ತಮಿಳುನಾಡು ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಹಾಗಾಗಿ ಅಧಿಕಾರ ಹಿಡಿಯಲು ಆಡಳಿತಾರೂಢ ಪಕ್ಷ ಸೇರಿದಂತೆ ಎಲ್ಲಾ ಪಕ್ಷಗಳು ಭಾರೀ ಕಸರತ್ತು ನಡೆಸುತ್ತಿವೆ. ಇದರ ನಡುವೇ ನಾಲ್ಕು ದಶಕಗಳ ಹಿಂದೆ ಎಂಜಿಆರ್ ಮತ್ತು ಶಿವಾಜಿ ಗಣೇಶನ್ ನಡುವೇ ಸ್ಪರ್ಧೆ ಏರ್ಪಟ್ಟ ಮಾದರಿಯಲ್ಲೇ ಈ ಬಾರಿಯೂ ಕಮಲ್ ಮತ್ತು ರಜನಿಕಾಂತ್ ಮಧ್ಯೆ ಜಿದ್ದಾ-ಜಿದ್ದಿಯಾಗಲಿದೆಯಾ? ಎನ್ನುವ ಚರ್ಚೆಗಳು ನಡೆಯುತ್ತಿವೆ. ಕಮಲ ಹಾಸನ್ ಮತ್ತು ರಜನಿಕಾಂತ್ ಇಬ್ಬರೂ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ಸ್. 2021ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಯಾರು ಜನರ ವಿಶ್ವಾಸಗಳಿಸಲಿದ್ದಾರೆ ಎಂಬ ಕುತೂಹಲ ಸಹಜವಾಗಿ ಹೆಚ್ಚಾಗಿದೆ. ಚುನಾವಣೆಯಲ್ಲಿ ರಜನೀಕಾಂತ್ ಮತ್ತು ಕಮಲಹಾಸನ್ ಪರಸ್ಪರ ಎದುರಾಳಿಗಳು. ಚಿತ್ರರಂಗದಲ್ಲಿ ಗೆಲವು ಕಂಡ ಮಹಾನ್ ನಟರು ರಾಜಕೀಯದಲ್ಲಿಯೂ ಕಾಣಲಿದ್ದಾರಾ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಹೀಗೆಯೇ ಈ ಹಿಂದೆ ಇಬ್ಬರು ಮಹಾನ್ ನಟರ ಮಧ್ಯೆ ನಡೆದ ರಾಜಕೀಯ ಕಾಳಗದಲ್ಲಿ ಎಂಜಿಆರ್ ಗೆದ್ದರು, ಶಿವಾಜಿ ಗಣೇಶನ್ ಸೋತರು. ತಮಿಳುನಾಡಿನಲ್ಲಿ ಎಂಜಿಆರ್ ಅವರದ್ದೇ ಆದ ಅಭಿಮಾನಿ ವರ್ಗವನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಶಿವಾಜಿ ಗಣೇಶನ್ ಮಾತ್ರ ಅವರ ಅಭಿಮಾನಿಗಳಿಗೆ ಮಹಾನ್ ನಟರಾಗಿ ಮಾತ್ರ ಉಳಿದರು. ಅಭಿಮಾನವನ್ನು ಮತವನ್ನಾಗಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅಭಿಮಾನಿಗಳು ಗಣೇಶನ್ ಅವರನ್ನು ನಟರಾಗಿ ಸ್ವೀಕರಿಸಿ, ಎಂಜಿಆರ್ ಅವರನ್ನು ರಾಜಕೀಯ ನೇತಾರರನ್ನಾಗಿಸಿದರು.
ಈ ಬಾರಿಯೂ ರಜನಿ-ಕಮಲ್ ರಾಜಕೀಯ ಎಂಜಿಆರ್ ಮತ್ತು ಶಿವಾಜಿ ಗಣೇಶನ್ ಸನ್ನಿವೇಶವನ್ನು ಮರುಕಳಿಸಲಿದೆಯಾ ಎನ್ನುವ ಚರ್ಚೆಗಳು ನಡೆಯುತ್ತಿವೆ. ಇಬ್ಬರಿಗೂ ತಮಿಳುನಾಡಿನಾದ್ಯಂತ ಬೃಹತ್ ಅಭಿಮಾನಿ ಬಳಗವಿದೆ. ಸುಲಭವಾಗಿ ಜನರ ಸಂಪರ್ಕಕ್ಕೆ ಸಿಗುವ ಮೂಲಕ ಸರಳತೆ-ಸಜ್ಜನಿಕೆಗೆ ಹೆಸರಾಗುತ್ತಿದ್ದಾರೆ. ಕಮಲ್ ಬುದ್ಧಿವಂತರಾಗಿದ್ದರೂ ರಜನಿ ಮುಂದೆ ಅವರ ರಾಜಕೀಯ ಆಟ ನಡೆಯುವುದು ಕಠಿಣ ಎನ್ನುತ್ತಿವೆ ಮೂಲಗಳು.ತಮಿಳುನಾಡಿನ ಆಗಿನ ರಾಜಕೀಯ ಪರಿಸ್ಥಿತಿಗಿಂತ ಈಗಿನ ಸನ್ನಿವೇಶ ತುಂಬಾ ಭಿನ್ನವಾಗಿದೆ. ಎಂಜಿಆರ್ ಮೊದಲಿನಿಂದಲೂ ಎಷ್ಟೋ ಕಲಾವಿದರನ್ನು ಬೆಳೆಸುವ ಮೂಲಕ ತನ್ನ ಬಳಗವನ್ನು ಕಟ್ಟಿಕೊಂಡಿದ್ದರು. ನಿರ್ದೇಶಕರು, ಕವಿಗಳು, ನಿರ್ಮಾಪಕರು ಸೇರಿದಂತೆ ಹಲವರು ಎಂಜಿಆರ್ ರಾಜಕೀಯದ ಯಶಸ್ಸಿಗೆ ಕಾರಣರಾದರು.
ಶಿವಾಜಿ ಗಣೇಶನ್ ಶ್ರೇಷ್ಠ ನಟರಾಗಿದ್ದರೂ, ಚಿತ್ರರಂಗದಲ್ಲಿನ ತಮ್ಮ ಜನಪ್ರಿಯತೆ ರಾಜಕೀಯದಲ್ಲಿ ಕೆಲಸ ಮಾಡಲಿಲ್ಲ. ಎಂಜಿಆರ್ ಮುಂದೆ ಶಿವಾಜಿ ಗಣೇಶನ್ ಸೋತರೂ ರಾಜಕೀಯ ಹೋರಾಟ ಮುಂದುವರೆಯಿತು. ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ದೀರ್ಘಕಾಲ ಮುಂದುವರೆದ ಹೋರಾಟದಲ್ಲಿಯೂ ಎಂಜಿಆರ್ ಗೆದ್ದರು. ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಯಶಸ್ವಿಯಾಗುವ ಮೂಲಕ ಪಕ್ಷವನ್ನು ಕಟ್ಟಿ ಬೆಳೆಸಿದರು.
ಎಂಜಿಆರ್ ನಂತೆಯೇ ಸಕ್ಸಸ್ ಆಗಲಿದ್ದಾರಾ ರಜನಿ-ಕಮಲ್?:
ಶಿವಾಜಿ ಗಣೇಶನ್ ರೀತಿಯೇ ಮತ್ತೊಬ್ಬ ನಟ ವಿಜಯಕಾಂತ್ ರಾಜಕೀಯ ಪ್ರವೇಶಿಸಿದರು. ಮಾಸ್ ಹೀರೋ ಎನಿಸಿದರೂ ವಿಜಯಕಾಂತ್ ರಾಜಕೀಯದಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಕಂಡರೂ ಕೊನೆಯತನಕ ತನ್ನ ಪ್ರಭಾವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಜನಿ ಅವರಿಗೆ ಬೃಹತ್ ಅಭಿಮಾನಿ ವರ್ಗವಿದ್ದು, ಅವರ ರಾಜಕೀಯ ಜೀವನದಲ್ಲಿ ಯಾವ ರೀತಿಯ ಪಾತ್ರವಹಿಸುತ್ತದೆ ಎಂಬುದರ ಮೇಲೆ ಯಶಸ್ಸು ನಿಂತಿದೆ ಎನ್ನುತ್ತಾರೆ ತಜ್ಞರು.
ಇನ್ನು ಕಮಲ್ ಹಾಸನ್ಗೆ ತನ್ನದೇ ಆದ ಕಟ್ಟರ್ ಅಭಿಮಾನ ವರ್ಗವಿದೆ. ಅಲ್ಲದ್ದೇ ಬಿಜೆಪಿ ವಿರುದ್ಧ ಕಟ್ಟುತ್ತಿರುವ ಮಹಾಮೈತ್ರಿಯಲ್ಲಿಯೂ ಗುರುತಿಸಿಕೊಳ್ಳುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಸದ್ದಿಲ್ಲದೇ ಸುದ್ದಿಯಾಗುತ್ತಿದ್ದಾರೆ. ಹೊಸ ಪಕ್ಷವನ್ನು ಸ್ಥಾಪಿಸಿರುವ ಅವರು ಈಗಿನ ಸನ್ನಿವೇಶದಲ್ಲಿ ಎಷ್ಟು ಸ್ಥಾನಗಳು ಗೆಲ್ಲಲ್ಲಿದ್ದಾರೆ ಎನ್ನುವ ಸ್ಪಷ್ಟತೆ ದೊರೆತಿಲ್ಲ.
ನಟ ರಜನೀಕಾಂತ್ ಅವರ ಹೊಸಪಕ್ಷ 2021ರಲ್ಲಿ ಸ್ಪರ್ಧಿಸಿದರೆ 30 ಸ್ಥಾನಗಳು ಲಭಿಸಲಿವೆ ಎಂದು ಸಮೀಕ್ಷೆಯೊಂದು ಹೇಳಿದೆ. ಇಂಡಿಯಾ ಟುಡೇ-ಕಾರ್ವಿ ಇತ್ತೀಚೆಗೆ ಸಮೀಕ್ಷೆ ನಡೆಸಿದ್ದು, ಚುನಾವಣೆಯಲ್ಲಿ ಸೂಪರ್ಸ್ಟಾರ್ನ ಪಕ್ಷಕ್ಕೆ ಶೇ 16ರಷ್ಟು ಮತಗಳು ಲಭಿಸಲಿವೆ ಎಂದು ಭವಿಷ್ಯ ನುಡಿದಿದೆ.
ಆದರೆ ಚುನಾವಣೆಯಲ್ಲಿ ಡಿಎಂಕೆಗೆ ಹೆಚ್ಚಿನ ಅವಕಾಶವಿದೆ. 2011ರ ಚುನಾವಣೆಯಲ್ಲಿ ರಾಜ್ಯಾದ್ಯಂತ ತೀವ್ರ ಹಿನ್ನಡೆ ಅನುಭವಿಸಿದ್ದ ಈ ದ್ರಾವಿಡ ಪಕ್ಷ ತನ್ನ ಮಿತ್ರ ಪಕ್ಷಗಳ ಜತೆಗೂಡಿ 130 ಸ್ಥಾನಗಳನ್ನು ಬಗಲಿಗೆ ಹಾಕಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ರಜನೀಕಾಂತ್ ಪಕ್ಷ ಪಡೆಯುವ ಶೇಕಡವಾರು ಮತದ ದುಪ್ಪಟ್ಟಿಗಿಂತಲೂ ಹೆಚ್ಚು, ಅಂದರೆ, ಶೇ. 34ರಷ್ಟು ಮತಗಳನ್ನು ಡಿಎಂಕೆ ಬಾಚಿಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಕಮಲ್- ರಜನಿ ಮೈತ್ರಿ:
ಕಮಲ್ ಹಾಸನ್ ತಮ್ಮನ್ನು ವಿಚಾರವಾದಿ ಎಂದು ಗುರುತಿಸಿಕೊಂಡಿದ್ದಾರೆ. ರಜನಿಕಾಂತ್ ಅವರದು ಆಧ್ಯಾತ್ಮಿಕ ರಾಜಕೀಯದ ಕಡೆಗೆ ಒಲವಿದೆ. ಇವರಿಬ್ಬರ ನಡುವೆ ರಾಜಕೀಯ ಚದುರಂಗದಾಟದಲ್ಲಿ ಹೊಂದಾಣಿಕೆ ನಡೆಯಲು ಎಷ್ಟು ಸಾಧ್ಯ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ.
ತಮಿಳುನಾಡು ರಾಜಕೀಯಕ್ಕಿಂತ ಹೆಚ್ಚಾಗಿ ಈ ಪ್ರಶ್ನೆ ರಾಷ್ಟ್ರ ರಾಜಕಾರಣದಲ್ಲಿ ಪ್ರಬಲವಾಗಿ ಕೇಳಿಬರುತ್ತಿದೆ. ಈ ಬಗ್ಗೆ ಕಮಲ್ ಹಾಸನ್ ಈಗಾಗಲೇ ಸೂಪರ್ಸ್ಟಾರ್ ರಜನಿಕಾಂತ್ ಜತೆ ಕೈಜೋಡಿಸುವ ಕುರಿತು ಕಾಲವೇ ಉತ್ತರ ಕೊಡುತ್ತದೆ ಎಂದಿದ್ದಾರೆ. ಅಲ್ಲದೇ ನಮ್ಮ ವಿಭಿನ್ನ ದೃಷ್ಟಿಕೋನಗಳು ಮೈತ್ರಿಗೆ ಅವಕಾಶ ನೀಡುತ್ತವೆಯೇ ಎಂಬುದನ್ನು ಚಿಂತಿಸಬೇಕಿದೆ,” ಎಂದು ಕಮಲ್ ಪ್ರತಿಕ್ರಿಸಿದ್ದಾರೆ.
ಕಮಲ್ ಹಾಸನ್ ಮುಂದೊಂದು ದಿನ ರಜನಿ ಜತೆ ರಾಜಕೀಯ ಮೈತ್ರಿ ಸಾಧಿಸುವ ಸುಳಿವು ನೀಡಬಹುದು ಎನ್ನುತ್ತಿದ್ದ ಮೂಲಗಳು ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಂತರ ಕಷ್ಟ ಎನ್ನುತ್ತಿವೆ. ರಜನಿಕಾಂತ್ ಕೂಡ ಮೈತ್ರಿ ಪ್ರಶ್ನೆಗೆ ಕಾಲವೇ ಉತ್ತರಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ”ಒಂದು ವೇಳೆ ಇವರಿಬ್ಬರ ನಡುವೆ ಹೊಂದಾಣಿಕೆ ನಡೆದಿದ್ದೇ ಆದಲ್ಲಿ ಡಿಎಂಕೆ ಮತ್ತು ಎಎಂಡಿಕೆ ಪಕ್ಷವನ್ನು ಧೂಳಿಪಟ ಮಾಡಬಹುದು ಎನ್ನುತ್ತಾರೆ ರಾಜಕೀಯ ತಜ್ಞರು.
‘ಆಧ್ಯಾತ್ಮಿಕ ರಾಜಕೀಯ’ ಮಂತ್ರ ಪಠಿಸುವ ರಜನಿಕಾಂತ್ ಹಾಗೂ ‘ವಿಚಾರವಾದಿ’ ಕಮಲ್ ಹಾಸನ್ ಅವರ ದಾರಿ ಬೇರೆಬೇರೆಯಾದರೂ, ಗುರಿ ಮಾತ್ರ ಒಂದೆಯಾಗಿದೆ. ತಮಿಳುನಾಡು ರಾಜಕೀಯದಲ್ಲಿ ಬದಲಾವಣೆ ತರುವ ಆಕಾಂಕ್ಷೆ ಹೊಂದಿರುವ ಇಬ್ಬರು ಅಧಿಕೃತವಾಗಿ ಮೈತ್ರಿಯಾದರೆ ಆಶ್ಚರ್ಯವಿಲ್ಲ ಎನ್ನುತ್ತಿವೆ ಮೂಲಗಳು.






