ದೇಶದ ನಾನಾ ಭಾಗಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಳೆಗಳು ಹಾನಿಯಾಗಿದ್ದು, ಮಾರುಕಟ್ಟೆಗೆ ಪೂರೈಕೆ ಕಡಿಮೆ ಆಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ತರಕಾರಿಗಳ ಅಭಾವದಿಂದಾಗಿ ಭಾರೀ ಬೇಡಿಕೆ ಉಂಟಾಗಿದ್ದು ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ.
ದೇಶದಲ್ಲಿ ಈರುಳ್ಳಿ ಬೆಲೆ ದಿನಗಳೆದಂತೆ ಏರುತ್ತಿದ್ದು, ಗ್ರಾಹಕರು ಪರದಾಡುತ್ತಿದ್ದಾರೆ. ಬೆಳೆ ನಷ್ಟದಿಂದಾಗಿ ರೈತರೂ ಕಂಗಾಲಾಗಿದ್ದಾರೆ. ಮೊದಲೇ ಆರ್ಥಿಕ ಸಂಕಷ್ಟ, ಉದ್ಯೋಗ ನಷ್ಟಗಳಿಂದಾಗಿ ತತ್ತರಿಸಿರುವ ಜನತೆಗೆ ಅಗತ್ಯ ವಸ್ತುಗಳ ಬೆಲೆಯೇರಿಕೆ ನುಂಗಲಾರದ ತುತ್ತಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಗತ್ಯ ವಸ್ತುಗಳ ಬೆಲೆಯೇರಿಕೆಯೇ ಇದೀಗ ಬಿಹಾರ ಚುನಾವಣೆಯ ಮುಖ್ಯ ವಿಷಯವಾಗಿವೆ. ನಿರುದ್ಯೋಗ, ಆರ್ಥಿಕ ಕುಸಿತ, ಬೆಲೆಯೇರಿಕೆ ಮೊದಲಾದ ವಿಚಾರಗಳನ್ನು ಹಿಡಿದುಕೊಂಡು ಆಡಳಿತರೂಢ ಎನ್ಡಿಎ ಸರ್ಕಾರವನ್ನು ಪ್ರತಿಪಕ್ಷಗಳು ಟೀಕಿಸುತ್ತಿವೆ.
ಬಿಹಾರದ ಹಾಲಿ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಚುನಾವಣಾ ಪ್ರಚಾರ ಸಭೆಗೆ ಈರುಳ್ಳಿ ಹಾರ ಹಾಕಿಕೊಂಡು ತೆರಳಿದ್ದು, ಈರುಳ್ಳಿ ದರ ಏರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.
ಆರ್ಜೆಡಿಯ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಿರುವ ತೇಜಸ್ವಿ ಯಾದವ್, ಹಾರವನ್ನು ಮಾಧ್ಯಮಗಳ ಮುಂದೆ ತೋರಿಸಿ ಹಣದುಬ್ಬರ ವಿಚಾರದಲ್ಲಿ ಬಿಹಾರ ಮತ್ತು ಕೇಂದ್ರ ಸರ್ಕಾರದ ಮೇಲೆ ವಾಕ್ ದಾಳಿ ನಡೆಸಿದರು. ಬಿಹಾರದಲ್ಲಿ ಬಡತನ ಮತ್ತು ಹಣದುಬ್ಬರ ಹೆಚ್ಚುತ್ತಿದೆ ಎಂದು ಹೇಳಿದ ತೇಜಸ್ವಿ ಆಹಾರದ ಬೆಲೆಯೂ ಗಗನಕ್ಕೇರುತ್ತಿದೆ. ಈರುಳ್ಳಿ ಕೆ.ಜಿ.ಗೆ 50-60 ರೂ.ಗಳನ್ನು ತಲುಪಿದಾಗ ಅದರ ಬಗ್ಗೆ ಮಾತನಾಡುತ್ತಿದ್ದವರು ಈಗ ಕೆ.ಜಿ.ಗೆ 80 ರೂ.ಗಳನ್ನು ದಾಟಿದಾಗ ಮೌನವಾಗಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಏಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಇಂದು ಸಣ್ಣ ವ್ಯಾಪಾರಿಗಳು ವಿನಾಶಕ್ಕೆ ಒಳಗಾಗಿದ್ದಾರೆ, ಬಡತನ ಹೆಚ್ಚುತ್ತಿದೆ, ಪೆಟ್ರೋಲ್ ಮತ್ತು ಡೀಸೆಲ್ ಜೊತೆಗೆ ಆಹಾರವೂ ಹೆಚ್ಚು ದುಬಾರಿಯಾಗುತ್ತಿದೆ. ಈರುಳ್ಳಿ, ಟೊಮ್ಯಾಟೊ ಎಲ್ಲದರ ಬೆಲೆಯನ್ನು ಹೆಚ್ಚಿದೆ. ಇಂದು ಬಡವರ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಯೋಚಿಸುತ್ತಿಲ್ಲ. ಬಡವರನ್ನು ಬೆಳೆಸುವ ಬದಲು ಅವರನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ರೈತರು ಧ್ವಂಸಗೊಂಡಿದ್ದಾರೆ, ಯುವಕರು ನಿರುದ್ಯೋಗಿಗಳಾಗಿದ್ದಾರೆ ಮತ್ತು ಬಿಹಾರ ಬಡವಾಗಿದೆ. ಶಿಕ್ಷಣ, ಚಿಕಿತ್ಸೆ ಮತ್ತು ಜೀವನೋಪಾಯಕ್ಕಾಗಿ ಜನರು ಬಿಹಾರದಿಂದ ವಲಸೆ ಹೋಗಬೇಕಾಯಿತು. ಹಸಿವು ಹೆಚ್ಚಾಗಿದೆ. ಲಾಕ್ಡೌನ್ನಲ್ಲಿ ವಲಸೆ ಕಾರ್ಮಿಕರಿಗೆ ಯಾವುದೇ ಕೆಲಸವಿಲ್ಲ. ಕೃಷಿಯನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಯಾದವ್ ಟೀಕೆಗಳ ಸುರಿಮಳೆ ಸುರಿಸಿದ್ದಾರೆ.