬಾರಿ ಶುಲ್ಕ ತೆರಬೇಕಾಗಿದೆ ಎಂದೂ ಅವರು ಅರೋಪಿಸಿದರು.
ಏತನ್ಮಧ್ಯೆ, ಸರ್ಕಾರವು ಕಾರ್ಯಪಡೆಯ ಯಾವುದೇ ಶಿಫಾರಸುಗಳನ್ನು ಜಾರಿಗೆ ತಂದಂತೆ ಕಾಣುತ್ತಿಲ್ಲ. ಏಪ್ರಿಲ್ 6 ರಂದು ಐಸಿಎಂಆರ್ ಒಂದು ದಾಖಲೆಯನ್ನು ಪ್ರಕಟಿಸಿತು. “ಇಂಡಿಯಾ ಕೋವಿಡ್ -19 ಕ್ಲಿನಿಕಲ್ ರಿಸರ್ಚ್ ಕೋಲರೇಟಿವ್ ನೆಟ್ ವರ್ಕ್” ಅನ್ನು ತಕ್ಷಣದ ಆದ್ಯತೆಯಾಗಿ ಸ್ಥಾಪಿಸಲು ಕಾರ್ಯಪಡೆ ಶಿಫಾರಸು ಮಾಡಿದೆ. ನಿರ್ದಿಷ್ಟ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಪ್ರೋಟೋಕಾಲ್ಗಳನ್ನು ಅಭಿವೃದ್ಧಿಪಡಿಸಲು ದೇಶದಲ್ಲಿ ಕೋವಿಡ್-19 ನ ವೈದ್ಯಕೀಯ ತಿಳುವಳಿಕೆಯನ್ನು ಹೆಚ್ಚಿಸುವುದು ಈ ನೆಟ್ವರ್ಕ್ನ ಗುರಿಯಾಗಿದೆ ಎಂದು ದಾಖಲೆ ಹೇಳುತ್ತದೆ. ಆದರೂ, ಈ ಕುರಿತು ಶನಿವಾರದವರೆಗೂ ಯಾವುದೇ ಸಭೆ ಅಥವಾ ಚರ್ಚೆ ಇನ್ನೂ ಆಗದಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ.