ರಾಜಸ್ಥಾನದ ಬಂಡಾಯ ನಾಯಕ ಸಚಿನ್ ಪೈಲಟ್ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿಲ್ಲ. ದೆಹಲಿಯಲ್ಲಿ ಠಿಕಾಣಿ ಹೂಡಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನಾಗಲಿ ಭೇಟಿಯಾಗಿಲ್ಲ. ಅಥವಾ ರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಅವರನ್ನೂ ಭೇಟಿಯಾಗಿಲ್ಲ. ಹಾಗಾದರೆ ಸಚಿನ್ ಪೈಲಟ್ ಮುಂದಿನ ನಡೆ ಏನು?
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕೆಡವೇ ತೀರುತ್ತೇನೆಂದು ಪಣತೊಟ್ಟು ಬಂಡಾಯದ ಭಾವುಟ ಹಿಡಿದು ಜೈಪುರದಿಂದ ದೆಹಲಿಗೆ ಬಂದಿದ್ದ ಸಚಿನ್ ಪೈಲಟ್ ಗೆ ಸದ್ಯಕ್ಕೆ ತೀವ್ರ ಹಿನ್ನಡೆ ಆದಂತಿದೆ. ಕಳೆದ ಶನಿವಾರ 24 ಶಾಸಕರೊಂದಿಗೆ ದೆಹಲಿಗೆ ಬಂದಿದ್ದರು. ತಮ್ಮ ಬಳಿ 30 ಶಾಸಕರಿದ್ದಾರೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಆದರೀಗ 24 ಶಾಸಕರ ಪೈಕಿ ಬರೊಬ್ಬರಿ 17 ಶಾಸಕರು ಉಲ್ಟಾ ಹೊಡೆದಿದ್ದಾರೆ. ‘ತಾವು ಮುಖ್ಯಮಂತ್ರಿ ಬದಲಾವಣೆಗಾಗಿ ದೆಹಲಿ ವಿಮಾನ ಏರಿದ್ದೇವೆಯೇ ಹೊರತು, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಲಲ್ಲ’ ಎಂದಿದ್ದಾರೆ. ಇದರಿಂದ ಸಚಿನ್ ಪೈಲಟ್ ಅವರ ಆಪರೇಷನ್ ಕಮಲಕ್ಕೆ ಒಳಗಾಗುವ ‘ಪೈಲಟ್ ಪ್ಲಾನ್’ ವಿಫಲವಾಗಿದೆ.
ರಾಜಸ್ಥಾನದ ರಾಜಕಾರಣ, ಅವರವರ ಕ್ಷೇತ್ರದ ಸೋಷಿಯಲ್ ಇಂಜನಿಯರಿಂಗ್ ದೃಷ್ಟಿಯಿಂದ ಶಾಸಕರು ಬಿಜೆಪಿ ಸೇರಲು ಬಿಲ್ ಕುಲ್ ಒಪ್ಪುತ್ತಿಲ್ಲ. ಇನ್ನೊಂದೆಡೆ ಸಚಿನ್ ಪೈಲಟ್ ನಡೆಯಿಂದ ವಿಚಲಿತರಾದ ಅಶೋಕ್ ಗೆಹ್ಲೋಟ್ ಖುದ್ದಾಗಿ ಶಾಸಕರಿಗೆ ಕರೆ ಮಾಡಿ ಕಾಂಗ್ರೆಸ್ ಬಿಡಬೇಡಿ, ನಿಮ್ಮ ಸಮಸ್ಯೆ ಪರಿಹರಸಲಾಗುವುದು ಎಂದು ಅಭಯ ನೀಡಿದ್ದಾರೆ. ಎರಡೂ ಕಾರಣಗಳಿಂದ ಸಚಿನ ಪೈಲಟ್ ಪಾಳೆಯದಲ್ಲಿದ್ದ 17 ಶಾಸಕರು ಅಶೋಕ್ ಗೆಹ್ಲೋಟ್ ತೆಕ್ಕೆ ಸೇರಿಕೊಂಡಿದ್ದಾರೆ. ಈ ಬೆಳವಣಿಗೆಯಿಂದ ಬೆಸ್ತು ಬಿದ್ದಿರುವ ಸಚಿನ್ ಪೈಲೆಟ್ ಈಗ ಹೊಸ ವರಸೆ ಶುರುಮಾಡಿದ್ದಾರೆ.

ಅದೇ ತೃತೀಯ ರಂಗ. ಕರ್ನಾಟಕದಂತೆ ರಾಜಸ್ಥಾನದಲ್ಲೂ ಈವರೆಗೆ ತೃತೀಯ ರಂಗಕ್ಕಾಗಲಿ, ಪ್ರಾದೇಶಿಕ ಪಕ್ಷಗಳಿಗಾಗಲಿ ಅಷ್ಟೇನೂ ಮಹತ್ವ ಸಿಕ್ಕಿಲ್ಲ. ಆದರೂ ಇತ್ತ ಮತ್ತೆ ಅಶೋಕ್ ಗೆಹ್ಲೋಟ್ ನಾಯಕತ್ವ ಒಪ್ಪಿಕೊಂಡು ವಾಪಸ್ ಕಾಂಗ್ರೆಸ್ ಬರಲಾರದೆ(ತಾಂತ್ರಿಕವಾಗಿ ಕಾಂಗ್ರೆಸ್ ತ್ಯಜಿಸಿಲ್ಲ), ಅತ್ತ ಬಿಜೆಪಿಯನ್ನೂ ಸೇರಲಾರದೆ ಅತಂತ್ರವಾಗಿರುವ ಸಚಿನ್ ಪೈಲಟ್ ರಾಜ್ಯದ ಪರಿಸ್ಥಿತಿ ಪೂರಕವಾಗಿಲ್ಲದಿದ್ದರೂ ಹೊಸ ಪಕ್ಷ ಕಟ್ಟಲು, ತೃತೀಯ ರಂಗ ನಿರ್ಮಿಸಲು ಮುಂದಾಗಿದ್ದಾರೆ. ಪ್ರಗತಿಶೀಲ ಮೋರ್ಚಾ ಅಥವಾ ಪ್ರಗತಿಶೀಲ ಕಾಂಗ್ರೆಸ್ ಎಂಬ ಹೆಸರಿನಲ್ಲಿ ಪಕ್ಷ ಕಟ್ಟುವ ಸಾಧ್ಯತೆಗಳಿವೆ. ಸದ್ಯಕ್ಕೆ ಎಷ್ಟು ಸಾಧ್ಯವೋ ಅಷ್ಟು ಶಾಸಕರಿಂದ ರಾಜೀನಾಮೆ ಕೊಡಿಸಿ, ಸರ್ಕಾರದಲ್ಲಿ ಅನಿಶ್ಚಿತತೆ ಮೂಡಿಸಿ, ಉಪಚುನಾವಣೆಗಳನ್ನು ಗೆದ್ದುಬಂದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುವ ಬಲು ದೂರದ ಆಲೋಚನೆ ಮಾಡಿದ್ದಾರೆ ಎನ್ನುತ್ತಾರೆ ಅವರ ಸಮೀಪವರ್ತಿಗಳು.
ಆದರೆ ಸಚಿನ್ ಪೈಲಟ್ ಎಣಿಸಿರುವಂತೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿಸುವುದು ಅಷ್ಟು ಸಲುಭವಾಗಿಲ್ಲ. ಏಕೆಂದರೆ ರಾಜಸ್ಥಾನ ವಿಧಾನಸಭೆ ಸದಸ್ಯ ಸಂಖ್ಯಾಬಲ 200. ಬಹುಮತ ಸಾಬೀತುಪಡಿಸಬೇಕಾದ ಮ್ಯಾಜಿಕ್ ನಂಬರ್ 101. ಇಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿ ಸಹಿ ಹಾಕಿರುವ ಶಾಸಕರ ಸಂಖ್ಯೆ 102.
ಬಿಟಿಪಿಯ 2, ಸಿಪಿಐ (ಎಂ)ನ 2, ಆರ್ ಎಲ್ಡಿಯ 1 ಮತ್ತು ಪಕ್ಷೇತರರಾದ 12 ಶಾಸಕರು ಪಕ್ಷವನ್ನು ಬೆಂಬಲಿಸಿದ್ದರಿಂದ ಸ್ವತಃ 107 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಬಲ 124 ಆಗಿತ್ತು. ಇದರಲ್ಲಿ ಈಗ ಸಚಿನ್ ಪೈಲಟ್ ಜೊತೆಗಿರುವವರು 17 ಜನ ರಾಜೀನಾಮೆ ನೀಡಿದರೆ ಕಾಂಗ್ರೆಸ್ ಬಲ 117ಕ್ಕೆ ಇಳಿಯುತ್ತದೆ. ಸಿಪಿಐ (ಎಂ)ನ ಇಬ್ಬರು ಸೈದ್ಧಾಂತಿಕ ಕಾರಣಕ್ಕೆ ಬಿಜೆಪಿ ಸೇರುವುದಿಲ್ಲ. ಉಳಿದಂತೆ ಬಿಟಿಪಿಯ ಇಬ್ಬರು, ಆರ್ ಎಲ್ಡಿಯ ಒಬ್ಬರು ಮತ್ತು ಪಕ್ಷೇತರರಾದ 12 ಶಾಸಕರು ಬೆಂಬಲ ವಾಪಸ್ ಪಡೆದರೆ ಆಗ ಕಾಂಗ್ರೆಸ್ ಬಲ 102ಕ್ಕೆ ಇಳಿಯುತ್ತದೆ. ಅಲ್ಲದೆ ಸಚಿನ್ ಪೈಲಟ್ ಬಣದ 17 ಶಾಸಕರು ರಾಜೀನಾಮೆ ನೀಡುವುದರಿಂದ ಕಾಂಗ್ರೆಸ್ ಬಲ 92ಕ್ಕೆ ಇಳಿಯುತ್ತದೆ. ವಿಧಾನಸಭೆಯ ಬಲ 183ಕ್ಕೆ ಕುಸಿಯುತ್ತದೆ. ಮ್ಯಾಜಿಕ್ ನಂಬರ್ 92 ಆಗುತ್ತದೆ.
ಬಿಜೆಪಿಯ ಸದ್ಯದ ಬಲ ಬಿಜೆಪಿ 72. ಆರ್ಎಲ್ಪಿಯ ಮೂವರು ಮತ್ತು ಓರ್ವ ಪಕ್ಷೇತರ ಬೆಂಬಲ ಸೂಚಿಸಿರುವುದರಿಂದ 76 ಆಗಿದೆ. ಈಗ ಕಾಂಗ್ರೆಸ್ ಪಾಳೆಯದಿಂದ ಬಿಟಿಪಿಯ ಇಬ್ಬರು, ಆರ್ ಎಲ್ಡಿಯ ಒಬ್ಬರು ಮತ್ತು ಪಕ್ಷೇತರರಾದ 12 ಶಾಸಕರು ಬಂದರೆ ಬಿಜೆಪಿಯ ಬಲ 91ಆಗುತ್ತದೆ. ಆಗಲೂ ಕಾಂಗ್ರೆಸ್ ಸರ್ಕಾರದ ಪತನ ಮತ್ತು ಬಿಜೆಪಿಯ ಸರ್ಕಾರ ರಚನೆ ಎರಡೂ ಸಾಧ್ಯವಾಗುವುದಿಲ್ಲ.

ಈ ಅಂಕಗಣಿತ ಕೈಹಿಡಿಯುವುದಿಲ್ಲ ಎನ್ನುವ ಕಾರಣಕ್ಕಾಗಿಯೇ ಇವತ್ತು ಬಿಜೆಪಿ ರಾಷ್ಟ್ರೀಯ ನಾಯಕರು ಸಚಿನ್ ಪೈಲಟ್ ಭೇಟಿಗೆ ಅವಕಾಶ ನೀಡಿಲ್ಲ. ಮುಂದೆಯಾದರೂ ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಕೆಡವಬೇಕಾದರೆ ಇನ್ನಷ್ಟು ಶಾಸಕರನ್ನು ಸೆಳೆಯಬೇಕು. ಅದಕ್ಕೆ ಇನ್ನಷ್ಟು ಕಾಲ ಬೇಕಾಗಬಹುದು. ಈ ಘಟನೆಯಿಂದ ತೀವ್ರವಾಗಿ ಘಾಸಿಗೊಂಡಿರುವ ಸಚಿನ್ ಪೈಲಟ್ ಹೊಸ ಪಕ್ಷ ಕಟ್ಟಿ ಹೊಸ ಆಟ ಶುರುಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಹೊರಗಡೆ ಇದ್ದುಕೊಂಡು ಕಾಂಗ್ರೆಸ್ ಶಾಸಕರನ್ನು ಅವರು ಸುಲಭವಾಗಿ ಸೆಳೆಯುವರೇ ಎಂಬುದು ಮುಂದಿನ ಕುತೂಹಲ. ಸದ್ಯಕ್ಕಂತೂ ಅವರಿಗೆ ದೊಡ್ಡ ಮುಖಭಂಗವಾಗಿದೆ. ಸಚಿನ್ ಪೈಲಟ್ ಗಿಂತ ಹೆಚ್ಚು ಮುಖಭಂಗ ಬಿಜೆಪಿ ಹೈಕಮಾಂಡಿಗೆ ಆಗಿದೆ. ಮಧ್ಯಪ್ರದೇಶದ ಬಳಿಕ ರಾಜಸ್ಥಾನದಲ್ಲೂ ತಮ್ಮ ಸರ್ಕಾರ ರಚಿಸಬೇಕು ಎಂದು ಹಪಹಪಿಸುತ್ತಿರುವ ಬಿಜೆಪಿಗೆ ಈಗ ಕ್ಲೈಮ್ಯಾಕ್ಸ್ ಅಂತದಲ್ಲಿ ಹಿನ್ನಡೆ ಉಂಟಾಗಿದೆ.
ರಾಜಕೀಯ ಪ್ರಕ್ಷುಬ್ಧತೆ ನಡುವೆಯೂ ಆದಾಯ ತೆರಿಗೆ ಅಧಿಕಾರಿಗಳು ರಾಜಸ್ಥಾನದ 22 ಜಾಗಗಳಲ್ಲಿ ದಾಳಿ ಮಾಡಿ, ಅದರಲ್ಲೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಆಪ್ತ ಉದ್ಯಮಿ ರಾಜೀವ್ ಅರೋರಾ ಅವರ ಮನೆ ಮೇಲೆ ದಾಳಿ ಮಾಡಿದರೂ ಕಾಂಗ್ರೆಸ್ ಶಾಸಕರು ಜಗ್ಗಿಲ್ಲ. ಮುಂದೆ ಯಾವ್ಯಾವ ಅಸ್ತ್ರಗಳು ಪ್ರಯೋಗವಾಗಲಿವೆಯೋ ಕಾದುನೋಡಬೇಕು.