ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಆಚರಣೆಯಾಗಿರುವ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯನ್ನು ಸೆಪ್ಟೆಂಬರ್ ತಿಂಗಳ 17ರಂದು ನಡೆಸಲು ತೀರ್ಮಾನಿಸಲಾಗಿದೆ. ಆದರೂ, ಕೋವಿಡ್ ಸೋಂಕು ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಸಾದ್ಯವಾಷ್ಟು ಜಾಗರೂಕತೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಲಬುರಗಿ ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಮಾರಂಭ ಕಲಬುರಗಿ ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಹೆಚ್ಚು ಜನ ಸೇರಿಸಬಾರದು. ಆದರೆ, ಕಾರ್ಯಕ್ರಮ ವೀಕ್ಷಿಸುವ ಸೌಭಾಗ್ಯ ಎಲ್ಲರಿಗೂ ದೊರಕುವಂತಾಬೇಕು ಎಂದ ಅವರು, ಫೇಸ್ಬುಕ್, ಯೂ ಟ್ಯೂಬ್ ಹಾಗೂ ಟೀವಿ ಚಾನೆಲ್ಗಳಲ್ಲಿ ನೇರಪ್ರಸಾರ ಮಾಡಲಾಗುವುದು. ಸಾರ್ವಜನಿಕರು ತಾವಿದ್ದಲ್ಲಿಯೇ ನೇರವಾಗಿ ಕಾರ್ಯಕ್ರಮ ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹೈದ್ರಾಬಾದ್ ಕರ್ನಾಟಕ ವಿಮೋಚನೆಗಾಗಿ ಹೋರಾಡಿದ ಯೋಧರನ್ನು ಕಾರ್ಯಕ್ರಮ ನಡೆಯುವ ಡಿಎಆರ್ ಗ್ರೌಂಡ್ನಲ್ಲಿ ಸನ್ಮಾನಿಸಲು ಕ್ರಮವಹಿಸಬೇಕು. ಆದರೆ, ಕೋವಿಡ್-19 ಹಿನ್ನೆಲೆಯಲ್ಲಿ ಈ ಹಿರಿಯ ನಾಗರಿಕರ ಬಗ್ಗೆ ತುಂಬಾ ಜಾಗ್ರತೆ ವಹಿಸಬೇಕು ಎಂದು ಕಿವಿಮಾತು ಕೂಡಾ ಹೇಳಿದ್ದಾರೆ.

ಒಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಉತ್ಸವವೂ ಕೋವಿಡ್ ದೆಸೆಯಿಂದಾಗಿ ನೀರಸವಾಗಬಾರದು ಎಂಬ ಜಿಲ್ಲಾಡಳಿತದ ತೀರ್ಮಾನ ಸ್ವಾಗತಾರ್ಹ. ಆದರೂ, ಸೋಂಕು ಹಬ್ಬುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕೂಡಾ ಜಿಲ್ಲಾಡಳಿತ ಗಮನ ವಹಿಸದಿದ್ದಲ್ಲಿ, ಈ ಉತ್ಸವವು ಸಾಕಷ್ಟು ಟೀಕೆಗಳಿಗೆ ಪಾತ್ರವಾಗುವ ಸಂಭವವಿದೆ.






