ಭಾರತ ಕಂಡ ಉತ್ಕೃಷ್ಟ ಗಾಯಕರೊಲ್ಲಬ್ಬರಾದ ಎಸ್.ಪಿ.ಬಾಲಸುಬ್ರಹ್ಮಣ್ಯಂ ತನ್ನ 74 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕಳೆದ ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದ ಎಸ್ಪಿಬಿ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಆಗಸ್ಟ್ 5ರಂದು ಕೋವಿಡ್ ಪಾಸಿಟಿವ್ ಬಂದಿದ್ದ ಎಸ್ಪಿಬಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ, ಇನ್ನೇನು ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಸಾವಿಗೂ ಮೊದಲಿನ 24 ಗಂಟೆಗಳಲ್ಲಿ ಅವರ ಸ್ಥಿತಿ ತೀವ್ರ ಗಂಭೀರವಾಗಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಗಾಯಕ ಸಂಪೂರ್ಣ ಚೇತರಿಸಿಕೊಂಡು ಬರುವಂತೆ ದೇಶದುದ್ದಗಲದ ಅಭಿಮಾನಿಗಳೂ ಪ್ರಾರ್ಥನೆ ನಡೆಸುತ್ತಿದ್ದರು. ಆದರೆ ಶುಕ್ರವಾರ ಮಧ್ಯಾಹ್ನ ವೇಳೆ ಬಂದ ಅವರ ಸಾವಿನ ಸುದ್ದಿ ದೇಶಕ್ಕೆ ಆಘಾತವನ್ನು ನೀಡಿದೆ.
ಎಸ್ಪಿಬಿ ಕನ್ನಡ, ತಮಿಳು, ತೆಲುಗು, ಮಳೆಯಾಲಂ, ಹಿಂದಿ ಸೇರಿದಂತೆ ಹಲವಾರು ಸಿನೆಮಾಗಳಲ್ಲಿ 40,000 ಕ್ಕೂ ಹೆಚ್ಚು ಹಾಡು ಹಾಡಿ ವಿವಿಧ ತಲೆಮಾರಿನ ಜನರನ್ನು ರಂಜಿಸಿದ್ದಾರೆ. 2001 ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಎಸ್ಪಿಬಿಗೆ 2011 ರಲ್ಲಿ ಭಾರತೀಯ ಸಿನೆಮಾ ರಂಗಕ್ಕೆ ನೀಡಿದ ಕೊಡುಗೆಗೆ ಪದ್ಮಭೂಷಣ್ ನೀಡಿ ಗೌರವಿಸಲಾಗಿತ್ತು.
1966 ರಲ್ಲಿ ಶ್ರೀ ಶ್ರೀ ಶ್ರೀ ಮರ್ಯಾದ ರಾಮಣ್ಣಾ ಎಂಬ ತೆಲುಗು ಸಿನೆಮಾದ ಮೂಲಕ ಸಿನಿಪಯಣ ಆರಂಭಿಸಿದ ಎಸ್ಪಿಬಿ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ವಿವಿಧ ಭಾಷೆಯ ಸಂಗೀತ ಲೋಕಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾದದ್ದು.
ಸಂಗೀತ ಮಾತ್ರವಲ್ಲದೆ, ಹಲವಾರು ಸಿನೆಮಾಗಳಿಗೆ ಬಣ್ಣ ಹಚ್ಚಿ ಬೆಳ್ಳಿತೆರೆಯ ಮೇಲೂ ಬಂದಿದ್ದರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಇಂದು ಎಸ್ಪಿಬಿ ಮರೆಗೆ ಸರಿದಿದ್ದರೂ ತನ್ನ ಕಂಠಸಿರಿಯ ಮೂಲಕ ಅಭಿಮಾನಿಗಳ ಎದೆಯಲ್ಲಿ ಅಜರಾಮರವಾಗಲಿದ್ದಾರೆ.