ಜಗತ್ತಿನಾದ್ಯಂತ ತಲ್ಲಣ ಮೂಡಿಸಿರುವ ‘ಕೋವಿಡ್-19’ ಸೋಂಕು ಹರಡುವುದನ್ನು ತಡೆಯಲು ದೇಶದಲ್ಲಿ ಘೋಷಿಸಲಾಗಿರುವ 21 ದಿನಗಳ ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕತೆ ಮೇಲಾಗುವ ನಷ್ಟ ಎಷ್ಟು? ಇದು ಟ್ರಿಲಿಯನ್ ಡಾಲರ್ ಪ್ರಶ್ನೆ. ಇದುವರೆಗಿನ ಅಂದಾಜುಗಳ ಪ್ರಕಾರ ಆಗಬಹುದಾದ ನಷ್ಟ ಸುಮಾರು 6-10 ಲಕ್ಷ ಕೋಟಿ ರೂಪಾಯಿಗಳು! ಇದು ನಿಖರವೇ? ಖಂಡಿತಾ ಇಲ್ಲಾ! ಇದು ಕೇವಲ ಅಂದಾಜು. ವಾಸ್ತವಿಕ ನಷ್ಟವನ್ನು ಲಾಕ್ ಡೌನ್ ಅವಧಿ ಮುಗಿದ ನಂತರವಷ್ಟೇ ಅಂದಾಜಿಸಲು ಸಾಧ್ಯ.
ಅಷ್ಟಕ್ಕೂ ಈ ನಷ್ಟವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ? 2020-21 ನೇ ಸಾಲಿನ ಭಾರತದ ಒಟ್ಟು ರಾಷ್ಟ್ರೀಯ ಉತ್ಪಾದನೆ (ಜಿಡಿಪಿ) ಮೌಲ್ಯವು 204 ಲಕ್ಷ ಕೋಟಿ ರೂಪಾಯಿಗಳು ಎಂದು ಮುನ್ನಂದಾಜಿಸಲಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಶೇ.80ರಷ್ಟು ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದೆ ಎಂಬುದು ಆರ್ಥಿಕ ತಜ್ಞರ ಅಂದಾಜು. ಪ್ರಸಕ್ತ ವಿತ್ತೀಯ ವರ್ಷದ ಜಿಡಿಪಿ ಮೌಲ್ಯವು 204 ಲಕ್ಷ ಕೋಟಿ ರೂಪಾಯಿಗಳೆಂದು ಅಂದಾಜಿಸಿರುವುದರಿಂದ ನಿತ್ಯದ ರಾಷ್ಟ್ರೀಯ ಉತ್ಪಾದನೆಯ ಮೌಲ್ಯವು 55,890 ಕೋಟಿ ರೂಪಾಯಿಗಳು. ಅಂದರೆ 21 ದಿನಗಳಲ್ಲಿ ಆಗಬಹುದಾದ ನಷ್ಟದ ಮೌಲ್ಯವು 9.4 ಲಕ್ಷ ಕೋಟಿ ರೂಪಾಯಿಗಳು. ಈ ಪೈಕಿ ಶೇ.20ರಷ್ಟು ಆರ್ಥಿಕ ಚಟುವಟಿಕೆ ನಡೆಯುವುದರಿಂದ ಶೇ.20ರಷ್ಟು ಕಳೆದರೂ 7.52 ಲಕ್ಷ ಕೋಟಿ ರೂಪಾಯಿಗಳಷ್ಟಾಗುತ್ತದೆ. ಇದು ಕೇವಲ ಲಾಕ್ ಡೌನ್ ಆಗಿರುವ 21 ದಿನಗಳಲ್ಲಾಗಬಹುದಾದ ನಷ್ಟದ ಅಂದಾಜು. ಆದರೆ ಕರೋನಾ ವೈರಸ್ ಪತ್ತೆಯಾದ ನಂತರದಲ್ಲಿ ಹಂತಹಂತವಾಗಿ ರಫ್ತು- ಆಮದುಗಳ ವ್ಯತ್ಯಯದಿಂದಾಗಿ ಆರ್ಥಿಕತೆ ಮೇಲಾಗಿರುವ ನಷ್ಟದ ಮೌಲ್ಯ ಸೇರಿಲ್ಲ.
ಈ ಲೆಕ್ಕಾಚಾರ ಏನೇ ಇರಲಿ, ಆದರೆ, ಲಾಕ್ ಡೌನ್ ಅವಧಿ ಕೇವಲ 21 ದಿನಗಳಿಗಷ್ಟೇ ಮುಗಿಯುತ್ತದಾ ಎಂಬುದು ಮೂಲಭೂತ ಪ್ರಶ್ನೆ. ಇದಕ್ಕೂ ಸ್ಪಷ್ಟ ಉತ್ತರ ಇಲ್ಲ. ನಿತ್ಯವೂ ಸೋಂಕು ಪೀಡಿತರು ಮತ್ತು ಸೋಂಕಿನಿಂದಾಗಿ ಮೃತಪಡುತ್ತಿರುವವರ ಸಂಖ್ಯೆ ಏರುಮುಖದಲ್ಲಿದೆ. ಅಂದರೆ, ಲಾಕ್ ಡೌನ್ ಘೋಷಿಸಿದರೂ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ, ಜತೆಗೆ ಹರಡುವಿಕೆಯು ಹೆಚ್ಚುತ್ತಿದೆ. ಲಾಕ್ ಡೌನ್ ನಿಂದಾಗಿ ಭಾರಿ ಪ್ರಮಾಣದ ಹರಡುವಿಕೆ ತಡೆಗಟ್ಟಲಾಗಿದೆ. ಈ ಹರಡುವಿಕೆಯು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ 21 ದಿನಗಳಿಗಷ್ಟೇ ಲಾಕ್ ಡೌನ್ ಅವಧಿ ಮುಗಿಯುವುದಿಲ್ಲ. ವ್ಯಾಪಕವಾಗಿ ಚೇತರಿಕೆ ಕಂಡಿರುವ ದಕ್ಷಿಣ ಕೋರಿಯಾ ಮತ್ತು ಜಪಾನ್ ದೇಶಗಳು ಮೂರು ಹಂತದ ಲಾಕ್ ಡೌನ್ ಘೋಷಿಸಿರುವುದನ್ನು ಗಮನಿಸಿದರೆ, ಭಾರತವೂ ಬಹುತೇಕ ಎರಡನೇ ಅವಧಿಗೆ ಮತ್ತು ಭಾಗಶಃ ಮೂರನೇ ಅವಧಿಗೆ ಲಾಕ್ ಡೌನ್ ಘೋಷಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಲಾಕ್ ಡೌನ್ ನಡುವೆ ಕೆಲ ದಿನಗಳ ಅಂತರ ಇರಬಹುದು ಅಥವಾ ಬಿಡುವಿಲ್ಲದೇ ಲಾಕ್ ಡೌನ್ ಮತ್ತೊಂದು ಹಂತಕ್ಕೆ ಮುಂದುವರಿಸಲೂಬಹುದು. ಅದು ಏಪ್ರಿಲ್ 14ರ ನಂತರವಷ್ಟೇ ಗೊತ್ತಾಗುತ್ತದೆ.
ಒಂದು ವೇಳೆ ಲಾಕ್ ಡೌನ್ ಅವಧಿಯು ಎರಡು ಮತ್ತು ಮೂರನೇ ಅವಧಿಗೆ ಮುಂದುವರೆಯುತ್ತದೆ ಎಂದಾದರೆ ಆಗ ಭಾರತದ ಆರ್ಥಿಕತೆ ಮೇಲಾಗುವ ವ್ಯತಿರಿಕ್ತ ಪರಿಣಾಮವೂ ಈಗ ಅಂದಾಜಿಸಿರುವುದಕ್ಕಿಂತಲೂ ಕರಾಳವಾಗಿರುತ್ತದೆ. ಮತ್ತು ಚೇತರಿಕೆಗೆ ಸುದೀರ್ಘ ಸಮಯವೇ ಬೇಕಾಗಬಹುದು. ‘ಕೋವಿಡ್-19’ ಹಾವಳಿಯೊಂದಿಗೆ ಹೊಸ ವಿತ್ತೀಯ ವರ್ಷ ಆರಂಭವಾಗಿದೆ. ಲಾಕ್ ಡೌನ್ ಆದ ನಷ್ಟ ಅಲ್ಪ ಪಾಲು ಕಳೆದ ಸಾಲಿನ ವಿತ್ತೀಯ ವರ್ಷದ (2019-20) ಲೆಕ್ಕಕ್ಕೆ ಸೇರುತ್ತದೆ. ಚೀನಾದಲ್ಲಿ ಸೋಂಕು ಹರಡಿದ ನಂತರ ಜಾಗತಿಕ ಆರ್ಥಿಕ ಪರಿಸ್ಥಿತಿ ಬದಲಾಗಿದೆ. ಆಮದು- ರಫ್ತು ಬಹುತೇಕ ಸ್ಥಗಿತಗೊಂಡಿವೆ. ತತ್ಪರಿಣಾಮ ಉತ್ಪಾದನಾ ವಲಯದ ಉತ್ಪಾದಕತೆಯು ಸ್ಥಗಿತಗೊಂಡಿದೆ. ಹೀಗಾಗಿ 2019-20ನೇ ಸಾಲಿನ ನಾಲ್ಕನೇ ತ್ರೈಮಾಸಿಕದ ಜಿಡಿಪಿ ಅಂದಾಜನ್ನು ಶೇ.2.5ಕ್ಕೆ ತಗ್ಗಿಸಲಾಗಿದ್ದು, ಒಟ್ಟಾರೆ ಜಿಡಿಪಿಯು ಶೇ.5ರ ಮುನ್ನಂದಾಜಿನಿಂದ ಶೇ.4.2- 4.5ಕ್ಕೆ ತಗ್ಗಲಿದೆ.
ಈಗಷ್ಟೇ ಆರಂಭವಾಗಿರುವ ವಿತ್ತೀಯ ವರ್ಷದಲ್ಲಿ ಜಿಡಿಪಿ ಶೇ.2ಕ್ಕೆ ತಗ್ಗಬಹುದು ಅಥವಾ ಅಥವಾ ಶೇ.-2ಕ್ಕೆ ಕುಸಿಯಬಹುದಾ? ಶೇ.2 ರಷ್ಟಕ್ಕೆ (ಋಣಾತ್ಮಕ) ಕುಸಿಯಬಹುದಾದ ಸಾಧ್ಯತೆ ಎಷ್ಟು? ‘ಕೋವಿಡ್-19’ ಹಾವಳಿಗು ಮುಂಚಿತವಾಗಿಯೇ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಕಳೆದ ಹತ್ತು ವರ್ಷಗಳಲ್ಲೇ ಕನಿಷ್ಠ ಜಿಡಿಪಿ ಅಭಿವೃದ್ಧಿಯನ್ನು ದಾಖಲಿಸಿದೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಕೈಗೊಂಡ ತರ್ಕರಹಿತ ಆರ್ಥಿಕ ನೀತಿಗಳಿಂದಾಗಿ ದೇಶದ ಆರ್ಥಿಕತೆ ಸತತ ಕುಸಿತದ ಹಾದಿಯಲ್ಲಿದೆ. ಇಂತಹ ಹೊತ್ತಿನಲ್ಲಿ ‘ಕೋವಿಡ್-19’ ಮಹಾಮಾರಿ ಸುನಾಮಿಯಂತೆ ಅಪ್ಪಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಕಳೆದ ಆರು ವರ್ಷಗಳಿಂದ ತಾವು ಮಾಡಿದ ‘ಆರ್ಥಿಕ ಪಾಪ’ಗಳನ್ನು ‘ಕೋವಿಡ್-19’ ಮಹಾಮಾರಿಯ ತಲೆಗೆ ಕಟ್ಟಿ ತಾವು ‘ಕ್ಲೀನ್ ಚಿಟ್’ ಪಡೆಯಬಹುದು. ಆದರೆ, ಅವರ ‘ಆರ್ಥಿಕ ಪಾಪ’ಗಳಿಗಾಗಿ ಜನತೆ ಮಾತ್ರ ಪ್ರಾಯಶ್ಚಿತ ಪಡುವುದು ಸದ್ಯಕ್ಕೆ ನಿಲ್ಲುವುದಿಲ್ಲ. ಮೊದಲೇ ಹದಗೆಟ್ಟ ಆರ್ಥಿಕ ಪರಿಸ್ಥಿತಿಯ ಜತೆಗೆ ‘ಕೋವಿಡ್-19’ ಹಾವಳಿಯು ಮತ್ತಷ್ಟು, ಮಗದಷ್ಟು ಸಂಕಷ್ಟಗಳನ್ನು ತಂದೊಡ್ಡಲಿದೆ. ಅದರ ಫಲಶೃತಿಯಾಗಿ ದೇಶದ ಆರ್ಥಿಕ ಅಭಿವೃದ್ಧಿಯು ಋಣಾತ್ಮಕ ವಲಯಕ್ಕೆ ಇಳಿಯಲಿದೆ. 1965, 1972 ಮತ್ತು 1979 ರಲ್ಲಿ ಜಿಡಿಪಿ ಋಣಾತ್ಮಕ ವಲಯಕ್ಕೆ ಇಳಿದಿದ್ದು ಬಿಟ್ಟರೆ, ನಂತರ ಇದುವರೆಗೂ ಏರಿಳಿತದ ನಡುವೆಯೂ ಧನಾತ್ಮಕ ವಲಯದಲ್ಲೇ ಇದೆ. 2008ರ ಜಾಗತಿಕ ಮಹಾ ಆರ್ಥಿಕ ಹಿಂಜರಿತದ ವೇಳೆಯಲ್ಲೂ ಭಾರತದ ಜಿಡಿಪಿಯು ಶೇ.2ರ ಆಜುಬಾಜಿನಲ್ಲಿತ್ತು. ನಂತರ ತ್ವರಿತವಾಗಿ ಚೇತರಿಸಿಕೊಂಡಿತ್ತು. ಒಂದು ವೇಳೆ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಋಣಾತ್ಮಕ ವಲಯಕ್ಕೆ ಇಳಿದರೆ, 32 ವರ್ಷಗಳ ನಂತರ ಈ “ಸಾಧನೆ” ಮಾಡಿದಂತಾಗುತ್ತದೆ.
ಪ್ರಸಕ್ತ ವಿತ್ತೀಯ ವರ್ಷದಲ್ಲಿ ಜಿಡಿಪಿ ಋಣಾತ್ಮಕ ವಲಯಕ್ಕೆ ಕುಸಿಯುವ ಆತಂಕ ಏಕಿದೆ ಎಂದರೆ, ‘ಕೋವಿಡ್-19’ ಹಾವಳಿಯಿಂದ ನಮ್ಮ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುತ್ತಿದ್ದ ವಲಯಗಳಾದ ಕೈಗಾರಿಕೆಗಳು, ಪ್ರವಾಸೋದ್ಯಮ, ಸಾರಿಗೆ, ವಾಯುಯಾನ, ಹೋಟೆಲ್, ರೆಸ್ಟೋರೆಂಟ್, ಮಾಲ್ ಗಳು ಮಲ್ಟಿಪ್ಲೆಕ್ಸ್ ಗಳು ಆಟೋಮೊಬೈಲ್ ಸೇರಿದಂತೆ ಬಹುತೇಕ ಉದ್ಯಮಗಳು ಬಹುತೇಕ ಸ್ಥಗಿತಗೊಂಡಿವೆ. ಇವುಗಳ ಚೇತರಿಕೆಗೆ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಕೃಷಿ ವಲಯದ ಮೇಲಾಗುವ ವ್ಯತಿರಿಕ್ತ ಪರಿಣಾಮಗಳ ಅಂದಾಜನ್ನು ಮುಂಗಾರು ಆರಂಭವಾದ ನಂತರವಷ್ಟೇ ಮಾಡಬಹುದು. ಆದರೆ, ಈಗಾಗಲೇ ಹಣ್ಣು, ತರಕಾರಿ ಸೇರಿದಂತೆ ತೋಟಗಾರಿಕೆ ಬೆಳೆದ ರೈತರಿಗೆ ನಷ್ಟವಾಗಿದೆ.
ಈ ಎಲ್ಲದರ ಪರಿಣಾಮವಾಗಿ ಮೊದಲೇ ಸಂಕಷ್ಟದಲ್ಲಿದ್ದ ಸಾಮಾನ್ಯ ಗ್ರಾಹಕ ಖರ್ಚು ಮಾಡಲು ದುಡ್ಡಿಲ್ಲದೇ ಬರಿಗೈಯ್ಯಲ್ಲಿ ಕುಳಿತಿರುವುದರಿಂದ ಆರ್ಥಿಕ ಚಟುವಟಿಕೆಗಳ ಮೂಲತಳಹದಿಯಾಗಿರುವ ನಿತ್ಯಬಳಕೆವಸ್ತುಗಳ ವಹಿವಾಟು ಪ್ರಮಾಣವು ತಗ್ಗುವ ನಿರೀಕ್ಷೆ ಇದೆ. ಹೀಗಾಗಿ ‘ಕೋವಿಡ್-19’ ಹಾವಳಿಯಿಂದ ಆಗಬಹುದಾದ ನಷ್ಟದ ಅಂದಾಜು ಸ್ಪಷ್ಟವಾಗುತ್ತಿಲ್ಲ. ಸ್ಪಷ್ಟವಾಗುತ್ತಿರುವ ಒಂದೇ ಅಂಶ ಎಂದರೆ ನಷ್ಟದ ಪ್ರಮಾಣವು ಎಲ್ಲರು ಅಂದಾಜಿಸುತ್ತಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಾಗಲಿದೆ.
ಅಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ದೇಶದ ನಾಯಕತ್ವಕ್ಕೆ ಇದೆಯೇ ಎಂಬುದು ಈಗ ಟ್ರಿಲಿಯನ್ ಡಾಲರ್ ಪ್ರಶ್ನೆ!