ಬಿಹಾರದ ಮುಜಫರಾಪುರ ರೈಲ್ವೇ ನಿಲ್ದಾಣದಲ್ಲಿ ʼಸಾವನ್ನಪ್ಪಿದ ತಾಯಿಯನ್ನ ಎಬ್ಬಿಸುವʼ ಮಗುವಿನ ವೀಡಿಯೋ ತುಣುಕೊಂದು ಜಾಲತಾಣಗಳಲ್ಲಿ ಹರಡಿ ರಾಷ್ಟ್ರೀಯ ಮಟ್ಟದ ಸುದ್ದಿಯಾಗಿತ್ತು. ಈ ಮನಕಲಕುವ ದೃಶ್ಯ ಕಂಡು ದೇಶದ ಜನ ಮರುಗಿದ್ದರು. ಹಸಿವಿನಿಂದ ಕಂಗೆಟ್ಟು ಆಕೆ ಸಾವನ್ನಪ್ಪಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ರೈಲ್ವೇ ಅಧಿಕಾರಿಗಳು ಅದನ್ನ ನಿರಾಕರಿಸಿದ್ದರು. ಇದೀಗ ಪಾಟ್ನಾ ಹೈಕೋರ್ಟ್ ಮುಂದೆ ಭಾರತೀಯ ರೈಲ್ವೇ “ಈ ವೀಡಿಯೋವನ್ನ ಹರಿಯಬಿಡುವ ಮೂಲಕ ಸಂವೇದನಾಶೀಲಗೊಳಿಸಿ ಕೇವಲ ಅರ್ಧ ಸತ್ಯ ಮಾತ್ರ ಹರಿಯಬಿಡಲಾಗಿದೆ” ಎಂದಿದೆ.
ಮೇ 28 ರಂದು ವೈರಲ್ ಆಗಿದ್ದ ವೀಡಿಯೋದ ಬಗ್ಗೆ ಪಾಟ್ನಾ ಹೈ ಕೋರ್ಟ್ ಮುಖ್ಯ ನ್ಯಾಯಾಧೀಶ ಸಂಜಯ್ ಕಾರೊಲ್ ಹಾಗೂ ಜಸ್ಟಿಸ್ ಎಸ್. ಕುಮಾರ್ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. “ಇದೊಂದು ಆಘಾತಕಾರಿ ಹಾಗೂ ದುರಾದೃಷ್ಟಕರ ಸಂಗತಿ” ಎಂದು ಕರೆದಿದ್ದರು. ಮಾತ್ರವಲ್ಲದೇ ಬಿಹಾರ ರಾಜ್ಯ ಸರಕಾರ ಹಾಗೂ ರೈಲ್ವೇ ಇಲಾಖೆಗೂ ಉತ್ತರಿಸುವಂತೆ ನೋಟೀಸ್ ನೀಡಿತ್ತು. ಇದೀಗ ರೈಲ್ವೇ ಇಲಾಖೆ ಪರವಾಗಿ ಆಶಿಶ್ ಗಿರಿ ತಮ್ಮ ವಾದ ಮಂಡಿಸಿದ್ದಾರೆ.
ಹೈಕೋರ್ಟ್ ಮುಂದೆ ಬಂದ ಈ ಪ್ರಕರಣ ಸೋಮವಾರ ವಿಚಾರಣೆ ನಡೆದು ಮುಂದೂಡಲ್ಪಟ್ಟಿತು. ಜೂನ್ 15ಕ್ಕೆ ನಿಗದಿಪಡಿಸಿರುವ ವಿಚಾರಣೆ ಸಂದರ್ಭ ಪ್ರಕರಣ ಸಂಬಂಧ ರಾಜ್ಯ ಗೃಹ ಸಚಿವಾಲಯ, ಭಾರತೀಯ ರೈಲ್ವೇ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯಿಂದ ಅಫಿಡವಿಟ್ ಸಲ್ಲಿಸುವಂತೆಯೂ ಸೂಚಿಸಲಾಗಿದೆ.
ರೈಲ್ವೇ ಸಲ್ಲಿಸಿರುವ ಅಫಿಡವಿಟ್ ನಲ್ಲಿ ದೃಶ್ಯವನ್ನು ಚಿತ್ರೀಕರಿಸಿದ ವರದಿಗಾರ ತನಗೆ ಬೇಕಾದಲ್ಲಿ ದೃಶ್ಯವನ್ನ ಕತ್ತರಿಸಿ, ದೃಶ್ಯದ ನೈಜತೆ ಮರೆಮಾಚಲು ತೆಗೆದು ಹಾಕಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಮಾತ್ರವಲ್ಲದೇ ಆ ರೀತಿ ಮಾಡುವ ಬದಲು ವರದಿಗಾರನಿಗೆ ಈ ಘಟನೆ ಬಗ್ಗೆ ರೈಲ್ವೇ ಅಧಿಕಾರಿಗಳು ಇಲ್ಲವೇ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಬಹುದಿತ್ತು ಎಂದೂ ತಿಳಿಸಿದೆ.
“ನಿಜವಾಗಿಯೂ ಅಗತ್ಯ ಸಹಾಯ ಮಾಡುವ ಬದಲು, ಅವರು ಅದನ್ನ ತನ್ನ ಪ್ರಚಾರಕ್ಕಾಗಿ ಚಿತ್ರೀಕರಿಸಿದ್ದಾರೆ ಮತ್ತು ಅದನ್ನ ಅರ್ಧ ಸತ್ಯ ಹಾಗೂ ನೈಜತೆ ಮರೆಮಾಚಿ ಪ್ರಚುರಪಡಿಸಿದ್ದಾರೆ” ಎಂದು ಉಲ್ಲೇಖಿಸಲಾಗಿದೆ.
“ಇಂತಹ ಅರ್ಧ ಸತ್ಯಾಂಶ ಮುಂದಿಡುವ ನಡೆ ಅತ್ಯಂತ ಅಪಾಯಕಾರಿಯಾಗಿದ್ದು, ಆದ್ದರಿಂದ ನ್ಯಾಯಾಲಯ ಇಂತಹ ವಿಚಾರದಲ್ಲಿ ನ್ಯಾಯಯುತವಾಗಿ ವ್ಯವಹರಿಸುವ ಅಗತ್ಯವಿದ್ದು, ಅಸಮರ್ಪಕ ಸುದ್ದಿಗಳನ್ನ ಪರಿಶೀಲಿಸದೇ ಮಾಧ್ಯಮಗಳು ಪ್ರಕಟಿಸುವುದರಿಂದ ಇದು ಸಮಾಜದ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತದೆ” ಎಂದು ತಿಳಿಸಿದೆ.
ಮಾತ್ರವಲ್ಲದೇ ವಲಸೆ ಕಾರ್ಮಿಕರಿಗಾಗಿ ವಿಶೇಷ ರೈಲು ನಿಗದಿಪಡಿಸಿದ ಬಳಿಕ ರೈಲ್ವೇ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಾತ್ರಿ-ಹಗಲೆನ್ನದೆ ವಲಸೆ ಕಾರ್ಮಿಕರು ಸುರಕ್ಷಿತ ಪ್ರಯಾಣಕ್ಕಾಗಿ ಅವಿರತವಾಗಿ ದುಡಿಯುತ್ತಿದ್ದಾರೆ” ಎಂದೂ ದಾಖಲಿಸಲಾದ ಅಫಿಡವಿಟ್ ನಲ್ಲಿ ತಿಳಿಸಲಾಗಿದೆ. ಜೊತೆಗೆ ಪ್ರಕರಣ ಗಮನಕ್ಕೆ ಬಂದ ತಕ್ಷಣವೇ ರೈಲ್ವೇ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಪಂದಿಸಿದ್ದು, ಅತ್ಯಂತ ಕಡಿಮೆ ಸಮಯದಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸಿದ್ದಾಗಿ ನ್ಯಾಯಾಲಯಕ್ಕೆ ಭಾರತೀಯ ರೈಲ್ವೇ ತಿಳಿಸಿದೆ. ಮಾತ್ರವಲ್ಲದೇ ಯಾವುದೇ ಹಂತದಲ್ಲೂ ನಿರ್ಲಕ್ಷ್ಯ ನಡೆದಿಲ್ಲ ಎಂದಿದೆ.
ಇನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಆರಂಭಿಕ ಹಂತದಲ್ಲಿ ತಾನು ನಿರ್ವಹಿಸಿದ ಕೆಲಸವನ್ನ ನ್ಯಾಯಾಲಯ ಮುಂದಿಟ್ಟಿದೆ. ಮೃತ ಮಹಿಳೆಗೆ ಇಬ್ಬರು ಮಕ್ಕಳಿದ್ದು, ಅವರ ಖರ್ಚಿಗಾಗಿ ತಕ್ಷಣವೇ ಮೃತ ಮಹಿಳೆ ತಾಯಿಯ ಬ್ಯಾಂಕ್ ಖಾತೆಗೆ 2 ಸಾವಿರ ರೂಪಾಯಿಯನ್ನು ಒದಗಿಸಲಾಗಿದ್ದು, ಅಲ್ಲದೇ ಮೃತ ಮಹಿಳೆಯ ಹೆಸರಿನಲ್ಲಿ ರೇಷನ್ ಕಾರ್ಡ್ ನೀಡಲಾಗಿದೆ. ಇನ್ನು ಮಕ್ಕಳ ಆರೈಕೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 20 ಸಾವಿರ ರೂಪಾಯಿ ಧನ ಸಹಾಯ ಹಾಗೂ ಮೃತ ಮಹಿಳೆ ಪೋಷಕರಿಗೆ ಜಮೀನನ್ನೂ ನೀಡಲಾಗಿದೆ ಅಂತ ನ್ಯಾಯಾಲಯಕ್ಕೆ ತಿಳಿಸಿದೆ.
ಇನ್ನು ಮೃತ ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸದಿರುವ ಬಗ್ಗೆಯೂ ನ್ಯಾಯಾಲಯ ರಾಜ್ಯದ ಗೃಹ ಇಲಾಖೆಯಿಂದ ಮಾಹಿತಿ ಕೇಳಿದ್ದು, ಅದರಂತೆ ಗೃಹ ಇಲಾಖೆ ಅಧಿಕಾರಿಗಳು ಒದಗಿಸಿದ ಮಾಹಿತಿ ಪ್ರಕಾರ, ಮೃತ ಮಹಿಳೆಯ ಕುಟುಂಬವು ಮರಣೋತ್ತರ ಪರೀಕ್ಷೆ ನಡೆಸದಂತೆ ಒತ್ತಾಯಿಸಿತ್ತು ಎಂದಿದೆ. ಅದಾಗ್ಯೂ, ಮರಣೋತ್ತರ ಪರೀಕ್ಷೆ ನಡೆಸದೇ ಹೊಣೆಗೇಡಿತನ ಪ್ರದರ್ಶಿಸಿದ ಅಧಿಕಾರಿಯನ್ನ ಗುರುತಿಸಲು ಜೂನ್ 1 ರಂದು ತನಿಖೆಗೆ ಆದೇಶಿಸಲಾಗಿದೆ ಅಂತಾ ನ್ಯಾಯಾಲಯಕ್ಕೆ ತಿಳಿಸಿದೆ.
ಆದರೆ ನ್ಯಾಯಾಲಯದ ಮುಂದೆ ಪ್ರಬಲ ಸಾಕ್ಷಿಯಾಗಿಸಲು ರೈಲ್ವೇ ಹಾಗೂ ಗೃಹ ಇಲಾಖೆ ಅಧಿಕಾರಿಗಳು ನೆಚ್ಚಿಕೊಂಡಿರುವುದು ಮೃತ ಮಹಿಳೆಯ ಸೋದರ ಮಾವನ ಹೇಳಿಕೆಯನ್ನೇ ಆಧರಿಸಿದ್ದಾರೆ. ಅವರ ಹೇಳಿಕೆ ಪ್ರಕಾರ, ಮೃತಪಟ್ಟಿರುವ ಮಹಿಳೆಯು ಮಾನಸಿಕ ಅಸ್ವಸ್ಥತೆ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಹೇಳಿದ್ದರು. ಇದರಿಂದಾಗಿ ಸದ್ಯ ದೇಶವನ್ನೇ ಬೆಚ್ಚಿಬೀಳಿಸಿದ್ದ ಬಿಹಾರ ಮುಜಫರಪುರದಲ್ಲಿ ನಡೆದ ಘಟನೆಗೆ ನ್ಯಾಯಾಲಯದಲ್ಲಿ ಟ್ವಿಸ್ಟ್ ಸಿಕ್ಕರೂ ಅಚ್ಚರಿಪಡುವಂತಿಲ್ಲ.