ಇಡೀ ವಿಶ್ವವೇ ಕರೋನಾ ಸೋಂಕಿನಿಂದ ತತ್ತರಿಸಲು ಕಾರಣವಾದ ಚೀನಾ ದೇಶ ನಂತರದಲ್ಲಿ ಅದರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಜಾಗತಿಕ ಮಟ್ಟದಲ್ಲಿ ಅಚ್ಚರಿಗೆ ಕಾರಣವಾಗಿದ್ದರೆ, ಭಾರತದಲ್ಲಿ ಮೊಟ್ಟ ಮೊದಲ ಕರೋನಾ ಸೋಂಕು ಕಾಣಿಸಿಕೊಂಡ ದೇವರ ನಾಡು ಕೇರಳ ಕೂಡ ಅದೇ ರೀತಿ ಸೋಂಕು ನಿಯಂತ್ರಿಸುವಲ್ಲಿ ಯಶಸ್ಸಿನ ಮೆಟ್ಟಿಲನ್ನು ಒಂದೊಂದಾಗಿ ಏರುತ್ತಿದೆ. ಆದರೆ, ಇತರೆ ರಾಷ್ಟ್ರಗಳು ಮತ್ತು ಭಾರತದ ಇತರೆ ರಾಜ್ಯಗಳು ಇನ್ನೂ ಸೋಂಕು ತಡೆಗೆ ಪರದಾಡುತ್ತಲೇ ಇದೆ…!
ಹೌದು, ಕೋವಿಡ್-19 ಅರ್ಥಾತ್ ಕರೋನಾ ಹಾವಳಿ ನಿಯಂತ್ರಣದಲ್ಲಿ ಚೀನಾ ಮತ್ತು ಕೇರಳ ಕೈಗೊಂಡ ಕ್ರಮಗಳು, ಸರ್ಕಾರ ತನ್ನ ನಿರ್ಧಾರಗಳನ್ನು ಜಾರಿಗೊಳಿಸಲು ತೆಗೆದುಕೊಂಡ ಕಠಿಣ ನಿಲುವುಗಳು ಇಡೀ ಜಗತ್ತನ್ನೇ ಅಚ್ಚರಿಗೆ ತಳ್ಳಿದೆ. ವುಹಾನ್ ಸೇರಿದಂತೆ ಚೀನಾದಲ್ಲಿ ಕರೋನಾ ಹಬ್ಬಿದ ವೇಗ ಮತ್ತು ಸೋಂಕಿಗೆ ತುತ್ತಾಗಿ ಮೃತಪಟ್ಟವರ ಲೆಕ್ಕವನ್ನು ಚೀನಾ ಮರೆಮಾಚಿದೆ ಎಂಬ ಆರೋಪಗಳು ಇವೆಯಾದರೂ ಸೋಂಕು ತಡೆಗಟ್ಟಲು ಮತ್ತು ನಿಯಂತ್ರಣದಲ್ಲಿ ಆ ರಾಷ್ಟ್ರ ಮಾಡಿದ ಸಾಧನೆ ಕಡಿಮೆ ಏನೂ ಅಲ್ಲ. ಅದೇ ರೀತಿ ಭಾರತದಲ್ಲಿ ಮೊಟ್ಟ ಮೊದಲ ಕರೋನಾ ಕಾಣಿಸಿಕೊಂಡ ಮತ್ತು ಆರಂಭದಲ್ಲಿ ಅತಿ ವೇಗವಾಗಿ ಸೋಂಕು ಹರಡಲಾರಂಭಿಸಿದ ನಮ್ಮ ನೆರೆಯ ರಾಜ್ಯವಾದ ಕೇರಳದಲ್ಲಿ ಪ್ರಸ್ತುತ ಪ್ರತಿನಿತ್ಯ ವರದಿಯಾಗುತ್ತಿರುವ ಸೋಂಕಿತರ ಸಂಖ್ಯೆ ಒಂದಂಕಿಗೆ ಇಳಿದಿರುವುದು ಮತ್ತು ಗುಣಮುಖರಾಗುತ್ತಿರುವವರ ಸಂಖ್ಯೆ ದೇಶದಲ್ಲೇ ಅತ್ಯಧಿಕ ಪ್ರಮಾಣದಲ್ಲಿದೆ. ಇದರ ಹಿಂದೆ ಆ ರಾಜ್ಯ ಸರ್ಕಾರ ಮಾಡಿದ ಪ್ರಯತ್ನ ಕಮ್ಮಿಯೇನೂ ಅಲ್ಲ.
ಚೀನಾಕ್ಕಿಂತ ವೈದ್ಯಕೀಯವಾಗಿ ಹೆಚ್ಚು ಸಾಮರ್ಥ್ಯ ಹೊಂದಿರುವ ರಾಷ್ಟ್ರಗಳು ಸೋಂಕು ತಮ್ಮ ದೇಶಕ್ಕೆ ಬಂದು ಜನರಿಗೆ ಹಬ್ಬುವವರೆಗೂ ನಿರ್ಲಕ್ಷ್ಯ ವಹಿಸಿ ಈಗ ಒದ್ದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರ ಹಿಂದೆ ಸಾಕಷ್ಟು ಊಹಾಪೋಹಗಳು, ದಿನಕ್ಕೊಂದು ಕಥೆಗಳು ಸೃಷ್ಟಿಯಾಗುತ್ತಲೇ ಇದೆ. ಆದರೆ, ಚೀನಾದಲ್ಲಿ ಸೋಂಕು ತಡೆಗಟ್ಟಲು ಕೈಗೊಂಡ ಕ್ರಮಗಳು ಯಶಸ್ವಿಯಾಗಿ ಜಾರಿಗೊಂಡಿದ್ದು ಮಾತ್ರ ಸುಳ್ಳಲ್ಲ. ಅದೇರೀತಿ ಕೇರಳದಲ್ಲೂ ಸೋಂಕು ಹರಡುವುದನ್ನು ತಡೆಗಟ್ಟಲು ಅಲ್ಲಿನ ಸರ್ಕಾರ ಕಠಿಣ ನಿರ್ಧಾರಗಳನ್ನು ಕೈಗೊಂಡು ಅವುಗಳನ್ನು ಜಾರಿಗೊಳಿಸುವ ವಿಚಾರದಲ್ಲೂ ಅಷ್ಟೇ ಕಠಿಣ ನಿಲುವು ಅನುಸರಿಸಿದ್ದರಿಂದ ಅಲ್ಲಿಯೂ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಸೋಂಕಿನ ಕುರಿತ ಅಂಕಿ-ಸಂಕಿಗಳೇ ಇದನ್ನು ಸಾಬೀತುಪಡಿಸುತ್ತವೆ.
ಕಮ್ಯುನಿಸ್ಟ್ ಸರ್ಕಾರವಿದ್ದುದೇ ಕೇರಳಕ್ಕೆ ವರವಾಯಿತು!
ಭಾರತದ ಮಟ್ಟಿಗೆ ಹೇಳುವುದಾದರೆ ದೇವರ ನಾಡು ಕೇರಳ. ದೇಶದಲ್ಲೇ ಮೊಟ್ಟ ಮೊದಲ ಕರೋನಾ ಸೋಂಕು ಕಾಣಿಸಿಕೊಂಡಿದ್ದು ಈ ರಾಜ್ಯದಲ್ಲಿ. ಅಷ್ಟೇ ಅಲ್ಲ, ಅದು ವೇಗವಾಗಿ ಹರಡಲಾರಂಭಿಸಿದ್ದು ಕೂಡ ಇದೇ ರಾಜ್ಯದಲ್ಲಿ. ಇದುವರೆಗೆ 396 ಸೋಂಕು ಪ್ರಕರಣಗಳು ವರದಿಯಾಗಿದ್ದು, ಮೂವರು ಮೃತಪಟ್ಟಿದ್ದಾರೆ. 255 ಮಂದಿ ಗುಣಮುಖರಾಗಿದ್ದಾರೆ. ಆದರೆ, ದೇಶದಲ್ಲಿ ಅತಿ ಕಡಿಮೆ ಸಾವಿನ ಪ್ರಮಾಣ ಮತ್ತು ಅತಿ ಹೆಚ್ಚು ಚೇತರಿಕೆಯ ಪ್ರಮಾಣ ಇದಾಗಿದೆ.
ಕೋವಿಡ್ ಗೆ ಬಲಿಯಾದವರ ಸರಾಸರಿ ಜಾಗತಿಕವಾಗಿ ಶೇ. 5.75 ಇದ್ದರೆ, ಭಾರತದ ಸರಾಸರಿ ಶೇ. 2.83, ಕೇರಳದ ಸರಾಸರಿ ಶೇ,. 0.58 ಮಾತ್ರ. ಜನಸಂಖ್ಯೆ ಆಧರಿಸಿದ ಪರೀಕ್ಷಾ ವ್ಯವಸ್ಥೆ ಅಳವಡಿಸಿಕೊಂಡ, ಪ್ಲಾಸ್ಮಾ ಚಿಕಿತ್ಸಾ ಪದ್ಧತಿ ಅಳವಡಿಸಿಕೊಂಡ ಮೊದಲ ರಾಜ್ಯ ಹೀಗೆಲ್ಲಾ ಹಲವು ಪ್ರಥಮಗಳಿಗೆ ಕಾರಣವಾದ ಕೇರಳ ಸೋಂಕು ತಡೆಗಟ್ಟಲು ಮತ್ತು ಚಿಕಿತ್ಸೆಗೆ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ವೈದ್ಯಕೀಯವಾಗಿ ಕೈಗೊಂಡ ಕ್ರಮಗಳು, ವಲಸಿಗರು, ಕಾರ್ಮಿಕರಿಗೆ ನೆರವು, ಜನರಿಗೆ ಪ್ಯಾಕೇಜ್, ಪಡಿತರ ವಿತರಣೆ, ಲಾಕ್ ಡೌನ್ ಸನ್ನಿವೇಶದಲ್ಲಿ ಪರಿಣಾಮಕಾರಿ ಸಂವಹನಕ್ಕಾಗಿ ಅಂತರ್ಜಾಲ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಿದ್ದು ಹೀಗೆ ಆಡಳಿತಾತ್ಮಕವಾಗಿ ಹಲವು ಪ್ರಮುಖ ನಿರ್ದಾರ ಕೈಗೊಂಡಿತು. ಸ್ವತಃ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಪ್ರತಿ ದಿನವೂ ಸ್ಥಿತಿಗತಿಗಳ ಅವಲೋಕನ ನಡೆಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿತ್ತು.
ಇದೆಲ್ಲಕ್ಕಿಂತ ಮುಖ್ಯವಾಗಿ ಲಾಕ್ಡೌನ್ ಜಾರಿಗೊಳಿಸಿ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಯಶಸ್ವಿಯಾಯಿತು. ದೇಶದಲ್ಲೇ ಮೊದಲ ಬಾರಿ ಸಾಂಕ್ರಾಮಿಕ ಸೊಂಕು ತಡೆ ಕಾಯ್ದೆ ರೂಪಿಸಿದ ಕೇರಳ, ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿತು. ಯಾರಾದರೂ ಕರೋನಾ ಸೋಂಕು ಇರುವುದನ್ನು ಮುಚ್ಚಿಟ್ಟು ಬೇರೆಯವರಿಗೆ ಹರಡಿದ್ದು ಕಂಡುಬಂದರೆ ಅಂಥವರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷ ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಈ ಕಾಯ್ದೆಯನ್ನು ಮುಂದಿಟ್ಟುಕೊಂಡು ಲಾಕ್ಡೌನ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡಿತು. ಈ ಕಠಿಣ ಕ್ರಮಗಳನ್ನು ವಿರೋಧಿಸಿದವರನ್ನು ಮುಲಾಜಿಲ್ಲದೆ ಮಟ್ಟ ಹಾಕಿತು.
ಭಾರತದಲ್ಲಿ ಇಂದು ಕರೋನಾ ಸೋಂಕು ಹೆಚ್ಚು ಮಂದಿಗೆ ಹರಡಲು ಪ್ರಮುಖ ಕಾರಣವಾಗಿರುವುದು ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡ ತಬ್ಲಿಘಿಗಳು ಮತ್ತು ದುಬೈ ರಾಷ್ಟ್ರದಿಂದ ಹಿಂದಿರುಗಿದವರು ಮತ್ತು ಅವರ ಸಂಪರ್ಕಕ್ಕೆ ಬಂದವರು. ಕೇರಳದಲ್ಲಿ ತಬ್ಲಿಘಿಗಳ ಪ್ರಮಾಣ ಕಡಿಮೆಯಾಗಿದ್ದರೂ ದುಬೈನಿಂದ ಹಿಂತಿರುಗಿದವರ ಪ್ರಮಾಣ ಹೆಚ್ಚಾಗಿತ್ತು. ತಬ್ಲಿಘಿಗಳು ಮತ್ತು ದುಬೈನಿಂದ ಹಿಂತಿರುಗಿದವರು ಮತ್ತು ಅವರೊಂದಿಗೆ ಸಂಪರ್ಕಕ್ಕೆ ಬಂದಿರುವವರು ದೇಶದೆಲ್ಲಡೆ ಪರೀಕ್ಷೆಗೆ ನಿರಾಕರಿಸುತ್ತಿದ್ದರೆ ಸರ್ಕಾರಗಳು ಅವರಲ್ಲಿ ಕೈಮುಗಿದು ಚಿಕಿತ್ಸೆಗೆ ಸಹಕರಿಸಿ ಎಂದು ಕೇಳಿಕೊಳ್ಳುತ್ತಿದ್ದವು. ಆದರೆ, ಅವರು ಸ್ಪಂದಿಸುತ್ತಿರಲಿಲ್ಲ. ಆದರೆ, ಕೇರಳದಲ್ಲಿ ಆ ರೀತಿಯ ಅನುಮಾನ ಬಂದ ಕೂಡಲೇ ಮುಲಾಜಿಲ್ಲದೆ ಬಲವಂತವಾಗಿ ಇಲ್ಲವೇ ಶಕ್ತಿ ಪ್ರದರ್ಶನದ ಮೂಲಕ ಕ್ವಾರಂಟೈನ್ ಗೆ ಒಳಪಡಿಸುವ ಮತ್ತು ಪರೀಕ್ಷೆಗೆ ಒಳಪಡಿಸುವ ಕೆಲಸ ನಡೆಯುತ್ತಿತ್ತು. ಮಾಧ್ಯಮಗಳು ಕೂಡ ಸರ್ಕಾರಕ್ಕೆ ಬೆಂಬಲವಾಗಿ ನಿಂತಿದ್ದರಿಂದ ಸರ್ಕಾರದ ನಿಲುವುಗಳಿಗೆ ಇಂಥ ಜನರ ವಿರೋಧ ಬಹಿರಂಗವಾಗಲೇ ಇಲ್ಲ. ಮೇಲಾಗಿ ಕಮ್ಯುನಿಸ್ಟ್ ಆಡಳಿತ ಇದ್ದುದರಿಂದ ಸಮುದಾಯಗಳು ಕೂಡ ಸರ್ಕಾರದ ವಿರುದ್ಧ ಸೊಲ್ಲೆತ್ತಲಿಲ್ಲ. ಇದರ ಪರಿಣಾಮ ಕರೋನಾ ನಿಯಂತ್ರಣ ವಿಚಾರದಲ್ಲಿ ಕೇರಳ ದೇಶಕ್ಕೇ ಮಾದರಿ ಎನ್ನುವಂತಾಗಿದೆ.
ಆದರೆ, ದೇಶದ ಇತರೆ ರಾಜ್ಯಗಳಲ್ಲಿ ಕೇರಳದಂತಹ ಪರಿಸ್ಥಿತಿ ಇಲ್ಲ. ಲಾಕ್ಡೌನ್ ನಿರ್ಬಂಧಗಳ ಜಾರಿಗೆ ಸರ್ಕಾರಗಳು ಕಠಿಣ ಕ್ರಮ ಕೈಗೊಂಡರೂ ಅದಕ್ಕೆ ಕೋಮು ಬಣ್ಣ ಕಟ್ಟಲಾಗುತ್ತಿದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸರ್ಕಾರ ಮುಸ್ಲಿಮ್ ವಿರೋಧಿ ನೀತಿ ಅನುಸರಿಸುತ್ತಿದೆ. ಕರೋನಾ ಸೋಂಕಿಗೆ ಮುಸ್ಲಿಮರನ್ನು ಬಲಿಪಶು ಮಾಡುವ ಮೂಲಕ ಕೋಮು ಬಣ್ಣ ಕಟ್ಟಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಇನ್ನು ಬಿಜೆಪಿಯೇತರ ಸರ್ಕಾರಗಳು ಅಧಿಕಾರದಲ್ಲಿರುವ ಕಡೆ ಎಲ್ಲಿ ತಮ್ಮ ಮತಬ್ಯಾಂಕ್ ಗೆ ಪೆಟ್ಟು ಬೀಳುವುದೋ ಎಂಬ ಕಾರಣಕ್ಕೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹಿಂದೇಟು ಹಾಕುತ್ತಿವೆ. ಇದರ ಪರಿಣಾಮ ಲಾಕ್ಡೌನ್ ಜಾರಿಯಲ್ಲಿದ್ದರೂ ಸೋಂಕು ಹರಡುವುದನ್ನು ತಡೆಗಟ್ಟಲು ಪರದಾಡುವಂತಾಗಿದೆ.
ಚೀನಾದಲ್ಲಿ ಗೊಂದಲ ಬಗೆಹರಿದಿಲ್ಲವಾದರೂ ಸೋಂಕು ನಿಯಂತ್ರಣಕ್ಕೆ ಬಂದಿದೆ
ಕರೋನಾ ವೈರಸ್ ಮೊಟ್ಟಮೊದಲ ಬಾರಿಗೆ ಕಾಣಿಸಿಕೊಂಡಿದ್ದ ವುಹಾನ್ ನಗರದಲ್ಲಿ ಈ ಸೋಂಕಿನಿಂದ ಮೃತಪಟ್ಟವರ ವಿವರಗಳನ್ನು ಚೀನಾ ಪರಿಷ್ಕರಣೆ ಮಾಡಿರುನವುದರಿಂದ ಮೃತರ ಸಂಖ್ಯೆ ಏಕಾಏಕಿಶೇ. 50ರಷ್ಟು ಏರಿಕೆಯಾಗಿದೆ. ಅಂದರೆ, ಈ ಹಿಂದೆ 3863 ಇದ್ದ ಮೃತರ ಸಂಖ್ಯೆ ಈಗ 4,636ಕ್ಕೇರಿದೆ. ಈ ಮಧ್ಯೆ ಕರೋನಾ ಸೋಂಕು ಕಾಣಿಸಿಕೊಂಡ ಬಳಿಕ ಚೀನಾದಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆ 2.15 ಕೋಟಿಯಷ್ಟು ಕುಸಿದಿದೆ. ಲ್ಯಾಂಡ್ ಲೈನ್ ಬಳಕೆದಾರರ ಸಂಖ್ಯೆಯೂ 84 ಲಕ್ಷದಷ್ಟು ಕುಸಿತ ಕಂಡಿದೆ. ವಲಸಿಗರು ಸಿಮ್ ತೆಗೆದಿರುವುದರಿಂದ ಈ ಕುಸಿತ ಕಂಡುಬಂದಿದೆ ಎಂದು ಇದಕ್ಕೆ ಚೀನಾ ಸಮರ್ಥನೆ ನೀಡುತ್ತಿದ್ದರೂ ಕರೋನಾದಿಂದಾಗಿ ಆಗಿರುವ ಸಾವಿನ ಸಂಖ್ಯೆಯನ್ನು ಚೀನಾ ಮುಚ್ಚಿಟ್ಟಿದೆ. ಇದು 2.15 ಕೋಟಿ ಅಲ್ಲದೇ ಇದ್ದರೂ ಸಾಕಷ್ಟು ಸಾವಿನ ಪ್ರಕರಣಗಳನ್ನು ಆ ರಾಷ್ಟ್ರ ಬಹಿರಂಗಪಡಿಸಿಲ್ಲ ಎಂಬುದರ ಬಗ್ಗೆ ಅಲ್ಲಿನ ಜನರೇ ವೀಡಿಯೋ, ಮತ್ತಿತರ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ವಿಚಾರ ಒತ್ತಟ್ಟಿಗಿರಲಿ. ಆ ರಾಷ್ಟ್ರದಲ್ಲಿ ಕರೋನಾ ಸೋಂಕು ನಿಯಂತ್ರಣಕ್ಕೆ ಬಂದಿರುವುದಂತೂ ಸುಳ್ಳಲ್ಲ. ಅಲ್ಲಿ ಅಧಿಕಾರದಲ್ಲಿರುವುದು ಕೂಡ ಕಮ್ಯುನಿಸ್ಟ್ ಸರ್ಕಾರ.
Also Read: ʼಕೇರಳ ಮಾದರಿʼ ಮಧ್ಯೆ ದೇವರ ನಾಡನ್ನ ಕ್ರಮಿಸಿ ಬಂದ ತುಂಬು ಗರ್ಭಿಣಿ!