ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ರೈತರು ಕೃಷಿ ಕಾಯ್ದೆಗೆ ಅವಕಾಶ ನೀಡುವಂತೆ ಸಲಹೆ ನೀಡಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ರಾಜನಾಥ್ ಸಿಂಗ್ ಅವರ ಮಾತುಗಳು ಭರವಸೆ ಮೂಡಿಸುವಂತೆ ಇದೆ ಎಂದಿದ್ದಾರೆ.
“ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿಚಾರವಾಗಿ ದೆಹಲಿ ಹೊರವಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಈಗ ದೇಶ ಮಾತ್ರವಲ್ಲದೇ, ವಿಶ್ವದ ಗಮನ ಸೆಳೆಯುತ್ತಿದೆ. ಕೆನಡಾ ಪ್ರಧಾನಿ ಕಳವಳದ ನಡುವೆಯೇ ಈಗ ಅಮೆರಿಕ, ಬ್ರಿಟನ್ ಸಂಸದರೂ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಏನೋ ಸಮಸ್ಯೆ ಸೃಷ್ಟಿಯಾಗಿದೆ ಎಂಬರ್ಥವನ್ನು ರೈತರ ಈ ಹೋರಾಟ ಹೊಮ್ಮಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಭಾರತ ಗಳಿಸಿಕೊಂಡ ಖ್ಯಾತಿ, ಸ್ಥಾನಮಾನಗಳಿಗೆ ಈ ಹೊಸ ಕಾಯ್ದೆಗಳು, ಅದರ ವಿರುದ್ಧ ನಡೆಯುತ್ತಿರುವ ಹೋರಾಟಗಳು ಚ್ಯುತಿಯುಂಟು ಮಾಡಬಾರದು ಎಂಬುದು ನನ್ನ ಅಭಿಲಾಷೆ. ಮೋದಿ ತಾವು ಪ್ರಧಾನಿಯಾದ ನಂತರ ಸ್ವತಃ ತಾವು ಗಳಿಸಿಕೊಂಡ ಹೆಸರಿಗೂ ಇದು ಕಪ್ಪುಚುಕ್ಕೆಯಾಗಬಹುದು ಎಂಬುದನ್ನು ಅವರು ಗಮನಿಸಬೇಕು. ಅದೇ ಹೊತ್ತಲ್ಲೇ ರೈತರಿಗೆ ಅನಾನುಕೂಲವೂ ಆಗಬಾರದು ಎನ್ನುವ ಮೂಲಕ ಹಾವೂ ಸಾಯಬಾರದೂ ಕೋಲೂ ಮುರಿಯಬಾರದು ಎನ್ನುವ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ರೈತರಿಗೆ ಕಾರ್ಯಕ್ರಮಗಳ ಮೂಲಕ ಪರೋಕ್ಷ ಸಂದೇಶ ರವಾನಿಸುವ ಬದಲಿಗೆ ಪ್ರಧಾನಿ ನೇತೃತ್ವದಲ್ಲಿ ನಿರ್ಣಾಯಕ ಸಭೆ ನಡೆಸಿ, ಹೋರಾಟ ಅಂತ್ಯಗೊಳಿಸುವುದು ಸೂಕ್ತ. ಇದು ದೇಶದ ಘನತೆ ದೃಷ್ಟಿಯಿಂದ ಅತ್ಯಗತ್ಯವೂ ಹೌದು. ದೇಶದ ಘನತೆಯ ವಿಚಾರದಲ್ಲಿ ಮೋದಿಯವರೂ ಎಚ್ಚರಿಕೆಯಿಂದ ವರ್ತಿಸುತ್ತಾರೆ. ಆದ್ದರಿಂದ ಸಮಸ್ಯೆ ಕೂಡಲೇ ಇತ್ಯರ್ಥವಾಗಲಿ ಎಂದಿದ್ದಾರೆ.
ಕಾಯ್ದೆ ಬಗ್ಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಮಾತುಗಳು ಭರವಸೆ ಮೂಡಿಸುವಂತಿವೆ. ಕಾಯ್ದೆಗಳ ಪ್ರಯೋಗಾತ್ಮಕ ಜಾರಿಗೆ ಅವಕಾಶ ನೀಡುವಂತೆ ಅವರು ಕೋರಿದ್ದಾರೆ. ಅಲ್ಲದೆ, ಕಾಯ್ದೆಗಳು ರೈತರಿಗೆ ಸಮಸ್ಯೆ ಸೃಷ್ಟಿಸುವಂತಿದ್ದರೆ ಸರ್ಕಾರ ಅವುಗಳನ್ನು ಹಿಂದಕ್ಕೆ ಪಡೆಯುವುದಾಗಿಯೂ ಅವರು ಆಶ್ವಾಸನೆ ನೀಡಿದ್ದಾರೆ. ರೈತರೂ ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.
ಭಾರತೀಯ ಕೃಷಿರಂಗ ವಿಷವರ್ತುಲದಲ್ಲಿದೆ ಎಂಬುದು ಸಾರ್ವತ್ರಿಕ ಆರೋಪ. ಕೃಷಿ ರಂಗದ ಕಲ್ಯಾಣವಾಗುತ್ತದೆ ಎಂದರೆ ಯಾವುದೇ ಪ್ರಯೋಗಕ್ಕೆ ನಾವೂ ಸಿದ್ಧರಿರುವುದು ಅಗತ್ಯ ಕೂಡ. ಹಾಗಾಗಿ ರೈತರು ಕಾಯ್ದೆಗೆ ಅವಕಾಶ ನೀಡುವ ಬಗ್ಗೆಯೂ ಒಮ್ಮೆ ಆಲೋಚಿಸುವುದು ಉಚಿತವೂ ಆಗಿದೆ ಎಂಬುದು ನನ್ನ ಅಭಿಪ್ರಾಯ. ಆದರೆ, ಸರ್ಕಾರ, ಹೋರಾಟಗಾರರ ನಡುವೆ ಸಮನ್ವಯವಿರಲಿ ಎಂದು ಅವರು ಹೇಳಿದ್ದಾರೆ.