ಕೆಲವು ಸಮಯದ ಹಿಂದೆ, ಹೆಚ್ಚಿನ ರಾಜಕೀಯ ಮತ್ತು ಚುನಾವಣಾ ಸುದ್ದಿ ವಿಶ್ಲೇಷಕರು ಬಿಹಾರ ಚುನಾವಣೆಗಳಲ್ಲಿ NDAಗೆ ನಿಚ್ಚಳ ಬಹುಮತ ಗಳಿಸುತ್ತದೆ ಎಂದು ಅಂದಾಜಿಸಿದ್ದರು. ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಗಳೂ ಇದನ್ನೇ ಹೇಳಿದ್ದವು. ಆದರೆ ಮುಖ್ಯ ಮಂತ್ರಿ ನಿತೀಶ್ ಕುಮಾರ್ ಅವರ ನೇರ ಪ್ರತಿಸ್ಪರ್ಧಿ ತೇಜಸ್ವಿ ಯಾದವ್ ಅವರಿಗೆ ಇದ್ದಕ್ಕಿದ್ದಂತೆ ದೊರೆತ ಬೆಂಬಲದ ಅಲೆಯು ಸನ್ನಿವೇಶವನ್ನೆ ಬದಲಾಯಿಸಿತು.
ಬಿಹಾರದಲ್ಲಿ ಈ ಬಾರಿ ಮುಸ್ಲಿಂ ನಾಯಕ ಅಸದುದ್ದೀನ್ ಒವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇಟ್ಟೇಹಾದ್-ಉಲ್-ಮುಸ್ಲೀಮೀನ್ (AIMIM) ಪಕ್ಷವು ಸಾಧಿಸಿರುವ ಗೆಲುವು ಗಮನಾರ್ಹವಾಗಿದೆ. ಇದು ಬಿಹಾರದಲ್ಲಿ AIMIM ಪಕ್ಷವು ಎದುರಿಸಿದ ಎರಡನೇ ವಿಧಾನಸಭಾ ಚುನಾವಣೆಯಾಗಿದ್ದು ಸ್ಪರ್ಧಿಸಿದ 20 ಸ್ಥಾನಗಳಲ್ಲಿ ಐದು ಸ್ಥಾನಗಳನ್ನು ಗೆದ್ದುಕೊಂಡಿದೆ. ಈಗ ಅವರು ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡಿದ್ದಾರೆ ಎಂಬ ಆರೋಪವಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಓವೈಸಿಯನ್ನು ಸಂದರ್ಶಿಸುತ್ತಿರುವ ವಿಡಿಯೋ ಟ್ವಿಟರ್ನಲ್ಲಿ ವೈರಲ್ ಆಗಿದೆ. ಜಾತ್ಯತೀತ ಮತಗಳನ್ನು ಒಡೆದಿದ್ದರ ಕುರಿತು ಸರ್ದೇಸಾಯಿ ಓವೈಸಿಯನ್ನು ಪ್ರಶ್ನಿಸಿದರು. ಅದೇ ಟಿವಿ ಚರ್ಚೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿನ ಪವನ್ ಖೇರಾ ಅವರು ಓವೈಸಿ ಅಲ್ಪಸಂಖ್ಯಾತರ ಕೋಮುವಾದೀಕರಣ ಅಲೆಯ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. AIMIM ಮುಸ್ಲಿಂ ಮತದಾರರ ಬೆಂಬಲವನ್ನು ಸೆಳೆದಿರುವ ಬಗ್ಗೆ ಸ್ವರಾಜ್ ಪಕ್ಷದ ಯೋಗೇಂದ್ರ ಯಾದವ್ ತೀವ್ರ ಆತಂಕ ವ್ಯಕ್ತಪಡಿಸಿದರು. ಆದರೆ ಕುಗ್ಗುತ್ತಿರುವ ಪ್ರಜಾಪ್ರಭುತ್ವದಲ್ಲಿ ಅಲ್ಪಸಂಖ್ಯಾತರ ಭರವಸೆಯನ್ನು ಪುನರುಜ್ಜೀವನಗೊಳಿಸುತ್ತಿದ್ದೇನೆ ಎಂದು ಓವೈಸಿ ಸಮರ್ಥಿಸಿಕೊಂಡರು.
ಓವೈಸಿ ಮುಸ್ಲಿಂ ಮತಗಳನ್ನು ವಿಭಜಿಸುವ , ಆ ಮೂಲಕ NDAಗೆ ಸಹಾಯ ಮಾಡುವ ಬಗ್ಗೆ ಭಾರಿ ಚರ್ಚೆಗಳಿದ್ದರೂ ಅಂಕಿ ಅಂಶಗಳನ್ನು ವಿಶ್ಲೇಷಿಸಿದಾಗ ಈ ಎಲ್ಲಾ ಆರೋಪಗಳು ಸುಳ್ಳು ಎಂದು ಅರಿವಾಗುತ್ತದೆ.
Also Read: ಬಿಹಾರ ಚುನಾವಣೆ: ಇತರೆ ಪಕ್ಷಗಳ ವೈಫಲ್ಯವನ್ನು ತನ್ನ ಗೆಲುವಿಗೆ ಬಳಸಿಕೊಂಡ AIMIM
AIMIM ಸ್ಪರ್ಧಿಸಿದ 20 ಸ್ಥಾನಗಳಲ್ಲಿ NDA ಆರು ಸ್ಥಾನಗಳಲ್ಲಿ ಗೆದ್ದಿದೆ. ಈ ಒಂದು ಸ್ಥಾನದಲ್ಲಿ ಮಾತ್ರ, AIMIM ಪರವಾಗಿ ಮತ ಚಲಾಯಿಸಿದ ಮತಗಳು NDA ಅಭ್ಯರ್ಥಿಗಳ ಗೆಲುವಿನ ಅಂತರಕ್ಕಿಂತ ಹೆಚ್ಚಾಗಿದೆ. NDA ಮತ್ತು ಮಹಾಘಟ್ ಬಂಧನ್ ಅಭ್ಯರ್ಥಿಗಳ ನಡುವಿನ ಗೆಲುವಿನ ಅಂತರಕ್ಕಿಂತ AIMIM ಹೆಚ್ಚು ಮತಗಳನ್ನು ಪಡೆದ ಏಕೈಕ ಸ್ಥಾನ ರಾಣಿಗಂಜ್. ಅಲ್ಲಿ, AIMIM ಅಭ್ಯರ್ಥಿ ರೋಶನ್ ದೇವಿ 2,412 ಮತಗಳನ್ನು ಪಡೆದರು, ಇದು ಜೆಡಿಯು ಗೆಲುವಿನ ಅಂತರಕ್ಕಿಂತ (2,304) 108 ಮತಗಳು ಹೆಚ್ಚು.
ಪ್ರಚಾರದ ಸಂದರ್ಭದಲ್ಲಿ AIMIM ಅನ್ನು ಹೀನಾಯವಾಗಿ ಟೀಕಿಸಿದ ಕಾಂಗ್ರೆಸ್ ನಿಂದಾಗಿ ಸೀಮಾಂಚಲ್ನಲ್ಲಿ ಓವೈಸಿಯ ಜನಪ್ರಿಯತೆಯನ್ನು ಹೆಚ್ಚಿದೆ. ರಾಹುಲ್ ಗಾಂಧಿಯವರ ಉಪಸ್ಥಿತಿಯಲ್ಲಿ, ಕಾಂಗ್ರೆಸ್ ಶಾಸಕರಾದ ಅಬ್ದುಲ್ ಜಲೀಲ್ ಮಸ್ತಾನ್ ಅವರು ʼಹೊರಗಿನಿಂದ ಬಂದಿರುವ ಓವೈಸಿಯ ಕೈಕಾಲುಗಳನ್ನು ಮುರಿದು ಮತ್ತೆ ಹೈದರಾಬಾದಿಗೆ ಕಳುಹಿಸುವುದಾಗಿʼ ಪ್ರಚಾರ ಭಾಷಣದಲ್ಲಿ ಹೇಳಿದ್ದರು. ಇದರ ನಂತರ ಅಮೌರ್ ನ ಆರು ಬಾರಿ ಶಾಸಕರಾಗಿರುವ ಮಸ್ತಾನ್ 31,863 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದರು. ಜೆಡಿಯುನಿಂದ ಈ ಬಾರಿ ಸ್ಪರ್ಧಿಸಿದ ಮಾಜಿ ಬಿಜೆಪಿ ಶಾಸಕ ಸಬಾ ಜಾಫರ್ ಎರಡನೇ ಸ್ಥಾನದಲ್ಲಿದ್ದಾರೆ. AIMIM ನ ಅಖಾತುರುಲ್ ಇಮಾಮ್ ಈ ಸ್ಥಾನವನ್ನು ಗಣನೀಯ ಅಂತರದಿಂದ ಗೆದ್ದಿದ್ದಾರೆ.
AIMIM ಗೆದ್ದ ಐದು ಸ್ಥಾನಗಳಲ್ಲಿ ನಾಲ್ಕರಲ್ಲಿ NDA ಯೊಂದಿಗೆ ನೇರ ಸ್ಪರ್ಧೆಯಲ್ಲಿತ್ತು. ಜೋಕಿಹಾತ್ ನಲ್ಲಿ RJD ಜತೆ ನೇರ ಸ್ಪರ್ದೆ ಇತ್ತು. ಇಲ್ಲಿ AIMIM ಅಭ್ಯರ್ಥಿ ಶಹನಾವಾಜ್ 7,383 ಮತಗಳಿಂದ ತಮ್ಮ ಸಹೋದರ ಸರ್ಫರಾಜ್ (RJD) ಅವರನ್ನು ಸೋಲಿಸಿದರು. ಮುಸ್ಲಿಂ ಮತದಾರರನ್ನು ಹೆಚ್ಚು ಹೊಂದಿರುವ ಮತ್ತೊಂದು ಸ್ಥಾನವಾದ ಔರಂಗಾಬಾದ್ನಲ್ಲಿ, 2018 ರಲ್ಲಿ ರಾಮನವಮಿ ಸಂದರ್ಭದಲ್ಲಿ ಕೋಮು ಭಾವನೆ ಪ್ರಚೋದಿಸಿದ ಆರೋಪ ಹೊಂದಿದ್ದ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ, AIMIM ಬಿಹಾರದಲ್ಲಿ 40 ಸ್ಥಾನಗಳಲ್ಲಿ ಕೇವಲ ಒಂದು ಸ್ಥಾನಕ್ಕೆ ಸ್ಪರ್ಧಿಸಿದಾಗ, ಅದು “ಜಾತ್ಯತೀತ ಮತಗಳನ್ನು” ಒಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತು. ಅದರ ರಾಜ್ಯ ಅಧ್ಯಕ್ಷ ಅಖತಾರುಲ್ ಇಮಾಮ್ ಅಭ್ಯರ್ಥಿಯಾಗಿದ್ದ ಕಿಶನ್ ಗಂಜ್ ನ ಏಕೈಕ ಸ್ಥಾನವು ನಿಕಟ ಸ್ಪರ್ಧೆಯಲ್ಲಿ 2,95,029 ಮತಗಳೊಂದಿಗೆ ಮೂರನೇ ಸ್ಥಾನ ಪಡೆದರು. ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ್ ಜಾವೇದ್ 3,67,017 ಮತಗಳೊಂದಿಗೆ ಆ ಸ್ಥಾನವನ್ನು ಗೆದ್ದರು. ಬಿಹಾರ್ ನ ಇತರ 39 ಸ್ಥಾನಗಳಿಗೆ ಸ್ಪರ್ಧಿಸದ ಕಾರಣ ಓವೈಸಿ ಬಿಜೆಪಿಗೆ ಸಹಾಯ ಮಾಡುತ್ತಿದೆ ಎಂಬ ಕಾಂಗ್ರೆಸ್ ವಾದವು ಸಂಪೂರ್ಣ ಸುಳ್ಳಾಗಿದೆ.
Also Read: ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಕರ್ತರಾದರೇ ಓವೈಸಿ ?
ಕಳೆದ ಬಿಹಾರ ಚುನಾವಣೆಯ ಸಮಯದಲ್ಲಿ, ಒವೈಸಿ ಮೇಲೆ ಕಾಂಗ್ರೆಸ್ ನಿರಂತರವಾಗಿ ನಡೆಸಿದ ಅಪ ಪ್ರಚಾರದ ದಾಳಿಯು ಅನಪೇಕ್ಷಿತವಾಗಿತ್ತು. AIMIM ಬಿಹಾರದಲ್ಲಿ ಮುಸ್ಲಿಂ ಮತದಾರರ ಏಕೈಕ ರಕ್ಷಕನಾಗಿರಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೊರಾದಾಬಾದ್ನಿಂದ ತನ್ನ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗದ ಇಮ್ರಾನ್ ಪ್ರತಾಪಗರಿಯಂತಹ ಕಾಂಗ್ರೆಸ್ಸಿಗರು ಪದೇ ಪದೇ AIMIM ಮೇಲೆ ವಾಗ್ದಾಳಿಯನ್ನು ನಡೆಸಿದರು. CAA ವಿರೋಧಿ ಮತ್ತು NRC ಪ್ರತಿಭಟನೆಗಳ ಸಂದರ್ಭದಲ್ಲಿ ಓವೈಸಿ ಏಕೆ ಶಾಹೀನ್ ಬಾಗ್ ಗೆ ಭೇಟಿ ನೀಡಲಿಲ್ಲ ಎಂದು ತೀವ್ರ ವಾಗ್ಧಾಳಿ ನಡೆಸಿದರು. ಆದರೆ ರಾಹುಲ್ ಗಾಂಧಿ ಮತ್ತು ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಕೂಡ ಶಾಹೀನ್ ಬಾಗ್ ಗೆ ಭೇಟಿ ನೀಡಿರಲಿಲ್ಲ ಎಂದು ಇಲ್ಲಿ ಸ್ಮರಿಸಬಹುದಾಗಿದೆ. ಆದರೆ ಒವೈಸಿ ಸಂಸತ್ತಿನಲ್ಲಿ ಹೊಸ ಪೌರತ್ವ ಕಾನೂನನ್ನು ಉಗ್ರವಾಗಿ ವಿರೋಧಿಸಿದರು. ವಾಸ್ತವವಾಗಿ, ಅವರು ಆ ಮಸೂದೆಯನ್ನು ಧಿಕ್ಕರಿಸಿ ಅದರ ಪ್ರತಿಯನ್ನು ಹರಿದು ಹಾಕಿದರು. ಓವೈಸಿ ಭಾರತದಾದ್ಯಂತ ಮತ್ತು ನಿರ್ದಿಷ್ಟವಾಗಿ ಹೈದರಾಬಾದ್ನಲ್ಲಿ ಹಲವಾರು ಸಿಎಎ ವಿರೋಧಿ ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಿದರು. ಅದೇ ಸಮಯದಲ್ಲಿ, ಎಎಪಿ ಮತ್ತು ಕಾಂಗ್ರೆಸ್ ನಂತಹ “ಜಾತ್ಯತೀತ ಪಕ್ಷಗಳ” ನಾಯಕರು ಹೆಚ್ಚು ಮೌನಕ್ಕೆ ಆದ್ಯತೆ ನೀಡಿದರು
Also Read: ಬಿಹಾರ: ಗೆದ್ದ 68% ಅಭ್ಯರ್ಥಿಗಳಿಗೆ ಕ್ರಿಮಿನಲ್ ಹಿನ್ನೆಲೆ
ಮುಸ್ಲಿಂ ಪ್ರಾಬಲ್ಯದ ಪ್ರದೇಶವಾದ ಸೀಮಾಂಚಲ್ ಯಾವಾಗಲೂ ಸಾಮಾಜಿಕ ಅಭಿವೃದ್ಧಿ ಸೂಚ್ಯಂಕ ಅತ್ಯಂತ ಕೆಳಮಟ್ಟದಲ್ಲಿದೆ. ಸ್ವಾತಂತ್ರ್ಯದ ನಂತರ, ಇದನ್ನು ಹೆಚ್ಚಾಗಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷ ಆರ್ಜೆಡಿ ಪ್ರತಿನಿಧಿಸಿಕೊಂಡು ಬಂದಿದೆ. ಪ್ರತಿ ಚುನಾವಣೆಯಲ್ಲೂ ಮುಸ್ಲಿಮರಿಗೆ ಜಾತ್ಯತೀತತೆಯನ್ನು ಕಾಪಾಡುವ ಜವಾಬ್ದಾರಿಯನ್ನು ನೀಡಲಾಯಿತು. ಕಾಂಗ್ರೆಸ್ ಮತ್ತು RJDಗೆ ಸಾಮೂಹಿಕವಾಗಿ ಮತ ಚಲಾಯಿಸುವ ಮೂಲಕ ಅವರು ತಮ್ಮ ಅಭಿವೃದ್ಧಿಯ ಅಗತ್ಯಗಳಾದ ಶಾಲೆ, ರಸ್ತೆಗಳು, ಆಸ್ಪತ್ರೆಗಳು ಮತ್ತು ಕಾಲೇಜುಗಳ ನಿರ್ಮಾಣವನ್ನು ನಿರ್ಲಕ್ಷಿಸಬೇಕಾಯಿತು. ಅವರು ಜಾತ್ಯತೀತತೆಯನ್ನು ಯಶಸ್ವಿಯಾಗಿ ರಕ್ಷಿಸಿದರೂ, ಸತತ “ಜಾತ್ಯತೀತ” ಸರ್ಕಾರಗಳಿಂದ ಅಭಿವೃದ್ದಿಯೇ ಆಗಲಿಲ್ಲ. ಈ “ಜಾತ್ಯತೀತ” ಪಕ್ಷಗಳು ತಮ್ಮ ಪ್ರಚಾರದ ಸಮಯದಲ್ಲಿ ಅಭಿವೃದ್ಧಿಯನ್ನು ಸಹ ಉಲ್ಲೇಖಿಸಲಿಲ್ಲ. ಸೀಮಾಂಚಲ್ನ ಮುಸ್ಲಿಮರಿಗೆ ಈ ಜಾತ್ಯಾತೀತ ಪಕ್ಷಗಳ ಸಾಮಾನ್ಯ ಚುನಾವಣಾ ಘೋಷಣೆ ಆಗಿದ್ದ ಬಿಜೆಪಿ ಆ ಜಾಯೇಗಿ (ಬಿಜೆಪಿ ಬಂದು ಬಿಡುತ್ತದೆ ) ಎಂಬ ಬ್ಲ್ಯಾಕ್ಮೇಲ್ನಿಂದ ನಿಜಕ್ಕೂ ಬೇಸರವಾಗಿತ್ತು. ಏತನ್ಮಧ್ಯೆ, ಓವೈಸಿ ತನ್ನ ಅಭಿಯಾನವನ್ನು ಅಭಿವೃದ್ಧಿಯತ್ತ ಗಮನಹರಿಸಿದರು. ಅವರ “ಸೀಮಾಂಚಲ್ ಕೊ ನ್ಯಾಯೆ” ಮತ್ತು ಉತ್ತಮ ಪ್ರಾತಿನಿಧ್ಯದ ಭರವಸೆಯು ಮತಗಳಿಕೆಯಲ್ಲಿ ಯಶಸ್ವಿ ಆಯಿತು. ಈ ವಿಶ್ಲೇಷಣೆಯಿಂದ AIMIM ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದ “ಬಿ ಟೀಂ” ಆಗಿರಲಿಲ್ಲ ಮತ್ತು ಇದರ ಸ್ಪರ್ದೆಯಿಂದ NDA ಯ ಗೆಲುವಿಗೆ ಯಾವುದೇ ರೀತಿಯಲ್ಲೂ ಅನುಕೂಲವಾಗಿಲ್ಲ ಎಂಬುದು ಸ್ಪಷ್ಟವಾಗಿ ವೇದ್ಯವಾಗುತ್ತದೆ.