ಇಂದು ದೇಶದಲ್ಲಿ ಜನಸಾಮಾನ್ಯನ ದೈನಂದಿನ ಜೀವನದಲ್ಲಿ ಮಾದ್ಯಮಗಳ ಪಾತ್ರ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಕೋವಿಡ್ 19 ಸೋಂಕಿನಿಂದ ದೇಶಾದ್ಯಂತ ಲಾಕೌಟ್ ಘೋಷಿಸಿದ್ದು ಈ ಅವಧಿಯಲ್ಲಿ ದೇಶದ ಮಾಧ್ಯಮಗಳ ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್ಪಿ ) ಸಿಕ್ಕಾಪಟ್ಟೆ ಏರಿಕೆ ದಾಖಲಿಸಿದೆ. ಏಕೆಂದರೆ ಸರ್ಕಾರದ ಆದೇಶದಂತೆ ಲಾಕೌಟ್ ಸಮಯದಲ್ಲಿ ಮನೆಯಲ್ಲೇ ಇರಬೇಕಾದ್ದರಿಂದ ಹೊತ್ತು ಕಳೆಯಲು ಜನರು ಟಿವಿ ನೋಡುವುದು , ಮೊಬೈಲ್ ನಲ್ಲೇ ಸಾಮಾಜಿಕ ತಾಣಗಳ ಮೊರೆ ಹೋಗುತಿದ್ದಾರೆ. ಆದರೆ ದೃಶ್ಯ ಮಾದ್ಯಮಗಳಲ್ಲಿ ಬರುವ ಪ್ರೈಂ ಟೈಂ ನ ಚರ್ಚೆ ಕೂಡ ಇದೀಗ ಪ್ರಮುಖ ಮನರಂಜನೆಯ ಸಾಧನವಾಗಿದೆ. ಆದರೆ ಈ ಚರ್ಚೆಯ ಸಮಯದಲ್ಲಿ ಟಿವಿ ನಿರೂಪಕರು ಅತ್ಯಂತ ಜವಾಬ್ದಾರಿಯಿಂದ ಕಾರ್ಯಕ್ರಮವನ್ನು ನಡೆಸಬೇಕಾಗಿರುತ್ತದೆ. ಆದರೆ ಈ ಚರ್ಚೆಯಲ್ಲೂ ಕೂಡ ನಿರೂಪಕರು ಕೋಮು ದ್ವೇಷ ಪ್ರಚೋದಿಸುವಂತೆ ಮಾತನಾಡಿದ ನಿದರ್ಶನಗಳೂ ನಡೆದಿವೆ.
ಅದರಲ್ಲೂ ದೇಶದ ನಂಬರ್ ಒನ್ ಸ್ಥಾನದಲ್ಲಿರುವ ಆಂಗ್ಲ ಭಾಷಾ ಸುದ್ದಿ ಚಾನೆಲ್ ರಿಪಬ್ಲಿಕ್ ಟಿವಿ ತನ್ನ ಸಮೀಪದ ಪ್ರತಿಸ್ಪರ್ದಿಗಳಿಗಿಂತಲೂ ಟಿಆರ್ಪಿ ಯಲ್ಲಿ ಬಹಳ ಮುಂದಿದೆ. ಅಂತಹ ಚಾನೆಲ್ ಒಂದರ ನಿರೂಪಕರೇ ಕೋಮು ದ್ವೇಷ ಸೃಷ್ಟಿಸಿದರೆ ಎಷ್ಟು ಅನಾಹುತ ಆಗಬಹುದು ಎಂದು ಊಹಿಸಿಕೊಳ್ಳುವುದಕ್ಕೆ ಆತಂಕವಾಗುತ್ತದೆ. ದೇಶದ ಟಿವಿ ನಿರೂಪಕರಲ್ಲೇ ಮುಂಚೂಣಿಯಲ್ಲಿರುವ ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಾಬ್ ಗೋಸ್ವಾಮಿ ಅಂತಹ ಒಂದು ಆರೋಪವನ್ನು ಹೊತ್ತುಕೊಂಡಿದ್ದಾರೆ. ಅವರ ವಿರುದ್ಧ ಕೋಮು ದ್ವೇಷವನ್ನು ಸೃಷ್ಟಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ.
ಅಷ್ಟಕ್ಕೂ ಈ ವಿಷಯದಲ್ಲಿ ನಿರೂಪಕ ಅರ್ನಬ್ ಅವರ ಪಾತ್ರವೇನು ಗೊತ್ತಾ ? ಕಳೆದ ಏಪ್ರಿಲ್ 14 ರಂದು ಮುಂಬೈನ ಬಾಂದ್ರಾ ರೈಲು ನಿಲ್ದಾಣದ ಬಳಿ ಸಾವಿರಾರು ಜನ ವಲಸೆ ಕಾರ್ಮಿಕರು ತಮ್ಮ ಸ್ವಂತ ಗ್ರಾಮಗಳಿಗೆ ತೆರಳಲು ಜಮಾಯಿಸಿದ್ದರು. ಲಾಕ್ ಡೌನ್ ನಡುವೆಯೂ ಕೇಂದ್ರ ಸರ್ಕಾರ ರೈಲನ್ನು ಬಿಟ್ಟಿದ್ದು ವಲಸೆ ಕಾರ್ಮಿಕರು ತವರಿಗೆ ತೆರಳಲು ಸಹಸ್ರ ಸಂಖ್ಯೆಯಲ್ಲಿ ಕೆಲ ಘಂಟೆಗಳಲ್ಲೇ ಜಮಾಯಿಸಿದ್ದರು. ವಾಸ್ತವವಾಗಿ ಈ ರೀತಿ ವಲಸೆ ಕಾರ್ಮಿಕರ ಜಮಾವಣೆಗೆ ಸ್ಥಳೀಯ ಚಾನೆಲ್ ಒಂದು ನೀಡಿದ ಸುಳ್ಳು ಸುದ್ದಿಯೇ ಇದಕ್ಕೂ ಕಾರಣವಾಗಿತ್ತು.
ಆದರೆ ವಲಸೆ ಕಾರ್ಮಿಕರ ಈ ಜಮಾವಣೆ ಬಗ್ಗೆ ವರದಿ ಮಾಡುವಾಗ ಗೋಸ್ವಾಮಿ ಅವರ ರಿಪಬ್ಲಿಕ್ ಚಾನೆಲ್ ಸಂಭಂದವೇ ಇಲ್ಲದ ಬಾಂದ್ರಾದ ಮಸೀದಿಯ ದೃಶ್ಯವನ್ನು ಪದೇ ಪದೇ ತೋರಿಸಿತ್ತು. ಆದರೆ ಇದರಲ್ಲಿ ಮಸೀದಿಯ ಪಾತ್ರವೇನೂ ಇರಲಿಲ್ಲ. ಮಸೀದಿಯನ್ನು ತೋರಿಸುವ ಮೂಲಕ ಲಾಕ್ ಡೌನ್ ಉಲ್ಲಂಘಿಸಿರುವ ವಲಸೆ ಕಾರ್ಮಿಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ಬಿಂಬಿಸುವುದು ರಿಪಬ್ಲಿಕ್ ಟಿವಿಯ ಉದ್ದೇಶ ಎಂದು ಆರೋಪಿಸಲಾಗಿದೆ. ಇದರಿಂದ ದೇಶಾದ್ಯಂತ ಟಿವಿ ವೀಕ್ಷಕರು ಸಮುದಾಯದ ಬಗ್ಗೆ ಕೆಟ್ಟ ಮನೋಬಾವನೆ ಬರುವಂತೆ ಮಾಡುವುದು ಗೋಸ್ವಾಮಿ ಅವರ ಉದ್ದೇಶವಾಗಿತ್ತು ಎಂದು ಈ ಪ್ರಕರಣದ ದೂರುದಾರ ಇರ್ಫಾನ್ ಅಬೂಬಕರ್ ಶೇಖ್ ಆರೋಪಿಸಿದ್ದಾರೆ. ಸಭೆಯೊಂದಿಗೆ ಯಾವುದೇ ಸಂಬಂಧವಿಲ್ಲದ ಬಾಂದ್ರಾದಲ್ಲಿ ಮಸೀದಿಯನ್ನು ಗೋಸ್ವಾಮಿ ಗುರಿಯಾಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ವಿಷಯದಲ್ಲಿ ಮುಂಬೈನ ಪೈಧೋನಿ ಪೋಲೀಸ್ ಠಾಣೆಯಲ್ಲಿ ಶನಿವಾರ ಮೊಕದ್ದಮೆ ದಾಖಲಾಗಿದೆ.
ಪತ್ರಿಕಾ ವರದಿಗಳ ಪ್ರಕಾರ ಬಾಂದ್ರಾ ರೈಲು ನಿಲ್ದಾಣದ ಬಳಿ ಇರುವ ಮಸೀದಿಗೂ ವಲಸೆ ಕಾರ್ಮಿಕರಿಗೂ ಏನೇನೂ ಸಂಭಂದ ಇರಲಿಲ್ಲ. ಆದರೆ ವಲಸಿಗರು ಮಸೀದಿಯ ಬಳಿಯ ತೆರೆದ ಜಾಗದಲ್ಲಿ ಜಮಾಯಿಸಿದ್ದರು. ಇದನ್ನು ತೋರಿಸುವ ಮೂಲಕ ನಗರದಲ್ಲಿ ಕೋಮು ಗಲಭೆ ಸೃಷ್ಟಿಸಲು ಅರ್ನಾಬ್ ಮಸೀದಿಯನ್ನು ಉದ್ದೇಶಪೂರ್ವಕವಾಗಿ ಎತ್ತಿ ತೋರಿಸಿದರು ಎಂದು ದೂರುದಾರರು ಆರೋಪಿಸಿದ್ದಾರೆ. ದೂರುದಾರ ರಾಜಾ ಎಜುಕೇಷನಲ್ ವೆಲ್ಫೇರ್ ಸೊಸೈಟಿಯ ಕಾರ್ಯದರ್ಶಿ ಅಬೂಬಕರ್ ಶೇಕ್ ಅವರ ಪ್ರಕಾರ ರಿಪಬ್ಲಿಕ್ ಟಿವಿ ಏಪ್ರಿಲ್ 29 ರಂದು ವಲಸಿಗರ ಪ್ರತಿಭಟನೆಯ ದೃಶ್ಯಾವಳಿಗಳನ್ನು ಪ್ರಸಾರ ಮಾಡಿದೆ. ಅದನ್ನು ಸ್ವತಃ ರಿಪಬ್ಲಿಕ್ ಮುಖ್ಯಸ್ಥ ಅರ್ನಬ್ ಅವರೇ ನಿರೂಪಿಸುತಿದ್ದರು. ಕರೋನವೈರಸ್ ಸೋಂಕು ಹರಡುವಿಕೆಗೆ ಮುಸ್ಲಿಂ ಸಮುದಾಯವನ್ನು ದೂಷಿಸುವ ಉದ್ದೇಶದಿಂದ ಚಾನೆಲ್ನಲ್ಲಿ ನಡೆದ ಪ್ರೈಂ ಟೈಂ ನ ಚರ್ಚೆಯನ್ನೂ ದೂರಿನಲ್ಲಿ ದಾಖಲಿಸಲಾಗಿದೆ. ಆ ಪ್ರಕಾರ ಗೋಸ್ವಾಮಿ ಅವರು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷದಿಂದ ತುಂಬಿದ ಅನೇಕ ಕಾಮೆಂಟ್ ಗಳನ್ನೂ ಮಾಡಿದ್ದಾರೆ, ಅಲ್ಲದೆ ಅವರು ಪ್ರಸಾರ ಮಾಡಿದ ಚರ್ಚೆಗಳಲ್ಲಿ ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಿಕೊಂಡು ಕಮೆಂಟ್ ಮಾಡಿದ್ದಾರೆ ಎಂದೂ ಶೇಖ್ ಆರೋಪಿಸಿದ್ದಾರೆ.
“ಪೈಡೋನಿ ಠಾಣಾಧಿಕಾರಿ ಅವರು ಟಿವಿ ನ ನಿರೂಪಕ ಅರ್ನಾಬ್ ಗೋಸ್ವಾಮಿ ಮತ್ತು ರಿಪಬ್ಲಿಕ್ ಟಿವಿಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಈ ಕುರಿತು ಸಾಕ್ಷ್ಯದ ಭಾಗವಾಗಿ ನಾವು ಟಿವಿ ದೃಶ್ಯಗಳ ತುಣುಕನ್ನು ಪೆನ್ ಡ್ರೈವ್ ನಲ್ಲಿ ಸಂಗ್ರಹಿಸಿದ್ದೇವೆ ಎಂದರು. ಅಲ್ಲದೆ ಛಾರ್ಚ್ ಶೀಟ್ ಸಲ್ಲಿಸುವಾಗ ಇದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದೂ ಅವರು ತಿಳಿಸಿದರು. ಅರ್ನಬ್ ಅವರ ಮೇಲೆ ಇದೇ ಮೊದಲ ಅರೋಪವಲ್ಲ, ಈ ಹಿಂದೆಯೂ ಈ ರೀತಿಯ ಆರೋಪ ಕೇಳಿ ಬಂದಿತ್ತು.
ಇದಕ್ಕೂ ಮೊದಲು ಕಳೆದ ಏಪ್ರಿಲ್ ತಿಂಗಳಿನಲ್ಲೇ ಕಾಂಗ್ರೆಸ್ ಅದ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಡಿಬೇಟ್ ನಲ್ಲೇ ಮಾನ ಹಾನಿ ಮಾಡಲಾಗಿದೆ ಎಂದು ಆರೋಪಿಸಿ ದೂಷಿಸಿದ್ದುದಕ್ಕಾಗಿ ಮಹಾರಾಷ್ಟ್ರ, ತೆಲಂಗಾಣ, ಮದ್ಯ ಪ್ರದೇಶ, ಮತ್ತು ಛತ್ತೀಸ್ ಘಡದಲ್ಲಿ ಗೋಸ್ವಾಮಿ ವಿರುದ್ದ ಒಟ್ಟು 16 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆದರೆ ಸಲ್ಲಿಸಿದ ಎಫ್ಐಆರ್ಗಳಲ್ಲಿ ಒಂದನ್ನು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಪೊಲೀಸರಿಗೆ ಅವಕಾಶ ನೀಡಿದ್ದು ಉಳಿದುವುಗಳನ್ನು ತಡೆ ಹಿಡಿದಿದೆ..
ಕಳೆದ ಏಪ್ರಿಲ್ 27 ರಂದು ಸೋನಿಯಾ ಗಾಂಧಿಗೆ ಸಂಬಂಧಿಸಿದ ಪ್ರಕರಣದಲ್ಲಿ ಗೋಸ್ವಾಮಿಯನ್ನು 12 ಗಂಟೆಗಳ ಕಾಲ ಪೋಲೀಸ್ ಠಾಣೆಯಲ್ಲಿ ಪ್ರಶ್ನಿಸಲಾಯಿತು. ಕಾಂಗ್ರೆಸ್ ಸಚಿವ ನಿತಿನ್ ರೌತ್ ಅವರ ಮೊದಲ ದೂರನ್ನು ನಾಗ್ಪುರದಲ್ಲಿ ದಾಖಲಿಸಲಾಗಿತ್ತು, ಆದರೆ ಸರ್ವೋಚ್ಚ ನ್ಯಾಯಾಲಯವು ಈ ಮೊಕದ್ದಮೆಯನ್ನು ಮುಂಬೈಗೆ ವರ್ಗಾಯಿಸಿತು. ಮುಂದಿನ ಮೂರು ವಾರಗಳವರೆಗೆ ಗೋಸ್ವಾಮಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ಹೇಳಿದೆ, ಆದ್ದರಿಂದ ಅವರು ಜಾಮೀನಿಗೆ ಅರ್ಜಿ ಸಲ್ಲಿಸಲು ಸಮಯಾವಕಾಶ ನೀಡಿದೆ.
ರಿಪಬ್ಲಿಕ್ ಟಿವಿ ಆಂಕರ್ ಅಗಿ ಗೋಸ್ವಾಮಿ ಅವರು ಮಹಾರಾಷ್ಟ್ರದ ಪಾಲ್ಗರ್ ನಲ್ಲಿ ನಡೆದಿದ್ದ ಇಬ್ಬರು ಸಾಧುಗಳು ಮತ್ತು ವಾಹನ ಚಾಲಕನ ಹತ್ಯೆ ಕುರಿತು ಕಾಂಗ್ರೆಸ್ ಅದ್ಯಕ್ಷೆ ಸೋನಿಯಾ ಗಾಂದಿಯವರ ಮೌನವನ್ನು ಕಟುವಾಗಿ ಟೀಕಿಸಿದ್ದರು. ಕಳೆದ ಏಪ್ರಿಲ್ 16 ರಂದು ಗ್ರಾಮಸ್ಥರ ಗುಂಪು ಸಾಧುಗಳು ಮತ್ತು ಚಾಲಕನು ಕಳ್ಳರು ಎಂಬ ಅನುಮಾನದ ಮೇಲೆ ಅವರನ್ನು ಗುಂಪು ಹತ್ಯೆ ಮಾಡಿದ್ದರು. ಗೋಸ್ವಾಮಿ ಅವರ ಪ್ರಕಾರ ಒಂದು ವೇಳೆ ಇವರು ಹಿಂದೂಗಳಲ್ಲದೇ ಬೇರೆ ಧರ್ಮದವರಾಗಿದ್ದಿದ್ದರೆ ಸೋನಿಯಾ ಗಾಂದಿ ಮೌನವಾಗೇ ಇರುತಿದ್ದರೇ ಎಂದೂ ಪ್ರಶ್ನಿಸಿದ್ದರು. ಈ ಸಂದರ್ಬದಲ್ಲಿ ಸೋನಿಯಾ ಅವರನ್ನು ಹೀನಾಯವಾಗಿ ನಿಂದಿಸಿದ್ದಾರೆ ಎಂದು ಅರೋಪಿಸಲಾಗಿತ್ತು.
ಇದಾದ ನಂತರ ಗೋಸ್ವಾಮಿ ಮತ್ತು ಅವರ ಪತ್ನಿ ಸಾಮ್ಯಬ್ರತಾ ಅವರು ರಾತ್ರಿ ಮನೆಗೆ ಹಿಂತಿರುಗುತಿದ್ದಾಗ ಕಾಂಗ್ರೆಸ್ ನ ಇಬ್ಬರು ಕಾರ್ಯಕರ್ತರು ಧಾಳಿ ನಡೆಸಿದ್ದರೆಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಸೋನಿಯ ಅವರೇ ತಮ್ಮ ವಿರುದ್ದ ಧಾಳಿ ಮಾಡಿಸಿದ್ದಾರೆ ಎಂದು ಗೋಸ್ವಾಮಿ ಆರೋಪಿಸಿದ್ದಾರೆ. ಒಟ್ಟಿನಲ್ಲಿ ಇಂತಹ ಘಟನೆಗಳಿಂದ ಮಾಧ್ಯಮಗಳು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ವಿಷಾದನೀಯ.