ಇತ್ತೀಚಿಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಆಯ್ಕೆಯಾದ 26% ಸಂಸದರ ಮೇಲೆ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಚುನಾವಣೆಗೂ ಮುನ್ನ ಅಭ್ಯರ್ಥಿಗಳು ನೀಡಿದಂತಹ ಅಫಿಡವಿಟ್ನಲ್ಲಿ ಈ ವಿಚಾರವು ಬಹಿರಂಗವಾಗಿದೆ.
ಆಯ್ಕೆಯಾದ 62 ಹೊಸ ಸಂಸದರಲ್ಲಿ 16 ಸಂಸದರ ಮೇಲೆ ಕ್ರಿಮಿನಲ್ ಮೊಕದ್ದಮೆಗಳಿವೆ. ಅವರಲ್ಲಿ 11 ಸಂಸದರ ಮೇಲೆ ಅತೀ ಗಂಭೀರವಾದ ಪ್ರಕರಣಗಳು ಅಂದರೆ, ಕೊಲೆ, ಕೊಲೆ ಯತ್ನ, ಅತ್ಯಾಚಾರ ಮತ್ತು ಡಕಾಯಿತಿಯಂತಹ ಪ್ರಕರಣಗಳು ದಾಖಲಾಗಿವೆ.
ಇನ್ನು ಸಂಸದರ ಆಸ್ತಿ ಪಾಸ್ತಿ ವಿವರಗಳ ಕುರಿತ ಮಾಹಿತಿ ನೀಡುವುದಾದರೆ, ಶೇಕಡಾ 84 ಸಂಸದರು ಅಂದರೆ 52 ಜನರು ಕೋಟ್ಯಾಧೀಶರು. ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಲ್ಲ ಅಯೋಧ್ಯ ರಾಮಿ ರೆಡ್ಡಿ ಮತ್ತು ನಥ್ವಾಣಿ ಪರಿಮಾಲ್ ಅವರು ಕ್ರಮವಾಗಿ ರೂ. 2,577 ಕೋಟಿ ಮತ್ತು ರೂ. 396 ಕೋಟಿ ಆದಾಯವನ್ನು ಘೋಷಿಸಿಕೊಂಡಿದ್ದಾರೆ. ರೂ. 379 ಕೋಟಿ ಆದಾಯದೊಂದಿಗೆ ಮಧ್ಯಪ್ರದೇಶದ ಬಿಜೆಪಿ ಅಭ್ಯರ್ಥಿ ಜ್ಯೋತಿರಾದಿತ್ಯ ಸಿಂಧಿಯಾ ಮೂರನೇ ಸ್ಥಾನದಲ್ಲಿದ್ದಾರೆ. ಹೊಸದಾಗಿ ಆಯ್ಕೆಯಾದ ಸಂಸದರ ಸರಾಸರಿ ಆಸ್ತಿ ಮೌಲ್ಯ ಸುಮಾರು ರೂ. 74.04 ಕೋಟಿ.
ಇನ್ನು 62 ಜನರಲ್ಲಿ ಶೇಕಡಾ 50ರಷ್ಟು ಸಂಸದರು ಪದವಿಧರರಾಗಿದ್ದರೆ, ಶೇಕಡಾ 23ರಷ್ಟು ಸಂಸದರು ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. 10% ಜನರಿಗೆ ಡಾಕ್ಟರೇಟ್ ಪದವಿ ದೊರೆತಿದೆ. ಇನ್ನು ಉಳಿದಿರುವ 16% ಸಂಸದರು ಎಂಟನೇ ತರಗತಿಯಿಂದ ಪದವಿ ಪೂರ್ವ ತರಗತಿಯವರೆಗಿನ ವಿದ್ಯಾರ್ಹತೆ ಹೊಂದಿದ್ದಾರೆ.
ಇನ್ನೊಂದು ಗಮನಾರ್ಹ ವಿಚಾರವೇನೆಂದರೆ, 62 ಸಂಸದರಲ್ಲಿ ಕೇವಲ 8 ಜನ ಸಂಸದರು ಮಹಿಳೆಯರು.