ಭಾರತದಲ್ಲಿ ಕರೋನಾ ಸೋಂಕು ಮಿತಿ ಮೀರಿ ಹೋಗುತ್ತಿದೆ. ದಿನವೊಂದಕ್ಕೆ 16 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸರಾಸರಿ ಸುಮಾರು 400 ಜನರು ಕರೋನಾ ಸೋಂಕಿನಿಂದ ಚೇತರಿಸಿಕೊಳ್ಳಲಾರದೆ ಸಾವನ್ನಪ್ಪುತ್ತಿದ್ದಾರೆ. ಆದರೂ ಪ್ರಧಾನಿ ನರೇಂದ್ರ ಮೋದಿ ಜನರ ಜೀವಕ್ಕಿಂತ ಜೀವನವೇ ಮುಖ್ಯ ಎನ್ನುವ ನಿರ್ಧಾರಕ್ಕೆ ಬಂದಿದ್ದು ತಪ್ಪು ಎನ್ನುವ ಅರಿವು ಇದೀಗ ಕೇಂದ್ರ ಸರ್ಕಾರಕ್ಕೆ ಆಗುತ್ತಿದೆ. ಅದೇ ಕಾರಣಕ್ಕೆ ಮತ್ತೆ ಕೇಂದ್ರ ಸರ್ಕಾರ ಲಾಕ್ಡೌನ್ಮಾಡುವತ್ತ ಪುಟ್ಟ ಹೆಜ್ಜೆಯನ್ನಿಟ್ಟಿದೆ.
ಶುಕ್ರವಾರ ನಿಗದಿಯಾಗಿದೆ ಬೆಂಗಳೂರು ಸರ್ವಪಕ್ಷ ಸಭೆ..!
ಕರೋನಾ ನಿಯಂತ್ರಣಕ್ಕೆ ರಾಜ್ಯಾದ್ಯಂತ ಲಾಕ್ಡೌನ್ ಮಾಡದಿದ್ದರೂ ಪರವಾಗಿಲ್ಲ. ಅನ್ಲಾಕ್ ಆದ ಬಳಿಕ ಮಿತಿಮೀರಿ ಸೋಂಕು ಏರಿಕೆ ಆಗುತ್ತಿರುವ ಬೆಂಗಳೂರಿನಲ್ಲಾದರೂ ಲಾಕ್ಡೌನ್ ಮಾಡಿ ಎನ್ನುವ ಆಗ್ರಹ ಕೇಳಿ ಬಂದಿದೆ. ಅದರಲ್ಲೂ ಬಹುತೇಕ ಶಾಸಕರು ಲಾಕ್ಡೌನ್ ಪರವಾಗಿ ಮಾತನಾಡಿದ್ದಾರೆ, ಹೀಗಾಗಿ ಬೆಂಗಳೂರು ಶಾಸಕರ ಅಭಿಪ್ರಾಯ ಪಡೆಯಲು ಶುಕ್ರವಾರ ಸಿಎಂ ಬಿ.ಎಸ್ ಯಡಿಯೂರಪ್ಪ ಬೆಂಗಳೂರು ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಬಳಿಕ ಕೋವಿಡ್ 19 ವಿಚಾರವಾಗಿ ತಜ್ಞರ ವರದಿ ಬಂದ ಬಳಿಕ ಅಂತಿಮ ನಿರ್ಧಾರ ಮಾಡೋಣ ಎಂದಿದ್ದಾರೆ ಎನ್ನಲಾಗಿದೆ.

ಕ್ಯಾಬಿನೆಟ್ ಸಭೆಯಲ್ಲಿ ಸೈಲೆಂಟ್, ಸಪರೇಟ್ ಮೀಟಿಂಗ್..!
ಲಾಕ್ಡೌನ್ ಮಾಡಬೇಕು ಎಂದು ಹಲವು ಸಚಿವರು ಸಂಪುಟ ಸಭೆಯಲ್ಲಿ ಸಿಎಂ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಲಾಕ್ಡೌನ್ ಜಾರತಿ ಮಾಡಿವ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಿಕೆ ನೀಡಬೇಡಿ ಎಂದಷ್ಟೇ ಹೇಳಿದ ಸಿಎಂ ಯಡಿಯೂರಪ್ಪ, ಕಂದಾಯ ಸಚಿವ ಆರ್ ಅಶೋಕ್ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ರು. ಸಭೆ ಬಳಿಕ ಮಾತನಾಡಿದ ಆರ್ ಅಶೋಕ್, ಬೆಂಗಳೂರಿನಲ್ಲಿ ಯಾವುದೇ ಲಾಕ್ಡೌನ್ ಇರೋದಿಲ್ಲ. ಕೇವಲ ಸೀಲ್ಡೌನ್ ಮಾತ್ರ ಇರುತ್ತೆ ಎಂದಿದ್ದಾರೆ.
ಬೆಂಗಳೂರಿನ ಎಲ್ಲ ಪಕ್ಷದ ಶಾಸಕರು, ಸಂಸದರ ಸಭೆ ಕರೆಯಲಾಗಿದೆ. ಸರ್ವ ಪಕ್ಷದ ಸಲಹೆ ಪಡೆದು ಮುಂದುವರಿಯುತ್ತೇವೆ ಎಂದಿದ್ದಾರೆ ಬೆಂಗಳೂರು ಕೋವಿಡ್ 19 ನೂತನ ಉಸ್ತುವಾರಿ ಆರ್ ಅಶೋಕ್. ಜೊತೆಗೆ ಕರೋನಾ ವಿಚಾರದಲ್ಲಿ ಬೆಂಗಳೂರು ಇದುವರೆಗೂ ಸೇಫ್ ಆಗಿದೆ. ಬೆಂಗಳೂರಿನಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿಲ್ಲ. ಹಾಗಾಗಿ ಬೆಂಗಳೂರು ಲಾಕ್ ಡೌನ್ ಮಾಡಲ್ಲ. ಬೇಕಾದ ಸೂಕ್ತ ವ್ಯವಸ್ಥೆ ಮಾಡಿಕೊಳ್ತಿದ್ದೇವೆ ಎಂದಿದ್ದಾರೆ. ಸರ್ಕಾರ ನಿರ್ಧಾರ ಮಾಡಿದ ಬಳಿಕ ಸರ್ವ ಪಕ್ಷ ಸಭೆಯನ್ನು ಕರೆದಿರುವ ಉದ್ದೇಶವಾದರೂ ಏನು ಎನ್ನುವ ಪ್ರಶ್ನೆ ಎದುರಾಗ್ತಿದೆ. ಆದರೆ ಕೇವಲ 2 ಕಾರಣಗಳಿಂದಾಗಿ ರಾಜ್ಯದಲ್ಲಿ ಕರೋನಾ ನಿಯಂತ್ರಣಕ್ಕೆ ಲಾಕ್ಡೌನ್ ಮಾಡ್ತಿಲ್ಲ ಎನ್ನುವ ಮಾತುಗಳೂ ಹರಿದಾಡ್ತಿವೆ.
ಎಸ್ಎಎಸ್ಎಲ್ಸಿ ಪರೀಕ್ಷೆ, ಅಡಗೋಡೆ ಮೇಲೆ ದೀಪ..!
ರಾಜ್ಯದಲ್ಲಿ ಸಾಕಷ್ಟು ಹಠಕ್ಕೆ ಬಿದ್ದು ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುತ್ತಿದ್ದಾರೆ ಶಿಕ್ಷಣ ಸಚಿವ ಸುರೇಶ್ಕುಮಾರ್. ಜುಲೈ 3ರ ತನಕವೂ ಪರೀಕ್ಷೆ ನಡೆಯಲಿದ್ದು, ಈಗ ಲಾಕ್ಡೌನ್ ಜಾರಿ ಮಾಡಿದರೆ ಪರೀಕ್ಷೆಗೆ ಸಮಸ್ಯೆ ಆಗಲಿದೆ ಎನ್ನುವ ಕಾರಣಕ್ಕೂ ಲಾಕ್ಡೌನ್ ಮಾಡದೆ ಇರಲು ನಿರ್ಧಾರ ಮಾಡಿದ್ದಾರೆ ಎನ್ನುವ ಮಾಹಿತಿಯೂ ಸಿಗುತ್ತಿದೆ. ಅದೇ ಕಾರಣಕ್ಕೆ ಸದ್ಯಕ್ಕೆ ಲಾಕ್ ಡೌನ್ ಇರಲ್ಲ, ಮುಂದೆ ಆಗುದನ್ನ ಈಗಲೇ ಹೇಳಲು ಆಗಲ್ಲ. ಕರ್ಫ್ಯೂ ಹೇರುವುದು, ಲಾಕ್ಡೌನ್ ಸದ್ಯಕ್ಕೆ ಮಾಡಲ್ಲ ಎಂದಿದ್ದಾರೆ ಕೋವಿಡ್ ಉಸ್ತುವಾರಿ ಆರ್.ಅಶೋಕ್.
ಲಾಕ್ಡೌನ್ ಆದರೆ ಮೋದಿಗೆ ಆಗುತ್ತಾ ಮುಜುಗರ..?
ಕರ್ನಾಟಕದಲ್ಲೂ ಲಾಕ್ಡೌನ್ ಮಾಡಬೇಕು ಕರೋನಾ ಸೋಂಕನ್ನು ತಡೆಯಬೇಕು ಎನ್ನುವುದು ಜನಾಭಿಪ್ರಾಯವಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಜುಗರ ಆಗಲಿದೆ ಎನ್ನುವ ಏಕೈಕ ಕಾರಣಕ್ಕೆ ಲಾಕ್ಡೌನ್ ಮಾಡುವ ನಿರ್ಧಾರ ಪ್ರಕಟ ಮಾಡಲು ರಾಜ್ಯ ಸರ್ಕಾರ ಹಿಂದೆ ಮುಂದೆ ನೋಡುತ್ತಿದೆ ಎನ್ನಲಾಗ್ತಿದೆ. ಜೀವನಕ್ಕಿಂತ ಜೀವವೇ ಮುಖ್ಯ ಎಂದು ದೇಶದ ಜನರ ಎದುರು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ, ಮೆಲ್ಲಗೆ ಲಾಕ್ಡೌನ್ ತೆರವು ಮಾಡಿ ಅನ್ಲಾಕ್ ಘೋಷಣೆ ಮಾಡಿದ್ದಾರೆ. ಇದೀಗ ದೇಶದ ಬೇರೆ ಬೇರೆ ರಾಜ್ಯಗಳು ಅನ್ಲಾಕ್ಗೆ ಮತ್ತೆ ಬೀಗ ಹಾಕಿ ಲಾಕ್ಡೌನ್ ಮಾಡಿದ್ದರೂ ಕರ್ನಾಟಕದಲ್ಲಿ ಆಳುವ ಪಕ್ಷ ಬಿಜೆಪಿ ಇರುವ ಕಾರಣ ಮತ್ತೆ ಲಾಕ್ಡೌನ್ ಮಾಡಿದರೆ ಮೋದಿಗೆ ಮುಜುಗರ ಎನ್ನಲಾಗ್ತಿದೆ. ಅದೇ ಕಾರಣದಿಂದ ಲಾಕ್ಡೌನ್ ಬಗ್ಗೆ ಎಲ್ಲಿಯೂ ಬಹಿರಂಗ ಹೇಳಿಕೆ ನೀಡದಂತೆ ಸಚಿವ ಸಂಪುಟದಲ್ಲಿ ಕಟ್ಗಟು ನಿಟ್ಟಿನ ಸೂಚನೆ ನೀಡಿದ್ದಾರೆ ಸಿಎಂ ಎನ್ನಲಾಗ್ತಿದೆ.
ಕೇಂದ್ರ ಸರ್ಕಾರವೇ ಲಾಕ್ಡೌನ್ ಸಡಿಲಿಕೆ ಬಳಿಕ ಆರಂಭ ಮಾಡಿದ್ದ ರೈಲ್ವೆ ಸಂಚಾರವನ್ನೂ ಪುನಃ ರದ್ದು ಮಾಡಿ ಆದೇಶ ಮಾಡಿದೆ. ಆಗಸ್ಟ್ 12ರ ತನಕ ದೇಶದಲ್ಲಿ ರೈಲು ಸಂಚಾರ ಇರಲ್ಲ. ಅದೇ ಕಾರಣಕ್ಕಾಗಿ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ಶೇಕಡ 100 ರಷ್ಟು ಹಣ ವಾಪಸ್ ಮಾಡಲು ನಿರ್ಧಾರ ಮಾಡಲು ನಿರ್ಧಾರ ಮಾಡಲಾಗಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಕ್ಷಲಕ ಕಾರಣಕ್ಕೆ ಲಾಕ್ಡೌನ್ ಮಾಡದೆ ಜನರ ಪ್ರಾಣದ ಜೊತೆಗೆ ಚೆಲ್ಲಾಟವಾಡುವ ಕೆಲಸ ಮಾಡುತ್ತಿದೆ. ಕುಮಾರಸ್ವಾಮಿ ಹೇಳಿದ್ದಂತೆ 20 ದಿನಗಳ ಕಾಲ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿ ಮಾಡಿ, ಪ್ರತಿ ಹಳ್ಳಿ ಹಳ್ಳಿಗೂ ಆರೋಗ್ಯ ಸಿಬ್ಬಂದಿ ತೆರಳಿ ಗಂಟಲ ದ್ರವ ತಂದು ಪರೀಕ್ಷೆ ಮಾಡಿ ಕರೋನಾ ಮಟ್ಟ ಹಾಕುವ ಕೆಲಸ ಯಾಕೆ ಆಗಬಾರದು..? ಈ ಬಗ್ಗೆ ಸರ್ಕಾರ ಯಾಕೆ ಚಿಂತನೆ ನಡೆಸಬಾರದು..? ಜನರ ಆರೋಗ್ಯಕ್ಕಿಂತ ಹಣವೇ ಮುಖ್ಯ ಎನ್ನುವ ನಿಲುವು ಬದಲಾಗಬೇಕಿದೆ. ಕೇಂದ್ರವೇ ರೈಲು ಸಂಚಾರವೇ ವ್ಯಾಪಕ ಸೋಂಕು ಹರಡಲು ಕಾರಣ ಎನ್ನುವ ನಿರ್ಧಾರಕ್ಕೆ ಬಂದು ಸಂಚಾರ ಸ್ಥಗಿತ ಮಾಡಿದ ಮೇಲೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮೂರ್ಖತನವಲ್ಲವೇ..?






