• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಬಯಲಾಯ್ತು ಮೋದಿ ಬಿಜೆಪಿ- ಫೇಸ್ ಬುಕ್ ನಡುವಿನ ಅಪವಿತ್ರ ಮೈತ್ರಿ!

by
August 17, 2020
in ರಾಜಕೀಯ
0
ಬಯಲಾಯ್ತು ಮೋದಿ ಬಿಜೆಪಿ- ಫೇಸ್ ಬುಕ್ ನಡುವಿನ ಅಪವಿತ್ರ ಮೈತ್ರಿ!
Share on WhatsAppShare on FacebookShare on Telegram

ನೀವು ಫೇಸ್ ಬುಕ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರೆ, ಮತ್ತು ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಕಾಳಜಿ ಹೊಂದಿದ್ದರೆ, ಒಂದು ವಿಚಿತ್ರವನ್ನು ಗಮನಿಸಿರುತ್ತೀರಿ.

ADVERTISEMENT

ಅದು; ನಿರ್ದಿಷ್ಟ ಕೋಮು, ನಿರ್ದಿಷ್ಟ ರಾಜಕೀಯ ಪಕ್ಷ, ನಿರ್ದಿಷ್ಟ ನಿಲುವುಗಳಿಗೆ ಸಂಬಂಧಿಸಿದಂತೆ ಕೆಲವರು ಹಾಕುವ ಆಕ್ಷೇಪಾರ್ಹ, ಸಾಮಾಜಿಕ ಶಾಂತಿ ಕದಡುವ, ಅಪಮಾನಕರ ಪೋಸ್ಟುಗಳ ವಿಷಯದಲ್ಲಿ ನೀವು ದೂರು ನೀಡಿದರೂ(ರಿಪೋರ್ಟ್ ಮಾಡಿದರೂ) ಯಾವುದೇ ಕ್ರಮ ಜರುಗಿಸುವುದಿಲ್ಲ. ಅದೇ ಹಾಗೆ ಆಕ್ಷೇಪಾರ್ಹ ಪೋಸ್ಟುಗಳನ್ನು ಹಾಕುವವರಿಗೆ ಸಂಬಂಧಿಸಿದ ಕೋಮು, ಪಕ್ಷ, ಸಿದ್ಧಾಂತಕ್ಕೆ ಸಂಬಂಧಿಸಿದಂತೆ ನೀವು ಟೀಕೆ ಮಾಡಿದರೆ, ವಿಮರ್ಶೆ ಮಾಡಿದರೆ, ಅವರ ಸರ್ಕಾರದ ನೀತಿ-ನಿಲುವುಗಳ ಕುರಿತು ವಾಸ್ತವಾಂಶ ಆಧಾರಿತ ವರದಿ ಮಾಡಿದರೂ ನಿಮ್ಮನ್ನು ಫೇಸ್ ಬುಕ್ ಬ್ಲಾಕ್ ಮಾಡುವುದು, ನಿಮ್ಮ ಪೋಸ್ಟುಗಳನ್ನು ತೆಗೆದುಹಾಕುವುದು, ಅಥವಾ ಆ ಪೋಸ್ಟುಗಳಿಗೆ ಪ್ರತಿಕ್ರಿಯೆ ಬಾರದಂತೆ ತಡೆಯುವುದು ಮುಂತಾದವು ನಿಮ್ಮ ಗಮನಕ್ಕೆ ಬಂದಿರಬಹುದು. ಅದರಲ್ಲೂ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಇಂತಹ ವಿಚಿತ್ರ ನ್ಯಾಯ ನಿಮ್ಮದೇ ಅನುಭವಕ್ಕೂ ಬಂದಿರಬಹುದು!

ಹೌದು, ಫೇಸ್ ಬುಕ್ ಭಾರತದ ಮಟ್ಟಿಗಂತೂ ಸದ್ಯ ಇಂತಹದ್ದೊಂದು ನೀತಿಯನ್ನು ಅನುಸರಿಸುತ್ತಿದೆ. ಆಳುವ ಪಕ್ಷ ಬಿಜೆಪಿ ಮತ್ತು ಅದರ ನಾಯಕ ನರೇಂದ್ರ ಮೋದಿಯವರ ಪರ ಮತ್ತು ಅವರ ಟೀಕಾಕಾರರ ವಿರುದ್ಧದ ಏಕಪಕ್ಷೀಯ ನಿಲುವುಗಳನ್ನು ತೆಗೆದುಕೊಳ್ಳುವ ಮೂಲಕ ತನ್ನದೇ ನೀತಿನಿಲುವುಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ವ್ಯಾವಹಾರಿಕ ಲಾಭ ಮತ್ತು ಸೈದ್ದಾಂತಿಕ ಹಿತಾಸಕ್ತಿಗಾಗಿ ಫೇಸ್ ಬುಕ್ ಇಂಡಿಯಾದ ಸಾರ್ವಜನಿಕ ನೀತಿ ವಿಭಾಗ ಮುಖ್ಯಸ್ಥೆ ಸ್ವತಃ ಪ್ರಧಾನಿ ಮೋದಿ ಮತ್ತು ಬಿಜೆಪಿ ಹಾಗೂ ಅದರ ಹಿಂದುತ್ವ ಕೋಮುವಾದಿ ಅಜೆಂಡಾಕ್ಕೆ ಪೂರಕವಾಗಿ ಕಂಪನಿಯ ನಿಯಮಗಳನ್ನು ಸಡಿಲಿಸಿದ್ದಾರೆ ಎಂಬ ಸಂಗತಿಯನ್ನು ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯ ವರದಿ ಬಹಿರಂಗಪಡಿಸಿದೆ.

ಭಾರತೀಯ ಪ್ರಜಾಪ್ರಭುತ್ವ, ಇಲ್ಲಿ ಸಂವಿಧಾನ ಮತ್ತು ಅಂತಹ ಸಂವಿಧಾನ ಎಲ್ಲ ಭಾರತೀಯರಿಗೆ ಖಾತರಿಪಡಿಸಿರುವ ಅಭಿವ್ಯಕ್ತಿ ಹಕ್ಕು ಸೇರಿದಂತೆ ಎಲ್ಲ ಬಗೆಯ ಹಕ್ಕುಗಳ ಮೇಲೆ ಈ ಹೊತ್ತಿನ ಸಾಮಾಜಿಕ ಜಾಲತಾಣಗಳು ಸವಾರಿ ಮಾಡುತ್ತಿವೆ. ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಕೂಡ ಪರೋಕ್ಷವಾಗಿ ಮೂಗು ತೂರಿಸುವ ಮೂಲಕ, ಪ್ರಭಾವ ಬೀರುವ ಮೂಲಕ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗಳಿಗೆ ಆತಂಕ ಒಡ್ಡಿವೆ ಎಂಬ ಆತಂಕಕಾರಿ ಹೊತ್ತಿನಲ್ಲಿ, ವಾಲ್ ಸ್ಟ್ರೀಟ್ ಜರ್ನಲ್ ಬಹಿರಂಗಪಡಿಸಿರುವ ಈ ಸಂಗತಿ ದೇಶಾದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ವಿಪರ್ಯಾಸವೆಂದರೆ, ಭಾರತ ಸ್ವಾತಂತ್ರ್ಯೋತ್ಸವದ ಮುನ್ನಾ ದಿನವೇ ದೇಶದ ಜನಸಾಮಾನ್ಯರ ಅಭಿವ್ಯಕ್ತಿ ಹರಣ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ಆತಂಕವೊಡ್ಡಿರುವ ಈ ವಿದ್ಯಮಾನದ ಕುರಿತ ವರದಿ ಹೊರಬಿದ್ದಿದೆ.

ಹಾಗೆ ನೋಡಿದರೆ, ವಾಲ್ ಸ್ಟ್ರೀಟ್ ಜರ್ನಲ್ ಈ ವರದಿ ಪ್ರಕಟವಾಗುವ ಕೆಲವೇ ದಿನಗಳ ಮುನ್ನ ಕನ್ನಡಿಗರಾದ ನಮಗೆ ಈ ಜಾಲತಾಣ ದೈತ್ಯ ಸಂಸ್ಥೆಯ ನೀತಿನಿಲುವುಗಳು ಎಷ್ಟು ಪಾರದರ್ಶಕ ಮತ್ತು ಎಷ್ಟು ನಿಷ್ಪಕ್ಷಪಾತ ಎಂಬುದಕ್ಕೆ ಹಲವು ಉದಾಹರಣೆಗಳು ಸಿಕ್ಕಿದ್ದವು. ನಾನೂಗೌರಿ.ಕಾಂ ಸುದ್ದಿತಾಣದ ವಿಷಯದಲ್ಲಿ ಹದಿನೈದು ದಿನಗಳ ಹಿಂದೆ, ಬಿಜೆಪಿಯ ಶಾಸಕರೊಬ್ಬರ ಅಕ್ರಮದ ಬಗ್ಗೆ ವರದಿ ಮಾಡಿದ್ದನ್ನೇ ನೆಪವಾಗಿಟ್ಟುಕೊಂಡು ಆ ಸುದ್ದಿತಾಣದ ಫೇಸ್ ಬುಕ್ ಪುಟವನ್ನು ಸ್ಥಗಿತಗೊಳಿಸಲಾಗಿತ್ತು. ಅದೇ ಅನುಭವ ‘ಪ್ರತಿಧ್ವನಿ.ಕಾಂ’ಗೂ ಹಲವು ಬಾರಿ ಆಗಿದೆ. ಹಾಗೇ ಆಡಳಿತ ಪಕ್ಷದ ಪುಂಗಿದಾಸರಾಗದೆ, ಆಡಳಿತ ನೀತಿಗಳು, ಆಡಳಿತ ವ್ಯವಸ್ಥೆಯ ಪ್ರಚೋದಿತ ಹಿಂಸೆ, ಕೋಮುವಾದ, ಸಂವಿಧಾನಿಕ ಸಂಸ್ಥೆಗಳ ದುರುಪಯೋಗದಂತಹ ವಿಷಯದಲ್ಲಿ ನಿರ್ಭಿಡೆಯಿಂದ ವರದಿ ಮಾಡುತ್ತಿದ್ದ ಈ ಹಿಂದಿನ ‘ದ ಸ್ಟೇಟ್’ ನಂತಹ ಸುದ್ದಿ ಜಾಲತಾಣದ ವಿಷಯದಲ್ಲಿ ಹಲವು ಬಾರಿ ಫೇಸ್ ಬುಕ್ ಇಂತಹ ವರಸೆಗಳನ್ನು ಪ್ರದರ್ಶಿಸಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದೀಗ ಅಂತಹ ವರಸೆಗಳ ಹಿಂದೆ ಯಾವ ಹಿತಾಸಕ್ತಿ ಇದೆ. ಯಾರ ನಿರ್ದೇಶನದ ಮೇಲೆ ಅಂತಹ ತಾರತಮ್ಯದ, ಏಕಪಕ್ಷೀಯ ಮತ್ತು ಪಕ್ಷಪಾತದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿತ್ತು ಎಂಬುದನ್ನು ವಾಲ್ ಸ್ಟ್ರೀಟ್ ಜರ್ನಲ್, ತೆಲಂಗಾಣದ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಮತ್ತು ಕರ್ನಾಟಕದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಅವರ ನಿದರ್ಶನಗಳೊಂದಿಗೆ ಬಹಿರಂಗಪಡಿಸಿದೆ. ಸ್ವತಃ ಫೇಸ್ ಬುಕ್ ಕಂಪನಿಯ ಮಾಜಿ ಉದ್ಯೋಗಿಗಳು ಹಾಗೂ ಹಾಲಿ ಉದ್ಯೋಗಿಗಳ ಹೇಳಿಕೆ ಮತ್ತು ಅಭಿಪ್ರಾಯಗಳೊಂದಿಗೆ ಕಂಪನಿಯ ಅಧಿಕೃತ ಹೇಳಿಕೆಯನ್ನೂ ಉಲ್ಲೇಖಿಸಿ ಈ ವರದಿ ಮಾಡಲಾಗಿದ್ದು, ಆತಂಕಕಾರಿ ವಿವರಗಳನ್ನು ಬಿಚ್ಚಿಡಲಾಗಿದೆ.

ತೆಲಂಗಾಣದ ಏಕೈಕ ಬಿಜೆಪಿ ಶಾಸಕ ರಾಜಾ ಸಿಂಗ್, ಮುಸ್ಲಿಂ ವಿರೋಧಿ, ಪ್ರಚೋಧನಕಾರಿ ಹೇಳಿಕೆಗಳಿಗೇ ಕುಖ್ಯಾತಿ, ಕರೋನಾದ ಆರಂಭದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ತಬ್ಲೀಗಿಗಳಿಂದಲೇ ದೇಶದಲ್ಲಿ ಕರೋನಾ ಹರಡಿದ್ದು, ದೇಶದ ವಿರುದ್ಧದ ಸಂಚಿನ ಭಾಗವಾಗಿ ಅವರು ಉದ್ದೇಶಪೂರ್ವಕವಾಗಿ ಕರೋನಾ ಹರಡುತ್ತಿದ್ದಾರೆ ಎಂದು ಫೇಸ್ ಬುಕ್ ಮತ್ತು ಇತರ ಜಾಲತಾಣಗಳಲ್ಲಿ ಹೇಳಿದ್ದರು. ಆ ಬಗ್ಗೆ ಹಲವರು ಅಂತಹ ಹೇಳಿಕೆ ಪ್ರಚೋಧನಕಾರಿ, ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ತರುತ್ತದೆ. ಅದನ್ನು ತೆಗೆದುಹಾಕಿ ಎಂದು ಫೇಸ್ ಬುಕ್ ಗೆ ರಿಪೋರ್ಟ್ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಇಂತಹ ಆಕ್ಷೇಪಾರ್ಹ ಪೋಸ್ಟುಗಳ ಬಗ್ಗೆ ದೂರು ಬಂದಾಗ ಪರಿಶೀಲಿಸಿ ಕ್ರಮ ಜರುಗಿಸುವ ಫೇಸ್ ಬುಕ್ ನ ತಂಡ ಆ ಬಗ್ಗೆ ಚರ್ಚಿಸಿದಾಗ, ಫೇಸ್ ಬುಕ್ ಸಾರ್ವಜನಿಕ ನೀತಿ ವಿಭಾಗ ಮುಖ್ಯಸ್ಥೆ ಅಂಖೀ ದಾಸ್, ಬಿಜೆಪಿ ನಾಯಕರು ಮತ್ತು ಅದರ ಬೆಂಬಲಿಗರ ವಿರುದ್ಧ ಕ್ರಮಕೈಗೊಂಡರೆ, ಕಂಪನಿಯ ವ್ಯವಹಾರಕ್ಕೆ ಮತ್ತು ಹಿತಾಸಕ್ತಿಗೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿ ಅಂತಹ ಕ್ರಮಕೈಗೊಳ್ಳದಂತೆ ಕಂಪನಿಯ ಉನ್ನತ ವಲಯಕ್ಕೆ ಮನವರಿಕೆ ಮಾಡಿದ್ದರು ಎಂದು ವಾಲ್ ಸ್ಟ್ರೀಟ್ ವರದಿ ಹೇಳಿದೆ.

ಇದೊಂದೇ ಸಂದರ್ಭವಲ್ಲದೆ, ಕಳೆದ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಕೂಡ ಅಂಖೀ ದಾಸ್, ಕಂಪನಿಯ ನಿರ್ಧಾರಗಳಲ್ಲಿ ಮಧ್ಯಪ್ರವೇಶಿಸಿ, ಬಿಜೆಪಿ ಮತ್ತು ಮೋದಿಯವರ ಹಿತಾಸಕ್ತಿಗೆ ಮಾರಕವಾಗುವ ಕೆಲವು ನಿರ್ಧಾರಗಳನ್ನು ಕೈಬಿಡುವಂತೆ, ಪೂರಕವಾಗಿ ಕೆಲವು ಮಾಹಿತಿಗಳನ್ನು ಮುಚ್ಚಿಡುವಂತೆ ಮಾಡಿದ್ದರು. ಹಾಗಾಗಿ ಚುನಾವಣೆಗೆ ಮುನ್ನ ಕಾಂಗ್ರೆಸ್ಸಿಗೆ ಸಂಬಂಧಿಸಿದ ಕೆಲವು ಪುಟಗಳನ್ನು ಅವುಗಳ ಸಾಚಾತನದ ಹಿನ್ನೆಲೆಯಲ್ಲಿ ತೆಗೆದುಹಾಕಲಾಗಿದೆ ಎಂದು ಫೇಸ್ ಬುಕ್ ಘೋಷಿಸುವ ಮೂಲಕ ಚುನಾವಣಾ ಕಣದಲ್ಲಿ ಕಾಂಗ್ರೆಸ್ಸಿಗೆ ಮುಖಭಂಗವಾಗುವಂತೆ ಪರೋಕ್ಷವಾಗಿ ನಡೆದುಕೊಂಡಿತ್ತು. ಆದರೆ, ಅದೇ ಹೊತ್ತಿಗೆ ಬಿಜೆಪಿಗೆ ಸಂಬಂಧಿಸಿದ ನಕಲಿ ಖಾತೆಗಳನ್ನು ಕೂಡ ತಾನು ತೆಗೆದುಹಾಕಿದ್ದರೂ, ಆ ಬಗ್ಗೆ ಯಾವುದೇ ಮಾಹಿತಿ ಬಹಿರಂಪಡಿಸದೆ, ಮುಚ್ಚಿಡುವ ಮೂಲಕ ಬಿಜೆಪಿಗೆ ಪೂರಕವಾಗಿ ನಡೆದುಕೊಂಡಿತ್ತು.

ಈ ಎಲ್ಲಾ ಸಂದರ್ಭದಲ್ಲಿಯೂ ಅಂಖೀ ದಾಸ್ ಬಿಜೆಪಿ, ಪ್ರಧಾನಿ ಮೋದಿ ಮತ್ತು ಉಗ್ರ ಹಿಂದುತ್ವವಾದಿ ಬೆಂಬಲಿಗರ ಪರವಾಗಿ ಕಂಪನಿ ಮಟ್ಟದಲ್ಲಿಯೂ ಮತ್ತು ಮತ್ತೊಂದು ಕಡೆ ಕಂಪನಿಯ ಪರವಾಗಿ ಸರ್ಕಾರದ ಮಟ್ಟದಲ್ಲಿಯೂ ಲಾಬಿ ಮಾಡಿದ್ದಾರೆ. ವಾಸ್ತವವಾಗಿ ಸಾರ್ವಜನಿಕ ನೀತಿಯ ಮುಖ್ಯಸ್ಥೆಯಾಗಿ ಅವರ ಅಧಿಕೃತ ಹೊಣೆಗಾರಿಕೆ ಕೂಡ ಕೇಂದ್ರ ಸರ್ಕಾರದ ಮಟ್ಟದಲ್ಲಿ ಕಂಪನಿಯ ಪರ ಲಾಬಿ ಮಾಡುವುದೇ ಆಗಿದೆ. ಹಾಗಾಗಿ ಆಡಳಿತ ಪಕ್ಷ ಮತ್ತು ಅದರ ಬೆಂಬಲಿಗರ ವಿಷಯದಲ್ಲಿ ಉದಾರವಾದಿ ನಿಲುವು ಕೈಗೊಳ್ಳುವ ಮೂಲಕ, ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಬಳಕೆದಾರರಿರುವ ಭಾರತದಲ್ಲಿ ತನ್ನ ವ್ಯವಹಾರ ಹಿತಾಸಕ್ತಿ ಕಾಯ್ದುಕೊಳ್ಳಲು ಫೇಸ್ ಬುಕ್ ಕೂಡ ಆಡಳಿತಾರೂಢ ವ್ಯವಸ್ಥೆಗೆ ಪೂರಕವಲ್ಲದ ಏನನ್ನೂ ಮಾಡುವುದಿಲ್ಲ ಎಂಬುದಕ್ಕೆ ಈ ವರದಿ ಒಂದು ನಿದರ್ಶನ.

ಫೇಸ್ ಬುಕ್ ಮತ್ತು ಮೋದಿ ಆಡಳಿತದ ನಡುವಿನ ಈ ನಂಟಿನ ಕುರಿತ ವಾಲ್ ಸ್ಟ್ರೀಟ್ ಜರ್ನಲ್ ವರದಿ ಬಹಿರಂಗವಾದ ಬೆನ್ನಲ್ಲೇ, ಇದೇ ಅಪವಿತ್ರ ಮೈತ್ರಿಯ ಕುರಿತ ಮತ್ತೊಂದು ಹೊಸ ಪುಸ್ತಕ ಕೂಡ ಬಿಡುಗಡೆಯಾಗಿದ್ದು, ‘ದಿ ರಿಯಲ್ ಫೇಸ್ ಆಫ್ ಫೇಸ್ ಬುಕ್ ಇನ್ ಇಂಡಿಯಾ’ ಎಂಬ ಆ ಕೃತಿ ಕೂಡ ಭಾರತದಲ್ಲಿ ಮೋದಿಯವರ ಬಿಜೆಪಿ ಮತ್ತು ಫೇಸ್ ಬುಕ್ ಹೇಗೆ ಪರಸ್ಪರ ಲಾಭದ ಸಂಬಂಧ ಹೊಂದಿವೆ ಎಂಬುದನ್ನು ವಿಶ್ಲೇಷಿಸಿದೆ.

ಪತ್ರಕರ್ತರಾದ ಪರಂಜಯ್ ಗುಹಾ ಠಾಕೂರ್ಥ ಮತ್ತು ಸಿರಿಲ್ ಸ್ಯಾಮ್ ಅವರು ಬರೆದಿರುವ ಈ ಕೃತಿಯಲ್ಲಿ 2014ರ ಲೋಕಸಭಾ ಚುನಾವಣೆಗೆ ಮುನ್ನ ಅಂದಿನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷಕ್ಕೆ ಫೇಸ್ ಬುಕ್ ಬೆಂಬಲ ನೀಡಿತು ಎಂಬ ಬಗ್ಗೆ ವಿವರವಾಗಿ ಹೇಳಲಾಗಿದೆ. 2013ರಲ್ಲಿ ಲೋಕಸಭಾ ಚುನಾವಣಾ ತಯಾರಿಯ ಭಾಗವಾಗಿ ಮೋದಿಯವರಿಗಾಗಿ ‘ಮೆರಾ ಭರವಸಾ’ ವೆಬ್ ತಾಣ ನಿರ್ಮಿಸಿ, ನಿರ್ವಹಿಸಿದ ಮತ್ತು ಬಿಜೆಪಿ ಪಕ್ಷಕ್ಕಾಗಿ ಹಲವು ವೆಬ್ ಪುಟಗಳನ್ನು ನಿರ್ಮಿಸಿದ, ಮೋದಿಯವರ ಆಪ್ತರೂ ಆಗಿದ್ದ ಹಿರೇನ್ ಜೋಷಿ, 2017ರಲ್ಲಿ ಫೇಸ್ ಬುಕ್ ಕಂಪನಿಯ ಭಾರತ ಮತ್ತು ದಕ್ಷಿಣ ಏಷ್ಯಾ ನೀತಿಗಳ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡರು. ಆದರೆ, ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಕಂಪನಿಯ ರಾಜಕೀಯ ಮತ್ತು ಸರ್ಕಾರಗೊಂದಿಗಿನ ಲಾಬಿ ವಿಭಾಗದ ಹೊಣೆಹೊತ್ತಿದ್ದ ಕ್ಯಾಟಿ ಹರ್ಬಾತ್ ಈ ವಿಷಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎಂಬ ವಿವರಗಳನ್ನು ಆ ಕೃತಿ ಒಳಗೊಂಡಿದೆ ಎಂದು ದ ವೈರ್ ವರದಿ ಹೇಳಿದೆ.

ಸ್ವತಃ ಪ್ರಧಾನಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ, ಚುನಾವಣಾ ತಯಾರಿ ಕಾರ್ಯದಲ್ಲಿ ಮೋದಿ ಮತ್ತು ಬಿಜೆಪಿ ಪರ ಕೆಲಸ ಮಾಡಿದ ವ್ಯಕ್ತಿಯೊಬ್ಬರು, ‘ನಿಷ್ಪಕ್ಷಪಾತ ಜಾಲತಾಣ’ ಎಂದು ಸ್ವತಃ ಹೇಳಿಕೊಳ್ಳುವ ಫೇಸ್ ಬುಕ್ ನ ಉನ್ನತ ಹುದ್ದೆಗೆ ಬಂದರೆ, ಅದನ್ನು ಆಳುವ ಪಕ್ಷ ಮತ್ತು ಪ್ರಭಾವಿ ಜಾಲತಾಣ ಸಂಸ್ಥೆ ನಡುವಿನ ಅಪವಿತ್ರ ಮೈತ್ರಿ ಎನ್ನದೇ ಬೇರೆ ಹೇಗೆ ವ್ಯಾಖ್ಯಾನಿಸಲು ಸಾಧ್ಯ?

ಆದರೆ, 2014ರ ಹೊತ್ತಿಗೆ ಉಗ್ರ ಹಿಂದುತ್ವವಾದಿ ಅಜೆಂಡಾದೊಂದಿಗೆ ವ್ಯಾಪಕ ಪ್ರಚಾರ ನಡೆಸಲು ಬಿಜೆಪಿಗೆ ಫೇಸ್ ಬುಕ್ ಮುಕ್ತ ವೇದಿಕೆ ಒದಗಿಸುವ ಮೂಲಕ ನೆರವಾದರೆ, ಅದೇ ಹೊತ್ತಿಗೆ ಭಾರತದಂತಹ ಅತಿ ಹೆಚ್ಚು ಸಾಮಾಜಿಕ ಜಾಲತಾಣ ಬಳಕೆದಾರರಿರುವ ದೇಶದಲ್ಲಿ ತಾನು ಹೊಂದಿರುವ ಪ್ರಭಾವ ಮತ್ತು ಬೆಂಬಲಿಗರ ನಡುವೆ ಫೇಸ್ ಬುಕ್ ಜಾಲತಾಣವನ್ನು ಜನಪ್ರಿಯಗೊಳಿಸುವ ಮೂಲಕ ಬಿಜೆಪಿ, ಜಾಲತಾಣ ಕಂಪನಿಗೆ ನೆರವು ನೀಡಿತು. ಇದು ಒಂದು ವ್ಯವಹಾರಿಕ ಲಾಭ, ಮತ್ತೊಂದು ಕಡೆ ರಾಜಕೀಯ ಲಾಭದ ಲೆಕ್ಕಾಚಾರದ ಮೈತ್ರಿಯಾಗಿತ್ತು ಎಂದೂ ವಿಶ್ಲೇಷಿಸಲಾಗಿದೆ.

ಈಗಲೂ ಫೇಸ್ ಬುಕ್ ಮತ್ತು ಪ್ರಧಾನಿ ಮೋದಿಯವರ ನಡುವಿನ ನಂಟು ಎಷ್ಟು ಆಪ್ತವಾಗಿದೆ ಎಂದರೆ; ಸದ್ಯ ವಿವಾದಕ್ಕೀಡಾಗಿರುವ ಫೇಸ್ ಬುಕ್ ಕಂಪನಿಯ ಅಂಖೀ ದಾಸ್ ಕೂಡ, ಈ ಮೊದಲು ಮೋದಿಯವರ ಜೊತೆ ಗುರುತಿಸಿಕೊಂಡವರೇ. ಮೋದಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅಂಕಣಕಾರ್ತಿಯಾದ ದಾಸ್, 2017ರಲ್ಲಿ ಮೋದಿಯವರ ಗುಣಗಾನದ ‘ಪ್ರೈಮ್ ಮಿನಿಸ್ಟರ್ ಮೋದಿ ಅಂಡ್ ದಿ ನ್ಯೂ ಆರ್ಟ್ ಆಫ್ ಪಬ್ಲಿಕ್ ಗವರ್ನೆನ್ಸ್ ಎಂದು ವಿಶೇಷ ಲೇಖನ ಬರೆದಿದ್ದರು. ಆ ಲೇಖನವನ್ನು ಮೋದಿಯವರ ವೈಯಕ್ತಿಕ ವೆಬ್ ತಾಣದಲ್ಲಿ ಪ್ರಕಟಿಸಲಾಗಿತ್ತು ಕೂಡ!

ಇದೀಗ ಈ ನಂಟಿನ ಕುರಿತ ವಾಲ್ ಸ್ಟ್ರೀಟ್ ಜರ್ನಲ್ ವರದಿ ದೇಶದ ರಾಜಕೀಯ ವಲಯದಲ್ಲಿ ಹೊಸ ವಿವಾದಕ್ಕೆ ಚಾಲನೆ ನೀಡಿದ್ದು, ಪ್ರತಿಪಕ್ಷಗಳು ಮತ್ತು ಸಾರ್ವಜನಿಕರು ಫೇಸ್ ಬುಕ್ ಮತ್ತು ಮೋದಿ ನಂಟಿನ ಕುರಿತು ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ನಾಯಕರಂತೂ ಈ ಕುರಿತು ಸದನ ಸಮಿತಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದು, ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ. ಆದರೆ, ನೆಲಕ್ಕೆ ಬಿದ್ದರೂ ಮೀಸೆಮಣ್ಣಾಗಿಲ್ಲ ಎಂಬ ತನ್ನ ಎಂದಿನ ವರಸೆಯಂತೆ ಬಿಜೆಪಿ, ಈ ಹಿಂದಿನ ಕ್ಯಾಂಬ್ರಿಜ್ ಅನಲಾಟಿಕಾ ವಿವಾದವನ್ನು ಪ್ರಸ್ತಾಪಿಸಿ ಪ್ರತಿಪಕ್ಷದ ಬಾಯಿ ಮುಚ್ಚಿಸಲು ಯತ್ನಿಸುತ್ತಿದೆ.

ಈ ನಡುವೆ, ಸೋಮವಾರದ ಬೆಳವಣಿಗೆಯಲ್ಲಿ ಫೇಸ್ ಬುಕ್ ಇಂಡಿಯಾದ ಅಂಖೀ ದಾಸ್, ವಾಲ್ ಸ್ಟ್ರೀಟ್ ವರದಿ ಹಿನ್ನೆಲೆಯಲ್ಲಿ ತಮಗೆ ಕಳೆದ ಮೂರು ದಿನಗಳಿಂದ ಬೆದರಿಕೆ ಕರೆಗಳು ಬರುತ್ತಿವೆ. ಕೆಲವರು ಮಹಿಳೆಯಾಗಿ ತನ್ನ ಘನತೆಗೆ ಅವಮಾನಕರ ಮಾತುಗಳನ್ನೂ ಆಡಿದ್ದಾರೆ. ರಾಜಕೀಯ ಪ್ರೇರಿತ ಹಿನ್ನೆಲೆಯಲ್ಲೂ ಕೆಲವರು ಬೆದರಿಕೆ ಒಡ್ಡಿದ್ದು ಆ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ದೆಹಲಿಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ.

Tags: ಅಂಖೀ ದಾಸ್ಪ್ರಧಾನಿ ಮೋದಿಫೇಸ್ ಬುಕ್ಭಾರತೀಯ ಸಂವಿಧಾನಲೋಕಸಭಾ ಚುನಾವಣೆವಾಲ್ ಸ್ಟ್ರೀಟ್ ಜರ್ನಲ್
Previous Post

ಶಾಹೀನ್ ಭಾಗ್: ಬಿಜೆಪಿ ಪಾಲಿಗೆ ದೇಶದ್ರೋಹಿಗಳಾಗಿದ್ದವರು ಒಳ್ಳೆಯವರು ಆಗಿದ್ದು ಯಾವಾಗ..?

Next Post

ಪಾಲ್ಘರ್: ರಾಸಾಯನಿಕ ಕಾರ್ಖಾನೆಯಲ್ಲಿ ಸ್ಪೋಟಕ್ಕೆ ಒಂದು ಬಲಿ

Related Posts

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?
Top Story

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

by ಪ್ರತಿಧ್ವನಿ
April 9, 2026
0

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರಾಮನಾಥಪುರ ಗ್ರಾಮದಲ್ಲಿ 4 ಎಕರೆ 12 ಗುಂಟೆ ಜಮೀನಿನ ವಿಚಾರದಲ್ಲಿ ಅಕ್ರಮವಾಗಿ ಖಾತೆ ಹಾಗೂ ಪಹಣಿ ತಯಾರಿಸಿ...

Read moreDetails
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

April 9, 2026
ಕರಾವಳಿಯಲ್ಲಿ ರಕ್ತದೋಕುಳಿ.. ಹಿಂದೂ ಕಾರ್ಯಕರ್ತನ ಹತ್ಯೆ

ಸಿದ್ದರಾಮಯ್ಯ  ಸಿಎಂ ಮುಂದುವರಿಕೆ ಬಗ್ಗೆ  ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದೇನು ?

April 7, 2026
Next Post
ಪಾಲ್ಘರ್:  ರಾಸಾಯನಿಕ ಕಾರ್ಖಾನೆಯಲ್ಲಿ ಸ್ಪೋಟಕ್ಕೆ ಒಂದು ಬಲಿ

ಪಾಲ್ಘರ್: ರಾಸಾಯನಿಕ ಕಾರ್ಖಾನೆಯಲ್ಲಿ ಸ್ಪೋಟಕ್ಕೆ ಒಂದು ಬಲಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada