• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕಾಸರಗೋಡು- ದಕ್ಷಿಣ ಕನ್ನಡ ಗಡಿ ವಿಚಾರದಲ್ಲಿ ʼಕೈʼ ನಾಯಕರ ವಿಭಿನ್ನ ನಿಲುವು!

by
April 3, 2020
in ಕರ್ನಾಟಕ
0
ಕಾಸರಗೋಡು- ದಕ್ಷಿಣ ಕನ್ನಡ ಗಡಿ ವಿಚಾರದಲ್ಲಿ ʼಕೈʼ ನಾಯಕರ ವಿಭಿನ್ನ ನಿಲುವು!
Share on WhatsAppShare on FacebookShare on Telegram

ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ತೆರೆಯುವಂತೆ ಕೇರಳ ಹೈಕೋರ್ಟ್‌ ನೀಡಿರುವ ಆದೇಶದ ವಿರುದ್ಧ ಕರಾವಳಿಯ ಜನಪ್ರತಿನಿಧಿಗಳು ಗರಂ ಆಗಿದ್ದಾರೆ. ಟ್ವೀಟ್‌ ಮೂಲಕ ಕೇರಳ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಕೋರ್ಟ್‌ ತೀರ್ಪಿಗೆ ಪ್ರತಿಕ್ರಿಯಿಸಿ ನ್ಯಾಯಾಂಗ ನಿಂದನೆ ಭೀತಿಗೆ ಸಿಲುಕಿ ಹಾಕಿಕೊಳ್ಳುವ ಸಾಧ್ಯತೆ ಇರುವುದರಿಂದ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲ್‌ , ಶಾಸಕರಾದ ವೇದವ್ಯಾಸ ಕಾಮತ್‌, ಡಾ. ವೈ ಭರತ್‌ ಶೆಟ್ಟಿ ಅವರೆಲ್ಲ ಕೇರಳ ಸರಕಾರ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ವಿರುದ್ಧ ಟ್ವೀಟ್‌ ದಾಳಿ ನಡೆಸಿದ್ದಾರೆ.

ಇದರ ಮಧ್ಯೆಯೇ ಟ್ವೀಟ್‌ನಲ್ಲಿ ಪೌರುಷ ಮೆರೆಯುವ ಜನಪ್ರತಿನಿಧಿಗಳನ್ನು ನಂಬಿ ಕೂರದೆ ಮಂಗಳೂರು ಮೂಲದ ಮೂವರು ಕೇರಳ ಹೈ ಕೋರ್ಟ್‌ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಒಬ್ಬರು ಮಂಗಳೂರು ಬಾರ್‌ ಎಸೋಸಿಯೇಷನ್‌ ಅಧ್ಯಕ್ಷ ನರಸಿಂಹ ಹೆಗ್ಡೆ, ಇನ್ನೊಬ್ಬರು ಬಿಜೆಪಿ ಹಾಗೂ ಸಂಘಪರಿವಾರದ ಜೊತೆ ಗುರುತಿಸಿಕೊಂಡಿರುವ ಡಾ. ಅಣ್ಣಯ್ಯ ಕುಲಾಲ್‌ ಹಾಗೂ ಮತ್ತೊಬ್ಬರು ಕಾಂಗ್ರೆಸ್‌ ಯುವನಾಯಕ ಮಿಥುನ್‌ ರೈ.

ಅಚ್ಚರಿ ಅಂದ್ರೆ ಈ ರೀತಿ ಕೇರಳ ಹೈಕೋರ್ಟ್‌ ತೀರ್ಪಿನ ಸಿಂಧುತ್ವ ಪ್ರಶ್ನಿಸಿ ಮಿಥುನ್‌ ರೈ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು ಕುತೂಹಲಕ್ಕೂ ಕಾರಣವಾಗಿದೆ. ಈ ಹಿಂದೆ ಇದೇ ಗಡಿಭಾಗದ ಮಂಜೇಶ್ವರಕ್ಕೆ ತೆರಳಿ ಮಿಥುನ್‌ ರೈ ಅಲ್ಲಿನ ಯುಡಿಎಫ್‌ ಅಭ್ಯರ್ಥಿ ಪರ ಮತ ಪ್ರಚಾರ ನಡೆಸಿದ್ದರು. ಆದರೆ ಈಗ ಏಕಾಏಕಿ ಈ ರೀತಿಯ ನಿರ್ಧಾರ ಯಾಕೆ ತಳೆದರು ಅನ್ನೋ ಕುತೂಹಲ ಸಹಜವಾದದ್ದು. ಅದರಲ್ಲೂ ಕೇರಳ-ಕರ್ನಾಟಕ ಗಡಿ ಬಂದ್‌ ವಿಚಾರದಲ್ಲಿ ಕಾಂಗ್ರೆಸ್‌ ನಡೆ ಒಂದು ರೀತಿ ಅಡ್ಡ ಗೋಡೆ ಮೇಲಿನ ದೀಪದಂತೆ. ಆದರೆ ಮಿಥುನ್‌ ರೈ ಮಾತ್ರ ಅದ್ಯಾವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಬದಲಾಗಿ ತನ್ನ ವೈಯಕ್ತಿಕ ಆಸಕ್ತಿಯಿಂದ, ಜಿಲ್ಲೆಯ ಹಿತದೃಷ್ಟಿಯಿಂದ ತಮ್ಮ ವಕೀಲರ ಮೂಲಕ ಸುಪ್ರೀಂ ಕೋರ್ಟ್‌ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಕಳೆದ ಒಂದು ವಾರದ ಅವಧಿಯಲ್ಲಿ ಕಾಸರಗೋಡು-ದಕ್ಷಿಣ ಕನ್ನಡ ಗಡಿ ಬಂದ್‌ನಿಂದಾಗಿ ಗಡಿ ದಾಟಲಾಗದೇ ಕಾಸರಗೋಡು ಜಿಲ್ಲೆಯಲ್ಲಿ ನಾಲ್ವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಕಾರಣ, ರಾಜ್ಯದ ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡಕ್ಕೆ ನೆರೆಯ ಕೇರಳದ ಕಾಸರಗೋಡು ತಾಗಿಕೊಂಡಿರುವುದರಿಂದ ಬಹುತೇಕ ಕಾಸರಗೋಡಿನ ಮಂದಿ ಅನಾರೋಗ್ಯ ಬಂದಾಗಲೆಲ್ಲ ಮಂಗಳೂರಿನತ್ತವೇ ಮುಖ ಮಾಡುತ್ತಾರೆ. ಆದರೆ ಈಗ ಅದಕ್ಕೆ ಕಡಿವಾಣ ಬಿದ್ದ ಪರಿಣಾಮ ತಲಪಾಡಿ ದಾಟಿ ಬರುವಂತಿಲ್ಲ. ಇದರಿಂದಾಗಿ ಕಾಸರಗೋಡಿನ ಮಂದಿಗೆ ಕರ್ನಾಟಕ ರಾಜ್ಯ ಸರಕಾರದ ನಿಲುವು ನಿಜಕ್ಕೂ ಕುತ್ತು ತಂದಿದೆ.

ಈಗಾಗಲೇ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂತಾದ ಪ್ರಮುಖರು ಗಡಿ ನಿರ್ಬಂಧ ತೆರವುಗೊಳಿಸಲು ಒತ್ತಾಯಿಸಿದ್ದಾರೆ. ಆದರೆ ರಾಜ್ಯ ಸರಕಾರ ಗಡಿ ನಿರ್ಬಂಧ ತೆರವುಗೊಳಿಸೋದಕ್ಕೆ ಮುಂದಾಗಿಲ್ಲ, ಬದಲಾಗಿ ಸುಪ್ರೀಂ ಕೋರ್ಟ್‌ ಕದ ತಟ್ಟಿದೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಪ್ರಿಲ್‌ 1 ರಂದು ಮಾಡಿದ್ದ ಟ್ವೀಟ್‌ ಸಾಕಷ್ಟು ಗಮನಸೆಳೆದಿತ್ತು. ಮಾನವೀಯ ದೃಷ್ಟಿಯಿಂದ ಕಾಸರಗೋಡಿನಿಂದ ಆಗಮಿಸುವ ರೋಗಿಗಳ ಚಿಕಿತ್ಸೆಗೆ ಅವಕಾಶ ನೀಡಬೇಕೆಂದು ಕೇಳಿಕೊಂಡಿದ್ದರು. ಆದರೆ ಇದೀಗ ಅವರದ್ದೇ ಪಕ್ಷದ ಯುವ ನಾಯಕ, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಕಳೆದ ಲೋಕಸಭಾ ಚುನಾವಣಾ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯೂ ಆದ ಮಿಥುನ್‌ ರೈ ಅವರೇ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಪ್ರಮುಖರಾಗಿದ್ದಾರೆ. ಸ್ವತಃ ಟ್ವೀಟ್‌ ನಲ್ಲೂ ಇದನ್ನು ಖಚಿತಪಡಿಸಿದ್ದಾರೆ.

I have filed a special leave petition in the Supreme Court of India – Civil Appelette Juridistiction through my Counsel Mr Anand Sanjay Nuli, Senior Advocate of SC against the order of HC of Kerala for opening the Karnataka Kasargod Border. (1/4) pic.twitter.com/EXD13zaKnt

— Mithun Rai (@TheMithunRai) April 2, 2020


ಸಿದ್ದರಾಮಯ್ಯನವರದ್ದು ದೇಶ ಹಿತದ ಚಿಂತನೆ, ನನ್ನದು ಜಿಲ್ಲೆಯ ಹಿತ :

ಸಿದ್ದರಾಮಯ್ಯ ಹೇಳಿಕೆ ಹೊರತಾಗಿಯೂ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ಗಡಿ ನಿರ್ಬಂಧ ತೆರವಿಗೆ ನ್ಯಾಯಾಂಗದ ಮೊರೆ ಹೋದ ಮಿಥುನ್‌ ರೈ ನಡೆಯ ಬಗ್ಗೆ ʼಪ್ರತಿಧ್ವನಿʼ ಅವರನ್ನೇ ಮಾತಾಡಿಸಿದಾಗ ಅವರು ಮುಂದಿಟ್ಟ ವಿಚಾರವಿದು. “ ಸಿದ್ದರಾಮಯ್ಯನವರ ಹೇಳಿಕೆಗೆ ನನ್ನ ವಿರೋಧವಿಲ್ಲ. ನಮ್ಮ ರಾಜ್ಯ ನಾಯಕರಾಗಿ ಅವರ ಮೇಲೆ ಗೌರವವಿದೆ. ಅವರು ಉಲ್ಲೇಖಿಸಿರುವ ವಿಚಾರ ದೇಶ ಹಿತದ ದೃಷ್ಟಿಯಲ್ಲಿ ನೋಡುವುದಾದರೆ ಸರಿಯಾಗಿದೆ. ಆದರೆ ಓರ್ವ ಜಿಲ್ಲೆ ಜವಾಬ್ದಾರಿಯುತ ನಾಗರಿಕನಾಗಿ ಗಡಿ ನಿರ್ಬಂಧ ತೆರವಿಗೆ ನನ್ನ ವಿರೋಧವಿದೆ. ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಇಲ್ಲಿನ ವಾಸ್ತವ ವಿಚಾರ ನನಗೆ ಚೆನ್ನಾಗಿ ತಿಳಿದಿದೆ. ವೈದ್ಯ ಕುಟಂಬದವನಾದ ನನಗೆ ಕರೋನಾ ರೋಗ ಅದೆಷ್ಟರ ಮಟ್ಟಿಗೆ ಗಂಭೀರತೆ ಪಡೆದುಕೊಂಡಿದೆ ಅನ್ನೋದನ್ನು ತಿಳಿದುಕೊಳ್ಳುತ್ತಿದ್ದೇನೆ. ಹಾಗಾಗಿ ಜಿಲ್ಲೆಯ ಹಿತದೃಷ್ಟಿಯಿಂದ, ನಾನೂ ಮಾನವೀಯ ನೆಲೆಯಿಂದನೇ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಿದ್ದೇನೆ” ಎಂದರು.

ಕಾಸರಗೋಡಿನಿಂದ ಮಂಗಳೂರಿಗೆ ಚಿಕಿತ್ಸೆಗಾಗಿ ಬರುವವರನ್ನು ಮಾನವೀಯ ದೃಷ್ಟಿಯಿಂದ ನೋಡಬೇಕಾಗಿದೆ.

ಸಾಮಾನ್ಯ ಸಂಚಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿ ಚಿಕಿತ್ಸೆಗೆ ಬರುವವರಿಗೆ ಮಾತ್ರ ಎರಡು ರಾಜ್ಯಗಳ ನಡುವಿನ ಹೆದ್ದಾರಿಯನ್ನು ಮುಕ್ತಗೊಳಿಸಬೇಕು.
ಕೊರೊನಾ ವಿರುದ್ಧದ ಹೋರಾಟ ಜಾತಿ, ಧರ್ಮ ಮತ್ತು ಗಡಿಯನ್ನು ಮೀರಿದ್ದು.

— Siddaramaiah (@siddaramaiah) April 1, 2020


ಮಿಥುನ್‌ ರೈ ಲೆಕ್ಕಾಚಾರ ; ನಿಜಕ್ಕೂ ಆಘಾತಕಾರಿ ಅಂಕಿಅಂಶ!

ಅವರ ಪ್ರಕಾರ ಕಾಸರಗೋಡು ಜಿಲ್ಲೆ ಒಂದರಲ್ಲಿಯೇ 121 ಮಂದಿ ಕೋವಿಡ್‌-19 ಗೆ ತುತ್ತಾಗಿದ್ದಾರೆ. ಅಲ್ಲದೇ 21,600 ಮಂದಿ ಕ್ವಾರೆಂಟೈನ್‌ ನಲ್ಲಿದ್ದಾರೆ. ಆದರೆ ಜಿಲ್ಲೆಯಲ್ಲಿ ಇದುವರೆಗೂ ಕೇವಲ ಐದು ಸಾವಿರ ಮಂದಿಯಷ್ಟೇ ಕ್ವಾರೆಂಟೈನ್‌ ನಲ್ಲಿದ್ದಾರೆ. ಒಂದು ವೇಳೆ ಅಲ್ಲಿಂದ ಬರೋ ರೋಗಿಗಳಿಗೆ ಇಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಂತೂ ಚಿಕಿತ್ಸೆ ಸಿಗದು. ಬದಲಾಗಿ ಸರಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಗುತ್ತದೆ. ಹಾಗೇ ಏನಾದರೂ ಆದರೆ ಅವರಲ್ಲಿ ಯಾರಾದರೊಬ್ಬ ಕೋವಿಡ್‌-19 ರೋಗಿ ಇದ್ದರೆ ಮಂಗಳೂರು ನಗರಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಇದರಿಂದ ಮಂಗಳೂರು ನಗರಕ್ಕೂ ಕರೋನಾ ಸೋಂಕು ಹರಡುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ ಇದುವರೆಗೂ ನಗರದಲ್ಲಿ ಕಾಣಿಸಿಕೊಳ್ಳದ ಈ ರೋಗ ನಗರದಲೆಲ್ಲ ಹರಡಿ ಸಮುದಾಯಕ್ಕೆ ಹರಡುವ ಆತಂಕ ಎದುರಿಸುವಂತಾಗುತ್ತದೆ. ಈ ರೀತಿ ಏನಾದ್ರೂ ಆದರೆ ಸದ್ಯ 5 ಸಾವಿರದಷ್ಟಿರುವ ಕ್ವಾರೆಂಟೈನ್‌ 80 ಸಾವಿರ ಮಂದಿವರೆಗೆ ತಲುಪಬಹುದು. ಸಾವಿರ ಸಂಖ್ಯೆಯಲ್ಲಿ ಜನ ಕೋವಿಡ್‌-19 ಗೆ ತುತ್ತಾಗಬಹುದು ಅನ್ನೋ ಆತಂಕವನ್ನ ʼಪ್ರತಿಧ್ವನಿʼ ಮುಂದಿಟ್ಟಿದ್ದಾರೆ. ಅಲ್ಲದೇ ಕೇರಳದ ಕಣ್ಣೂರಿನಲ್ಲಿ 18 ವಿಶೇಷ ಆಸ್ಪತ್ರೆಗಳಿವೆ. ಆದ್ದರಿಂದ ಕಾಸರಗೋಡು ಜಿಲ್ಲೆಯ ನಿವಾಸಿಗಳು ಆ ಕಡೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು. ನಮಗೆ ಅವರ ಮೇಲೆ ಯಾವುದೇ ದ್ವೇಷವಿಲ್ಲ ಆದರೆ ಕರೋನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಇದು ಅನಿವಾರ್ಯ ಎಂದರು.

ಪಿಣರಾಯಿ ವಿರೋಧಿ ನಳಿನ್‌ ಟ್ವೀಟ್‌ ಗೆ ಮಿಥುನ್‌ ಖಂಡನೆ:

ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಮೂವರನ್ನು ನಳಿನ್‌ ಕುಮಾರ್‌ ಕಟೀಲ್‌ ಅಭಿನಂದಿಸಿ ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಿಥುನ್‌ ರೈ, “ಅವರ ಹೊಗಳುವಿಕೆಗಾಗಿ ನಾನು ಅರ್ಜಿ ಹಾಕಿಲ್ಲ. ನನ್ನ ಸ್ವಂತ ಹಣ ಖರ್ಚು ಮಾಡಿಕೊಂಡು ಜಿಲ್ಲೆಯ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಸಿದ್ದೇನೆ” ಎಂದರು. ಅಲ್ಲದೇ ನಳಿನ್‌ ಟ್ವೀಟ್‌ವೊಂದರಲ್ಲಿ ʼಸೇವ್‌ ಕರ್ನಾಟಕ ಫ್ರಂ ಪಿಣರಾಯಿʼ (#SaveKarnatakaFromPinarayi) ಎಂದು ಉಲ್ಲೇಖಿಸಿರುವ ಬಗ್ಗೆ ಇದೇ ಸಂದರ್ಭ ಯುವ ನಾಯಕ ಮಿಥುನ್‌ ರೈ, “ಅಂತಹ ಹೇಳಿಕೆ ಯಾವತ್ತೂ ಒಪ್ಪಲು ಸಾಧ್ಯವಿಲ್ಲ, ಖಂಡನೀಯ” ಎಂದರು.

ಹಾಗೂ ಶ್ರಿ ಮಿಥುನ್ ರೈ , ಕಾಂಗ್ರೆಸ್ ನಾಯಕರು ಮಂಗಳೂರು.

ಇವರಿಗೆ ನಾನು ಧನ್ಯವಾದ ಸಮರ್ಪಿಸುತ್ತೇನೆ.

ಹಾಗೂ ಈ ಸಮಯದಲ್ಲಿ ಜೊತೆಯಾಗಿ ನಿಂತು ಶಕ್ತಿತುಂಬಿದ, ಪ್ರತಿಯೊಬ್ಬ ಕಾರ್ಯಕರ್ತ ಬಂಧುವಿಗೂ ನನ್ನ ಪ್ರಣಾಮಗಳು.

2/2

— Nalinkumar Kateel (@nalinkateel) April 3, 2020


ಬೇರೆ ಸಂಧರ್ಭದಲ್ಲಿ ಕೇರಳ ಜನರು ಮಂಗಳೂರಿಗೆ ಚಿಕಿತ್ಸೆಗೆ ಬರುವುದನ್ನು ಯಾರೂ ತಡೆಯಲಿಲ್ಲ ಆದರೆ #COVIDー19 ನಂತಹ ಪರಿಸ್ಥಿತಿಯಲ್ಲಿ ಜನರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಾದದ್ದು ಆಯಾ ರಾಜ್ಯ ಸರ್ಕಾರಗಳ ಹೊಣೆಯಾಗಿದೆ.

ಅಂತೆಯೇ ಕರ್ನಾಟಕ ಸರ್ಕಾರವು ತನ್ನ ಜನರನ್ನು ರಕ್ಷಿಸಲು ಕೆಲವು ಕ್ರಮ ಕೈಗೊಂಡಿದೆ.#SaveKarnatakafromPinarayi

— Nalinkumar Kateel (@nalinkateel) April 2, 2020


ADVERTISEMENT

ಒಟ್ಟಿನಲ್ಲಿ ಕಾಸರಗೋಡು-ದಕ್ಷಿಣ ಕನ್ನಡ ರಾಷ್ಟ್ರೀಯ ಹೆದ್ದಾರಿ ನಿರ್ಬಂಧ ವಿಚಾರ ಇದೀಗ ಎರಡು ರಾಜ್ಯಗಳ ಪಾಲಿಗೆ ರಾಜಕೀಯ ಜಂಗೀಕುಸ್ತಿಗೂ ಕಾರಣವಾಗುತ್ತಿದೆ. ಮೊದಲೇ ಎಡಪಕ್ಷವನ್ನು ಕಂಡರಾಗದ ಬಿಜೆಪಿ ಸಿಕ್ಕಿರೋ ಅವಕಾಶವನ್ನು ಹಿಡಿದುಕೊಂಡು ಕೇರಳ ಸರಕಾರವನ್ನು ದೂಷಿಸುವ ಕೆಲಸ ಮಾಡುತ್ತಿದೆ. ಇದೆಲ್ಲದರ ಮಧ್ಯೆ ಕಾಂಗ್ರೆಸ್‌ ಯುವ ನಾಯಕ ಮಿಥುನ್‌ ರೈ ಜಿಲ್ಲೆಯ ಹಿತ ದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರ ಗಮನಸೆಳೆಯುತ್ತಿದೆ. ಆದರೆ ಇದಕ್ಕೆ ಪಕ್ಷದ ವರಿಷ್ಠರು ಅದ್ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಅನ್ನೋದು ಕಾದು ನೋಡಬೇಕಿದೆ.

Tags: Covid 19Kasargodkerala-karnataka bordermithun raiಕಾಸರಗೋಡುಕೇರಳ-ಕರ್ನಾಟಕ ಗಡಿಕೋವಿಡ್-19ಮಿಥುನ್‌ ರೈಸಿದ್ದರಾಮಯ್ಯ
Previous Post

ದೇಶದಲ್ಲಿ 2547ಕ್ಕೇರಿದ ಕರೋನಾ ಸೋಂಕಿತರ ಸಂಖ್ಯೆ

Next Post

ಕೋವಿಡ್‌ 19: ದೇಶದಲ್ಲಿ ಹೆಚ್ಚುತ್ತಿದೆ ನಕಲಿ ಸುದ್ದಿಗಳ ಹಾವಳಿ

Related Posts

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ
ಕರ್ನಾಟಕ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

by ಪ್ರತಿಧ್ವನಿ
April 14, 2026
0

ವಿಜಯಪುರ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆ, ಒಂದೇ ದಿನದಲ್ಲಿ ಎರಡು ಭೀಕರ ಘಟನೆಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ಹೊರವಲಯದ ಅಲಿಯಾಬಾದ್ ಬಳಿ ಗುಂಡಿನ ಸದ್ದು ಕೇಳಿಸಿಕೊಂಡಿದ್ದು,...

Read moreDetails
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
Next Post
ಕೋವಿಡ್‌ 19: ದೇಶದಲ್ಲಿ ಹೆಚ್ಚುತ್ತಿದೆ ನಕಲಿ ಸುದ್ದಿಗಳ ಹಾವಳಿ

ಕೋವಿಡ್‌ 19: ದೇಶದಲ್ಲಿ ಹೆಚ್ಚುತ್ತಿದೆ ನಕಲಿ ಸುದ್ದಿಗಳ ಹಾವಳಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada