ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ನಾಗೇಶ್ ಅವರ ಮೇಲೆ ಹಲ್ಲೆ ನಡೆದಿರುವ ಬೆನ್ನಲ್ಲೆ ನಗರದ ಹಲವೆಡೆ ಪರಿಸ್ಥಿತಿ ಬಿಗಡಾಯಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಿವಮೊಗ್ಗ ನಗರದಾದ್ಯಂತ ಶನಿವಾರದವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಇಂದು ಮುಂಜಾನೆ (ಡಿ.3) ನೆಹರು ಕ್ರೀಡಾಂಗಣಕ್ಕೆ ವಾಯುವಿಹಾರಕ್ಕೆಂದು ತೆರಳಿ ಹಿಂತಿರುಗುತ್ತಿದ್ದ ವೇಳೆ ಬಜರಂಗದಳದ ಕಾರ್ಯಕರ್ತ ನಾಗೇಶ್ ಮೇಲೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿತ್ತು. ಹಲ್ಲೆಯ ತೀವ್ರತೆಗೆ ತಲೆ ಹಾಗೂ ಮುಖದ ಭಾಗದಲ್ಲಿ ಗಾಯಗಳಾಗಿದ್ದ ನಾಗೇಶ್ ಅವರನ್ನು ನಗರದ ಮೆಟ್ರೋ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಘಟನೆಯ ಬೆನ್ನಲ್ಲೆ ನಗರದ ಹಲವೆಡೆ ಘರ್ಷಣೆ ಉಂಟಾಗಿದೆ. ಗಾಂಧಿ ಬಜಾರ್, ಆಜಾದ್ ನಗರ, ರವಿ ವರ್ಮ ಬೀದಿಯಲ್ಲಿ ಘರ್ಷಣೆ ನಡೆದಿದ್ದು, ರಾಮಣ್ಣ ಶ್ರೇಷ್ಟಿ ಪಾರ್ಕ್ ಬಳಿ ಒಂದು ಕಾರು, ಕಸ್ತೂರ ಬಾ ರಸ್ತೆಯಲ್ಲಿ ಒಂದು ಆಟೊರಿಕ್ಷಾ ಜಖಂಗೊಳಿಸಲಾಗಿದೆ. ಜೋರ್ ಬಜಾರ್ನಲ್ಲಿ ಮೂವರು ವ್ಯಾಪಾರಿಗಳ ಮೇಲೆ ಹಲ್ಲೆ ನಡೆದಿದೆ, ಗಲಾಟೆಯಲ್ಲಿ ನಾಲ್ಕು ಕಾರುಗಳು ಝಖಂಗೊಂಡಿದ್ದು, ಒಟ್ಟು ಹನ್ನೊಂದು ಮಂದಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿಯಾಗಿದೆ.
ನಾಗೇಶ್ ಮೇಲೆ ಹಲ್ಲೆ ನಡೆದ ಘಟನೆ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಬಜರಂಗದಳದ ಕಾರ್ಯಕರ್ತರು ಗಾಂಧಿಬಜಾರ್ನಲ್ಲಿ ಜಮಾಯಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಗ್ರಾಹಕರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಿ ಗಾಂಧಿಬಜಾರ್ನಲ್ಲಿ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ.
ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಪೂರ್ವವಲಯ ಐಜಿಪಿ ಎಸ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಸ್ಥಳದಲ್ಲೇ ಬೀಡುಬಿಟ್ಟು ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ತಹಸಿಲ್ದಾರ್ ನಾಗರಾಜ್ ಶಿವಮೊಗ್ಗ ನಗರದಾದ್ಯಂತ ಶನಿವಾರದವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.






