ಕರೋನಾ ಸಂಕಷ್ಟದಲ್ಲಿ ಸಾವಿರಾರು ವಲಸೆ ಕಾರ್ಮಿಕರು ಸಂಕಷ್ಟದ ಬದುಕಿಗೆ ತಮ್ಮನ್ನು ತಾವು ಅರ್ಪಿಸಿಕೊಂಡರು. ನೂರಾರು ಜನರು ಅರ್ಧ ದಾರಿಯಲ್ಲೇ ತಮ್ಮ ಬದುಕಿನ ಕ್ಷಣಗಳನ್ನು ಅಂತ್ಯ ಮಾಡಿದ್ದಾರೆ. ದೇಶದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಕಣ್ಣೀರಲ್ಲಿ ಕೈ ತೊಳೆಯುವಾಗ ಸಹಾಯಕ್ಕೆ ಬಂದು ನಿಂತು ತನ್ನ ಪಾಡಿಗೆ ಕೆಲಸ ಶುರು ಮಾಡಿದ ಸಿನಿಮಾ ವಿಲನ್ ಈಗ ಹೀರೋ ಆಗಿ ಬದಲಾಗಿದ್ದಾರೆ. ಸಿನಿಮಾದಲ್ಲಿ ತಾನು ನಾಯಕ ಅಲ್ಲದಿರಬಹುದು, ಆದರೆ ನಿಜ ಜೀವನದಲ್ಲಿ ಮಾನವೀಯತೆ ಮೂಲಕ ಜನಮಾನಸಲ್ಲಿ ಉಳಿಯುವಂತೆ ನಡೆದುಕೊಂಡಿದ್ದಾರೆ. ಬಾಲಿವುಡ್ ಚಿತ್ರೋದ್ಯಮದಲ್ಲಿ ಖಳನಾಯಕನಾಗಿ ಹೆಸರು ಮಾಡಿರುವ ನಟ ಸೋನು ಸೂದ್, ವಲಸೆ ಕಾರ್ಮಿಕರ ಹಿತಕ್ಕಾಗಿ ನೂರಾರು ಬಸ್ ಗಳ ಮೂಲಕ ಸ್ವಂತ ಊರುಗಳಿಗೆ ಕಳುಹಿಸಿ ಕೊಡುವ ಕೆಲಸ ಮಾಡಿದ್ದಾರೆ. ಬಾಲಿವುಡ್ ಖಳನಟ ಸೋನ್ ಸೂದ್ ನಿಜ ಜೀವನದಲ್ಲಿ ನಾಯಕನಾಗಿ ವಿಜೃಂಭಿಸುತ್ತಿದ್ದಾರೆ.
ಬಾಲಿವುಡ್ ನಟ ಸೋನು ಸೂದ್ ವಲಸೆ ಕಾರ್ಮಿಕರನ್ನು ತೋರಿಕೆಗಾಗಿ ಬಸ್ ವ್ಯವಸ್ಥೆ ಮಾಡಿ ಕಳುಹಿಸಿ ಫೋಟೋ ತೆಗೆಸಿಕೊಂಡು ಪ್ರಚಾರ ಪಡೆಯುವ ಕೆಲಸ ಮಾಡಲು ಮುಂದಾಗಲಿಲ್ಲ. ಬದಲಿಗೆ ನಿರಂತರವಾಗಿ ತನ್ನ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರನ್ನು ಕರ್ನಾಟಕ, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶಕ್ಕೆ ಕಳುಹಿಸಿಕೊಡುವ ಕೆಲಸ ಮಾಡಿದ್ದಾರೆ. ಈ ಕೆಲಸವನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನ ಮೆಚ್ಚಿಕೊಂಡು ಶಹಬ್ಬಾಸ್ ಗಿರಿ ಕೊಡುತ್ತಿದ್ದಾರೆ. ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸುತ್ತ ಸಾಗುತ್ತಿರುವ ನಟ ಸೋನು ಸೂದ್, ಇದೀಗ ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಕೇಳಿಸಿಕೊಂಡು ಅವರಿಗೆ ಸಹಾಯ ಮಾಡಲು ಕಾಲ್ ಸೆಂಟರ್ ತೆಗೆದಿದ್ದಾರೆ. ಟೋಲ್ ಫ್ರೀ ಸಂಖ್ಯೆ 18001213711 ಗೆ ಕರೆ ಮಾಡಿ ವಲಸೆ ಕಾರ್ಮಿಕರು ಸಮಸ್ಯೆ ಹೇಳಿಕೊಳ್ಳಬಹುದಾಗಿದೆ.

Kk my brother you are a Rockstar. Thank u for all the help @NeetiGoel2 https://t.co/UsDFDRky4s
— sonu sood (@SonuSood) May 29, 2020
“ನನಗೆ ಇತ್ತೀಚಿಗೆ ಸಾಕಷ್ಟು ಕರೆಗಳು ಬರುತ್ತಿದ್ದು, ಸಾವಿರಾರು ಜನರು ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ನಮ್ಮ ಕುಟುಂಬ ಹಾಗೂ ನನ್ನ ಸ್ನೇಹಿತರು ಪ್ರತಿದಿನ ಸಾವಿರಾರು ಜನರ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಆದರೆ ನಮ್ಮನ್ನು ಸಂಪರ್ಕ ಮಾಡಲು ಸಾಧ್ಯವಾಗದ ಸಾಕಷ್ಟು ಜನರು ನೋವು ಅನುಭವಿಸುತ್ತಿದ್ದಾರೆ. ಹಾಗಾಗಿ ಅಂತಹವರಿಗೆ ನಾವು ನೆರವು ನೀಡಲು ಕಾಲ್ ಸೆಂಟರ್ ಓಪನ್ ಮಾಡಿದ್ದೇವೆ. ನಾವು ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಗರಿಷ್ಠ ಪ್ರಮಾಣದ ವಲಸೆ ಕಾರ್ಮಿಕರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ನಾವು ಎಷ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆಯೋ ಗೊತ್ತಿಲ್ಲ. ಆದರೂ ನಾವು ನಮ್ಮ ಪ್ರಯತ್ನವನ್ನು ಕೈ ಬಿಡುವುದಿಲ್ಲ” ಎಂದಿದ್ದಾರೆ ನಟ ಸೋನು ಸೂದ್.ನಟ ಸೋನು ಸೂದ್ ಕೆಲಸವನ್ನು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಶ್ಲಾಘಿಸಿದ್ದಾರೆ. “ಬಾಲಿವುಡ್ ನಟನಾಗಿರುವ ಸೋನು ಸೂದ್ ಹಲವಾರು ರಾಜ್ಯಗಳ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಚಾರ” ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ನಟ ಸೋನು ಸೂದ್, “ನಿಮ್ಮ ಮಾತುಗಳು ನಮಗೆ ಸ್ಫೂರ್ತಿದಾಯಕ. ಇನ್ನಷ್ಟು ಕೆಲಸ ಮಾಡಲು ಪ್ರೋತ್ಸಾಹವಿತ್ತಂತಿದೆ. ವಲಸೆ ಕಾರ್ಮಿಕರಾಗಿರುವ ಸಹೋದರ ಸಹೋದರಿಯರು ತಮ್ಮ ಮನೆಗಳನ್ನು ಸೇರಿಕೊಳ್ಳುವ ತನಕವೂ ನಮ್ಮ ಕೆಲಸ ಮುಂದುವರಿಸುತ್ತೇವೆ” ಎಂದಿದ್ದಾರೆ.
Thank u so much sir. Your words inspire me to work harder. Will continue working for the migrant brothers and sisters till we unite them with their families Honoured. https://t.co/fmZjfCfAqH
— sonu sood (@SonuSood) May 27, 2020
ದಿನನಿತ್ಯ ಕೆಲಸವನ್ನೇ ನಂಬಿಕೊಂಡು ತಮ್ಮ ಕುಂಟುಂಬ ನಿರ್ವಹಣೆ ಮಾಡುತ್ತಿದ್ದ ಅದೆಷ್ಟೋ ಕುಟುಂಬಗಳು ಮಕ್ಕಳ ಸಮೇತ ಕಾಲ್ನಡಿಗೆಯಲ್ಲಿ ಹುಟ್ಟೂರುಗಳಿಗೆ ತೆರಳುವ ದೃಶ್ಯ ನನ್ನನ್ನು ಕಾಡಲು ಶುರು ಮಾಡಿತ್ತು. ಅದೊಂದೇ ಕಾರಣಕ್ಕಾಗಿ ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ನಿರ್ಧಾರ ತೆಗೆದುಕೊಂಡು ಮೊದಲಿಗೆ ಮಹಾರಾಷ್ಟ್ರ ಸರ್ಕಾರದ ಅನುಮತಿ ಮೇರೆಗೆ ಕಳುಹಿಸಿಕೊಡಬೇಕಾದ ರಾಜ್ಯ ಸರ್ಕಾರಗಳ ಜೊತೆಗೆ ಚರ್ಚೆ ನಡೆಸಿ ಬಸ್, ಊಟ, ನೀರು ವ್ಯವಸ್ಥೆ ಮಾಡಿ ಕಳುಹಿಸಿಕೊಡುತ್ತಿದ್ದೇವೆ. ಕೊನೆಯ ಕಾರ್ಮಿಕ ಮನೆ ಸೇರುವ ತನಕ ನಾನು ಈ ಕೆಲಸವನ್ನು ನಿಲ್ಲಿಸುವುದಿಲ್ಲ. ಈ ಕೆಲಸದಿಂದ ನನಗೆ ಆತ್ಮ ತೃಪ್ತಿ ಇದೆ. ಪದಗಳಲ್ಲಿ ವರ್ಣಿಸಲು ಸಾಧ್ಯವಾಗಲ್ಲ. ಸಾಕಷ್ಟು ಜನರು ನನ್ನನ್ನು ಮನಸ್ಸಲ್ಲೇ ಹರಸಿದ್ದಾರೆ ಅಷ್ಟು ಸಾಕು. ನನ್ನ ತಾಯಿ ಒಂದು ಮಾತು ಹೇಳುತ್ತಿದ್ದರು. ನಿನಗೆ ಸಹಾಯ ಮಾಡುವ ಶಕ್ತಿ ಇದ್ದಾಗ ಎಷ್ಟು ಜನರಿಗೆ ಸಾಧ್ಯವೋ ಅಷ್ಟು ಸಹಾಯ ಮಾಡು. ಅವರ ಆಶೀರ್ವಾದ ನಿನ್ನನ್ನು ಕಾಪಾಡುತ್ತದೆ. ಅದೇ ನಿನ್ನ ಗೆಲುವು ಎಂದು ಹೇಳುತ್ತಿದ್ದರು. ಇದೀಗ ಆ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.ಸಹಾಯದ ಅಗತ್ಯ ಇದ್ದಾಗ ಹೇಳದೆ ಕೇಳದೆ ಸಹಾಯ ನಿಲ್ಲುವ ನಮ್ಮ ಪಂಜಾಬಿಗಳ ಬಗ್ಗೆ ಓದಿದಾಗ ನನಗೆ ಅಪಾರವಾದ ಹೆಮ್ಮೆಯಾಗುತ್ತದೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೊಂಡಾಡಿದ್ದಾರೆ. ಪಂಜಾಬ್ ಮೂಲದ ಸೋನ್ ಸೂದ್ ವಲಸೆ ಕಾರ್ಮಿಕರಿಗೆ ಮಾಡುತ್ತಿರುವ ಸಹಾಯವನ್ನು ಪಂಜಾಬಿಗಳ ಹೆಮ್ಮೆಯ ಕಾರ್ಯ ಎಂದು ಶ್ಲಾಘಿಸಿದ್ದಾರೆ. ಒಳ್ಳೇದಾಗಲಿ ಸೋನು ಎಂದು ಆಶಿಸಿದ್ದಾರೆ. ನಿಮ್ಮ ಮಾತುಗಳು ಹಾಗೂ ನೀವು ನಮಗೆ ಯಾವಾಗಲೂ ಸ್ಫೂರ್ತಿದಾಯಕ. ನಿಮಗೆ ನಾನು ಮಾತು ಕೊಡುತ್ತೇನೆ ಪಂಜಾಬಿಗಳು ಹೆಮ್ಮೆಪಡುವ ಕೆಲಸ ಖಂಡಿತ ಮಾಡುತ್ತೇನೆ ಸರ್ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Thank you so much for your kind words sir. You have always a been an inspiration for me. I promise to make our our fellow punjabis proud. https://t.co/2R9dpS0zGW
— sonu sood (@SonuSood) May 28, 2020
ಇದೀಗ ಸೋನ್ ಸೂದ್ ಅವರನ್ನು ಅಮಿತಾ ಬಚ್ಚನ್, ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಗೆ ಹೋಲಿಕೆ ಮಾಡಿ ಚರ್ಚೆ ನಡೆಯುತ್ತಿದೆ. ನಟ ವಿವೇಕ್ ಒಬೇರಾಯ್, ಐಶ್ವರ್ಯ ಚೌಬೆ, ರಂಗನಾಥನ್ ಮಾಧವನ್, ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸಂಸದ ಸುಶೀಲ್ ಕುಮಾರ್ ಸಿಂಗ್, ಅಸ್ಲಾಂ ಶೇಖ್, ಹರೀಶ್ ಕೌರಾನ, ಗೌರವ್ ಭಾಟಿಯಾ, ಸೂರಜ್ ಠಾಕೂರ್ ಸೇರಿದಂತೆ ಸಾಕಷ್ಟು ಜನಪ್ರತಿನಿಧಿಗಳು, ರಾಜಕಾರಣಿಗಳು ಸೋನುಸೂದ್ ಕೆಲಸಕ್ಕೆ ಮೆಚ್ಚುಗೆ ಸೂಚಿಸುವ ಕೆಲಸ ಮಾಡಿದ್ದಾರೆ.
Extremely proud of you my brother! Kudos to your noble efforts! It’s incredible to see how you’re helping thousands of helpless people reach their homes!
Big Salute! Keep inspiring!
May god bless @SonuSood
— Vivek Anand Oberoi (@vivekoberoi) May 27, 2020
I’ve had the privilege of knowing you as a professional colleague for over 2 decades now @SonuSood & celebrated your rise as an actor ;but the kindness you have displayed in these challenging times makes me prouder still thank you for helping those in need https://t.co/JcpoZRIr8M
— Smriti Z Irani (@smritiirani) May 24, 2020
ಓರ್ವ ನಟ ಹೊಟ್ಟೆಗೆ ಹಿಟ್ಟಿಲ್ಲದೆ ಸಾವಿರಾರು ಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲಿ ಸಾಗುವ ಸಂಕಷ್ಟ ಕಂಡು ವಲಸೆ ಕಾರ್ಮಿಕರ ನೆರವಿಗೆ ಬಂದಿರುವ ನಟನಿಗೆ ಸಿಗಬೇಕಾದ ಗೌರವ ಸಿಕ್ಕೇ ಸಿಗುತ್ತದೆ. ಚಿತ್ರಗಳಲ್ಲಿ ಖಳನಟನಾದರೂ ನಿಜಜೀವನದಲ್ಲಿ ನಾಯಕನಟನಾಗಿಯೇ ಸ್ಥಾನ ಪಡೆಯುತ್ತಾನೆ. ಆದರೆ ಸಿನಿಮಾಗಳಲ್ಲಿ ಕೋಟಿ ಕೋಟಿ ಸಂಭಾವನೆ ಪಡೆದು ತೆರೆ ಮೇಲೆ ಮಿಂಚಿ ಮೆರೆಯುವ ನಾಯಕ ನಟರು ಮಾತ್ರ ಲಾಕ್ಡೌನ್ ಅವಧಿಯಲ್ಲಿ ತೋರಿಕೆಗೂ ತೆರೆ ಮುಂದೆ ಬಾರಲಿಲ್ಲ ಎನ್ನುವುದು ಮಾತ್ರ ವಿಪರ್ಯಾಸ. ಅದರಲ್ಲೂ ಸಿನಿಮಾ ಮಂದಿಗಳನ್ನು ಹೆಚ್ಚಾಗಿ ಇಷ್ಟಪಡುವುದೇ ಕೂಲಿಕಾರ್ಮಿಕರು. ಕಷ್ಟದಲ್ಲಿ ಜೀವನ ನಡೆಸುತ್ತಿದ್ದರೂ ಸಮಯ ಸಿಕ್ಕಾಗ ಒಂದು ಸಿನಿಮಾ ನೋಡಿಕೊಂಡು ಬರುವ ಮನಸ್ಸು ಮಾಡುವುದೇ ವಲಸೆ ಕಾರ್ಮಿಕರು. ಪರಿಸ್ಥಿತಿ ಹೀಗಿದ್ದರೂ ಕೋಟ್ಯಂತರ ರೂಪಾಯಿ ಒಡೆಯರಾಗಿ, ಜಾಹಿರಾತುಗಳಲ್ಲಿ ಜನರನ್ನು ಮೋಡಿ ಮಾಡುತ್ತ ಸಂಭಾವನೆಯಿಂದ ಖಜಾನೆ ಭರ್ತಿ ಮಾಡಿಕೊಳ್ಳುವ ಕಂಜೂಸ್ ನಟರು ಸೋನುಸೂದ್ ನೋಡಿ ಕಲಿಯಬೇಕಾದದ್ದು ಸಾಕಷ್ಟು ಇದೆ ಎನಿಸುತ್ತದೆ.