ಕರೋನಾ ವೈರಸ್ ಸೋಂಕು ದೇಶದಲ್ಲಿ ಅಬ್ಬರಿಸಿಕೊಂಡು ಮುಂದೆ ಸಾಗುತ್ತಿದೆ. ಹಿಡಿತಕ್ಕೆ ಸಿಗದೆ ನಾಗಾಲೋಟದಲ್ಲಿ ಸಾಗುತ್ತಿರುವ ಕರೋನಾ ವೈರಸ್ ನಿಯಂತ್ರಣಕ್ಕೆ 21 ದಿನಗಳ ಲಾಕ್ಡೌನ್ ಬಳಿಕ ಮತ್ತೆ 19 ದಿನಗಳ ಕಾಲ ಅಂದರೆ ಮೇ 3ರ ತನಕ ದೇಶವನ್ನು ಲಾಕ್ಡೌನ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಆದೇಶ ಮಾಡಿದ್ದಾರೆ. ಅಂದರೆ ಒಟ್ಟು 40 ದಿನಗಳ ಕಾಲ ದೇಶವೇ ಸಂಪೂರ್ಣ ಬಂದ್ ಆದಂತೆ ಆಗಿದೆ. ಕರೋನಾ ವೈರಸ್ ಹರಡಲು ನಾನಾ ಕಾರಣಗಳಿವೆ. ದೆಹಲಿಯ ನಿಜಾಮುದ್ದೀನ್ ಮರ್ಕಝ್ ನಲ್ಲಿ ನಡೆದ ತಬ್ಲಿಘಿ ಸಭೆಯೂ ಕೂಡ ಒಂದು. ಅದೇ ಪ್ರಮುಖ ಎಂದರೂ ಅಡ್ಡಿಯಿಲ್ಲ. ಆದರೆ ಅದಕ್ಕೂ ಮೊದಲೂ ಭಾರತಕ್ಕೆ ಸೋಂಕು ಬಾರದಂತೆ ತಡೆಯುವಲ್ಲಿ ಭಾರತ ಸರ್ಕಾರ ಎಡವಿತ್ತು ಎನ್ನುವುದನ್ನೂ ನಾವು ಮರೆಯಬಾರದು.
ಏರ್ಪೋರ್ಟ್ ನಲ್ಲಿ ನಡೆಯುತ್ತಿದ್ದ ಥರ್ಮಲ್ ಸ್ಕ್ರೀನಿಂಗ್ ಯಾವ ಮಟ್ಟಕ್ಕೆ ನಡೆಯುತ್ತಿತ್ತು ಎನ್ನುವುದನ್ನು ವಿಮಾನ ಪ್ರಯಾಣಿಕರೇ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದರು. ಆದರೆ ನಾನಿಲ್ಲಿ ಮುಸ್ಲಿಮರನ್ನು ಸಮರ್ಥನೆ ಮಾಡುತ್ತಿಲ್ಲ, ತಬ್ಲಿಘಿಗಳು ಸಭೆ ನಡೆಸಿದ ಬಳಿಕ ದೇಶದ ನಾನಾ ಕಡೆ ಹರಿದು ಹಂಚಿ ಹೋಗಿದ್ದರು. ಆ ಬಳಿಕ ಅವರನ್ನು ಸ್ವಯಂ ತಪಾಸಣೆಗೆ ಸರ್ಕಾರವೇ ಆಹ್ವಾನ ಕೊಟ್ಟರೂ ಬರಲಿಲ್ಲ ಈ ಬಗ್ಗೆ ʼಪ್ರತಿಧ್ವನಿʼ ಕೂಡ ಮುಸ್ಲಿಂ ಸಮುದಾಯದ ನಿಲುವು ವಿರೋಧಿಸಿ ಲಾಕ್ಡೌನ್ ಆದೇಶದ ನಂತರವೂ “ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಹೆಚ್ಚಿಸಿದ ಕರೋನಾ ಭೀತಿ” ಎನ್ನುವ ಶೀರ್ಷಿಕೆಯಡಿ ವರದಿ ಮಾಡಿತ್ತು.
Also Read: ಲಾಕ್ಡೌನ್ ಆದೇಶದ ನಂತರವೂ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಹೆಚ್ಚಿಸಿದ ಕರೋನಾ ಭೀತಿ
ಆದರೆ, ತಪ್ಪು ಮಾಡಿದ್ದಾರೆ ಎಂದರೆ ತಪ್ಪು ಎಂದು ನೇರವಾಗಿ ಹೇಳುವ ಛಾತಿ ಇರಬೇಕು. ಆದರೆ ಕೋಮು ಸೌಹಾರ್ದವನ್ನು ಕೆಣಕುವಂತೆ ಇರಬಾರದು. ರಾಜಕಾರಣಿಗಳು ಧರ್ಮ ಧರ್ಮಗಳ ತಂದಿಕ್ಕುವ ಕೆಲಸ ಮಾಡಬಾರದು. ಆದರೆ ಈ ನಿಲುವನ್ನು ನಮ್ಮ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಪಾಲಿಸುವಂತೆ ಕಾಣುತ್ತಿಲ್ಲ. ಯಾಕಂದ್ರೆ ತಬ್ಲಿಘಿ ಸಭೆಯನ್ನು ನಡೆಸಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು ಹಾಸನ ಜಿಲ್ಲೆಯ ಬಿಕ್ಕೋಡಿನ ಹಿಂದೂ ಪರ ಕಾರ್ಯಕರ್ತ ತೇಜಕುಮಾರ್ ಶೆಟ್ಟಿ. ಸಮಾಜದಲ್ಲಿ ಅಶಾಂತಿ ಹುಟ್ಟಿಸುವ ರೀತಿಯಲ್ಲಿ ಪೋಸ್ಟ್ ಹಾಕಿದ್ದರಿಂದ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತೇಜಕುಮಾರ್ ಶೆಟ್ಟಿ ಅವರನ್ನು ಬಂಧಿಸಿದ್ದರು.
ಹಾಸನ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಯಾವುದೇ ಧರ್ಮ ಹಾಗೂ ವ್ಯಕ್ತಿಯ ನಿಂದನೆ ಮಾಡಬಾರದು ಎಂದು ಆದೇಶ ಮಾಡಿದ್ದರೂ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ. ಹಾಗಾಗಿ ಕಲಂ 152ರ ಅಡಿಯಲ್ಲಿ ಸುಮಟೋ ಕೇಸ್ ದಾಖಲಿಸಿ ಬಂಧಿಸಲಾಗಿದೆ ಎಂದು ಬೇಲೂರು ಸಿಪಿಐ ಸಿದ್ಧರಾಮೇಶ್ವರ್ ಹಾಗೂ ಅರೇಹಳ್ಳಿ ಪಿಎಸ್ಐ ಬಾಲು ಮಾಹಿತಿ ಕೊಟ್ಟಿದ್ದರು. ಈ ನಡುವೆ ಬಂಧಿತ ವ್ಯಕ್ತಿಯ ರಕ್ಷಣೆಗೆ ಸಚಿವ ಸಿ.ಟಿ ರವಿ ಟೊಂಕ ಕಟ್ಟಿ ನಿಂತಿದ್ದಾರೆ.
ಬಿಜೆಪಿ ಪಕ್ಷದವರೇ ಆದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ನಿಜಾಮುದ್ದೀನ್ ಮರ್ಕಝ್ ತಬ್ಲಿಘಿ ಸಭೆಯ ವಿಚಾರವಾಗಿ ಸುಳ್ಳು ಸುದ್ದಿ ಹರಡಬಾರದು. ಆಶಾ ಕಾರ್ಯಕರ್ತೆ ಮೇಲಿನ ಹಲ್ಲೆ, ತಬ್ಲಿಘಿಗಳ ಸಭೆ ವಿಚಾರವಾಗಿ ಇಡೀ ಸಮುದಾಯವನ್ನೇ ದೂಷಣೆ ಮಾಡುವುದು ತಪ್ಪು. ಸುಳ್ಳು ಸುದ್ದಿ ಹಬ್ಬಿಸಿದ್ರೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸೌಹಾರ್ದಯುತ ಮಾತನಾಡಿದ್ದರು. ಆದರೆ ಸಮಾಜದ ಶಾಂತಿ ಕದಡುವೆ ಪೋಸ್ಟ್ ಹಾಕಿದ್ರಿಂದ ಹಿಂದೂಪರ ಕಾರ್ಯಕರ್ತನ ಬಂಧನ ಮಾಡಿದ್ದಕ್ಕೆ ಸಚಿವ ಸಿ.ಟಿ ರವಿ ನೇರವಾಗಿ ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದರು. ಕರೋನಾ ಸಂಬಂಧ ತಬ್ಲೀಘಿ ಜಮಾತ್ ಬಗ್ಗೆ ಪೋಸ್ಟ್ ಶೇರ್ ಮಾಡಿದರೆ ತಪ್ಪೇನು..? ಇದಕ್ಕಾಗಿ ಬೇಲೂರಿನ ನಮ್ಮ ಕಾರ್ಯಕರ್ತ ತೇಜ್ ಕುಮಾರ್ ಶೆಟ್ಟಿ ಅವರ ಮೇಲೆ ಕೇಸ್ ಹಾಕಿದ್ದಾರೆ. ಈ ವಿಷಯದಲ್ಲಿ ಅತಿರೇಕದ ವರ್ತನೆ ತೋರಿಸಿದ ಅರೇಹಳ್ಳಿ ಠಾಣೆಯ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ನನ್ನ ಸಹೋದ್ಯೋಗಿಗಳಾದ @BSBommai ಅವರಲ್ಲಿ ವಿನಂತಿಸಿದ್ದೇನೆ ಎಂದಿದ್ದರು. ಈ ಪೋಸ್ಟ್ ಹಾಕಿದ 2 ಗಂಟೆಯಲ್ಲೇ ಹಾಸನ ಎಸ್ಪಿ R. ಶ್ರೀನಿವಾಸಗೌಡ, ಸ್ವಯಂ ಪೊಲೀಸ್ ಅಧಿಕಾರಿಗಳ ವಿರುದ್ಧವೇ ತನಿಖೆಗೆ ಆದೇಶ ಮಾಡಿದ್ದರು. ಅವರು ಕೊಟ್ಟಿದ್ದ ಕಾರಣ, ಆರೋಪಿಯನ್ನು ಬಂಧಿಸಿದ್ದ ಫೋಟೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕಿರಲಿಲ್ಲ ಎನ್ನುವುದು.
ಕೊರೊನ ಸಂಬಂಧ ತಬ್ಲೀಘಿಜಮಾತ್ ಬಗ್ಗೆ ಪೋಸ್ಟ್ ಶೇರ್ ಮಾಡಿದರೆ ತಪ್ಪೇನು? ಇದಕ್ಕಾಗಿ ಬೇಲೂರಿನ ನಮ್ಮ ಕಾರ್ಯಕರ್ತ ತೇಜ್ ಕುಮಾರ್ ಶೆಟ್ಟಿ ಅವರ ಮೇಲೆ ಕೇಸ್ ಹಾಕಿದ್ದಾರೆ. ಈ ವಿಷಯದಲ್ಲಿ ಅತಿರೇಕದ ವರ್ತನೆ ತೋರಿಸಿದ ಅರೇಹಳ್ಳಿ ಠಾಣೆಯ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ನನ್ನ ಸಹೋದ್ಯೋಗಿಗಳಾದ @BSBommai ಅವರಲ್ಲಿ ವಿನಂತಿಸಿದ್ದೇನೆ
— C T Ravi ಸಿ ಟಿ ರವಿ (@CTRavi_BJP) April 12, 2020
ಹಿಂದೂ ಕಾರ್ಯಕರ್ತ ಎನ್ನುವ ಕಾರಣಕ್ಕೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಮಧ್ಯಪ್ರವೇಶಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ. ಬಿಜೆಪಿ ಸೇರಿದಂತೆ ಹಿಂದೂ ಪರ ಕಾರ್ಯಕರ್ತರು ಸಿ.ಟಿ ರವಿ ಅವರ ಕಾರ್ಯವನ್ನು ಶ್ಲಾಘನೆ ಮಾಡಿದ್ದಾರೆ. ಆದರೆ ಬಹಳಷ್ಟು ಮಂದಿ “ಸಂವಿಧಾನದ ಕಾನೂನು ಪ್ರಕಾರ ತಪ್ಪು ಮಾಡಿದ್ದರೆ ಶಿಕ್ಷೆಯಾಗುತ್ತದೆ. ನೀವು ಮಧ್ಯಪ್ರವೇಶ ಮಾಡಿದ್ದು ತಪ್ಪು. ನೀವು ಕೇವಲ ನಿಮ್ಮ ಕಾರ್ಯಕರ್ತರಿಗೆ ಮಿನಿಸ್ಟರ್ ಅಲ್ಲ. ಇಡೀ ರಾಜ್ಯಕ್ಕೆ ಸಚಿವ ಎನ್ನುವುದನ್ನು ಮರೆಯದಿರಿ” ಎಂದು ಎಚ್ಚರಿಸಿದ್ದಾರೆ.
ಕರೋನಾ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾ ಕರೋನಾ ವೈರಸ್ ಸೋಂಕು ತಡೆಯಲು ಶ್ರಮಿಸುತ್ತಿರುವ ಪೊಲೀಸ್ ಅಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸುವುದು ಎಷ್ಟು ಸರಿ ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ. ಆದರೆ ಸಚಿವರೊಬ್ಬರು ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಹಾಸನ ಎಸ್ಪಿ ತನಿಖೆಗೆ ಆದೇಶ ಮಾಡಿದ್ದಾರೆ. ಅವರು ಕೊಟ್ಟಿರುವ ಕಾರಣ, ಮಾಧ್ಯಮಗಳಿಗೆ ಫೋಟೋ ಬಿಡುಗಡೆ ಮಾಡುವ ಅವಶ್ಯಕತೆ ಇರಲಿಲ್ಲ ಎಂದು. ಈ ಕಾರಣ ಸಮಂಜಸ ಅಲ್ಲ ಎನಿಸುತ್ತಿದೆ. ಸಿ.ಟಿ ರವಿ ಟ್ವೀಟ್ ಮಾಡಿದ್ದಕ್ಕೆ ಗೃಹ ಸಚಿವ ಬೊಮ್ಮಾಯಿ ಮಧ್ಯಪ್ರವೇಶ ಮಾಡಿದ್ದಾರಾ..? ಎನ್ನುವ ಪ್ರಶ್ನೆ ಉದ್ಬವ ಆಗುತ್ತಿದೆ. ಒಂದು ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶ ಮಾಡಿದ್ದರೇ..! ಸಿಎಂ ಮಾತಿಗೆ ರಾಜ್ಯ ಸರ್ಕಾರದಲ್ಲಿ ಕಿಂಚಿತ್ತು ಬೆಲೆ ಇಲ್ಲವೇ ಎಂದು ರಾಜ್ಯದ ಜನರೇ ಪ್ರಶ್ನಿಸಿಬೇಕಿದೆ.
![](https://pratidhvani.in/wp-content/uploads/2021/02/pratidhvani_student_corner-19.jpeg)
ಚಿಕ್ಕಮಗಳೂರಿನಲ್ಲಿ ತನ್ನದೇ ಭದ್ರಕೋಟೆ ಕಟ್ಟಿಕೊಂಡು ರಾಜಕೀಯ ಮಾಡುವ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹಾಸನ ರಾಜಕೀಯದಲ್ಲೂ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಬೇಲೂರು ವಿಚಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಆದರೂ ಕೋಮುಭಾವನೆ ಕೆರಳಿಸುವ ವಿಚಾರದಲ್ಲಿ ದೇಶದ ಕಾನೂನು ಎಲ್ಲರಿಗೂ ಒಂದೇ ಅಲ್ಲವೇ..? ಹಿಂದೂಪರ ಸಂಘಟನೆಯವರು ಕೋಮು ಭಾವನೆ ಕೆರಳಿಸಬಹುದೇ..? ಹಿಂದೂ, ಮುಸ್ಲಿಂ, ಕ್ರೈಸ್ತ ಯಾರೇ ಆಗಲಿ ಮತ್ತೊಂದು ಧರ್ಮವನ್ನು ಹೀಯಾಳಿಸಬಾರದು ಎಂದಲ್ಲವೇ ನಮ್ಮ ಸಂವಿಧಾನದಲ್ಲಿ ಇರುವುದು. ಆದರೆ ಕೋಮುಭಾವನೆ ಕೆರಳಿಸಿದ ಆರೋಪದ ಮೇಲೆ ಕೇಸ್ ಹಾಕಿದ್ದ ಪೊಲೀಸರ ಮೇಲೆ ದಬ್ಬಾಳಿಕೆ ಮಾಡುವುದು ಎಷ್ಟು ಸರಿ..? ಅಧಿಕಾರ ಶಾಶ್ವತವಲ್ಲ. ಅಧಿಕಾರದಲ್ಲಿ ಇದ್ದಾಗ ಎಲ್ಲರನ್ನೂ ಸಹಬಾಳ್ವೆಯಿಂದ ನಡೆಸಿಕೊಳ್ಳುವುದು ನಿಮ್ಮ ಜೀವನದ ಪುಟಗಳಲ್ಲಿ ಉಲ್ಲೇಖವಾಗುತ್ತದೆ ಎನ್ನುವುದನ್ನು ಮರೆಯದಿದ್ದರೆ ಸಾಕು ಸಚಿವ ಸಿ.ಟಿ ರವಿ.
ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಹಾಸನ ಎಸ್ಪಿ ತನಿಖೆಗೆ ಆದೇಶ ಮಾಡಿದ್ದಾರೆ. ಅಷ್ಟೇ ಅಲ್ಲ ಓಓಡಿ ಮೇಲೆ ಹಾಸನ್ ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಮಾಡಿದ್ದಾರೆ. ಎಸ್ಪಿ ಅವರು ಕೊಟ್ಟಿರುವ ಕಾರಣ, ಮಾಧ್ಯಮಗಳಿಗೆ ಫೋಟೋ ಬಿಡುಗಡೆ ಮಾಡುವ ಅವಶ್ಯಕತೆ ಇರಲಿಲ್ಲ ಎಂದು. ಈ ಕಾರಣ ಸಮಂಜಸ ಅಲ್ಲ ಎನಿಸುತ್ತಿದೆ. ಸಿ.ಟಿ ರವಿ ಟ್ವೀಟ್ ಮಾಡಿದ ಕೂಡಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶ ಮಾಡಿದ್ದಾರಾ..? ಎನ್ನುವ ಪ್ರಶ್ನೆ ಉದ್ಬವ ಆಗುತ್ತಿದೆ. ಇಲ್ಲದಿದ್ದರೆ ಒಂದು ಟ್ವೀಟ್ಗೆ ವರ್ಗಾವಣೆ ಶಿಕ್ಷೆ ಕೊಡುವುದು ಸಮಂಜಸವೇ ಎನ್ನುವುದಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ ಉತ್ತರ ಹೇಳಬೇಕಿದೆ. ಒಂದು ವೇಳೆ ಬಸವರಾಜ ಬೊಮ್ಮಾಯಿಯೇ ಮಧ್ಯಪ್ರವೇಶ ಮಾಡಿ ವರ್ಗಾವಣೆಗೆ ಸೂಚಿಸಿದರೇ..! ಗೊತ್ತಿಲ್ಲ. ಒಟ್ಟಾರೆ ರಾಜ್ಯದಲ್ಲಿ ಸಿಎಂ ಮಾತಿಗೆ ಕಿಂಚಿತ್ತು ಬೆಲೆ ಇಲ್ಲವೇ? ಎಂದು ರಾಜ್ಯದ ಜನರು ಪ್ರಶ್ನಿಸುವಂತಾಗಿದೆ.