ಚೀನಾ ಹಾಗೂ ಭಾರತದ ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್ ಗಡಿಯಲ್ಲಿ 6 ಗಂಟೆಗಳ ಕಾಲ ಘರ್ಷಣೆ ನಡೆದಿದ್ದು, ಭಾರತೀಯ ಕಮಾಂಡರ್ ಆಫೀಸರ್ ಸೇರಿದಂತೆ 20 ಸೈನಿಕರು ಹುತಾತ್ಮರಾಗಿದ್ದಾರೆ. ಭಾರತದಲ್ಲಿ ಚೀನಾ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಚೀನಾ ದೇಶದ ಮೇಲೆ ಪ್ರತಿಕಾರ ತೀರಿಸಿಕೊಳ್ಳುವಂತೆ ಆಗ್ರಹ ಕೇಳಿ ಬರುತ್ತಿದೆ. ಗ್ವಾಲನ್ ಕಣಿವೆಯಲ್ಲಿ ಚೀನಾ ಸೈನಿಕರು ಏಕಾಏಕಿ ದಾಳಿ ನಡೆಸಿ ಕಲ್ಲು ಹಾಗೂ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರುವುದು ಭಾರತೀಯರ ರಕ್ತ ಕುದಿಯುವಂತೆ ಮಾಡಿದೆ. 2019 ರಲ್ಲಿ ಪಾಕಿಸ್ತಾನ ಕೂಡ ಪುಲ್ವಾಮಾ ಬಳಿ ಸೇನಾ ವಾಹನಗಳಲ್ಲಿ ಕಾನ್ವೆ ತೆರಳುತ್ತಿದ್ದಾಗ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿ 40ಕ್ಕೂ ಹೆಚ್ಚು ಸೈನಿಕರನ್ನು ಹತ್ಯೆ ಮಾಡಿತ್ತು. ಅಂದು ಪಾಕಿಸ್ತಾನದ ಮೇಲೆ ಇಡೀ ದೇಶವೇ ಸಿಡಿದು ನಿಂತಿತ್ತು. ಇದೀಗ ಚೀನಾ ವಿರುದ್ಧ ಅದೇ ರೀತಿಯ ಆಕ್ರೋಶ ವ್ಯಕ್ತವಾಗ್ತಿದೆ.
ಪುಲ್ವಾಮಾ ದಾಳಿ ವೇಳೆ ಹೇಳಿದ್ದನ್ನೇ ಪುನರುಚ್ಛರಿಸಲಿರುವ ಪ್ರಧಾನಿ..!
ಫೆಬ್ರವರಿ 14, 2019 ರಂದು ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಇಡೀ ಭಾರತವೇ ಕೆಂಡಕಾರಲು ಶುರು ಮಾಡಿತ್ತು. ಅಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು ಒಂದೇ ಮಾತು. ನಮ್ಮ ಸೈನಿಕರ ತ್ಯಾಗ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ದೇಶಕ್ಕೆ ಭರವಸೆ ನೀಡಿದ್ದರು. ಇದೀಗ ಮತ್ತೆ ಇಡೀ ಭಾರತದ ದೇಶ ಡ್ರ್ಯಾಗನ್ ರಾಷ್ಟ್ರ ಚೀನಾ ವಿರುದ್ಧ ಸಿಡಿದು ನಿಂತಿದೆ. ಇದೀಗ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅದೇ ಮಾತನ್ನು ಪುನರುಚ್ಛಾರ ಮಾಡಿದ್ದಾರೆ. ಭಾರತ ಯಾವಾಗಲೂ ಶಾಂತಿಯನ್ನೇ ಬಯಸುತ್ತದೆ. ಆದರೆ, ನಮ್ಮ ತಂಟೆಗೆ ಬಂದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಯಾವುದೇ ಕ್ಷಣದಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ನಾವು ತಕ್ಕ ಪ್ರತ್ಯುತ್ತರ ಕೊಟ್ಟೇ ಕೊಡುತ್ತೇವೆ ಎಂದು ಅಭಯ ನೀಡಿದ್ದಾರೆ. 15 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಕೋವಿಡ್ 19 ವಿಚಾರವಾಗಿ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಸೈನಿಕರ ಪ್ರಾಣ ವ್ಯರ್ಥವಾಗಲು ಬಿಡಲ್ಲ ಎಂದು ಮತ್ತೊಮ್ಮೆ ಭರವಸೆ ನೀಡಿದ್ದಾರೆ.
ಬಾಲಾಕೋಟ್ ರೀತಿಯಲ್ಲೇ ನಡೆಯುತ್ತಾ ಮತ್ತೊಂದು ದಾಳಿ..?
ಪಾಕಿಸ್ತಾನದ ಕುತಂತ್ರದಿಂದ ಪುಲ್ವಾಮಾ ದಾಳಿ ನಡೆದಿತ್ತು. ಆ ಬಳಿಕ ಪಾಕಿಸ್ತಾನದ ಮೇಲೆ ಭಾರತ ಬಾಲಾಕೋಟ್ ದಾಳಿ ಮೂಲಕ ಸೇಡು ತೀರಿಸಿಕೊಂಡಿತ್ತು. ನಮ್ಮ ಭಾರತೀಯ 40 ಜನ ಯೋಧರು ಹುತಾತ್ಮರಾಗಿದ್ದಕ್ಕೆ ಪ್ರತಿಕಾರ ತೆಗೆದುಕೊಳ್ಳಲಾಗಿತ್ತು. ಪುಲ್ವಾಮಾ ದಾಳಿ ನಡೆದು ಕೇವಲ 12 ದಿನಗಳಲ್ಲಿ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಮೈ ನಡುಗಿಸುವ ದಾಳಿ ಮೂಲಕ ಪ್ರತ್ಯುತ್ತರ ಕೊಟ್ಟಿತ್ತು. ಭಾರತೀಯ ಸೇನೆ ಯಾವುದೇ ಕಾರಣಕ್ಕೂ ಎದೆಗುಂದಲ್ಲ ಎನ್ನುವುದನ್ನು ಇಡೀ ವಿಶ್ವಕ್ಕೆ ಸಾರಿ ಹೇಳಿತ್ತು. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದ್ದ ಭಾರತೀಯ ಯುದ್ಧ ವಿಮಾನಗಳು, ಉಗ್ರರ ಅಡಗು ತಾಣಗಳನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಿದ್ದವು.
ಮುಂಜಾನೆ 3.30ರ ಸಮಯದಲ್ಲಿ ನಡೆದ ದಾಳಿಯಲ್ಲಿ ನೂರಾರು ಉಗ್ರರು ಹತರಾಗಿದ್ದಾರೆ ಎಂದು ಭಾರತ ಹೇಳಿತ್ತು. 21 ನಿಮಿಷಗಳಲ್ಲಿ ಕಾರ್ಯಾಚರಣೆ ನಡೆಸಿ ಭಾರತೀಯ ಯುದ್ಧ ವಿಮಾನಗಳು ವಾಪಸ್ ಆಗಿದ್ದವು. 200ಕ್ಕೂ ಹೆಚ್ಚು ಮಂದಿ ಹತರಾಗಿದ್ದಾರೆ ಎಂದು ಹೇಳಿದರೂ ಪಾಕಿಸ್ತಾನ ಮಾತ್ರ ಅಲ್ಲಗಳೆದಿತ್ತು. ಖಾಲಿ ಜಾಗದಲ್ಲಿ ಬಾಂಬ್ ಹಾಕಿ ಹೋಗಿದ್ದು ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವಾದಿಸಿತ್ತು. ಅಂತಾರಾಷ್ಟ್ರೀಯ ಮಾಧ್ಯಮ ಪ್ರತಿನಿಧಿಗಳನ್ನು ಸ್ಥಳಕ್ಕೆ ಕರೆದೊಯ್ದು ತೋರಿಸುವ ಮೂಲಕ ಭಾರತ ಸಾವು ನೋವಿನ ಬಗ್ಗೆ ಸುಳ್ಳು ಹೇಳುತ್ತಿದೆ ಎಂದು ಸಾಬೀತು ಮಾಡುವ ಯತ್ನ ಮಾಡಿತ್ತು.
ಚೀನಾ ಮೇಲೆ ಭಾರತ ದಾಳಿ ಮಾಡಬಹುದೇ..?
ಇದೀಗ ಚೀನಾ ದೇಶದ 43 ಸೈನಿಕರು ಹತ್ಯೆ ಮಾಡಿದ್ದೇವೆ ಎಂದು ಭಾರತೀಯ ಸೇನೆ ಹೇಳಿಕೊಂಡಿದೆ. ಆದರೆ ಚೀನಾ ಸರ್ಕಾರ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಬಾಲಾಕೋಟ್ ವಾಯು ದಾಳಿಯಂತೆ ಚೀನಾ ಮೇಲೂ ಭಾರತೀಯ ಸೇನೆ ದಾಳಿ ನಡೆಸುತ್ತಾ ಎನ್ನುವ ಮಾತುಗಳು ಕೇಳಿಬಂದಿವೆ. ಇದಕ್ಕೆ ಪ್ರಮುಖ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಹಾಗೂ ಯಾವುದೇ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿರುವಂತೆ ಭಾರತೀಯ ಸೇನೆಗೆ ಕೊಟ್ಟಿರುವ ಕರೆ. ಪುಲ್ವಾಮಾ ದಾಳಿ ನಡೆದಾಗಲೂ ಪ್ರಧಾನಿ ಸರ್ವ ಪಕ್ಷ ಸಭೆ ನಡೆಸಿದ್ದರು. ಈಗಲೂ ಜೂನ್ 19ರಂದು ಸಂಜೆ 5 ಗಂಟೆಗೆ ಸರ್ವ ಪಕ್ಷ ಸಭೆ ಕರೆದಿದ್ದು, ಸಭೆ ಬಳಿಕ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ ಎನ್ನಲಾಗ್ತಿದೆ.
ಬಾಲಾಕೋಟ್ ರೀತಿಯಲ್ಲಿ ಚೀನಾ ಮೇಲೆ ದಾಳಿ ಮಾಡಿ ಅರಗಿಸಿಕೊಳ್ಳುವುದು ಕಷ್ಟ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ. ಚೀನಾ ದೇಶದ ಸೇನೆ ಭಾರತೀಯ ಸೇನೆಗಿಂತಲೂ ಭಾರೀ ಮಟ್ಟದಲ್ಲಿ ಶಕ್ತಿಶಾಲಿಯಾಗಿದೆ. ಅದರಲ್ಲೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಈ ಸಮಯದಲ್ಲಿ ಕಾದಾಡುವುದು ಸೂಕ್ತವಲ್ಲ. ಪಾಕಿಸ್ತಾನದ ವಿರುದ್ಧ ಭಾರತ ಗುಡುಗಬಹುದು ಆದರೆ ಚೀನಾ ವಿರುದ್ಧ ಅಲ್ಲ. ಶಾಂತಿ ಮಂತ್ರ ಭಾರತಕ್ಕೆ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗ್ತಿದೆ. ಆದರೆ ಮೋದಿ ಏನ್ ಮಾಡ್ತಾರೆ ಅನ್ನೋದು ಮಾತ್ರ ಸಸ್ಪೆನ್ಸ್. ಅಂತಾರಾಷ್ಟ್ರೀಯ ಯೋಗ ದಿನದಂದು ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದು, ಅಂದು ದೇಶದ ಜನರಿಗೆ ಯಾವ ಸಂದೇಶ ಕೊಡಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.